Sunday, 15 September 2013


ಹಸಿವು

ಸು ರಂ ಎಕ್ಕುಂಡಿ 

  











ಸೂರ್ಯ ಹೇಗಿದ್ದಾನೆ ಗೊತ್ತೆ ನಿನಗೆ?
ಉರಿಯ ಬಿಳಿ ರೊಟ್ಟಿಯಂತಿರುವ ನಮಗೆ

ಚಂದ್ರ ಹೇಗಿದ್ದಾನೆ ಗೊತ್ತೆ ನಿನಗೆ?
ಹಾಲಿನ ರೊಟ್ಟಿಯಂತಿರುವ ನಮಗೆ

ಸೂರೆಗೊಂಡಿಹ ತಾರೆ ಗೊತ್ತೆ ನಿಮಗೆ?
ಕೊಳೆಗೇರಿಗಳ ಕಡಲೆಪುರಿಯು ನಮಗೆ

ಹೌದು ಮಗು ನೀನು ಹೇಳಿದ್ದು ನಿಜವು
ಮಕ್ಕಳಿಗೆ ಎಂದಿಗೂ ಅಷ್ಟು ಹಸಿವು


***

ಚುಕ್ಕಿ ಚಿತ್ರ: ಮೋಹನ ವೆರ್ಣೇಕರ್
ಕೃಪೆ:ಅವಧಿ









Saturday, 14 September 2013

ಮೂವರ ತಲೆಯಲ್ಲಿ ಮಿಂಚುಹುಳ...


ಬಸೂ

Basavaraj Sulibhavi


1.
ದಟ್ಟ ಕತ್ತಲು
ಮಿಣುಕುಹುಳು ದಾರಿ ತಪ್ಪುವುದಿಲ್ಲ.


2.

2.
ದೀಪ ಹಚ್ಚಿಕೊಂಡು ಅಲೆದವರಿಗೆ ಸಿಕ್ಕದ ಬುದ್ದ
ದೀಪವಾದವರಲ್ಲಿಗೇ ಬಂದು ಸುಮ್ಮನೆ ಲೀನನಾದ.

***


ಚೇತನಾ ತೀರ್ಥಳ್ಳಿ

Chetana Thirthahalli

1.
ಚಂದ್ರನ ಮೋಹಿಸಿದ
ಹುಳುಗಳು
ಬೆಳಕಿನ ಬಸಿರು ಹೊತ್ತಿವೆ.


















2.
ಬೆಂಕಿಯಿಲ್ಲದ
ಬೆಳಕು,
ಬುದ್ಧನಿಗೆ ಖುಷಿಯಾಗಿದೆ.

3.

ಜೀವದ ಹಣತೆಗಳು
ಬೆಳಕು ಹೊತ್ತು
ಹಾರಿವೆ.


***




ಜಿ.ಕೃಷ್ಣ.

Krishna Giliyar

1.
ಮಿಂಚುಹುಳುಗಳ
ನಾಡಿನಲ್ಲಿ
ಬೇಸಿಗೆಯಿಲ್ಲ.



2.
ಹಗಲು ತುಂಬಿತು

ಮಿಂಚುಹುಳದ
ಬೆಳಕು.



3.
ನಿನಗೆ ನೀನೇ ಬೆಳಕು

ಎಂದಿದ್ದ
ನೀನಷ್ಟೆ ಅರ್ಥಮಾಡಿಕೊಂಡೆ.




4.
ಮಿನುಗದಂತಿರುವ

ವಿದ್ಯೆ
ಕಲಿಸಲು ಬಂದಾರು, ಎಚ್ಚರ!



5.
ಮಿಣುಕುಹುಳ

ಎಂದರೆ
ಓಗೊಡಬೇಡ, ಮಿಂಚೇ ಸರಿ.



***


Friday, 13 September 2013





ಸಾಲುಗಳು




ಮಳೆ ಹುಳಗಳೆದ್ದಿವೆ
ಗೊತ್ತಿದೆಯೋ ಇಲ್ಲವೊ
ರೆಕ್ಕೆಯ 
ಆಯುಸ್ಸು
ಮೂಗರಳಿಸಿ
ಕುಳಿತಿರುವ
ಇರುವೆಗಳಿಗೆ
ಇದು
ಹೇಗೆ ತಿಳಿಯಿತು?



***


ಇಷ್ಟು ದಿನ
ನಡೆಸಿದಿ ಮಳೆಯೆ
ಕಾಳಿನೆದೆಯಲ್ಲಿ
ಹಾಲುತುಂಬುವ ಹೊತ್ತು
ಮರೆಯದಿರು
ಹಸಿದ ಗಂಗಾಳ
ಎರಡು ತುತ್ತು.



***

ನೀರಿನ
ಅಂಟಿಸುವ ಗುಣತಿಳಿಯುವುದು
ಬತ್ತಿದ ಮೇಲೇ.


***




ಓದಿದಾಗ
ತಾನೇ ಬರೆಯಬಹುದಾಗಿದ್ದ ಸಾಲುಗಳು
ಅನಿಸಿದರೆ
ಕವಿತೆ ಒಳಗಿಳಿದಿಲ್ಲ!

ಪೂರ್ತಿ
ಕಳಚಿಕೊಂಡೆ-
ನೆಂಬುದು
ಭ್ರಮೆ
ಉಳಿದೇ ಉಳಿದಿದೆ
ಒಂದಿಷ್ಟು.


***


ವೈವಿಧ್ಯ ಅರಸಿ
ಬಿಡಿಸುತ್ತಾ ಹೋದಂತೆ
ಕೈ ಪಳಗಿತು
ಚಿತ್ರ
ಒಂದನೊಂದು
ಹೋಲತೊಡಗಿದವು.




***


ನೀನು ಕೊಳಲು
ನಾನು ಉಸಿರು
ಎರಡೂ ಸೇರಿ
ಮಧುರ ಗಾನ...
ತಲೆತೂಗಿತು
ಎಲ್ಲ ಕೊಳಲ ಗಾನಕೆ
ಬಿದಿರ ಮೆಳೆ ಹೊಕ್ಕ ಬಿಸಿಯುಸಿರಿಗೆ
ಕವಿಸಮಯಕ್ಕೆ
ಇನ್ನೂ ಮುಗಿಯದ
ಕೀಚಕಾತ್ ಉಪಕೀಚಕಕ್ಕೆ
ಆದರೆಹಿಡಿ ಉಸಿರನ್ನೇ
ಕೊಳಲಿಗೆ ಕೊಟ್ಟು
ಗಾನ
ಹೊರಡುವಾಗ
ದೂರದಲ್ಲೆಲ್ಲೋ ಕೇಳಿದಂತಾಯ್ತೇ?




***

ಎರಡು ಬಸೂ ದ್ವಿಪದಿಗಳು


Basavaraj Sulibhavi



1.

ಹೊಸ ಕವಿತೆ ಬರೆವಾಗ ಕೆಣುಕುತ್ತಾಳೆ ಈ ಕವಿತೆಯಲ್ಲಾದರೂ ಪೂರ್ಣಗೊಂಡನೆ..?
ಮತ್ತೊಂದು ಕವಿತೆ ಬರೆಯಲು ತುಡಿವ ಕೈಯಷ್ಟೇ ನನಗೆ ಕಾಣುತಿದೆ.







2.

ಇಳಿಸಂಜೆ ಹಸಿರು ತೋಟದಲಿ ಅಪ್ಪ ನಡೆದು ಹೊರಟಿದ್ದ
ತೋಟದ ಬದಿ ಹಾರಲಣಿಯಾದ ಬೆಳ್ಳಕ್ಕಿ ಸಂಜೆಬಿಸಿಲಿಗೆ ರೆಕ್ಕೆ ಕಾಯಿಸಲು ಕೂತಿತ್ತು...



Wednesday, 11 September 2013


ನೆನಪು




ನೆನಪಾಗುತ್ತಾನೆ:

ಮಸೀದಿಯಲಿ ಸರಾಯಿ ಕುಡಿದವನು
ಗುಡಿ ತಲುಪಿಯೂ ಗಂಟೆ ಬಾರಿಸದೇ ಹಿಂದಿರುಗಿದವನು

ವಿಷದ ಬಟ್ಟಲ ಮರಳಿಕೊಡದವನು
ಜಡಿವ ಮಳೆಗೆ ಮೈಕುಗ್ಗಿಸದವನು
ತಟ್ಟೆಗಿಕ್ಕಿದ್ದನು ಉಣದೇ ಏಳದವನು

ಪ್ರಾರ್ಥನೆಯನು ಮಾತು ಮಾಡದವನು
ಪ್ರೇಮವನು ದೇಹದ ಕಾವಿನಲಿ ಹುಡುಕದವನು

ಅವರೆಲ್ಲ ನೆನಪಾದರೆಂದೇ
ನನ್ನೊಳಗಿನ ಕಂಬಳಿಹುಳ ಚಿಟ್ಟೆಯಾಗತೊಡಗಿತು
ಸದ್ದಿನೆಳೆಯಿಂದಲೇ ಮೌನದ ಗೂಡು ಹುಟ್ಟಿತು.



-ಬಸೂ

Basavaraj Sulibhavi

Tuesday, 10 September 2013




ಸಾಲುಗಳು


1.


ಬೆನ್ನಿನಲೊಂದು ಕುರವೆದ್ದಂತೆ
ಚಡಪಡಿಸುತ್ತಿದ್ದೆ
ರಕ್ತ ಸಕ್ಕರೆಯಲ್ಲಿ
ಸೇರಿತೊ
ಎಂಬ ಆತಂಕ
ಹೀಗಾಗಿದೆಯಲ್ಲೆ
ಅಂದೆ
ನನ್ನವಳಲ್ಲಿ
ನಿನ್ನ ಬೆನ್ನಲ್ಲಿ
ನಾ
ನೋಡಿದಾಗಿಂದ
ಇತ್ತಿದು
ಹೊಸತಲ್ಲ
ಎಂದಾಗ
ಐವತ್ತರ
ಹೊಸ್ತಿಲಲ್ಲಿ
ನಿಟ್ಟುಸಿರಿಟ್ಟೆ
ನನ್ನ
ಬೆನ್ನ
ಬಲ್ಲವಳ
ನೆನಪ ನಂಬಿ.









2.

ಧುತ್ತೆಂದು
ಎದುರಾಗಿದ್ದು
ಎದೆಗಿಳಿಯಿತು
ಅಲ್ಲೇ
ಸಿಂಬಿಸುತ್ತಿ
ಮಲಗಿದ್ದಕ್ಕೆ
ಎಚ್ಚರವೇ ಇಲ್ಲ.




3.

ಒಳಹೊಕ್ಕು
ಕೂಗಿದೆ
ತೆರೆಯಿರಿ ಬಾಗಿಲು
ದನಿ ಕೇಳಿತು
ಪ್ರವೇಶ
ಅಸಾಧ್ಯ




4.

ವಿಷ, ಅಮೃತಗಳ
ಪಾತ್ರೆಯೊಳಗಿನ
ಪಾತ್ರೆ
ನನ್ನೊಡಲು
ಚೆಲ್ಲುತ್ತಲೇ
ಇರುವಾಗ
ದಕ್ಕಿದ್ದು
ಸೀರಿದ್ದು
ಅದದು
ಅಷ್ಟಷ್ಟು
.


5.

ಜೋಡು ಸಿಕ್ಕದಲ್ಲಿ ಜೋತಿರುವ
ವಿಷ, ಅಮೃತ-
ಕ್ಕೆ ಬಿದ್ದ
ಹೆಪ್ಪಿನ
ಹನಿ
ಯಾವುದನ್ನು
ಮೊದಲು
ಗಟ್ಟಿಯಾಗಿಸುವುದೊ,
ಕಾಯಬೇಕು.
6.

ಬಟ್ಟೆ ತೊಡುವಾಗ
ಕೇಳಿದೆ-
ಮನದ ಬೆತ್ತಲನ್ನೂ
ಮುಚ್ಚಿಬಿಡು.
ನಕ್ಕು ಹೇಳಿತು-
ಇದು 
ಮಾನವಂತರ ಮಾತಲ್ಲ.









***

















ಅರಬ್ ಜಗತ್ತಿನ ಹೆಣ್ಣುಮಕ್ಕಳ ಕವಿತೆ-
ಉರಿವ ಮರದ ಮೋಹಕತೆ

ಮುಫ್ರೆತ್

ಅನುವಾದ: ಎಮ್. ಆರ್ ಕಮಲಾ
 
Metikurke Ramaswamy Kamala

ಅವನ ನಗು:
ಬೆಳ್ಳಿ
ಸುಗಂಧ
ಬೆಚ್ಚನೆಯ ವಿಷಾದ

ದೂರದ ಬಯಲಲ್ಲಿ
ಕುದುರೆಗಳು
ಚೆಲ್ಲಿ ಹೋದ
ಉದಾತ್ತ ಸಂತಸ,
ಮಂದಹಾಸ

ನೆರಳ ಆಸರೆ ಪಡೆದ
ಪಾರಿವಾಳಗಳ ಗುಂಪು
ಚದುರಿ ಚೆಲ್ಲಾಡಿದ
ಉನ್ಮತ್ತ ಉಲ್ಲಾಸ

ಅವನ ನಗು:
ಅನಂತ ವಿವರಗಳ
ಕಲೆ ಹಾಕಿ
ಬೇಲಿ ಮಾಡಿದ
ಬೆಳಕಿನ ಸೀದಾ ಹಾದಿ

ನನ್ನ ವಿಷಾದದ
ವಿಶಾಲ ಕಡಲಿಗೆ
ಬೆಳ್ಳಿ ಹನಿ ಹನಿಸುವ
ಬೇಸಗೆಯ ಹಠಾತ್ ಮಳೆ

(ಒದ್ದೆ ಹಕ್ಕಿ
ಮೈ ಒದರುವಂತೆ
ನಿದ್ದೆ, ನೋವನ್ನು
ಕೊಡವುತ್ತಿದ್ದೇನೆ
ನಿನ್ನ ಮುಖಕ್ಕೆ
ಪೈಪೋಟಿ ಎನ್ನಿಸುವ
ಚಿತ್ರ ಬರೆಯುತ್ತಿದ್ದೇನೆ
ಪರ್ವತವ ಬಲ್ಲ
ಆರೋಹಿ! )

ಅವನ ನಗು;
ಪ್ರೇಮದ ಆದೇಶ
ಯುಧ್ಧ
ರಾಗದಿಂಪಿಗೂ
ಹತೋಟಿ
ದಿಕ್ಕು ದಿಕ್ಕಿಗೂ ಇಡುವ
ಕಚಗುಳಿ

ಬೂದಿಯಾದರು
ಉರಿವ ಮರದಂತೆ
ಮೋಹಕ
ಸೂರ್ಯನ ಆಕಾರ
ಪಡೆದರೂ
ಮುಳುಗದೇ ಉಳಿವ
ಮಾಯಕ

***