Wednesday, 30 October 2013

ವಿವಶತೆ

ವಿಭಾ ತಿರುಕಪಡಿ


ಹುಣ್ಣಿಮೆಯ ಆ ಸುಂದರ ರಾತ್ರಿ
ನೀನುಸುರಿದ ಪಿಸುಮಾತು
ಒದ್ದೆ ಮದರಂಗಿಯ ಸುವಾಸನೆ
ಸುಳ್ಳು ತಕರಾರುಗಳು
ಸುಮ್ಮನೆ ನೀಡಿದ ಭಾಷೆಗಳು
ಮೈಯ ತಿರುವುಗಳಲಿ
ತುಟಿಯೊತ್ತಿದ ಗಳಿಗೆಗಳು
ಎಲ್ಲ ನೆನಪಿಸಿಕೊ
ನಿನ್ನ ನಿರ್ದಯ ಮನಸು
ಇನ್ನೂ ಕರಗದಿದ್ದರೆ
ಒಮ್ಮೆ ಅಪ್ಪಣೆ ನೀಡು-ಸಾಕು
ನೆನಪಿನ ನಿಧಿಯನ್ನು ಹುಗಿದುಬಿಡುತ್ತೇನೆ
ಜತೆಗೆ ನಾನೂ ಅಲ್ಲಿಯೇ ಹೂತುಹೋಗುತ್ತೇನೆ.

***


Tuesday, 29 October 2013

ಸಾಲುಗಳು: ಡಾ. ಜಿ.ಕೃಷ್ಣ

ಬದಲಾವಣೆ ಮರುಹುಟ್ಟು
ಒಮ್ಮೊಮ್ಮೆ
ಸಾವು
ಇನ್ನೂ ಕೆಲವೊಮ್ಮೆ
ಎರಡೂ...




ಕವಿತೆ ಓದಿದ ಮೇಲೆ
ಖಾಲಿ ಹಾಳೆಯಷ್ಟೆ ಉಳಿಯಿತು.






ಉಸಿರು ತುಂಬಿ-


ನಗು ಬಣ್ಣ ಕಣ್ಣು ಕಿವಿಗಳ
ಹೊತ್ತು ತಿರುಗು-
ತ್ತಾ ಹೋದಂತೆ
ಮಕ್ಕಳೆಂಬ ಮಕ್ಕಳ
ಅಪ್ಪಂದಿರು
ಬೆಲೆ ಕಟ್ಟಿ
ಭಾರ ಇಳಿಸುತ್ತಾ
ಹೋಗುತ್ತಾರೆ
ಉಸಿರಷ್ಟೆ ಉಳಿಯುತ್ತದೆ.




ಅಳುವಿದ್ದಾಗ
ಮಳೆಯೂ ಇರಲಿ...





ನಾನು
ಎಳ್ಳುಕಾಳು ಮುಳ್ಳುಮೊನೆಯಷ್ಟೂ
ಆಗಿಲ್ಲ
ಲೋಕ ಬದಲಾಯಿತು
ಎಂಬ 
ನಿಟ್ಟುಸಿರಿಗೆ
ತಕ್ಕಡಿ ತೂಗಾಡಿತು
ಹಿಂದೆಂದೂ ಹೀಗೆನ್ನದ
ನನ್ನ ನೋಡಿ
ನಕ್ಕಿತು.




ಕುಂಬಳದ ಹೂ
ನಿರಮ್ಮಳ ಬೆಳಗಲ್ಲಿ
ಅಮ್ಮನ ನೆನಪು
ಕೆರಳಿಸಿತು:
ಅವಳು
ಈ ಹೂವಲ್ಲಿ
ರುಚಿಯಾದ ರೊಟ್ಟಿ
ಮಾಡುತ್ತಾಳೆ.




ಬುದ್ಧ ಎಂದಾಗ
ಅವನು
ಒಂದಾನೊಂದು ಕಾಲದಲ್ಲಿ
ಕಪಿಲವಸ್ತುವಿನಲ್ಲಿ
ಶುದ್ಧೋದನ ಮತ್ತು
ಮಾಯಾದೇವಿಯ ಮಗನಾಗಿ
ಜನಿಸಿದನು
ಎನ್ನುವುದ ಬಿಟ್ಟು
ಬೇರೇನೂ
ನೆನಪಾಗುತ್ತಿಲ್ಲ.




ಒಂದೇ...

ತಡವಿ
ಅಂತರಂಗಕ್ಕಿಳಿಯದೆ
ಓಡಿದ
ಶಪಿಸಿ ಕಲ್ಲಾಗಿಸಿದ
ಮುಟ್ಟಿ ಎಬ್ಬಿಸಿ
ಧನ್ಯಳಾಗಿಸಿದ
ಸುಟ್ಟು ಪರೀಕ್ಷಿಸಿ
ಕಾಡುಪಾಲು ಮಾಡಿದ
ಪುರುಷೋತ್ತಮ-
ರು
ಬೇರೆ ಬೇರೆ ಅಲ್ಲ

ಸ್ತ್ರೀಯರೂ
ಅಲ್ಲ.





ತಡೆಯಲಾಗಲಿಲ್ಲ
ನಗು,
ಕತೆ
ಅಹಲ್ಯೋದ್ಧಾರಕ್ಕೆ ಬಂದಾಗ
ಸೀತೆಗೆ.










Monday, 28 October 2013

ಕೊರಗರ ಬಗ್ಗೆ ಒಂದಿಷ್ಟು... : ಹೃದಯ ಮಂಗಳೂರ್


Koragerna Alipu Oripu

ಸಮಾಜದ 'ವಿಭಾಜಕ ದೃಷ್ಠಿ'ಯಿಂದಾಗಿ ಪ್ರತ್ಯೇಕಿಸಲ್ಪಟ್ಟ ಕೊರಗರು...

ಕೊರಗರು ಮೂಲತಃ ಅರಣ್ಯವಾಸಿಗಳು.  ಪೂರ್ವಕಾಲದಲ್ಲಿ ದಟ್ಟಾರಣ್ಯದಲ್ಲಿ ವಾಸಿಸುತ್ತಿದ್ದರು. ಕಾಡಿನಲ್ಲಿ ದೊರೆಯುವ ಬಿದಿರು, ಬಿಳಲುಗಳಿಂದ ತಮ್ಮ ನೈಪುಣ್ಯತೆಯನ್ನು ಬಳಸಿ, ವಿವಿಧ ರೀತಿಯ ಪರಿಕರಗಳನ್ನು ಮಾಡಿ ಜೀವನ ಸಾಗಿಸುತ್ತಿದ್ದರು. ಬುಟ್ಟಿ ಹೆಣೆಯುವುದು, ಬೇಟೆಯಾಡುವುದು ಮತ್ತು ಅರಣ್ಯೊತ್ಪನ್ನಗಳನ್ನು ಸಂಗ್ರಹಿಸುವುದು ಕುಲ ಕಸುಬಾಗಿತ್ತು. ಸುಶ್ರಾವ್ಯವಾಗಿ ಡೋಲು ಬಾರಿಸುವುದು, ಕೊಳಲು ಊದುವುದು ಸಾಂಸ್ಕೃತಿಕ ಮತ್ತು ಮನೋರಂಜನಾತ್ಮಕ ಕಲೆಯಾಗಿತ್ತು. ತನ್ನದೇ ಆದ ಶ್ರೇಷ್ಠ ಸಂಪ್ರದಾಯ ಮತ್ತು ಜೀವನ ಕ್ರಮಗಳನ್ನು ಮೈಗೂಡಿಸಿಕೊಂಡಿದ್ದರು. ವಿಶಿಷ್ಟ ’ಕೊರ್ರು’ (ಕೊರಗ) ಭಾಷೆ ಮತ್ತು ಕಾಡಿನ ಸಂಸ್ಕ್ರತಿಯಿಂದಾಗಿ ಪ್ರತ್ಯೇಕವಾಗಿ ಗುರುತಿಸಲ್ಪಡುತ್ತಿದ್ದರು. ಮೈಯನ್ನು ಪ್ರಾಣಿಗಳ ಚರ್ಮ ಮತ್ತು ಸೊಪ್ಪಿನಿಂದ ಮುಚ್ಚಿಕೊಳ್ಳುತ್ತಿದ್ದರು (ಆ ಕಾಲದಲ್ಲಿ ಕಾಡಿನಲ್ಲಿ ಕೊರಗರಿಗೆ ಮಾನ ಮುಚ್ಚಿಕೊಳ್ಳಲು ಅದೊಂದೇ ಆಧಾರವಾಗಿತ್ತು) ಕುಳ್ಳಗಿನ ಧೃಡಕಾಯ ದೇಹ, ಹೊಳೆಯುವ ಕಪ್ಪು ಮೈಬಣ್ಣ,  ವಿಶಿಷ್ಟವಾದ ಮೂಗು, ತುಟಿ , ಕಣ್ಣಿನ ವಿಭಿನ್ನ ಆಕೃತಿ ಮತ್ತು ಇತರ ಜನವರ್ಗದವರು ಅರ್ಥೈಸಿಕೊಳ್ಳಲಾಗದ ಕ್ಲಿಷ್ಟ ಭಾಷಾ ಭಿನ್ನತೆಯಿಂದಾಗಿ ಕೊರಗರನ್ನು ದೂರವೇ ಇರಿಸಲಾಗಿತ್ತು. ದೂರವೇ ಇದ್ದ ಕೊರಗರು ನಿಧಾನವಾಗಿ ತಮ್ಮ ವೇಷಭೂಷಣಗಳಿಂದಾಗಿ ಅಸ್ಪ್ರಶ್ಯರೇ ಆಗಿಬಿಟ್ಟರು. ವೇದಗಳ ಕಾಲದಿಂದಲೂ ಅಸ್ಪ್ರಶ್ಯರಾಗಿದ್ದವರ ಸಾಲಿಗೆ ಕೊರಗರನ್ನೂ ಸೇರಿಸಲಾಯಿತು ಹೀಗೆ ಸ್ಪರ್ಶ ವರ್ಣಗಳ ಅರಿವೇ ಇಲ್ಲದ ಪ್ರತ್ಯೇಕ ಬುಡಕಟ್ಟು ಪಂಗಡವೊಂದು ಸಮಾಜದ ವಿಭಾಜಕ ದೃಷ್ಟಿ’ಯಿಂದಾಗಿ ಅಸ್ಪ್ರಶ್ಯರಾಗಿಬಿಟ್ಟರು ಮತ್ತು ಸಮಾಜದ ಮೇಲಿನ ಭಯದಿಂದಾಗಿ ಮುಗ್ಧ ಕೊರಗರು ತಮ್ಮನ್ನು ತಾವು ಅಸ್ಪ್ರಶ್ಯರೆಂದು ಒಪ್ಪಿಕೊಂಡುಬಿಟ್ಟರು!




ಡೋಲಿನ ಸುಶ್ರಾವ್ಯಕ್ಕೆ ಮನ ಸೋತವರ ವ್ಯಭಿಚಾರ...

ಕೊರಗರು ಬೇಟೆಯಾಡಿ ಬಂದ ನಂತರ, ದಣಿವಾರಿಸಲು ಡೋಲು ಬಾರಿಸಿ, ಕೊಳಲು ಊದಿ ಮನಃ ಶಾಂತಿಯನ್ನು ಪಡೆಯುತ್ತಿದ್ದರು. ಕಾಡಿನಲ್ಲಿ ಕೊರಗರ ಅಬ್ಬರದ ಡೋಲಿನ ಧ್ವನಿಗೆ ಊರ ಅರಸರೂ (ತುಂಡರಸರು ಮತ್ತು ಪಟೇಲರು) ಮನಸೋತರು. ನಿಧಾನವಾಗಿ ಕೊರಗರ ಡೋಲಿನ ಧ್ವನಿ ಕಾಡಿನ ಬದಲು ಪಟೇಲರ ಕಟ್ಟಅಪ್ಪಣೆಯ ಮೇರೆಗೆ ಗುತ್ತಿನ ಮನೆಯ ಹಿತ್ತಲ ಬದಿಯಲ್ಲಿ ಕೇಳಿ ಬರತೊಡಗಿತು. ಊರ ಹಬ್ಬ ಹರಿದಿನಗಳಲ್ಲಿ, ಊರಿನಲ್ಲಿ ಸಾವು ಸಂಭವಿಸಿದರೆ ಅಂತ್ಯಕ್ರಿಯೆ ಸಂದರ್ಭದಲ್ಲಿ ಕೊರಗರಿಗೆ ಡೋಲು ಬಾರಿಸಲು ಅನುವು ಮಾಡಿಕೊಡಲಾಯಿತು. ಗುತ್ತುಬರ್ಕೆಯವರ ಕಂಬಳವೂ ಕೊರಗರ ಡೋಲು ಬಡಿತದಿಂದಲೇ ಆರಂಭವಾಗತೊಡಗಿತು. ತಲೆತಲಾಂತರಗಳಿಂದ ಕೃಷಿಕರು ಬೀಜ ಬಿತ್ತುವುದಕ್ಕೂ ಕೊರಗರ ಡೋಲಿನ ಶಬ್ಧದಿಂದಲೇ ಚಾಲನೆ ನೀಡಲು ಆರಂಭಿಸಿದರು. ಅದರಿಂದ ದೊರೆತ ಬಿಟ್ಟಿ ಸಂಬಳವೂ ಕೊರಗರಿಗೆ ವ್ಯವಹಾರದ ಅರಿವಿಲ್ಲದ್ದರಿಂದ ಅಪ್ಯಾಯಮಾನವಾಗತೊಡಗಿತು. ಸಂಖ್ಯಾಬಲದ ಕೊರತೆಯಿಂದ ಕೊರಗರು ಪ್ರತಿರೋಧ ತೋರುವುದನ್ನು ಯಾವತ್ತು ಬಿಟ್ಟರೋ, ಅದಾಗಲೇ ಬಲಿಷ್ಠರ ಅಡಿಯಾಳಾಗಬೇಕಾಯಿತು ಮತ್ತು ಕೊರಗರ ಮುಗ್ಧತೆಯನ್ನು ದೌರ್ಬಲ್ಯವೆಂಬಂತೆ ಬಳಸಿಕೊಳ್ಳಲಾಯಿತು. ಅವರನ್ನು ಜೀತಕ್ಕೆ ನೇಮಿಸಿಕೊಳ್ಳಲಾಯಿತು. ಅದನ್ನು ಪ್ರಾದೇಶಿಕವಾಗಿ 'ಅಜಲು ಚಾಕರಿ' ಎನ್ನುತ್ತಾರೆ ವಿಶಾಲಾರ್ಥದಲ್ಲಿ ಹೇಳುವುದಾದರೆ, 'ಜೀತ ಪದ್ಧತಿ' ಎನ್ನಬಹುದು.

 


ಅಂಡೆ, ಕುಂಟು, ಸೊಪ್ಪು ಎಂಬ ವಿಂಗಡನೆ...

ಅಸ್ಪ್ರಶ್ಯತೆ ತಾರತಮ್ಯದ ಪಿಡುಗಿಗೆ ಅಂಟಿಕೊಂಡ ಕೊರಗ ಸಮುದಾಯವು ಅಕ್ಷರ ಕಲಿಯುವಂತಿರಲಿಲ್ಲ. ದೇವಸ್ಥಾನಗಳಿಗೆ ಪ್ರವೇಶಿಸುವುದನ್ನು, ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡುವುದನ್ನು ಮತ್ತು ಕಾಡಿನಿಂದ ಊರಿಗೆ ಬಂದಾಗ ಉಗುಳುವುದನ್ನೂ ನಿಷೇಧಿಸಲಾಗಿತ್ತು!! ಹೀಗಾಗಿ, ಕೊರಗರು ಕಾಡಿನಿಂದ ಊರಿಗೆ ಬಂದಾಗ ಎಂಜಲು ಉಗುಳಲು ತಮ್ಮ ಕೊರಳಿಗೆ ಬಿದಿರಿನ ತುಂಡನ್ನು (ತುಳುವಿನಲ್ಲಿ ಅಂಡೆ ಎನ್ನುತ್ತಾರೆ) ಕಟ್ಟಕೊಳ್ಳುತ್ತಿದ್ದರು. ಇದಕ್ಕೆ ಇವರನ್ನು ಊರಿನ ಇತರ ಜನವರ್ಗದವರು 'ಅಂಡೆ ಕೊರಗರು' ಎಂದು ಕರೆದರು.

ಕಾಡಿನಿಂದ ಊರಿಗೆ ಬಂದು ಅಜಲು ಸೇವೆ ಮಾಡುತ್ತಿದ್ದ ಕೊರಗರಿಗೆ ಸೊಪ್ಪಿನ ಬದಲು ಮಾನ ಮುಚ್ಚಿಕೊಳ್ಳಲು ಊರಿನವರು ಬಟ್ಟೆಯನ್ನು ಕೊಡುತ್ತಿದ್ದರು. ಹೀಗೆ ಬಟ್ಟೆ ತೊಟ್ಟುಕೊಂಡ ಕೊರಗರನ್ನು ಊರಿನ ಇತರ ಜನವರ್ಗದವರು ಕುಂಟು ಕೊರಗರು’ ಎಂದು ಕರೆದರು (ಕುಂಟು ತುಳು ಪದ; ಬಟ್ಟೆ ಎಂದರ್ಥ). ಕಾಡಿನಲ್ಲಿಯೇ ಇದ್ದು ತನ್ನ ಕೆಲಸವನ್ನು ನಿರ್ವಹಿಸಿಕೊಂಡು, ಬರೇ ಸೊಪ್ಪು ಅಥವಾ ಪ್ರಾಣಿಗಳ ಚರ್ಮವನ್ನು ಸುತ್ತಿ ಬದುಕುತ್ತಿದ್ದವರು ಸೊಪ್ಪು ಕೊರಗರು’ ಎಂದು ಕರೆಯಲ್ಪಟ್ಟರು.  ಕೊರಗರನ್ನು 'ಅಂಡೆ, ಕುಂಟು, ಸೊಪ್ಪು ಎಂದು ಗುರುತಿಸಿ ಕರೆದದ್ದು ಇತರ ಜನ ವರ್ಗದವರೇ ಹೊರತು, ಸ್ವತಃ ಕೊರಗರಲ್ಲ! ಸಮಾನತೆ ಬಯಸುತ್ತಿದ್ದ ಕೊರಗರು ತಮ್ಮನ್ನು ತಾವು ಈ ರೀತಿ ಎಂದೂ ಗುರುತಿಸಿದ್ದಿಲ್ಲ ಮತ್ತು ಪ್ರತ್ಯೇಕ ಪಂಗಡಗಳನ್ನ ಕಟ್ಟಿಕೊಂಡವರೇ ಅಲ್ಲ. ಇದು ಕೂಡಾ ಸಮಾಜದ ವಿಭಾಜಕ ದೃಷ್ಠಿಯಿಂದಾಗಿ ಉಂಟಾದ ಗೊಂದಲ! ದುರಾದೃಷ್ಟವಶಾತ್, ಎಲ್ಲಾ ಇತಿಹಾಸಕಾರರು, ಸಂಶೋಧಕರು, ಚಿಂತಕರು ಮತ್ತು ಬರಹಗಾರರೂ - ನೈಜತೆಯನ್ನು ವಿಮರ್ಶಿಸದೆ ಕೊರಗರಲ್ಲಿ ಮೂರು ಒಳಪಂಗಡಗಳು ಇದ್ದವೆಂದು, ಹಾಗೆಯೇ ಬರೆದುಬಿಟ್ಟಿದ್ದಾರೆ!


***

Thursday, 24 October 2013

ಸಾಲುಗಳು: ಡಾ. ಜಿ. ಕೃಷ್ಣ


ಕುಡಿ
ಚಿವುಟಿದಾಗ
ಎರಡಾಗಿ ಒಡೆಯುವ
ಗುಣ
ಗಿಡಗಳಲ್ಲಿದೆ
ಮಾನವರಲ್ಲಿ...?





ಗಾಯ
ನೋವು
ಹಸಿವು
ಸಾವು
ಹನಿಗಣ್ಣು
ಮೌನ
ಇತ್ಯಾದಿ-
ಗಳಿರುವ
ಕವಿತೆಗಳು
ಮುಟ್ಟದೆ
ತಟ್ಟದೆ
ಇರುವುದಿಲ್ಲ
ಅಂದರೆ,
ನೀವೇ
ಲೆಕ್ಕ ಹಾಕಿ...


***





ಉಜ್ಜಿ ಉಜ್ಜಿ ಕಿತ್ತುಕೊಂಡ ಮುಖಚರ್ಯೆ ಹೊತ್ತ 
ಕನ್ನಡಿ ಇಲ್ಲದೂರಿನ ಜನ .

 


ಉಕ್ಕುವ ನದಿ ದಂಡೆಯಲಿ
ಸೋತಿದ್ದು
ಬೊಗಸೆ 
ಮರೆತು
ಬಾಯಾರಿದ ಗಳಿಗೆ.


***


ಹೇಗೆ ಪ್ರಾರಂಭಿಸಲಿ....?

ಹತ್ತಾರು ಬಗೆಯ ಚಿಮ್ಮಟ
ಕತ್ತರಿ
ಎಳೆದು ಹಿಡಿಯುವ
ಒತ್ತಿ ಸರಿಸುವ
ಹತ್ಯಾರುಗಳು
ಸೂಜಿ 
ದಾರ
ಕುಯ್ಯುವ ಭಾಗವನಷ್ಟೆ ತೋರಿಸುವ
ಒಸರಿದ್ದನ್ನು ಒರೆಸುವ
ಬಟ್ಟೆ
ಅರಿವಳಿಸುವವರು
ಅಳಿಸಿಕೊಳ್ಳುವವರು
ಶುಶ್ರೂಷಕರು
ಎಲ್ಲ ತಯಾರು
ಮರೆತ ಚಾಕು
ಡಬ್ಬಿಯಲ್ಲೆ
ತಣ್ಣಗೆ ನಕ್ಕಿತು
ಶುಚಿರ್ಭೂತ
ಸರ್ಜನನ 
ಕೈ ಕಟ್ಟಿಸಿ
ಒಂದು ಗಳಿಗೆಯಾದರೂ
ನಿಲ್ಲಿಸಿತು.


***

ಅರಳುವುದೆಂದರೆ
ಒಂದೆ
ಚಿಕ್ಕದಾದರೂ
ದೊಡ್ಡದಾದರೂ...







ತುಟಿ ಕೆನ್ನೆ
ಬಿರುಕು ಬಿಡುವ
ಒಣ ಹವೆಯಲ್ಲಿ
ಒಮ್ಮೊಮ್ಮೆ
ಅನಿಸುತ್ತೆ-
ಎಲ್ಲವೂ
ಅನುಕರಣೆಯೇ?
ಸ್ವಂತದ್ದು
ಏನೂ ಇಲ್ಲವೇ?


 


ನಾವು
ಸರ್ವಧರ್ಮ ಸಹಿಷ್ಣುಗಳು
ಗುರುವಾರ
ರಾಯರ ಮಠ
ಭಾನುವಾರ
ಚರ್ಚು
ಶುಕ್ರವಾರ
ಮಸೀದಿ-

ಮುಂದೆ
ಕೈ ಚಾಚಿ
ಭಿಕ್ಷೆ ಬೇಡುವವರು.

(ನೀಲು ಪ್ರೇರಿತ)


***

Wednesday, 23 October 2013











ಬಸೂ
 


ನೀನು ಭೆಟ್ಟಿಯಾದೆ ಎಂಬುದು ಎಷ್ಟು ಸಾಮಾನ್ಯ ಸಂಗತಿ
ಅಲ್ಲ ಅನಿಸಿದ್ದು ಗೋರಿಯ ಮೇಲೊಂದು ಹೂ ಹುಟ್ಟಿದಾಗ.


 





ತಾಗಿದ ಬೆರಳು ಅಖಂಡ ಬದುಕಿನ ಕಥೆ ಹೇಳಿತು
ಆ ಕ್ಷಣವೇ ಆಕಾಶದಲಿದ್ದ ಕಾಮನಬಿಲ್ಲು ಕಣ್ಣಿಗಿಳಿಯಿತು. 



 



ಗಿಬ್ರಾನ್
 




ನಿನ್ನೆದುರು ಸ್ಪಷ್ಟ ಕನ್ನಡಿಯಂತೆ ನಿಂತಿದ್ದೆ.
ಒಮ್ಮೆ ನನ್ನ ದಿಟ್ಟಿಸಿ ನೋಡಿ,
ನನ್ನೊಳಗೆ ನಿನ್ನ ಖಾತರಿ ಮಾಡಿಕೊಂಡು
ಆಮೇಲೆ ನೀ ನುಡಿದೆ,
"I Love You "
ನಿಜ ಹೇಳಬೇಕೆಂದರೆ,
ನೀನು ಪ್ರೀತಿಸುತ್ತಿರುವುದು ನನ್ನನ್ನಲ್ಲ.
ನನ್ನೊಳಗಿನ ನಿನ್ನನ್ನೇ.


(ಅನುವಾದ:ಚಿದಂಬರ್ ನರೇಂದ್ರ) 


















 

















































































































































































































































































































































ಒಂದು ಗಜಲ್


Prakash B. Jalahalli



ನಿನ್ನ ಕನಸು ಪುಟ ತುಂಬಿರುವಾಗ ಏನೆಂದು ಬರೆಯಲಿ?
ಮನದ ತುಂಬ ಮೌನ ತುಂಬಿರುವಾಗ ಏನೆಂದು ಬರೆಯಲಿ?

ಬೆತ್ತಲಾದ ಬಯಕೆಗಳಿಗೆ ಬಟ್ಟೆ ತೊಡಿಸುವುದು ಹೇಗೆಂದು ಕಲಿಯಬೇಕಿದೆ ನಾನು
ನೀನೆ ಇಲ್ಲದ ಒಬ್ಬಂಟಿ ಈ ದಾರಿಯ ದುಃಖದಲ್ಲೀಗ ಏನೆಂದು ಬರೆಯಲಿ?

ನೆರಳಾಗಲೆಂದು ನೆಟ್ಟ ಮರಕ್ಕೀಗ ಎಲೆಯೇ ಮೂಡದೇ ಬೆತ್ತಲಾಗುತ್ತಿದೆ
ಬೆರಳು ತಾಕಿದರೂ ಮೂಡದ ರಾಗದಲ್ಲಿ ಮನಬಿಚ್ಚಿ ಈಗ ಏನೆಂದು ಬರೆಯಲಿ?

ಖಾಲಿಯಿದ್ದ ಗೋಡೆಯ ತುಂಬ ನಿನ್ನದೆ ಚಿತ್ರಗಳು ನನ್ನ ನೋಡಿ ಅಣಕಿಸುತ್ತಿವೆ
ಮೊಂಬತ್ತಿಯ 'ಪ್ರಕಾಶ'ವು ಕಣ್ಣೀರ ಸುರಿಸಿದಲ್ಲಿ ಮೂಡದ ಭಾವನೆಯೀಗ  ಏನೆಂದು ಬರೆಯಲಿ?


-ಪ್ರಕಾಶ್ ಬಿ.ಜಾಲಹಳ್ಳಿ ಅವರ  'ನಲವತ್ತು ಗಜಲುಗಳು'  ಸಂಕಲನದಿಂದ

Saturday, 19 October 2013


ಈ ಬಾರಿಯ ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ನನ್ನ 

ಮಡದಿ ಡಾ.ಅನುಪಮಾ ಮೂರನೇ ಬಹುಮಾನ, ನಮ್ಮ ಮಗಳು ಪೃಥ್ವಿ  ವಿದ್ಯಾರ್ಥಿ ವಿಭಾಗದ

ಬಹುಮಾನ ಪಡೆದಿರುವುದು  ತುಂಬಾ ಖುಶಿಯ ಸಂಗತಿ.  ಪೃಥ್ವಿ ಬೆಳಗಾವಿಯ ಬಿಮ್ಸ್ ನಲ್ಲಿ ಎರಡನೇಯ ವರ್ಷದ 

ವೈದ್ಯಕೀಯ ವಿದ್ಯಾರ್ಥಿನಿ. ಅನುಪಮಾ ಬರೆದ ಕವನವನ್ನಷ್ಟೆ ಇಲ್ಲಿ ಕೊಡಲಾಗಿದೆ.




ಲೋಕವೇ ತಾನಾದ ಬಳಿಕ..





ಅನಾದಿ ಗುಹೆ
ಅದರಳೊಗೊಂದು ಅನಾದಿ ಕರಡಿ
ಮೊಲೆಮುಡಿಯ ಜೀವಗಳ ಎತ್ತಿಕೊಂಡೊಯ್ದು
ಒಮ್ಮೆ ಜಾಗರವಾಡುವ ನವಿಲಾಗಿ
ಮಗದೊಮ್ಮೆ ಸಾವಿರ ಹೆಡೆಯ ಸರ್ಪವಾಗಿ
ಸಾವಿರ ರೂಪ ಸಾವಿರ ಅವತಾರ ತಳೆವ ಕರಡಿ

ಹಣ್ಣು ಹೂವು ತಾಜಾ ಜೇನು
ಹಾಡುಹಕ್ಕಿ ಆಡಲು ಅಳಿಲ ತರುವ
ಮೈಯೆಲ್ಲ ನಾಲಿಗೆಯ ಹುಚ್ಚು ಕರಡಿ
ಹೆಬ್ಬಂಡೆಯ ಎಲ್ಲಿಂದಲೋ ಎಳತಂದಿಟ್ಟು
ನೆಲವನೂ ನಿದಾನವನೂ ಕಾಯ್ದು ಹೈರಾಣಾಗುವ ಕರಡಿ
ಅದರ ಗುಹೆಯ ಬಾಯಿಗಡ್ಡ ದೊಡ್ಡ ಕಲ್ಲುಬಂಡೆ..

ಉಣ್ಣದ ಊಟವನುಂಡು ಬಸವಳಿವ ಕರಡಿಗೆ
ತೂತಿರದ ಮಣಿಗಳ ಪವಣಿಸುವ ಉನ್ಮಾದ
ಅದರ ಮುಳ್ಳು ನಾಲಿಗೆಗೆ ನೆತ್ತರು ಸವಿ
ನೆಕ್ಕೀನೆಕ್ಕೀ ನೆಕ್ಕುವ ಕರಡಿ ಪ್ರೀತಿಗೆ
ಅವಳ ಅಂಗೈ ರಕುತ ಚಿಲುಮೆಯಾಗಿ ಚಿಮ್ಮಬೇಕು
ಶಥಪಥ ತುಳಿದ ಪಾದ ರಕುತ ನದಿ ಹರಿಸಬೇಕು
ಪುಟ್ಟ ಅಂಗೈ ಅಂಗಾಲುಗಳಿಗೆ
ಮಾಯುವ ಮತ್ತೆ ಗಾಯಗೊಳುವ ಅನುದಿನದ ಐಭೋಗ

ರತ್ತೋರತ್ತೋ ರಾಯನ ಮಗಳೇ
ಬಿತ್ತೋಬಿತ್ತೋ ಭೀಮನ ಮಗಳೇ
ಬೈಟುಗುಬ್ಬಿ ಬಾಳೆಕಂಬ
ಕುಕ್ಕುರು ಬಸವಿ ಕೂರು ಬಸವೀ..

ಆ ಗುಹೆಯ ಬಾಯಿಗಡ್ಡ ದೊಡ್ಡ ಕಲ್ಲುಬಂಡೆ..

ಅಂಥದೇ ಒಂದು ಗುಹೆಯಲ್ಲಿ ನೊಂದುಬೇಯುವ ಅಮ್ಮ
ಕರಡಿ ಕತೆಯ ಹಾಡ್ಯಾಡಿ ಅತ್ತರೂ ಕೇಳಿಸಿರಲಿಲ್ಲ
‘ಎಮ್ಮಿಯಾ ಮೇಯುಸ್ಕೊಂಡು ಸುಮ್ಮಾನೆ ನಾನಿದ್ದೆ
ಹಾಳಾದೋವೆರೆಡು ಮೊಲೆ ಬಂದೊ..
ಹೂವ ತರದೆ ಹುಲ್ಲ ತರಬೇಡವೆಂದು
ಕೊಟ್ಟಮನೆಯೆಂದು ಕರೆತಂದು ಬಿಟ್ಟರು
ನಾನೀಗ ಗುಹಾವಾಸಿ

ಆ ಗುಹೆಯ ಬಾಯಿಗಡ್ಡ ದೊಡ್ಡ ಕಲ್ಲು ಬಂಡೆ..

ಸುತ್ತ ಹಬ್ಬಿರುವ ಬೆಟ್ಟಗಳು
ಎಲ್ಲ ಗದ್ದಲ ನುಂಗಿ ಮೌನ ಹರಡುವಾಗ
ಯಾವ ಕಿರಿಚಾಟವೂ ಕೇಕೆ ಕಲರವವೂ ಅಲ್ಲಿ ಸದ್ದಾಗಲಿಲ್ಲ
ಹಸಿವು ನಿದ್ರೆ ಮೈಥುನಗಳು ಆತ್ಮವನ್ನು
ಕಣಿವೆಯಲ್ಲಿ ತಣ್ಣಗೆ ಹರಿವ ನದಿ ಕಾಲವನ್ನು
ದಿಕ್ಕೆಟ್ಟು ತುಳಿದ ನೆರಳಿರದ ಹಾದಿ ಕನಸುಗಳನ್ನು ನುಂಗಿದವು
ಬೆಟ್ಟಗಳ ನಡುವಿನ ಗುಹೆ
ಮುಗಿಯದ ಮುಸ್ಸಂಜೆಯಲಿ ಮುಳುಗಿತು
ಸದ್ದಿಲ್ಲದೆ ಉರುಳುವ ಕಣ್ಣ ಹನಿಯ ಜೊತೆಗೆ
ಬೆಟ್ಟದಂಥಾ ಮೌನ ಬೆಟ್ಟವನೇ ನುಂಗಿ ಬೆಳೆಯಿತು
ಒಂದಾಗಿ ಒಳಗೊಳುವೆನೆಂದು ಬಾಹುಗಳ ಅಗಲಿಸಿದೆ
ಗುಹೆಯ ಖಾಲಿತನವಷ್ಟೇ ಎದೆಗಿಳಿಯಿತು.

ಎದೆಯಲ್ಲಿ ಪರ್ವತಗಳೆದ್ದವು
ನದಿ ಹರಿದು ಉಕ್ಕಿ ಒಣಗಿದವು
ಬಯಲೊಣಗಿ ಬಾಯ್ಬಿರಿದು ಬಂಜರಾಯ್ತು
ಹಾಡು ಮರೆತೆ ಚನ್ನೇಮಣೆಯಾಟ ಮರೆತೆ
ಒಡಲುರಿಯ ಮಾತುಗಳ ಭಾಷೆ ಮರೆತೆ
ಮಡಿಲ ಸುಖ ಮರೆತೆ ಒಡಲ ಬಳ್ಳಿಯ ಬೇರು ಮರೆತೆ
ಮರೆತೆ ದೇಹದೊಳಗೊಂದು ಮನಸಿದೆಯೆಂಬ ನಿಜ
ಎಲ್ಲ ಮರೆಸಿದ ಮರವೆಗಿಂತ ಯಾವ ನೆನಹು ಘನವೆನ್ನಲಿ?

ಗುಹೆಯ ಬಾಯಿಗಡ್ಡ ದೊಡ್ಡ ಕಲ್ಲುಬಂಡೆ..

ಖಾಲಿ ಹಣತೆಯಲಿಷ್ಟು ಚಿಕ್ಕೆಗಳನಿಟ್ಟೆ
ಕತ್ತಲ ಗುಹೆಯಲಿ ಬೆಂಕಿಯಾಗಿ ಬೆಳಕಾಗಿ
ಬೂದಿಯುಳಿಸದ ಕರ್ಪೂರವಾಗಿ ಉರಿಯತೊಡಗಿದೆ..

ನೆನಪುಗಳೇ, ಬೀಜವಾಗಿ ಒಳ ನುಸುಳಬೇಡಿ
ಕನಸುಗಳೇ, ಭ್ರೂಣವಾಗಿ ಬೆಳೆಯಬೇಡಿ
ಬಯಕೆಗಳೇ, ಮತ್ತೆಮತ್ತೆ ಗರ್ಭ ತುಂಬಬೇಡಿ
ನಾನಿನ್ನು ಹೆರಲಾರೆ.

ಕನಸುಗಳ ಕಾದುಕೊಳುವುದೆಂದರೆ
ಕಾಲಕ್ಕೆ ಬೆನ್ನುಹಾಕಿ ನಡೆಯಬೇಕು
ಹುಚ್ಚಳಾಗದೆ ಬದುಕಬೇಕೆಂದರೆ
ಮಾತಿಗೆ ಮದ್ದಿಟ್ಟು ಸಿಡಿಸಿ ಮೌನ ಒಲಿಸಿಕೊಳ್ಳಬೇಕು
ಸೋಲು ಒಳನುಸುಳಲು ಹೆಬ್ಬಾಗಿಲೇ ತೆರೆಯಬೇಕಿಲ್ಲ
ಒಂದೇ ಒಂದು ಪುಟ್ಟ ಬಿರುಕು ಸಾಕು
ಅಂಗೈಯ ರಕುತ ನದಿ ಅಂಗಾಲಿಂದ ಹೊರಬಂದು
ಗುಹೆ ಬಾಯ ಬಂಡೆ ದಾಟಿ ಹರಿಯಬೇಕು..

ಎಲ್ಲ ಕದನಗಳ ಗುರಿ ಶಾಂತಿಯೇ ಇರಬಹುದು
ಕದನವೇ ಇರದ ಕಡೆ ಶಾಂತಿ ಮಾತಿಲ್ಲ
ಯುದ್ಧವಿರದ ರಣರಂಗದಿ ಕೊನೆಗೊಂದು ಆಸ್ಫೋಟ
ಬಯಲುಗೊಳದೆ ಬೇರೆ ದಾರಿಯಿಲ್ಲ
ಬೆಟ್ಟದ ಗುಹೆ ಮೆಟ್ಟಿ ಲೋಕ ತಾನಾದೆ
ಕಾಯಗೊಂಡ ಅಂಗಾಂಗ ಕಳಚಿ ನಿಂತೆ
ನಿಜವನರಿತೆ ನಿಶ್ಚಿಂತಳಾದೆ ಬೆಳಗನುಟ್ಟೆ ಲಜ್ಜೆಗೆಟ್ಟೆ

ತಾ ಮುಳುಗಿದ್ದ ಬಾವಿಯನೆ ಆಳಾಳ ತೋಡಿದ ಕರಡಿ
ನೀರೊಳಗಿದ್ದು ಬಾಯಾರಿ ಬಿಂಬ ನೋಡಿತ್ತು
ಹೊಯ್ದಾಡುವ ನೆರಳಾಗಿ ಕಾಯದ ಹುಸಿ ಕಂಡಿತ್ತು
ಕಂಪಿಸುವ ದೇಹದಲಿ ರೂಪದ ಹುಸಿ ಅರಿವಾಗಿ
ಬೆತ್ತಲೆಯೆ ನಿಚ್ಚಣಿಕೆಯೆಂದು ನಿಚ್ಚಳಾಯ್ತು
ಪಶುವಿನೊಳಗೂ ಮನಸು ಮೂಡತೊಡಗಿತ್ತು..

ಈಗ ಗಾಯಕ್ಕೆ ವಿರಾಮ
ಮತ್ತೆ ಮಾಯುವ ರೋಗಕ್ಕೆ ವಿರಾಮ
ಪಶುವಿಗೆ ವಿರಾಮ
ದುಃಖಕ್ಕೂ ವಿರಾಮ..


















ಲೋಕವೇ,
ಕಾಣಲು ಕಣ್ಣೇ ಬೇಕೆಂದಾದರೆ ನನಗೆ ಕುರುಡು
ಕೇಳಲು ಕಿವಿಯೇ ಇರಬೇಕೆಂದರೆ ನನಗೆ ಕಿವುಡು
ನಡೆಯಲು ಕಾಲು
ಮುಟ್ಟಲು ಕೈ
ಮಿಡಿಯಲು ಎದೆ
ಸೆಟಗೊಳಲು ಬೆನ್ನುಹುರಿಯೇ ಬೇಕೆಂದಾದರೆ
ಕ್ಷಮಿಸು,
ನಾ ಅಂಗಹೀನ.

ನಾನೀಗ ಅವನೆದೆಯೊಳಗಿರುವ ರೆಕ್ಕೆಯಿರದೆ ಹಾರುವ ಹಕ್ಕಿ
ನಿದ್ರೆ ಸ್ವಪ್ನ ಜಾಗರಗಳೇ ಇರದ ಏಕಕೋಶ ಜೀವಿ...



***



ಬೀಳದ ನಕ್ಷತ್ರ























(ಕವನವನ್ನು ಪ್ರಜಾವಾಣಿ ಸಾಪ್ತಾಹಿಕ ಪುರವಣಿಯಲ್ಲಿ ಓದಿರಿ).