Friday, 8 November 2013

ಕರ್ನಾಟಕ ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ವಿಧೇಯಕ 2013

ರಾಜ್ಯ ಸರ್ಕಾರದ ಮುಂದಿರುವ ಕರ್ನಾಟಕ ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ವಿಧೇಯಕ, ೨೦೧೩ರ ಕುರಿತು ಈಗಾಗಲೇ ಹಲವು ಬಗೆಯಲ್ಲಿ ಪರ ವಿರೋಧದ ಅಭಿಪ್ರಾಯಗಳು ನಾಡಿನಾದ್ಯಂತ ವ್ಯಕ್ತಗೊಳ್ಳುತ್ತಿವೆ.


ಈ ವಿಧೇಯಕದಲ್ಲಿರುವ ಮುಖ್ಯ ಅಂಶಗಳು...

ಈ ವಿಧೇಯಕದಲ್ಲಿ ಕಾಯ್ದೆಯ ಕರಡು ಮತ್ತು ಪರಿಕಲ್ಪನಾ ಟಿಪ್ಪಣಿಗಳಿವೆ. ಕಾಯ್ದೆಯ ಕರಡನ್ನು ರಾಷ್ಟ್ರೀಯ ಕಾನೂನು ಶಾಲೆಯ ’ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರ'ದ ಕಾನೂನು ತಜ್ಞರು ರಚಿಸಿದ್ದರೆ' ಪರಿಕಲ್ಪನಾ ಟಿಪ್ಪಣಿಯನ್ನು ಈ ಸಂಸ್ಥೆಯ ಉಪಕ್ರಮದಲ್ಲಿ ರಚಿಸಲಾದ, ರಾಜ್ಯದ ಹಿರಿಯ ಚಿಂತಕರು, ಸಾಹಿತಿಗಳು, ನ್ಯಾಯವಾದಿಗಳು, ಜಾನಪದ ತಜ್ಞರು, ವಿಚಾರವಾದಿಗಳನ್ನೊಳಗೊಂಡ ಸಮಿತಿಯಿಂದ ರೂಪಿಸಲಾಗಿದೆ. ಅಲ್ಲದೆ ನಾಡಿನ ವಿವಿಧೆಡೆಗಳಿಂದ ಬಂದ ಸಲಹೆ, ಅಭಿಪ್ರಾಯಗಳನ್ನು ಒಳಗೊಂಡಿದೆ. 

ವಿಧೇಯಕದ ಪ್ರಕಾರ ಮೂಢನಂಬಿಕೆ ಆಚರಣೆ ಎಂದರೆ, (ಎ)ಇನ್ನೊಬ್ಬ ವ್ಯಕ್ತಿ ಅಥವಾ ವ್ಯಕ್ತಿಗಳ ಕಾಯಿಲೆಯನ್ನು ಅಥವಾ ಸಂಕಟವನ್ನು ಪರಿಹರಿಸುವ ಭರವಸೆ ನೀಡಿ ಅಥವಾ ಅವರಿಗೆ ಲಾಭ ಉಂಟಾಗುತ್ತದೆಂದು ತಿಳಿಸಿ ಅಥವಾ ಪ್ರತಿಕೂಲ ಪರಿಣಾಮ ಉಂಟಾಗುತ್ತದೆಂದು ಹೆದರಿಸಿ ಅತಿಮಾನುಷ ಶಕ್ತಿಯನ್ನು ಆಹ್ವಾನಿಸುವ ಮೂಲಕ ಅವರಿಗೆ ತೀವ್ರತರವಾದ ದೈಹಿಕ ಅಥವಾ ಮಾನಸಿಕ ಹಾನಿಯುಂಟು ಮಾಡುವ ಅಥವಾ (ಬಿ) ಹಣಕಾಸಿನ ಅಥವಾ ಯಾವುದೇ ಲೈಂಗಿಕ ಶೋಷಣೆಯನ್ನುಂಟು ಮಾಡುವ ಅಥವಾ (ಸಿ) ಮನುಷ್ಯನ ಘನತೆಗೆ ಘಾಸಿಯುಂಟುಮಾಡುವ ಯಾವುದೇ ಕೃತ್ಯ.

-ಮೂಢನಂಬಿಕೆ ಆಚರಣೆಯನ್ನು ಉತ್ತೇಜಿಸುವ, ಪ್ರಸಾರ ಮಾಡುವ ಅಥವಾ ನಡೆಸುವ ಯಾರೇ ವ್ಯಕ್ತಿಯು ಒಂದು ವರ್ಷಕ್ಕೆ ಕಡಿಮೆಯಲ್ಲದ ಅವಧಿಯ ಆದರೆ ೫ ವರ್ಷಗಳಿಗೆ ವಿಸ್ತರಿಸಬಹುದಾದ ಕಾರಾವಾಸದಿಂದ ಅಥವಾ ಹತ್ತು ಸಾವಿರ ರೂಪಾಯಿಗಳಿಗೆ ಕಡಿಮೆಯಿಲ್ಲದ ಆದರೆ ಐವತ್ತು ಸಾವಿರ ರೂಪಾಯಿಗಳಿಗೆ ವಿಸ್ತರಿಸಬಹುದಾದ ಜುಲ್ಮಾನೆಯಿಂದ ಅಥವಾ ಇವೆರಡರಿಂದಲೂ ದಂಡಿತನಾಗತಕ್ಕದ್ದು.

-ಬಲಿಯಾದ ವ್ಯಕ್ತಿಯ ಸಮ್ಮತಿಯು ಈ ಪ್ರಕರಣದ ಅಡಿಯಲ್ಲಿ ಪ್ರತಿರಕ್ಷೆಯಾಗತಕ್ಕದ್ದಲ್ಲ.

-ಬಲಿಯಾದ ವ್ಯಕ್ತಿ ಎಂದರೆ ಮೂಢನಂಬಿಕೆ ಆಚರಣೆಯನ್ನು ಮಾಡಿದುದರಿಂದಾಗಿ ಯಾವ ವ್ಯಕ್ತಿಗೆ 
ತೀವ್ರತರವಾದ ದೈಹಿಕ ಅಥವಾ ಮಾನಸಿಕ ಹಾನಿಯುಂಟಾಗಿದೆಯೋ, ಯಾರು ಆರ್ಥಿಕವಾಗಿ ಅಥವಾ ಲೈಂಗಿಕವಾಗಿ ಶೋಷಣೆಗೆ ಒಳಗಾಗಿರುವನೋ ಅಥವಾ ಯಾರ ಘನತೆಗೆ ಧಕ್ಕೆಯುಂಟಾಗಿದೆಯೋ ಅಂಥ ವ್ಯಕ್ತಿ.


 



ವಿಧೇಯಕವು ಕೆಳಕಂಡ ಕೃತ್ಯಗಳನ್ನು ಅಪರಾಧಗಳೆಂದು ಹೆಸರಿಸಿದೆ.


1) ಈ ಮುಂದಿನ ಅಪರಾಧಗಳು ಸಂಜ್ಞೇಯ ಅಪರಾಧಗಳಾಗಿರತಕ್ಕದ್ದು:

- ಲಾಭಕ್ಕಾಗಿ ಅಥವಾ ದೈವವನ್ನು ಸಂಪ್ರೀತಗೊಳಿಸುವುದಕ್ಕಾಗಿ ನರಬಲಿ ಕೊಡುವುದು

-ನರಬಲಿಯಲ್ಲಿನ ನಂಬಿಕೆಯನ್ನು ಹರಡುವುದು ಅಥವಾ ನರಬಲಿ ಕೊಡುವಂತೆ
ಇತರರನ್ನು ಪ್ರೇರೇಪಿಸುವುದು.

- ಕಾಯಿಲೆಯನ್ನು ಗುಣಪಡಿಸಲು ಪ್ರಯತ್ನಿಸುವುದು ಅಥವಾ ಹಿಂಸಾತ್ಮಕ ರೀತಿಯಿಂದ
ಭೂತೋಚ್ಚಾಟನೆಯನ್ನು ನಡೆಸುವುದು.

- ಭಾರತ ದಂಡ ಸಂಹಿತೆ, ೧೮೬೦ರ ೨೯೭ನೇ ಪ್ರಕರಣದ ಉಲ್ಲಂಘನೆಯಲ್ಲಿ ಅಘೋರಿ,
ಸಿದ್ದುಭುಕ್ತಿ ಅಥವಾ ಸದೃಶ ಆಚರಣೆಯನ್ನು ನೆರವೇರಿಸುವುದು.

- ಅಂಥ ಆಚರಣೆಗಳಲ್ಲಿ ತೊಡಗುವಂತೆ ಇತರರನ್ನು ಒತ್ತಾಯಿಸುವುದು; ಅಥವಾ

- ಅಂಥ ಆಚರಣೆಗಳಿಂದ ಪಡೆಯಲಾಗಿದೆಯೆನ್ನಲಾದ ಶಕ್ತಿಯ ಭಯವನ್ನು ಉಪಯೋಗಿಸಿಕೊಂಡು
ಆರ್ಥಿಕವಾಗಿ ಮತ್ತು ಲೈಂಗಿಕವಾಗಿ ವ್ಯಕ್ತಿಗಳ ಶೋಷಣೆ ಮಾಡುವುದು.

- ದೈವಿಕ ಅಥವಾ ಅಧ್ಯಾತ್ಮಿಕ ಶಕ್ತಿ ಸ್ವಾಧೀನವಾಗಿದೆಯೆಂದು ಘೋಷಿಸುವುದು ಮತ್ತು ಅಂಥ
ಘೋಷಣೆಯನ್ನು ಬಳಸಿಕೊಂಡು ಹಣವನ್ನು ಪಡೆದು ಪರಿಹಾರಗಳ ಅಥವಾ ಲಾಭಗಳ ಭರವಸೆಯನ್ನು ಕೊಡುವುದು.

- ಅಥವಾ ವೈಯಕ್ತಿಕ ಲಾಭಕ್ಕಾಗಿ ದೈವದ ಕೋಪದ ಅಥವಾ ಆತ್ಮದ ಖಂಡನೆಯ ಭಯವನ್ನು
ಹುಟ್ಟಿಸುವುದು.

- ಹಣಕ್ಕಾಗಿ ಅಥವಾ ಇಲ್ಲವೇ ಉಚಿತವಾಗಿ ವಾಮಾಚಾರವನ್ನು (ಬ್ಲ್ಯಾಕ್ ಮ್ಯಾಜಿಕ್) ಅಥವಾ
ಮಾಟವನ್ನು ಇತರ ವ್ಯಕ್ತಿಗಳಿಗೆ ತೊಂದರೆಯುಂಟು ಮಾಡುವ ಉದ್ದೇಶದಿಂದ ಮತ್ತು ಅವರಿಗೆ
ತೀವ್ರವಾಗಿ ಭಯವುಂಟು ಮಾಡುವಂತೆ ಬಳಸುವುದು ಅಥವಾ ಮಾಡುವುದು.

- ದೇಹದೊಳಗೆ ಚುಚ್ಚಿಕೊಳ್ಳುವ ಕೊಕ್ಕೆಯಿಂದ ನೇತಾಡುವಂತಹ (ಸಿಡಿ) ಅಥವಾ ದೇಹದೊಳಗೆ
ತೂರಿಸಿಕೊಂಡಿರುವ ಕೊಕ್ಕೆಯಿಂದ ರಥವನ್ನು ಎಳೆಯುವಂತಹ ಸ್ವ ದಂಡನೆಯಿಂದ
ಗಾಯಗೊಳ್ಳುವ ಮತಾಚರಣೆಗಳನ್ನು ಆಚರಿಸುವಂತೆ ಒತ್ತಾಯಿಸುವುದು, ಹರಡುವುದು
ಅಥವಾ ಅದಕ್ಕೆ ಅನುಕೂಲ ಕಲ್ಪಿಸುವುದು.

- ಮಕ್ಕಳ ಕಾಯಿಲೆಯನ್ನು ವಾಸಿ ಮಾಡುವ ಹೆಸರಿನಲ್ಲಿ ಅವರನ್ನು ಮುಳ್ಳುಗಳ ಮೇಲೆ ಅಥವಾ
ಎತ್ತರದಿಂದ ಎಸೆಯುವ ಮೂಲಕ ಅವರನ್ನು ಹಾನಿಗೊಳಪಡಿಸುವಂತಹ ಆಚರಣೆಗಳನ್ನು
ಒತ್ತಾಯಿಸುವುದು, ಹರಡುವುದು ಮತ್ತು ಅಂತಹ ವಾತಾವರಣವನ್ನು ಕಲ್ಪಿಸುವುದು.

- ಮಾನವ ಘನತೆಯನ್ನು ಉಲ್ಲಂಘಿಸುವಂತಹ ಮಡೆ ಸ್ನಾನ ಅಥವ ಸದೃಶ ಆಚರಣೆಗಳಿಗೆ ಅನುಕೂಲ ಕಲ್ಪಸುವುದು.

- ಮೂಢನಂಬಿಕೆಯ ಹೆಸರಿನಲ್ಲಿ ಜಾತಿ ಅಥವಾ ಲಿಂಗದ ಆಧಾರದ ಮೇಲೆ ತಾರತಮ್ಯ
ಕಲ್ಪಿಸುವುದು.

- ಪಾದರಕ್ಷೆಗಳನ್ನು ಅವನ/ ಅವಳ ತಲೆಯ ಮೇಲೆ ಒಯ್ಯುವ ಅವಮಾನಕರ ಆಚರಣೆಗಳನ್ನು
ನೆರವೇರಿಸುವಂತೆ ಸಮಾಜದ ದುರ್ಬಲ ವರ್ಗಳಿಗೆ ಸೇರಿದ ಯಾರೇ ವ್ಯಕ್ತಿಯನ್ನು
ಒತ್ತಾಯಿಸುವುದು.

- ಆಹಾರ ವಿತರಣೆ ಮಾಡುವಾಗ ಜಾತಿಯ ಆಧಾರದ ಮೇಲೆ ಪಂಕ್ತಿ ಬೇಧ ಮಾಡುವಂತಹ
ಆಚರಣೆಗಳನ್ನು ಮಾಡುವುದು.


ಮಹಿಳೆಯರ ವಿರುದ್ಧ ಮೂಢನಂಬಿಕೆ ಆಚರಣೆಗಳ:-



-ಋತುಮತಿಯಾದ ಅಥವಾ ಗರ್ಭಿಣಿ ಮಹಿಳೆಯರನ್ನು ಒತ್ತಾಯಪೂರ್ವಕವಾಗಿ
ಒಂಟಿಯಾಗಿರಿಸುವುದು, ಗ್ರಾಮದೊಳಗೆ ಬಾರದಂತೆ ನಿಷೇಧಿಸುವುದು ಅಥವಾ ಬೇರೆ ಇರಿಸಲು
ಅನುಕೂಲ ಕಲ್ಪಿಸುವುದು.

- ಸಮಾಜದ ದುರ್ಬಲ ವರ್ಗಗಳ ಮಹಿಳೆಯರ ಮೇಲೆ ಬಣ್ಣದ ನೀರನ್ನು ಎರಚುವ, ಓಕುಳಿ,
ಮೂಲಕ ಅವರನ್ನು ಅವಮಾನಗೊಳಿಸುವುದು ಅಥವಾ ಅವರ ಘನತೆಗೆ ಧಕ್ಕೆಯುಂಟು
ಮಾಡುವುದು.

- ಪೂಜೆ ಅಥವಾ ಇತರ ಯಾವುದೇ ಹೆಸರಿನಲ್ಲಿ ಅವರನ್ನು ಬೆತ್ತಲೆಯಾಗಿ ಪ್ರದರ್ಶಿಸುವುದು,
ಉದಾಹರಣೆಗೆ ಬೆತ್ತಲೆ ಸೇವೆ ಅಂಥ ಅಮಾನವೀಯ ಮತ್ತು ಅವಮಾನಗೊಳಿಸುವ
ಆಚರಣೆಗಳಿಗೆ ಮಹಿಳೆಯರನ್ನು ಒಳಪಡಿಸುವುದು.

- ಗರ್ಭಿಣಿಯರನ್ನಾಗಿಸುವುದೂ ಸೇರಿದಂತೆ ಸಾಮಾಜಿಕ ಅಥವಾ ವೈಯಕ್ತಿಯ ಲಾಭವನ್ನು
ಉಂಟು ಮಾಡುವ ಭರವಸೆಯೊಂದಿಗೆ ಅತಿಮಾನುಷ ಶಕ್ತಿಯನ್ನು ಆಹ್ವಾನಿಸುವ ಮೂಲಕ
ಮಹಿಳೆಯರನ್ನು ಲೈಂಗಿಕವಾಗಿ ಶೋಷಣೆಗೆ ಒಳಪಡಿಸುವುದು.

- ಸಾರ್ವಜನಿಕ ಆರೋಗ್ಯಕ್ಕೆ ಹಾನಿಯುಂಟು ಮಾಡುವಂಥ, ಕತ್ತನ್ನು ಕಚ್ಚುವ ಮೂಲಕ
ಪ್ರಾಣಿಗಳನ್ನು ಕೊಲ್ಲುವ ಆಚರಣೆಗಳನ್ನು (ಗಾವು) ನೆರವೇರಿಸುವಂತೆ ಯಾರೇ ವ್ಯಕ್ತಿಯನ್ನು
ಒತ್ತಾಯಿಸುವುದು.



2)ಈ ಮುಂದಿನ ಅಪರಾಧಗಳು ಸಂಜ್ಞೇಯವಲ್ಲದ 
ಅಪರಾಧಗಳಾಗಿರತಕ್ಕದ್ದು:

- ಯಾರೇ ವ್ಯಕ್ತಿಯ ಜನನದ ಸಮಯ, ಸ್ಥಳದ ಆಧಾರದ ಮೇಲೆ ಅವನಿಗೆ ಕಳಂಕ
ಹಚ್ಚುವುದಕ್ಕೆ ಅಥವಾ ಅವನನ್ನು ತೆಗಳುವುದಕ್ಕೆ,

- ಭವಿಷ್ಯವಾಣಿ ನಿಜವಾಗುತ್ತದೆಂದು ನಂಬಿಸಿ ಅವಮಾನಕರ ಆಚರಣೆಗಳನ್ನು ವ್ಯಕ್ತಿಗಳಿಂದ ಮಾಡಿಸುವುದಕ್ಕೆ, ಅಥವಾ

- ವ್ಯಕ್ತಿಗಳಿಗೆ ತೀವ್ರ ಹಣಕಾಸು ನಷ್ಟ ಉಂಟಾಗುವುದಕ್ಕೆ
ಕಾರಣವಾಗುವ ಹಾನಿಕರ ಭವಿಷ್ಯ ನುಡಿಯುವುದು
-ಜ್ವಾಲೆಯನ್ನು ಬರೀ ಕೈಗಳಿಂದ ಮುಟ್ಟುವಂತೆ ಒತ್ತಾಯಿಸುವ ರೀತಿಯ ದೈಹಿಕ ಅಥವಾ
ಮಾನಸಿಕ ಹಾನಿಗೆ ಒಳಪಡಿಸುವ ಮೂಲಕ ಮಾಡುವ ಯಾರೇ ವ್ಯಕ್ತಿಯ ಅಪರಾಧವನ್ನು
ಅಥವಾ ನಿರಪರಾಧಿತ್ವವನ್ನು ಘೋಷಿಸುವುದು;

ವಿಧೇಯಕವು ದೈವನಂಬಿಕೆ, ಆಚರಣೆ ಮತ್ತು ಮೂಢನಂಬಿಕೆಗಳನ್ನು ಕೆಳಕಂಡಂತೆ ಪ್ರತ್ಯೇಕಗೊಳಿಸುತ್ತದೆ. 
ಮೂಢನಂಬಿಕೆಗಳನ್ನು ವಿರೋಧಿಸುವುದೆಂದರೆ, ಜನರ ಧಾರ್ಮಿಕ ನಂಬಿಕೆಗಳನ್ನು ಅಲ್ಲಗಳೆಯುವುದಲ್ಲ, ಹೀನಾಯಿಸುವುದಲ್ಲ. ಜನಸಾಮಾನ್ಯರು ತಮ್ಮ ಬದುಕಿನ ಅನುಭವಗಳಿಂದ, ಸುತ್ತಮುತ್ತಲ ಸಾಮಾಜಿಕ ಪ್ರೇರಣೆಗಳಿಂದ ಹಾಗೂ ಪ್ರಚೋದನೆಗಳಿಂದ ಹಲವಾರು ನಂಬಿಕೆಗಳನ್ನು ಬೆಳೆಸಿಕೊಂಡಿರುತ್ತಾರೆ. ನಂಬಿಕೆಗಳಿಂದ ಆಚರಣೆಗಳು ಹುಟ್ಟಿಕೊಳ್ಳುತ್ತವೆ. ನಂಬಿಕೆಗಳು ಮೂಲ ಅಸ್ತಿತ್ವ ಕಳೆದುಕೊಂಡಾಗ ಮೂಢನಂಬಿಕೆಗಳಾಗುವುದು ಇನ್ನೊಂದು ಹಂತ. ಸಾಮಾಜಿಕ ಅಸಮಾನತೆ, ವೈಚಾರಿಕ ಜ್ಞಾನದ ಅಲಭ್ಯತೆ, ಜ್ಞಾನ ಸಂವಹನದ ಕೊರತೆ ಮುಂತಾದ ಹಲವಾರು ಕಾರಣಗಳಿಂದ ಕೆಲವು ಮೂಢಾಚಾರಗಳು ಕಾರ್ಯಕಾರಣ ಸಂಬಂಧವಿಲ್ಲದೆಯೇ ನಂಬುವಂತೆ ಮಾಡುತ್ತವೆ. ಇಂಥ ನಂಬಿಕೆಗಳ ಮೇಲೆ ರೂಢಿಗೆ ಬಂದ ಆಚರಣೆಗಳು ಅರ್ಥಹೀನವಾಗಿರುತ್ತವೆ. ಇವು ಅಜ್ಞಾನವನ್ನು, ಅಂಧಶ್ರದ್ಧೆಯನ್ನು ಹೇರುವ ಮತ್ತು ಪೋಷಿಸುವ ಶಕ್ತಿಗಳ ಕೈಯಲ್ಲಿ ದುರ್ಬಳಕೆಯಾಗುತ್ತವೆ. 
ಮೂಢನಂಬಿಕೆ ಮತ್ತು ಧಾರ್ಮಿಕ ಶ್ರದ್ಧೆ ನಡುವಿನ ಅಂತರ ತೀರಾ ತೆಳುವಾದದ್ದಾದರೂ ಇವೆರಡರ ನಡುವಿನ ವ್ಯತ್ಯಾಸವನ್ನು ಗುರುತಿಸುವ ಕೆಲಸ ಅತ್ಯಂತ ಜರೂರಾಗಿ ಆಗಬೇಕಿದೆ. ಹೀಗೆ ಗರುತಿಸಲು ನಮಗೆ ಸಂವಿಧಾನಬದ್ಧವಾದ ಮೂಲಭೂತ ಕರ್ತವ್ಯಗಳು ಮತ್ತು ಮಾನವ ಹಕ್ಕುಗಳ ಪರಿಕಲ್ಪನೆಗಳು ಹಾಗೂ ನಮ್ಮ ಬಹುಮುಖಿ ಸಂಸ್ಕೃತಿಯ ನೆಲೆಗಳು ಒಂದು ವಿಶಾಲ ಭಿತ್ತಿಯನ್ನು ಒದಗಿಸಬಹುದು. ಯಾವ ಮೂಢನಂಬಿಕೆಯ ಆಚರಣೆಗಳು ದೈಹಿಕ ಮತ್ತು ಮಾನಸಿಕ ಹಿಂಸೆಗೆ ಕಾರಣವಾಗುತ್ತವಯೋ, ಮಾನವನ ಸಾಮಾಜಿಕ ಘನತೆ-ಗೌರವಕ್ಕೆ ಧಕ್ಕೆಯನ್ನುಂಟುಮಾಡುತ್ತವೆಯೋ ಹಾಗೂ ಆರ್ಥಿಕವಾಗಿ ಸಹಮಾನವರನ್ನು ಶೋಷಿಸಲು ವಂಚಕ ಶಕ್ತಿಗಳಿಂದ ಬಳಕೆಯಾಗುತ್ತವೆಯೋ, ಅವುಗಳನ್ನು ಈ ವಿಧೇಯಕದ ವ್ಯಾಪ್ತಿಯೊಳಗೆ ತರಬಹುದು.

ಜ್ಯೋತಿಷಿಗಳು, ಮುಲ್ಲಾಗಳು, ಬಾಬಾಗಳು, ಪಾದ್ರಿಗಳು, ಪುರೋಹಿತರು ಹೀಗೆ ಪಂಚಾಂಗವನ್ನು ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನಿಸಿ ಭವಿಷ್ಯ ಹೇಳುತ್ತೇವೆಂದು ಜನರನ್ನು ಶೋಷಿಸುವ ಮತ್ತು ಮೌಢ್ಯದ ಬೀಜ ಬಿತ್ತುವ ಎಲ್ಲರನ್ನೂ ಈ ಕಾಯ್ದೆಯಡಿ ಅಪರಾಧಿಗಳೆಂದು ಘೋಷಿಸಬಹುದಾಗಿದೆ.

***

ಬರಹ ಕೃಪೆ: ಸಮಾನ

Wednesday, 6 November 2013

ಕಪ್ಪು ಕಂದೀಲು: ಹರವು ಸ್ಪೂರ್ತಿ ಗೌಡ




1.
ದಾರಿಗಾಗಿ ಹಚ್ಚಿದ ಕಂದೀಲು
ಅದರ ಬೆಳಕಲ್ಲೇ
ಹಳದಿ ಮೈ ಬಿಸಾಡಿಕೊಂಡಿದೆ
ಬಂದು ಬಿಡು..
ಕಂದೀಲ ಕಪ್ಪ ಕಣ್ಣಿಗೆ ತೀಡಿ
ಹೆಬ್ಬೆರಳ ಮೇಲೆ ನಿಂತಿದ್ದೇನೆ











2
ಹಚ್ಚಿಬಿಟ್ಟೆ ಕಂದೀಲ
ಹೆಚ್ಚು ಉರಿ ಮೈಯೊಳಗೆ
ಬೇಗೆ..
ಬೆರಳ ತುದಿ ಚಕ್ರಕ್ಕೆ ಬೇಕು
ನಿನ್ನದೇ
ಗಟ್ಟಿ ಎದೆಮೇಲಿನ ಕೂದಲು
ಎಣಿಸಲು..
ನೀ ಹಚ್ಚಿದ ಕಂದೀಲ ಬೆಳಕಲಿ












3.
ದೀರ್ಘವಾಗಿ ಒರಗಿಬಿಟ್ಟೆ
ರೆಡಾಕ್ಸೈಡ್ ನೆಲದ ಮೇಲೆ
ಭಾರವೆಲ್ಲಾ ಇಳಿಸುವಂತೆ
ಮಂದ ಬೆಳಕಾದರೇನು
ಬಿಟ್ಟು ಹೋಗಿಲ್ಲ
ನೀ ಹಚ್ಚಿದ ಕಂದೀಲು





Tuesday, 5 November 2013

ವಿದ್ಯಾ ಕುಂದರ್ಗಿ ಕವಿತೆ



ಸಾಬರಮತಿಯಲ್ಲೀಗ... 



 

 
















ಗಾಂಧೀ ಎದೆಯೊಳಗೆ 
ಅಂತರ್ಗಾಮಿಯಾಗಿದ್ದ
ಸಾಬರಮತಿಯೀಗ ಸ್ಥಾವರ .
ಜುಳುಜುಳು ಹರಿಯುವುದಿಲ್ಲ 
ಅಹಿಂಸೆಯ ವಿಚಾರಧಾರೆ…..
ನಿಂತೇ ಕತ್ತಿ ಮಸೆಯುತ್ತಿದೆ
ತಿಳಿಯಾಗಿದ್ದ ಹೃದಯವೀಗ
ತಿಪ್ಪೆಯಾಗಿದೆ ಮೇಲೆತ್ತದಂತೆ


ಕೈಕೋಲು,ಕನ್ನಡಕ
ತಟ್ಟೆ,ತಂಬಿಗೆಗಳು
ಶೋಕೇಸ್ನ ಅಟ್ಟ ಏರಿವೆ,
ಸೊಂಟದ ತಾಳಬಡಿತ
ಎಣಿಸುತ್ತಿದ್ದ ಟಿಕ್ ಟಿಕ್….
ಮುಳ್ಳಿನ ಕಾಲಲ್ಲಿ ನೆಗ್ಗಿಲ ಮುಳ್ಳು 
ನಂಜು ಕಾರಿದೆ,
ಹೃದಯ ಬಡಿತ ನಿಂತು ಹೋಗಿದೆ
ಆತ್ಮಕತೆಗಳು……ಮಾತ್ರ
ಮಾರಾಟವಾಗುತ್ತಿವೆ.

ಏನೇ ಆದರೂ 
ಬೋಳು ಭಿತ್ತಿಯ ಕಸ್ತೂರಬಾ 
ಕೋಣೆ,ಕಪಾಟುಗಳು ಮಾತ್ರ
ಒಂಚೂರೂ ಕಸ,ಕಡ್ಡಿ 
ಇಲ್ಲದಂತೆ ಶುಭ್ರವಾಗಿವೆ…..

ಸತ್ಯದೊಂದಿಗಿನ ಪ್ರಯೋಗ ….
ನಿಸ್ಸಂದೇಹ ಸಜೀವವಾದಂತಿದೆ.



***

Thursday, 31 October 2013

ಎರಡು ಕವಿತೆಗಳು: ಡಾ. ಜಿ. ಕೃಷ್ಣ

ದೃಷ್ಟಿ 



















ನಿನ್ನೆ ಕನ್ನಡಕ ಬದಲಾಯಿಸಿದೆ
ದೂರ ದೃಷ್ಟಿ ಹತ್ತಿರದ್ದು
ಎರಡೂ ಎಕ್ಕುಟ್ಟಿದ್ದವು

ದ್ವಿದೃಷ್ಟಿಯ
ಚಸ್ಮ
ಮೂಗನೇರಿ ಕುಳಿತಾಗ
ನನ್ನ ದಡ್ಡ ಕಣ್ಣುಗಳು
ಹತ್ತಿರದ್ದನ್ನು
ದೂರದಲ್ಲಿ
ದೂರದ್ದನ್ನು ಹತ್ತಿರದಲ್ಲಿ
ಕೀಲಿಸಲು ಹೋಗಿ
ಎರಡೂ ಕಲಸು
ಕಣ್ಣಿಗೆ
ಪಾಠ ಹೇಳಬೇಕಿದೆ
ದೂರ
ಹತ್ತಿರಗಳೆರಡೂ
ನಿಚ್ಚಳವಾಗಬೇಕಿದೆ.







ಅಂದಿನ ಚಿತ್ರ





















ಅಂದು
ಶಿಲಾಯುಗದ ಹೆಸರಿಲ್ಲದ
ಒಂದು ದಿನ
ಬೆಳಗಿಡೀ ಸುತ್ತಿ
ಬೇಟೆಯಾಡಿದ್ದ
ಹಸಿ ಹಸಿ ತಿಂದು
ಸಂಜೆ
ಹೊತ್ತು ಹೋಗದ್ದಕ್ಕೆ
ಕಲ್ಲುಬಂಡೆಯ ಮೇಲೆ
ನಾಕು ಚಿತ್ರ ಬರೆದೆ
ಮರೆತೆ
ಇವತ್ತು ಹಬ್ಬದಡಿಗೆ ಉಂಡ
ತೂಕಡಿಕೆಯಲ್ಲಿ
ಕನವರಿಸಿದೆನಂತೆ
ಮಗಳು ಎಬ್ಬಿಸಿ
ಸೀದಾ ಅಲ್ಲಿಗೇ ಕರೆದೊಯ್ದು
ನಿಲ್ಲಿಸಿದಾಗ
ಅವಳ ಕೈಯ
ಬಿಸಿಯಲ್ಲಿ
ಆ ಚಿತ್ರಗಳೆಲ್ಲ ಮಲಗಿದ್ದವು
ಎಬ್ಬಿಸಲಿಲ್ಲ
ಮೇಲೊಂದು 
ಹುಲ್ಲುಗರಿಕೆ ಹೊದಿಸಿ
ಸದ್ದಿಲ್ಲದೆ
ವಾಪಾಸು ಬಂದೆವು.
ಆ ಪೂಜಿತೆಯರು ನಾವೇ ಇರಬೇಕು..!


ಸುಧಾ ಚಿದಾನಂದಗೌಡ
  Sudha Chidanandgowd


 


ಗಾಳಿ ಬೀಸಿದಾಗೊಮ್ಮೆ
ಸೆರಗು ಸಂಭಾಳಿಸಲು,
ಮಳೆ ಜಿನುಗಿದರೆ ಹನಿ ತಾಕದಿರಲು,
ಒಲೆ ಉರಿಯುವಾಗ ಬೆರಳು ಸುಡದಿರಲು
ನಡೆಸಿದೇವೆ ಅನುಕ್ಷಣದ ಹೋರಾಟ
ನೀವು ಸ್ತುತಿಸುವ ಶಕ್ತಿಸ್ವರೂಪಿಣಿಯರು
ನಾವೇ ಇರಬೇಕು

 
ಎದೆಯ ಉಬ್ಬು ಬಚ್ಚಿಡಲು
ಸೊಂಟ ಬಳುಕದಂತೆ ನಡೆಯಲು
ಚಪ್ಪಲಿಯೊಳಗಿನ ಬೆರಳು
ಯಾರ ಕಣ್ಣನ್ನೂ ಕೋರೈಸದಿರಲಿ
ಎಂದು ಹಾರೈಸಿಕೊಂಡು
ಮೈಗೆ ಮೈಗಾವಲಾಗಿಸಿಕೊಂಡು
ನೂರು ಕಂಗಳ ಕಾವಲಿನ ನಡುವೆ
ಬದುಕುಳಿಯಲು ನಡೆಸಿದೇವೆ
ಅನುಗಾಲ ಯತ್ನ
ನೀವು ಹೇಳುವ
ಕುಚೋನ್ನತೇ ಕುಂಕುಮರಾಗಶೋಭಿತೆ
ಇತ್ಯಾದಿಯರು ನಾವೇ ಇರಬೇಕು

ಶಬ್ದವಾದೊಡನೆ ಬೆಚ್ಚಿಕೊಂಡು,
ಇರುಳಾದೊಡನೆ ನಾಲ್ಕುಗೋಡೆ ನೆಚ್ಚಿಕೊಂಡು
ಹಗಲು ಹರಿದ ಬಟ್ಟೆಯನು ಬಿಗಿಯಾಗಿರಿಸಿ
ಹಿರಿ-ಕಿರಿ ಪರದೆಯಲಿ
ಯಾವಳೋ ಮಾನಗೇಡಿಯ
ಮೈಕುಣಿತಕ್ಕೆ ಹುಚ್ಚೆದ್ದ ಮನಮರ್ಕಟದ
ಮೃಗತೃಷೆಗೆ ಸಮಿತ್ತಾದ
ಪಕ್ಕದ್ಮನೆ ಬಾಲೆ, ಹಿಂದಿನ್ಮನೆ ಅಜ್ಜಿ
ನಾವೇ ಇರಬೇಕು
ನೀವು ಹೇಳುವ
ಪ್ರಚೋದನಕಾರಿ ವೇಷಧಾರಿಣಿಯರು

ಗಿಲೀಟು ಒಡವೆ, ರೇಷ್ಮೆದುಕೂಲ
ಕುದುರೆಸಾರೋಟಿನ ಕನಸಿನಲಿ ಕರಗಿ
ಕಿರುಗೋಣೆಯನೆ ಅರಮನೆಯೆಂದು ಭ್ರಮಿಸಿ
ಕಂಡಕಂಡ ಗಂಡಸರನ್ನು
ಚಿಗಪ್ಪಾ, ದೊಡಪ್ಪಾ, ಅಣ್ಣಾ, ಅಪ್ಪಾ
ಕೂಗಿ ಸಂಬಂಧಗಳ ನೆಟ್ಟಗಿರಿಸಲು ಹೆಣಗಿ
ಚರಂಡಿ ನೀರಿನಲಿ ಬೊಗಸೆಯಾಡಿಸಿ
ಜೀವಜಲ ಹುಡುಕುವವರು
ನೀವು ಹೇಳುವ
ಗಂಗೆ, ಜಮನೆ, ಸಿಂಧು, ಕಾವೇರಿ
ನಾವಲ್ಲದೆ ಇನ್ನು ಯಾರು !?



Wednesday, 30 October 2013

ರುಕ್ಮೋದ್ದಿನ್ ತೋಲಾ - ರಾಣೇಶ್ ಪೀರ್ ಸನ್ನಿಧಿಯಲ್ಲಿ...





 Neela K Gulbarga
 ಕೆ. ನೀಲಾ

ಹಿಂಗಾರು ಮಳೆಯು ಉಲ್ಲಾಸದ ಗಿಲಕಿಯಾಡಿಸುತ್ತಿದೆ. ಹೊಲಗಳಲ್ಲಿ ತೊಗರಿಯು ಅರಶಿಣ ಹೂವು ಮುಡಿದು ನಳನಳಿಸುತ್ತಿದೆ. ತೊಗರಿಯ ಕಣಜ ಒಟ್ಟುವ ರೈತರು ಉತ್ತಮ ಬೆಲೆ ಬಂದಲ್ಲಿ ಖಂಡಿತ ಖುಷಿ ಪಟ್ಟಾರು. ನಿಸರ್ಗದ ಈ ನಿರ್ಮಲ ವಾತಾವರಣವನ್ನು ಆಸ್ವಾದಿಸಿ ನಲಿಯಬೇಕಾದ ಮನಸು ಮಾತ್ರ ಒಳ-ಒಳಗೇ ರೋದಿಸುತ್ತಿದೆ. ಈ ನಡುವೆ ಮಂಗಳೂರು, ಬೆಳ್ತಂಗಡಿ, ಮೈಸೂರು ಅಂತೆಲ್ಲ ಸುತ್ತಾಡಿ ಬಂದಿರುವೆನು. ಸೌಜನ್ಯ ಪ್ರಕರಣವು ಇನ್ನಿಲ್ಲದಂತೆ ಕಾಡುತ್ತಿದೆ. ಮಂಡ್ಯ ಜಿಲ್ಲೆಯ ಆಬಲವಾಡಿಯಲ್ಲಿ ತಂದೆಯೇ ಮಗಳನ್ನು ಬಹಿರಂಗವಾಗಿ ನೇಣು ಹಾಕಿದ ಪ್ರಕರಣ ನಡೆದಾಗಲೂ ಹೀಗೇ ಇನ್ನಿಲ್ಲದ ಕಾಡುವಿಕೆಯಲ್ಲಿ ಕುದ್ದು ಹೋಗಿದ್ದೆ. ಆಲೋಚಿಸುತ್ತಿದ್ದಂತೆ ಮೆದುಳಿಗೆ ಹೊಳೆದದ್ದು ಇಷ್ಟು. ಯಾವ ನಾಡಿನಲ್ಲಿ ಕೋಮುವಾದ-ಮೂಲಭೂತವಾದ ಬೆಳೆಯುತ್ತದೆಯೋ ಆ ನಾಡಿನಲ್ಲಿ ಹೆಣ್ಣುಮಕ್ಕಳು ಮತ್ತು ಮಕ್ಕಳು ಸುರಕ್ಷಿತರಾಗಿರುವುದಿಲ್ಲ. ಮತೀಯವಾದ ಬೆಳೆಯುತ್ತಿದ್ದಂತೆ ಜನರ ಹೃದಯದಲ್ಲಿ ಕ್ರೌರ್ಯವೊಂದು ನುಗ್ಗಿ ಇಬ್ಭಾಗಿಸಲು ಹವಣಿಸುತ್ತಿರುತ್ತದೆ. ಕೋಮುದಂಗೆ ನಡೆದಾಗೆಲ್ಲ ಹೆಂಗಸರ ಮೇಲೆ ವ್ಯಾಪಕ ಅತ್ಯಾಚಾರ ನಡೆಯುತ್ತದೆ. ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರಕ್ಕೂ ಕೋಮುವಾದಕ್ಕೂ ನೇರಾ-ನೇರ ಸಂಬಂಧವಿದೆ. ಸಂಸ್ಕೃತಿಯ ಹೆಸರಿನ ಮೇಲೆ ಮಹಿಳೆಯರ ಘನತೆ-ಅಸ್ಮಿತೆಯ ಮೇಲೆ ಧಾಳಿ ನಡೆಯುವುದು ಕೋಮುವಾದ-ಮೂಲಭೂತವಾದ ಬೆಳೆದ ಪ್ರದೇಶಗಳಲ್ಲಿ ಅಧಿಕವಾಗಿರುತ್ತದೆ. ಚರಿತ್ರೆಯು ಮತ್ತೆ-ಮತ್ತೆ ಇದನ್ನು ದಾಖಲುಗೊಳಿಸಿದೆ. ಚರಿತ್ರೆಯಿಂದ ನಮಗೆ ಪಾಠ ಕಲಿಯಲಿಕ್ಕಿದೆ. ಹೃದಯ ಬೆಸುಗೆಯ ಕೋಮುಸಾಮರಸ್ಯ ನೈಜ ಅಭಿವೃದ್ಧಿಯ ಬುನಾದಿಯಾಗಬೇಕಿದೆ. ಇಂಥ ನಡೆಗೆ ಬಹು ದೊಡ್ಡ ಪರಂಪರೆಯೂ ಇರುತ್ತದೆ. ದೇಶದಗಲಕ್ಕೂ ಸಾಮರಸ್ಯದ ಸಾಂಸ್ಕೃತಿಕ ಪರಂಪರೆಯು ಅವಿಚ್ಛಿನ್ನವಾಗಿ ಹರಡಿಕೊಂಡಿದೆ. ಕೋಮುವಾದಿ-ಮೂಲಭೂತವಾದಿಗಳು ಇಂಥ ನೆಲೆಗಳನ್ನು ಹಾಳುಗೆಡವಲು ಹವಣಿಸುತ್ತಿರುವರು. ಅಥವ ಕೈವಶ ಮಾಡಿಕೊಂಡು ಮೂಲ ಸ್ವರೂಪ-ಸಂದೇಶವನ್ನೇ ಅಳಿಸಿ ಹಾಕಿ ಸ್ವಹಿತಾಸಕ್ತಿಗಾಗಿ ಬಳಸಿಕೊಳ್ಳುತ್ತಿರುವರು. ಇದೊಂದು ರೀತಿಯಲ್ಲಿ ಮಾನವೀಯತೆ ಮತ್ತು ಅಮಾನವೀಯ ಕ್ರೌರ್ಯದ ನಡುವಿನ ನಿರಂತರ ಸಂಘರ್ಷ. ಇದು ಸಾಂಸ್ಕೃತಿಕ ಸಂಘರ್ಷವೂ ಹೌದು. 

ನಾಡೆಲ್ಲ ಸುತ್ತಾಡಿ ಬಂದು ಹೀಗೆ ಚಿಂತಿಸುತ್ತ ಒಂದೆಡೆ ಕೂಡಲು ಮನಸು ಒಲ್ಲೆನ್ನತೊಡಗಿತು. ಎಲ್ಲಿಗೆ ಹೊರಡುವುದು? ಅರ್ಧ ಗಂಟೆಯೊಳಗಾಗಿ ರಾಣೇಶ್-ಪೀರ್ ದರ್ಗಾದ ಎಂಬತ್ತರ ಇಳಿವಯಸ್ಸಿನ ಬುರಾನೋದ್ದಿನ್ನ ಮುಂದೆ ಕುಳಿತೆ. ಬಿಳಿಯ ಪೈಜಾಮ-ಅಂಗಿ. ತಲೆಗೆ ಕಸೂತಿಯುಳ್ಳ ಬಿಳಿಯದ್ದೇ ಗೋಲು ಟೋಪಿ. ಬುರಾನೋದ್ದಿನನ ಅಪ್ಪ ಮಷಾಕ್ಸಾಬ್ 1884ರಲ್ಲಿ ಸ್ಥಾಪಿಸಲ್ಪಟ್ಟ ಎಂಎಸ್ಕೆ ಮಿಲ್ಲಿನಲ್ಲಿ ಕಾರ್ಮಿಕನಾಗಿದ್ದ. ಮಕ್ಕಳು ತರಕಾರಿ ಮಾರುವರು. ಕಾರ್ಮಿಕನಾಗಿಯೇ ದುಡಿದವನು ಈಗ ರಾಣೇಶ ಪೀರ್ ದರ್ಗಾದ ಮೆಟ್ಟಿಲುಗಳ ಮೇಲೆ ಕುಳಿತು ದಿನದೂಡುವನು. ಭಕ್ತರು ಕೊಡುವ ಚಿಲ್ಲರೆಕಾಸು ಬೀಡಿ-ಕಾಡಿಗಾಗುವುದಂತೆ. ಇವನಂಥವರು ಮೆಟ್ಟಿಲಿಗೊಬ್ಬರಂತೆ ಕುಳಿತಿದ್ದರು. ಎಲ್ಲರ ನಾಲಿಗೆಯ ಮೇಲೆ ದರ್ಗಾದ ಇತಿಹಾಸವು ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಕತೆಯಾಗಿ ಅರಳಲು ಹವಣಿಸುತ್ತಿತ್ತು. ಎಷ್ಟು ಬಾರಿ ಕೇಳಿಲ್ಲ ಈ ಕತೆ? ಆದರೂ ದರ್ಗಾದ ಪರಿಸರದಲ್ಲಿ ಕುಳಿತು ಮತ್ತೆ-ಮತ್ತೆ ಮನವೊಡ್ಡುವೆನು. ಹೊಸದಾಗಿಯೇ ಕೇಳುವಂತೆ. ಬೊಚ್ಚು ಬಾಯಿಯ ಎಳೆತುಟಿಗಳು ನುಡಿಯುತ್ತಿದ್ದರೆ ಸಂಜೆಗಂಗಳಲ್ಲಿ ಹೊಳಪಿತ್ತು.

 
ಒಳಗೆ ಎರಡು ಮಜಾರ್(ಸಮಾಧಿ) ಇವೆಯಲ್ಲ.. ಹಾಂ ಮೊದಲನೆಯದ್ದು ರುಕ್ಮೋದ್ದಿನ್ನದ್ದು. ಅಂದ್ರೆ ರುಕ್ಮೋದ್ದಿನ್ ತೋಲಾನದ್ದು. ತೋಲಾ ಅಂತ ಹ್ಯಾಂಗ ಹೆಸರು ಬಂತು ಗೊತ್ತೇನು? ರುಕ್ಮೋದ್ದಿನ್ ನಲವತ್ತು ವರ್ಷ ತಪಸ್ಸಿಗೆ ಕೂತಿದ್ದ. ಅಲ್ಹಾನ ನೆನೆಯುತ್ತ ಮಂಡಿಯೂರಿ ಒಂದೇ ಕಡೆ ಕೂತು-ಕೂತು ಕಾಲು-ನೆಲ ಏಕವಾಗಿದ್ದವು. ಮೈಯೆಲ್ಲ ಮಣ್ಣು-ಕಚರಾದಿಂದ ಹುತ್ತೇರಿ ಕಣ್ಣೆರಡು ಮಾತ್ರ ಕಾಣುತ್ತಿದ್ದವು. ಇದೇ ಸಮಯದಲ್ಲಿ ಸುಲ್ತಾನ ತಾಜ್-ಉದ್ದಿನ್ ಫಿರೋಜ್ಷಾನ ಆಮಂತ್ರಣದ ಮೇರೆಗೆ ಗುಲಬರ್ಗ ಕ್ಕೆ ಬಂದು ನೆಲೆಸಿದ್ದ ಖ್ವಾಜ-ಬಂದ-ನವಾಜ್ ಪ್ರಸಿದ್ಧ ಸೂಫಿಯಾಗಿರುತ್ತಾನೆ. ಈತ ಉರ್ದು, ಪರ್ಶಿಯನ್, ಅರೆಬಿಕ್ ಭಾಷೆಗಳಲ್ಲಿ ಸುಮಾರು 195 ಕೃತಿಗಳನ್ನು ರಚಿಸಿರುವನು. ರುಕ್ಮೋದ್ದಿನನ ಮಹಿಮೆಯ ಕಾರಣವಾಗಿ ಸ್ವತಃ ಖ್ವಾಜಾ-ಬಂದಾ-ನವಾಜ್ ಗೇಸುದರಾಜನೇ ರುಕ್ಮೋದ್ದಿನನ ಭೇಟಿಗೆ ಬರುವನು. ನಲವತ್ತು ವರ್ಷ ಅಲ್ಹಾನ ಧ್ಯಾನದಲ್ಲಿದ್ದ ರುಕ್ಮೋದ್ದಿನ್ ಕೈಯೆತ್ತಿ ನಮಸ್ಕರಿಸಿದನಂತೆ. ರುಕ್ಮೋದ್ದಿನನ ವಿಶಾಲ ಹೃದಯಕ್ಕೆ, ಕಠಿಣಸಿದ್ದಿಗೆ ಮೆಚ್ಚಿ 'ರುಕ್ಮೋದ್ದಿನ್ ನೀನು ನನಗಿಂತಲೂ ಒಂದು ತೋಲ ಹೆಚ್ಚು' ಅಂದನಂತೆ. ಅಂದಿನಿಂದ ರುಕ್ಮೋದ್ದಿನ್ತೋಲಾ ಅಂತಲೇ ಹೆಸರು ಬಂತೆಂಬುದು ಪ್ರತೀತಿ. 


 

ಬಾಜುದಲ್ಲಿರುವ ಇನ್ನೊಂದು ಮಜರ್(ಸಮಾಧಿ) ರಾಣೋಜಿಯದ್ದು. ರಾಣೋಜಿ ಜಾತಿಯಿಂದ ಮರಾಠಾ. ಕಾಶಿ ದರ್ಶನಕ್ಕೆಂದು ಈ ಮಾರ್ಗವಾಗಿ ಬರುತ್ತಿರುವಾಗ ರುಕ್ಮೋದ್ದಿನನ ಭೇಟಿಯಾಗುತ್ತದೆ. 'ಕಾಶಿ ಹುಡುಕಿಕೊಂಡು ಅಷ್ಟು ದೂರ ಯಾಕೆ ಹೋಗ್ತಿ? ಇಕೋ ಇಲ್ಲಿದೆ ನೋಡು ಕಾಶಿ' ಅಂತ ರುಕ್ಮೋದ್ದಿನ ಅಂಗೈಯ ಅರಳಿಸಿದನಂತೆ. ರಾಣೋಜಿಗೆ ಅಂಗೈಯಲ್ಲಿ ಕಾಶಿ ಕಂಡಿತಂತೆ. ಭಕ್ತಿಯಿಂದ ಪುನೀತನಾದ ರಾಣೋಜಿಯು ಅಂದಿನಿಂದ ರುಕ್ಮೋದ್ದಿನನ ಗೆಳೆಯನೂ ಶಿಷ್ಯನೂ ಆಗಿ ಇಲ್ಲಿಯೇ ಉಳಿದುಬಿಟ್ಟನು. ಇಬ್ಬರ ಗೆಳೆತನಕ್ಕೆ ಪರಸ್ಪರ ಊಟ, ಆಚರಣೆ, ನಂಬಿಕೆಗಳು ಅಡ್ಡಿಬರಲಿಲ್ಲ. ಗುರು ರುಕ್ಮೋದ್ದಿನನಿಗಾಗಿ ರಾಣೋಜಿಯು ಪ್ರತಿದಿನ ಊರಲ್ಲಿ ಹೋಗಿ ಮಾಂಸಾಹಾರ ತರುತ್ತಿದ್ದನಂತೆ. ಇದನ್ನು ಗಮನಿಸಿದ ಮೇಲ್ಜಾತಿಯವರು ಒಮ್ಮೆ ರಾಣೋಜಿಯನ್ನು ನಡುದಾರಿಯಲ್ಲಿ ತರುಬಿ 'ನೀನು ಮಾಂಸ ತಗೊಂಡು ಹೋಗ್ತಿದ್ದಿ. ಇದರಿಂದ ನಮ್ಮ ಜಾತಿಗೆ ಕಳಂಕವಾಗ್ತದೆ.' ಎಂದು ನಿಂದಿಸಿ ಒತ್ತಾಯದಿಂದ ಜೋಳಿಗೆ ತಪಾಸಣೆ ಮಾಡಲು ಮುಂದಾಗುವರು. ಇಕ್ಕಟ್ಟಿನಲ್ಲಿ ಸಿಕ್ಕಿಬಿದ್ದ ರಾಣೋಜಿಯು ಗುರು ರುಕ್ಮೋದ್ದಿನ್ನನ್ನು ನೆನೆದು 'ಇಲ್ಲ. ನೋಡ್ರಿ ಬೇಕಾದ್ರೆ, ಜೋಳಿಗೆಯಲ್ಲಿ ಹೂವುಗಳಿವೆ' ಎಂದು ಹೇಳುವನಂತೆ. ಜನರು ವ್ಯಗ್ರರಾಗಿ ಜೋಳಿಗೆಯಲ್ಲಿ ಕೈ ಹಾಕುವರು. ಖರೆನೇ ಅಲ್ಲಿ ಗುಲಾಬಿ ಹೂವುಗಳು ನಳನಳಿಸುತ್ತಿದ್ದವಂತೆ. ಬಂದ ಜನರು ಪೆಚ್ಚಾಗಿ ವಾಪಾಸಾಗುವರು. ರಾಣೋಜಿಗೆ ರುಕ್ಮೋದ್ದಿನನ ಮಹಿಮೆಯಿಂದ ಅಭಿಮಾನವಾಗುವುದು. ಆದರೆ ಕತೆ ಇಲ್ಲಿಗೆ ಮುಗಿಯುವುದಿಲ್ಲ. ರಾಣೋಜಿ ಮತ್ತು ರುಕ್ಮೋದ್ದಿನನ ಗೆಳೆತನ ಹೇಗಿತ್ತೆಂದರೆ ಒಬ್ಬರಿಗೊಬ್ಬರು ಗೌರವಿಸಿಕೊಂಡು ಕಾಳಜಿಯಿಂದ ಬದುಕುತ್ತಿದ್ದರು. ಹೀಗಾಗಿ ರುಕ್ಮೋದ್ದಿನ್ ಅಂದಿನಿಂದ ಗೆಳೆಯನಿಗೆ ಸಂಕಟಕ್ಕೀಡು ಮಾಡಿದ ತನ್ನ ಮಾಂಸಾಹಾರವನ್ನೇ ತೊರೆಯುವನು.' ಈ ಕಾರಣವಾಗಿ ದರ್ಗಾಕ್ಕೆ ಬರುವವರು ಮಾಂಸದಡುಗೆ ತರುವುದಿಲ್ಲ. ಬದಲಿಗೆ ಮಾದಲಿ, ಒಗ್ಗರಣೆ ಅನ್ನ, ಸಕ್ಕರೆ, ಟೆಂಗಿನಕಾಯಿ ಮತ್ತು ಹೂವುಗಳೇ ಇಲ್ಲಿ ನೈವೇದ್ಯ
. 
ರುಕ್ಮೋದ್ದಿನ್ ತೋಲಾ ಮತ್ತು ರಾಣೋಜಿ ತಮ್ಮ ಜೀವಿತಾವಧಿಯೆಲ್ಲ ಜೊತೆಯಾಗಿಯೇ ಕಳೆದರು. ಈಗ ಅವರಿಬ್ಬರ ಸಮಾಧಿಗಳು ಅಕ್ಕಪಕ್ಕದಲ್ಲಿವೆ. ಇಬ್ಬರ ಮಜರ್ಗಳು ಹಸಿರು ಚದ್ದರು ಹೊದ್ದುಕೊಂಡಿವೆ. ನವಿಲುಗರಿಗಳ ಗಾಳಿಯು ಮಜರ್ ಸೋಕಿ ಎಲ್ಲೆಡೆ ಪಸರಿಸುತ್ತಿದೆ. ಎರಡೂ ಸಮಾಧಿಗಳನ್ನು ದಾಟಿ ಮುಂದಕ್ಕೆ ಹೋದರೆ, ಹುಣಚೆ ಮರಗಳು, ಕಲ್ಲಿನಿಂದ ಕಟೆದ ದೀಪದ ಸ್ಥಂಭಗಳು ಸಿಗುತ್ತವೆ. ಬರುವ ಭಕ್ತಾದಿಗಳು ಕೊಬ್ಬರಿ ತುಕುಡಿಯನ್ನು ಸಣ್ಣ ಚೀಲದಲ್ಲಿ ಕಟ್ಟಿ ಮರಕ್ಕೆ ನೇತ್ಹಾಕುತ್ತಿದ್ದರು. ಮತ್ತು ಸಣ್ಣ ಚಿಂಪುಗಲ್ಲುಗಳನ್ನು ಒಂದರ ಮೇಲೊಂದು ಪೇರಿಸುತ್ತಿದ್ದರು. ಹರಕೆ ಹೊರುವ ಪರಿಯಿದು. ಬೇಡಿಕೊಂಡಿದ್ದು ಈಡೇರಿದ್ದರೆ ತಾವು ಕಟ್ಟಿದ ಚೀಲ ಬಂದು ಬಿಚ್ಚುವರಂತೆ. ಹೀಗೆ ಹರಕೆಯ ಗಂಟು ಕಟ್ಟುವವರಲ್ಲಿ ಮುಸ್ಲಿಂರು, ಲಿಂಗಾಯತರು, ಕುರುಬ-ಕಬ್ಬಲಿಗರು, ಮರಾಠರು ಹೀಗೆ ಸಕಲೆಂಟು ಜಾತಿಯವರು ಇದ್ದರು. 


ದೂರದ ರಾಯಚೂರಿನಿಂದ ಗಂಡ-ಮಕ್ಕಳೊಂದಿಗೆ ಬಂದಿದ್ದ ಅಮೀನಾಬೇಗಂ ಕೊಬ್ಬರಿ ಒಡೆದು ಸಕ್ಕರೆಯೊಂದಿಗೆ ಬೆರೆಸಿ ಕೊಟ್ಟಳು. ಯಾವಾಗಲೂ ಅಳುವ ಮಗನ ಹಣೆಯನ್ನು ದರ್ಗಾಕ್ಕೆ ಹಚ್ಚಿಸಿ, ಅಳು ನಿಲ್ಲಿಸೆಂದು ಬೇಡಿಕೊಂಡ ಸುಶೀಲಮ್ಮ ಕತೆ ಕೇಳಲು ಬಂದು ಕುಳಿತಳು. ಅವಳೊಂದಿಗೆ ಮಗ. ಯಾರೊಬ್ಬರ ಮನಸಿನಲ್ಲಿಯೂ ಪರಕೀಯತೆಯ ಭಾವ ಹಣಿಕುತ್ತಿಲ್ಲ. ಹದಿಮೂರು-ಹದಿನಾಲ್ಕನೆಯ ಶತಮಾನದ ಹೊತ್ತಿಗೆ ಸೌಹಾರ್ದ ದೀಪವನ್ನು ಬೆಳಗಿಸಿ ಎಂದಿಗೂ ತೀರದ ಎಣ್ಣೆ-ಬತ್ತಿಯಂತೆ ಭಾವೈಕ್ಯ ಪರಂಪರೆಯನ್ನು ಕಟ್ಟಿಕೊಟ್ಟ ರುಕ್ಮೋದ್ದಿನ್ತೋಲಾ-ರಾಣೋಜಿಯರ ಮಜರ್ಗೆ ಹಣೆಮಣಿದೆ.


***