Wednesday, 23 October 2013











ಬಸೂ
 


ನೀನು ಭೆಟ್ಟಿಯಾದೆ ಎಂಬುದು ಎಷ್ಟು ಸಾಮಾನ್ಯ ಸಂಗತಿ
ಅಲ್ಲ ಅನಿಸಿದ್ದು ಗೋರಿಯ ಮೇಲೊಂದು ಹೂ ಹುಟ್ಟಿದಾಗ.


 





ತಾಗಿದ ಬೆರಳು ಅಖಂಡ ಬದುಕಿನ ಕಥೆ ಹೇಳಿತು
ಆ ಕ್ಷಣವೇ ಆಕಾಶದಲಿದ್ದ ಕಾಮನಬಿಲ್ಲು ಕಣ್ಣಿಗಿಳಿಯಿತು. 



 



ಗಿಬ್ರಾನ್
 




ನಿನ್ನೆದುರು ಸ್ಪಷ್ಟ ಕನ್ನಡಿಯಂತೆ ನಿಂತಿದ್ದೆ.
ಒಮ್ಮೆ ನನ್ನ ದಿಟ್ಟಿಸಿ ನೋಡಿ,
ನನ್ನೊಳಗೆ ನಿನ್ನ ಖಾತರಿ ಮಾಡಿಕೊಂಡು
ಆಮೇಲೆ ನೀ ನುಡಿದೆ,
"I Love You "
ನಿಜ ಹೇಳಬೇಕೆಂದರೆ,
ನೀನು ಪ್ರೀತಿಸುತ್ತಿರುವುದು ನನ್ನನ್ನಲ್ಲ.
ನನ್ನೊಳಗಿನ ನಿನ್ನನ್ನೇ.


(ಅನುವಾದ:ಚಿದಂಬರ್ ನರೇಂದ್ರ) 


















 

















































































































































































































































































































































ಒಂದು ಗಜಲ್


Prakash B. Jalahalli



ನಿನ್ನ ಕನಸು ಪುಟ ತುಂಬಿರುವಾಗ ಏನೆಂದು ಬರೆಯಲಿ?
ಮನದ ತುಂಬ ಮೌನ ತುಂಬಿರುವಾಗ ಏನೆಂದು ಬರೆಯಲಿ?

ಬೆತ್ತಲಾದ ಬಯಕೆಗಳಿಗೆ ಬಟ್ಟೆ ತೊಡಿಸುವುದು ಹೇಗೆಂದು ಕಲಿಯಬೇಕಿದೆ ನಾನು
ನೀನೆ ಇಲ್ಲದ ಒಬ್ಬಂಟಿ ಈ ದಾರಿಯ ದುಃಖದಲ್ಲೀಗ ಏನೆಂದು ಬರೆಯಲಿ?

ನೆರಳಾಗಲೆಂದು ನೆಟ್ಟ ಮರಕ್ಕೀಗ ಎಲೆಯೇ ಮೂಡದೇ ಬೆತ್ತಲಾಗುತ್ತಿದೆ
ಬೆರಳು ತಾಕಿದರೂ ಮೂಡದ ರಾಗದಲ್ಲಿ ಮನಬಿಚ್ಚಿ ಈಗ ಏನೆಂದು ಬರೆಯಲಿ?

ಖಾಲಿಯಿದ್ದ ಗೋಡೆಯ ತುಂಬ ನಿನ್ನದೆ ಚಿತ್ರಗಳು ನನ್ನ ನೋಡಿ ಅಣಕಿಸುತ್ತಿವೆ
ಮೊಂಬತ್ತಿಯ 'ಪ್ರಕಾಶ'ವು ಕಣ್ಣೀರ ಸುರಿಸಿದಲ್ಲಿ ಮೂಡದ ಭಾವನೆಯೀಗ  ಏನೆಂದು ಬರೆಯಲಿ?


-ಪ್ರಕಾಶ್ ಬಿ.ಜಾಲಹಳ್ಳಿ ಅವರ  'ನಲವತ್ತು ಗಜಲುಗಳು'  ಸಂಕಲನದಿಂದ

Saturday, 19 October 2013


ಈ ಬಾರಿಯ ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ನನ್ನ 

ಮಡದಿ ಡಾ.ಅನುಪಮಾ ಮೂರನೇ ಬಹುಮಾನ, ನಮ್ಮ ಮಗಳು ಪೃಥ್ವಿ  ವಿದ್ಯಾರ್ಥಿ ವಿಭಾಗದ

ಬಹುಮಾನ ಪಡೆದಿರುವುದು  ತುಂಬಾ ಖುಶಿಯ ಸಂಗತಿ.  ಪೃಥ್ವಿ ಬೆಳಗಾವಿಯ ಬಿಮ್ಸ್ ನಲ್ಲಿ ಎರಡನೇಯ ವರ್ಷದ 

ವೈದ್ಯಕೀಯ ವಿದ್ಯಾರ್ಥಿನಿ. ಅನುಪಮಾ ಬರೆದ ಕವನವನ್ನಷ್ಟೆ ಇಲ್ಲಿ ಕೊಡಲಾಗಿದೆ.




ಲೋಕವೇ ತಾನಾದ ಬಳಿಕ..





ಅನಾದಿ ಗುಹೆ
ಅದರಳೊಗೊಂದು ಅನಾದಿ ಕರಡಿ
ಮೊಲೆಮುಡಿಯ ಜೀವಗಳ ಎತ್ತಿಕೊಂಡೊಯ್ದು
ಒಮ್ಮೆ ಜಾಗರವಾಡುವ ನವಿಲಾಗಿ
ಮಗದೊಮ್ಮೆ ಸಾವಿರ ಹೆಡೆಯ ಸರ್ಪವಾಗಿ
ಸಾವಿರ ರೂಪ ಸಾವಿರ ಅವತಾರ ತಳೆವ ಕರಡಿ

ಹಣ್ಣು ಹೂವು ತಾಜಾ ಜೇನು
ಹಾಡುಹಕ್ಕಿ ಆಡಲು ಅಳಿಲ ತರುವ
ಮೈಯೆಲ್ಲ ನಾಲಿಗೆಯ ಹುಚ್ಚು ಕರಡಿ
ಹೆಬ್ಬಂಡೆಯ ಎಲ್ಲಿಂದಲೋ ಎಳತಂದಿಟ್ಟು
ನೆಲವನೂ ನಿದಾನವನೂ ಕಾಯ್ದು ಹೈರಾಣಾಗುವ ಕರಡಿ
ಅದರ ಗುಹೆಯ ಬಾಯಿಗಡ್ಡ ದೊಡ್ಡ ಕಲ್ಲುಬಂಡೆ..

ಉಣ್ಣದ ಊಟವನುಂಡು ಬಸವಳಿವ ಕರಡಿಗೆ
ತೂತಿರದ ಮಣಿಗಳ ಪವಣಿಸುವ ಉನ್ಮಾದ
ಅದರ ಮುಳ್ಳು ನಾಲಿಗೆಗೆ ನೆತ್ತರು ಸವಿ
ನೆಕ್ಕೀನೆಕ್ಕೀ ನೆಕ್ಕುವ ಕರಡಿ ಪ್ರೀತಿಗೆ
ಅವಳ ಅಂಗೈ ರಕುತ ಚಿಲುಮೆಯಾಗಿ ಚಿಮ್ಮಬೇಕು
ಶಥಪಥ ತುಳಿದ ಪಾದ ರಕುತ ನದಿ ಹರಿಸಬೇಕು
ಪುಟ್ಟ ಅಂಗೈ ಅಂಗಾಲುಗಳಿಗೆ
ಮಾಯುವ ಮತ್ತೆ ಗಾಯಗೊಳುವ ಅನುದಿನದ ಐಭೋಗ

ರತ್ತೋರತ್ತೋ ರಾಯನ ಮಗಳೇ
ಬಿತ್ತೋಬಿತ್ತೋ ಭೀಮನ ಮಗಳೇ
ಬೈಟುಗುಬ್ಬಿ ಬಾಳೆಕಂಬ
ಕುಕ್ಕುರು ಬಸವಿ ಕೂರು ಬಸವೀ..

ಆ ಗುಹೆಯ ಬಾಯಿಗಡ್ಡ ದೊಡ್ಡ ಕಲ್ಲುಬಂಡೆ..

ಅಂಥದೇ ಒಂದು ಗುಹೆಯಲ್ಲಿ ನೊಂದುಬೇಯುವ ಅಮ್ಮ
ಕರಡಿ ಕತೆಯ ಹಾಡ್ಯಾಡಿ ಅತ್ತರೂ ಕೇಳಿಸಿರಲಿಲ್ಲ
‘ಎಮ್ಮಿಯಾ ಮೇಯುಸ್ಕೊಂಡು ಸುಮ್ಮಾನೆ ನಾನಿದ್ದೆ
ಹಾಳಾದೋವೆರೆಡು ಮೊಲೆ ಬಂದೊ..
ಹೂವ ತರದೆ ಹುಲ್ಲ ತರಬೇಡವೆಂದು
ಕೊಟ್ಟಮನೆಯೆಂದು ಕರೆತಂದು ಬಿಟ್ಟರು
ನಾನೀಗ ಗುಹಾವಾಸಿ

ಆ ಗುಹೆಯ ಬಾಯಿಗಡ್ಡ ದೊಡ್ಡ ಕಲ್ಲು ಬಂಡೆ..

ಸುತ್ತ ಹಬ್ಬಿರುವ ಬೆಟ್ಟಗಳು
ಎಲ್ಲ ಗದ್ದಲ ನುಂಗಿ ಮೌನ ಹರಡುವಾಗ
ಯಾವ ಕಿರಿಚಾಟವೂ ಕೇಕೆ ಕಲರವವೂ ಅಲ್ಲಿ ಸದ್ದಾಗಲಿಲ್ಲ
ಹಸಿವು ನಿದ್ರೆ ಮೈಥುನಗಳು ಆತ್ಮವನ್ನು
ಕಣಿವೆಯಲ್ಲಿ ತಣ್ಣಗೆ ಹರಿವ ನದಿ ಕಾಲವನ್ನು
ದಿಕ್ಕೆಟ್ಟು ತುಳಿದ ನೆರಳಿರದ ಹಾದಿ ಕನಸುಗಳನ್ನು ನುಂಗಿದವು
ಬೆಟ್ಟಗಳ ನಡುವಿನ ಗುಹೆ
ಮುಗಿಯದ ಮುಸ್ಸಂಜೆಯಲಿ ಮುಳುಗಿತು
ಸದ್ದಿಲ್ಲದೆ ಉರುಳುವ ಕಣ್ಣ ಹನಿಯ ಜೊತೆಗೆ
ಬೆಟ್ಟದಂಥಾ ಮೌನ ಬೆಟ್ಟವನೇ ನುಂಗಿ ಬೆಳೆಯಿತು
ಒಂದಾಗಿ ಒಳಗೊಳುವೆನೆಂದು ಬಾಹುಗಳ ಅಗಲಿಸಿದೆ
ಗುಹೆಯ ಖಾಲಿತನವಷ್ಟೇ ಎದೆಗಿಳಿಯಿತು.

ಎದೆಯಲ್ಲಿ ಪರ್ವತಗಳೆದ್ದವು
ನದಿ ಹರಿದು ಉಕ್ಕಿ ಒಣಗಿದವು
ಬಯಲೊಣಗಿ ಬಾಯ್ಬಿರಿದು ಬಂಜರಾಯ್ತು
ಹಾಡು ಮರೆತೆ ಚನ್ನೇಮಣೆಯಾಟ ಮರೆತೆ
ಒಡಲುರಿಯ ಮಾತುಗಳ ಭಾಷೆ ಮರೆತೆ
ಮಡಿಲ ಸುಖ ಮರೆತೆ ಒಡಲ ಬಳ್ಳಿಯ ಬೇರು ಮರೆತೆ
ಮರೆತೆ ದೇಹದೊಳಗೊಂದು ಮನಸಿದೆಯೆಂಬ ನಿಜ
ಎಲ್ಲ ಮರೆಸಿದ ಮರವೆಗಿಂತ ಯಾವ ನೆನಹು ಘನವೆನ್ನಲಿ?

ಗುಹೆಯ ಬಾಯಿಗಡ್ಡ ದೊಡ್ಡ ಕಲ್ಲುಬಂಡೆ..

ಖಾಲಿ ಹಣತೆಯಲಿಷ್ಟು ಚಿಕ್ಕೆಗಳನಿಟ್ಟೆ
ಕತ್ತಲ ಗುಹೆಯಲಿ ಬೆಂಕಿಯಾಗಿ ಬೆಳಕಾಗಿ
ಬೂದಿಯುಳಿಸದ ಕರ್ಪೂರವಾಗಿ ಉರಿಯತೊಡಗಿದೆ..

ನೆನಪುಗಳೇ, ಬೀಜವಾಗಿ ಒಳ ನುಸುಳಬೇಡಿ
ಕನಸುಗಳೇ, ಭ್ರೂಣವಾಗಿ ಬೆಳೆಯಬೇಡಿ
ಬಯಕೆಗಳೇ, ಮತ್ತೆಮತ್ತೆ ಗರ್ಭ ತುಂಬಬೇಡಿ
ನಾನಿನ್ನು ಹೆರಲಾರೆ.

ಕನಸುಗಳ ಕಾದುಕೊಳುವುದೆಂದರೆ
ಕಾಲಕ್ಕೆ ಬೆನ್ನುಹಾಕಿ ನಡೆಯಬೇಕು
ಹುಚ್ಚಳಾಗದೆ ಬದುಕಬೇಕೆಂದರೆ
ಮಾತಿಗೆ ಮದ್ದಿಟ್ಟು ಸಿಡಿಸಿ ಮೌನ ಒಲಿಸಿಕೊಳ್ಳಬೇಕು
ಸೋಲು ಒಳನುಸುಳಲು ಹೆಬ್ಬಾಗಿಲೇ ತೆರೆಯಬೇಕಿಲ್ಲ
ಒಂದೇ ಒಂದು ಪುಟ್ಟ ಬಿರುಕು ಸಾಕು
ಅಂಗೈಯ ರಕುತ ನದಿ ಅಂಗಾಲಿಂದ ಹೊರಬಂದು
ಗುಹೆ ಬಾಯ ಬಂಡೆ ದಾಟಿ ಹರಿಯಬೇಕು..

ಎಲ್ಲ ಕದನಗಳ ಗುರಿ ಶಾಂತಿಯೇ ಇರಬಹುದು
ಕದನವೇ ಇರದ ಕಡೆ ಶಾಂತಿ ಮಾತಿಲ್ಲ
ಯುದ್ಧವಿರದ ರಣರಂಗದಿ ಕೊನೆಗೊಂದು ಆಸ್ಫೋಟ
ಬಯಲುಗೊಳದೆ ಬೇರೆ ದಾರಿಯಿಲ್ಲ
ಬೆಟ್ಟದ ಗುಹೆ ಮೆಟ್ಟಿ ಲೋಕ ತಾನಾದೆ
ಕಾಯಗೊಂಡ ಅಂಗಾಂಗ ಕಳಚಿ ನಿಂತೆ
ನಿಜವನರಿತೆ ನಿಶ್ಚಿಂತಳಾದೆ ಬೆಳಗನುಟ್ಟೆ ಲಜ್ಜೆಗೆಟ್ಟೆ

ತಾ ಮುಳುಗಿದ್ದ ಬಾವಿಯನೆ ಆಳಾಳ ತೋಡಿದ ಕರಡಿ
ನೀರೊಳಗಿದ್ದು ಬಾಯಾರಿ ಬಿಂಬ ನೋಡಿತ್ತು
ಹೊಯ್ದಾಡುವ ನೆರಳಾಗಿ ಕಾಯದ ಹುಸಿ ಕಂಡಿತ್ತು
ಕಂಪಿಸುವ ದೇಹದಲಿ ರೂಪದ ಹುಸಿ ಅರಿವಾಗಿ
ಬೆತ್ತಲೆಯೆ ನಿಚ್ಚಣಿಕೆಯೆಂದು ನಿಚ್ಚಳಾಯ್ತು
ಪಶುವಿನೊಳಗೂ ಮನಸು ಮೂಡತೊಡಗಿತ್ತು..

ಈಗ ಗಾಯಕ್ಕೆ ವಿರಾಮ
ಮತ್ತೆ ಮಾಯುವ ರೋಗಕ್ಕೆ ವಿರಾಮ
ಪಶುವಿಗೆ ವಿರಾಮ
ದುಃಖಕ್ಕೂ ವಿರಾಮ..


















ಲೋಕವೇ,
ಕಾಣಲು ಕಣ್ಣೇ ಬೇಕೆಂದಾದರೆ ನನಗೆ ಕುರುಡು
ಕೇಳಲು ಕಿವಿಯೇ ಇರಬೇಕೆಂದರೆ ನನಗೆ ಕಿವುಡು
ನಡೆಯಲು ಕಾಲು
ಮುಟ್ಟಲು ಕೈ
ಮಿಡಿಯಲು ಎದೆ
ಸೆಟಗೊಳಲು ಬೆನ್ನುಹುರಿಯೇ ಬೇಕೆಂದಾದರೆ
ಕ್ಷಮಿಸು,
ನಾ ಅಂಗಹೀನ.

ನಾನೀಗ ಅವನೆದೆಯೊಳಗಿರುವ ರೆಕ್ಕೆಯಿರದೆ ಹಾರುವ ಹಕ್ಕಿ
ನಿದ್ರೆ ಸ್ವಪ್ನ ಜಾಗರಗಳೇ ಇರದ ಏಕಕೋಶ ಜೀವಿ...



***



ಬೀಳದ ನಕ್ಷತ್ರ























(ಕವನವನ್ನು ಪ್ರಜಾವಾಣಿ ಸಾಪ್ತಾಹಿಕ ಪುರವಣಿಯಲ್ಲಿ ಓದಿರಿ).


Friday, 18 October 2013


ಸಾಲುಗಳು



1.

ನಾವು
ಸರ್ವಧರ್ಮ ಸಹಿಷ್ಣುಗಳು
ಗುರುವಾರ
ರಾಯರ ಮಠ
ಭಾನುವಾರ
ಚರ್ಚು
ಶುಕ್ರವಾರ
ಮಸೀದಿ-

ಮುಂದೆ
ಕೈ ಚಾಚಿ
ಭಿಕ್ಷೆ ಬೇಡುವವರು.

(ನೀಲು ಪ್ರೇರಿತ)





2 .




ಆವರಿಸುವ

ಒಂದೇ ಗುಣ

ಕಾಮ

ಪ್ರೇಮ

ಪ್ರೀತಿ-

ಯಲ್ಲೂ


ಸೇರಿಕೊಂಡಿರುವುದು


ಸೋಜಿಗ-


ವೇ?

 





3.


ಯಶಸ್ಸಿನ ದಾರಿ

ಅದರದ್ದೇ ಇರಬೇಕೆಂದಿಲ್ಲ

ರಕ್ತ ಕಂಡರೆ

ತಲೆತಿರುಗುವವನೂ

ಒಂದುದಿನ

ಸರ್ಜನ್ನಾಗಿ 

ರಕ್ತಸ್ರಾವವೇ ಆಗದಂತೆ

ಕುಯ್ಯುವ ಕಲೆ

ಕರಗತ ಮಾಡಿಕೊಳ್ಳುವುದು

ಅನಿವಾರ್ಯವಾಗಿ
 
ಯಶಸ್ಸು


ಕದ ತಟ್ಟಬಹುದು!





4.


ಹಿಗ್ಗುತ್ತ ಉರಿವಾಗ

ಒಂದು ನೆನಪಿಡು-

ನಾವೇ

ನಿನ್ನುರಿಯ

ಉರುವಲು.


 




5.


ಗುರಿ

ತಪ್ಪದಿರಲಿ

ಬೇಡ


ಹೊಸ ಗಾಯ.




6.


ಗುರಿ ಮುಟ್ಟುವ 

ಓಟದ

ಕೊನೆಯಲ್ಲಿ

ಒಂಟಿತನ-



ಸ್ವಾಗತ.


  


7.


ಪೊರೆ ಕಳಚುವುದೆಂದರೆ

ಒಳಗು

ಹೊರಗಾಗುವುದು

ಮತ್ತೆ

ಮೈ ಕಾಯಿಸಿಕೊಳ್ಳುವುದು

ಕಳಚುವುದು.




8.

ಎಷ್ಟು ವಿಚಿತ್ರ ನೋಡು
 
ಗಾಲಿಬ್,

 
ಕನಸನ್ನಾದರೂ

 
ಕಾಣ್ತೀನೀಂತ

 
ಮಲಗಿದ್ರೆ

 

 
ದುರ್ಭರದಲ್ಲಿ


ನಿದ್ರೆ


ಸತಾಯಿಸುತ್ತೆ


ಎಲ್ಲ ಕನಸಿಗಿಂತ


ಚಂದವಿದ್ದಾಗ


ಕಣ್ಣೆಷ್ಟು


ಎಳೀತಿತ್ತಲ್ಲ!


 



9.

ಇಬ್ಬರಿರುವಾಗ
 
ಭಯವಿಲ್ಲ.


 




10.

ಮರೆಯಲ್ಲಿ
 
ಅವಿತಿದ್ದ ಗೋಡೆ

 
ಕನ್ನಡಿ ಕಳಚಿಟ್ಟ ದಿನ

 
ಬೆಪ್ಪುಗಟ್ಟಿತು

 
ಯಾರ ಮುಖವನ್ನೂ

 
ತದೇಕಚಿತ್ತನಾಗಿ

 
ದಿಟ್ಟಿಸಲಾಗದ


ತನ್ನ


ವಿಮುಖತೆಗೆ


ನಾಚುವ ಭರದಲ್ಲೂ


ಅಭ್ಯಾಸ ಬಲದಿಂದ


ಗಿಂಜುವವರ

ಉದ್ಘಾರಕ್ಕೆ ನಸುನಕ್ಕಿತು


ಕನ್ನಡಿಯ ಕಷ್ಟಕ್ಕೆ


ಮರುಗಿತು.


 



11.

ನನ್ನ ಬಗ್ಗೆ
 
ನಿಮ್ಮ 

 
ಅಭಿಪ್ರಾಯಗಳನ್ನು

 
ಬಲ್ಲೆ

 
ನಿಮ್ಮ ಬಗ್ಗೆ

 
ನನ್ನದನ್ನು ಬಲ್ಲಿರಾ?


 
ಪ್ರಾಚೀನ ಜ್ಞಾನ



ಎಝ್ರಾ ಪೌಂಡ್
 

ಸೋಷುಗೆ ಕನಸು ಬಿತ್ತು-
ತಾನೊ೦ದು ಹಕ್ಕಿಯಾದ೦ತೆ,
ದು೦ಬಿಯಾದ೦ತೆ, ಚಿಟ್ಟೆಯಾದ೦ತೆ
ಅನಿಶ್ಚಯತೆಯ ಗೊ೦ದಲದಲ್ಲಿದ್ದ ಅವನು

ತಾನೇಕೆ ಏನಾದರೂ ಒ೦ದು
ಆಗಲೇ ಬೇಕೆ೦ದು
ಪ್ರಯತ್ನಿಸುವುದು
ಅ೦ದು ಕೊ೦ಡ
ಒಡನೆಯೇ
ತೃಪ್ತನಾದ!


ಅನುವಾದ: ರಮೇಶ್ ಮೇಗರವಳ್ಳಿ


(Ezra Weston Loomis Pound (30 October 1885 – 1 November 1972) ,ಅಮೇರಿಕನ್ ಮೂಲದ ವಿವಾದಾತ್ಮಕ ಕವಿ,ಇಪ್ಪತ್ತನೇ ಶತಮಾನದ ಆದಿಯಲ್ಲಿ ಲಂಡನ್ನಲ್ಲಿ ಏಲಿಯಟ್, ಹೆಮಿಂಗ್ವ್, ಫ್ರಾಸ್ಟ್, ಜಾಯ್ಸ್ ಮುಂತಾದ ಕವಿಗಳನ್ನು ಪ್ರೋತ್ಸಾಹಿಸಿ ಬೆಳೆಸಿದವ, ಜಪಾನೀ ಹಾಯ್ಕುಗಳ ಬಗ್ಗೆ ವಿಶೇಷ ಒಲವನ್ನಿಟ್ಟುಕೊಂಡವ)

Wednesday, 16 October 2013




ನೀಲು

 





 





 




ಬಸೂ

ಹಾಗೇ ಇದೆ ಇರುಳ ವಿಶಾಲ ಗೋಡೆ
ಕಂತು ಕಂತಾಗಿ ಮೂಡುತ್ತಿವೆ ಬೆಳಕಿನ ಚಿತ್ರಗಳು.





ಮೌನ ಇಷ್ಟೇ ಇಷ್ಟು ಅರ್ಥವಾಗಿದ್ದರೂ ಸಾಕಿತ್ತು
ನಿರರ್ಗಳ ಮಾತು ಹುಟ್ಟುತ್ತಿದ್ದವು ಎಂದಿನ ಹಾಗೆ.








ಬಿಲ್ಹಣ


ಇಂದಿಗೂ ನೆನಪಿದೆ ನನಗೆ 
ಪ್ರೇಮದ ಜಾಗರಣೆಯಲ್ಲಿ
ಮೈದುಂಬಿ ಕುಣಿದಾಡಿದ ಆ 
ತೀಕ್ಷ್ಣ ಕಣ್ಣಾಲಿಗಳು,
ಹುಚ್ಚು ಹಾಸಿಗೆಯಲ್ಲಿ ಆಕೆ
ಕಾಡು ಕೋಳಿಯಂತೆ ಸೆಣಸಿದ ಪರಿ,
ಸೂರ್ಯ ಹುಟ್ಟುವ ಮುಂಚೆಯೇ
ನಾಚಿ ಕೆಂಪೇರಿದ ಅವಳ ಮುಖ.
ಎಲ್ಲ ನೆನಪಿದೆ ನನಗೆ.


(ಅನುವಾದ: ಚಿದಂಬರ್ ನರೇಂದ್ರ)




 


ಸಿದ್ರಾಮ್ ಕಾರ್ಣಿಕ್ 

ಸಂಬಂಧಗಳಿಗೆ ಸೂತಕಗಳಿರುವುದಿಲ್ಲ
ಅನುಬಂಧಕ್ಕೆ ಮಾತುಗಳೇ ಬೇಕೆಂದೇನೂ ಇಲ್ಲ
ಅರಿಯುವ ಮನ ; ಅರಿತುಕೊಳ್ಳುವ ಗುಣ
ಬೆರತರೆ ಬದುಕು ಎನ್ನುವುದು ಬಲು ಚೆನ್ನ
ಕಾರಣಿಕ ಸಿದ್ಧರಾಮ ಅರಿತೂ ಅರಿಯದ
ತಿಳಿಗೇಡಿಗಳ ಮೆಚ್ಚಲು ಹುಚ್ಚನಲ್ಲ ಮರುಳೆ !