Tuesday, 17 December 2013


 ಕಗ್ಗಂಟು


ರಾಜೇಂದ್ರ ಬಿ. ಶೆಟ್ಟಿ


 Rajendra B. Shetty


 Salvador Dali abstract painting


ಮಗನ ಹುಟ್ಟು ಹಬ್ಬ. ಹೆಂಡತಿ ಹಬ್ಬ ಆಚರಿಸೋಣ ಅನ್ನುತ್ತಿದ್ದಾಳೆ. ನಾನು ಬೇಡ ಅನ್ನುತ್ತಿದ್ದೇನೆ. 
ನನಗೆ ನಾಚಿಗೆ – ನನ್ನ ಮಗ ನಡೆಯಲಾರ. ಹುಟ್ಟಿದಾಗಿನಿಂದ ಒಂದು ದಿನವೂ ನಡೆದಿಲ್ಲ. ಪರರ ಕನಿಕರ ನನ್ನನ್ನು ಚುಚ್ಚುತ್ತದೆ.
ಕೊನೆಗೂ ವಾಡಿಕೆಯಂತೆ ಹೆಂಡತಿಯೇ ಗೆದ್ದಳು.
*
ನಮ್ಮದು ಮಧ್ಯಮ ವರ್ಗದ ಸಂಸಾರ. ನನ್ನ ಸಂಪಾದನೆಯಲ್ಲಿ ಜೀವನ ಸಾಗುತ್ತಿದೆ. ಹೆಂಡತಿ ಮನೆಯಲ್ಲೇ – ಮಗನ ಆರೈಕೆ ಮಾಡುತ್ತ. ಕೆಲಸ ಮಾಡುವಲ್ಲೂ ನನ್ನದು ಮಧ್ಯಮ ವರ್ಗ.

ಒಂದು ದಿನ

ನಮ್ಮ ಮ್ಯಾನೇಜರ್ ನ ಪಾರ್ಟಿ. ಕಾರಣ ಆತನಿಗೆ ಪ್ರಮೋಶನ್ (ನಾನು ಅದೇ ಜಾಗದಲ್ಲಿ – ಮಾಮೂಲು). ಪ್ರಥಮ ಭಾರಿಗೆ ಸರಾಯಿ ಕುಡಿದೆ. ಅಥವಾ ಕುಡಿಸಿದರು. ಮೊದಲ ತುತ್ತು(?) ವಾಕರಿಕೆ ಬರುವ ಅನುಭವ. ಉಗುಳಲು ಮನಸ್ಸಾಗಲಿಲ್ಲ. ಪುನಹ ಇನ್ನೊಂದು ಸಿಪ್. (ಕುಡಿದಿದ್ದೇನೆ – ಹಾಗಾಗಿ ಇಂಗ್ಲೀಷ್). ನಶೆ ಏರುತ್ತಿದ್ದಂತೆ ವಾಕರಿಕೆ ಬರುವ ಕಹಿ ಸರಾಯಿ ಇಷ್ಟವಾಯಿತು. ಅದೃಷ್ಟ ಚೆನ್ನಾಗಿತ್ತು – ಯಾವುದೇ ಕೆಟ್ಟ ಅನುಭವ ಆಗಲಿಲ್ಲ. ಅದೇ ನನ್ನ ಜೀವನದಲ್ಲಿ ಆದ ದೊಡ್ಡ ತಪ್ಪು.

ಮುಂದಿನ ವಾರ, ನನ್ನ ಸಹೋದ್ಯೋಗಿ ಹೋಟೇಲಿಗೆ ಕರೆದ. ಅರೆ ಮನಸ್ಸಿನಿಂದ ಹೋದೆ. ಇನ್ನಿಬ್ಬರು ಸಹೋದ್ಯೋಗಿಗಳೂ ಬಂದಿದ್ದರು. ಪುನಹ ಸರಾಯಿಯ ಸರಬರಾಜು. ನಾವೆಲ್ಲಾ ಮ್ಯಾನೇಜರ್ಗೆ ಬೈದೆವು – ಮನಸ್ಸು ಒಂದು ಹದಕ್ಕೆ ಬಂತು. ನಮ್ಮ ಅತೃಪ್ತಿಯನ್ನು ಈ ರೀತಿ ಹೊರ ಹಾಕಿದೆವು.

ಮರು ದಿನ ಇನ್ನೊಬ್ಬ ಕರೆದ.

ಇನ್ನೊಂದು ದಿನ ಮತ್ತೊಬ್ಬ. ಸಾಗಿತು ಸರಾಯಿಯ ಸೇವನೆ.

ಇಷ್ಟೊಂದು ಜನ ನನಗೆ ಪುಕ್ಕಟೆ ಸರಾಯಿ ಕೊಡುವಾಗ, ನಾನು ಸುಮ್ಮನೆ ಇರುವುದು ಸರಿಯೇ? ಹಾಗೆ ಮಾಡುವುದು ಸರಾಯಿಗೆ ಅಪಮಾನ. ಒಂದು ದಿನ ಅವರೆಲ್ಲರಿಗೂ ನಾನೂ ಪಾರ್ಟಿ ಕೊಡ ಬೇಕಾಯಿತು. ಕಿಸೆ ತೂತಾಯಿತು. ತಿಂಗಳ ಕೊನೆಯಲ್ಲಿ ಪ್ರಥಮ ಭಾರಿಗೆ ಸಾಲ ಮಾಡಿದೆ.

ಹೆಂಡತಿಯ ಕಿರಿ ಕಿರಿ ಆರಂಭವಾಯಿತು. ಮಗನ ಆರೈಕೆಗೆ ಹಣ ಸಾಕಾಗಲಿಲ್ಲ. ಸರಾಯಿ ಇಲ್ಲದೆ ನನಗಿರಲು ಅಸಾಧ್ಯವಾಯಿತು. ಹೆಂಡತಿಯ ಒತ್ತಾಯಕ್ಕೆ ಮಣಿದು ಒಂದು ದಿನ ಕುಡಿಯಲಿಲ್ಲ. 

ಕೈ ನಡುಗತೊಡಗಿತು. ತಳಮಳ. ದಿನ ದಿನವೂ ಕುಡಿಯುವುದನ್ನು ಕಡಿಮೆ ಮಾಡುವೆ. ಇನ್ನು ಹೋಟೇಲಿಗೆ ಹೋಗುವುದಿಲ್ಲ ಎಂದು ಚಿಕ್ಕ ಬಾಟಲಿ ಮನೆಗೆ ತಂದೆ. ಸ್ವಲ್ಪ ಕುಡಿದೆ. ಹೆಂಡತಿಗೆ ಸಮಾಧಾನ. ಇನ್ನಾದರೂ ಸ್ವಲ್ಪ ಹಣ ಉಳಿದೀತು ಅನ್ನುವ ಆಸೆ ಆಕೆಗೆ. ರಾತ್ರಿ, ಆಕೆಗೆ ಗೊತ್ತಾಗದಂತೆ ಇನ್ನೊಂದು ಪೆಗ್ ಕುಡಿದೆ. 

ನನ್ನ ಹೊಸ ಗೆಳೆಯರಿಗೆ ಗೊತ್ತಾಯಿತು – ನನ್ನ ಮನೆ ಬಾರ್ ಆಗಿದೆ ಎಂದು. ಮೆಲ್ಲ ಮೆಲ್ಲನೆ ಒಂದಿಬ್ಬರು, ಮಗನ ಆರೋಗ್ಯ ವಿಚಾರಿಸಲು ಮನೆಗೆ ಬಂದರು. ಪುಕ್ಕಟೆ ಸಲಹೆ ಕೊಟ್ಟರು. ತಮ್ಮ ಕಿಸೆಯಿಂದ ಬಾಟಲಿ ಹೊರ ತೆಗೆದರು…..
*
ಪುನಹ ಕುಡಿಯಲು ಹೊರ ಹೋಗುತ್ತಿದ್ದೇನೆ. ಕಿಸೆಯ ತೂತು ದೊಡ್ಡದಾಗುತ್ತಾ ಹೋಗುತ್ತಿದೆ. ಗೆಳೆಯರ ಗುಂಪು ಸಹ ದೊಡ್ಡದಾಗುತ್ತಿದೆ. ಅವರ ಮಧ್ಯದಲ್ಲಿ ನಾನು ಒಬ್ಬ ಹೀರೋ. ಅವರ ಆಪ್ತ – ಹೆಂಡತಿಯೊಂದಿಗೆ ಆದ ಜಗಳ ಹೇಳಿ ಕೊಳ್ಳುವಷ್ಟು ಆಪ್ತ. 

ಸುಖವಾಗಿ ಇದ್ದವ ಈಗ ದಿನ ದಿನವೂ ಅಳುತ್ತಿದ್ದೇನೆ. ಮನೆ ರಣರಂಗವಾಗಿದೆ. ಸಂಸಾರದ ಕಷ್ಟ ಹೊರಲಾರದಂತಾಗಿದೆ. ಹೆಂಡತಿ ಶತ್ರು ಆಗಿದ್ದಾಳೆ. ಕೈಯಲ್ಲಿ ಹಣ ಇರುವಾಗ ಮಾತ್ರ ಹೆಂಡತಿ, ಮಕ್ಕಳು ಎಲ್ಲಾ.

*
ಈ ದಿನ ಕುಡಿದದ್ದು ಹೆಚ್ಚಾಗಿದೆ. ಸರಾಯಿಯ ಬಗೆಗೆ ಗೆಳೆಯರೊಬ್ಬರು ಹೇಳಿದ್ದು ನೆನಪಾಯಿತು
ಈ ಮಧುವಿಗೆ 
ನಿಜಕ್ಕೆಂದರೆ
ರುಚಿಯೇ ಇಲ್ಲ 

ನೋವು 
ಬೆರೆಸಿ ಕುಡಿದರೆ
ನೋವಿನದೇ ರುಚಿ 

ನಲಿವು
ಬೆರೆಸಿ ಕುಡಿದರೆ
ನಲಿವಿನ ರುಚಿ 

ಆದರೂ ...
ಹೆಚ್ಚು ರುಚಿಸಿದ್ದು
ನೋವಿನ ಜೊತೆಯಲ್ಲೇ 
ಎಂಬುದು ನಿರ್ವಿವಾದ
(ಶಂಕರ ದೇವಾಡಿಗ)

ಯಾಕೋ ಅತ್ತು ಬಿಡುತ್ತೇನೆ. ಸರಾಯಿ ಮಿತ್ರರು ನನ್ನನ್ನು ಸಮಾಧಾನ ಮಾಡುತ್ತಾರೆ. ಮನೆಗೆ ಹೋಗುತ್ತೇನೆ.

ಮನೆಯಲ್ಲಿ ಹೆಂಡತಿ ಮತ್ತು ಮಗ ಇಬ್ಬರೇ. ಮನೆಯಲ್ಲಿ ಬಣ್ಣ ಬಣ್ಣದ ಕಾಗದ. ಕೆಲವು ಆಟದ ಸಾಮಾನುಗಳು. ನೆನಪಾಗುತ್ತದೆ – ನನ್ನ ಮಗನ ಬರ್ತ್ ಡೇ. ಮರೆತ್ತಿದ್ದೆ. ತೊದಲುತ್ತಾ, “ಹ್ಯಾಪ್ಪಿ ಬರ್ತ್ ಡೇ…”

ಮಗ ನಗುತ್ತಾನೆ. “ ಪಪ್ಪ ಹೀಗೆ…” ಅನ್ನುತ್ತಾ ಕುಳಿತಲ್ಲೇ,ತೂರಾಡುತ್ತಾನೆ ಮತ್ತು ಜೋರಾಗಿ ನಗುತ್ತಾನೆ. ಹೆಂಡತಿ, “ಸಾಕೇ…?” ಅನ್ನುತ್ತಾಳೆ. ಸಿಟ್ಟು ಬರುತ್ತದೆ. ನಡೆಯಲು ಆಗದೆ ಕುಳಿತ ಮಗನಿಗೆ ಹೊಡೆಯುತ್ತೇನೆ, ಒದೆಯುತ್ತೇನೆ.


***

Thursday, 12 December 2013

ಮುಂದಿನ ತೆಯ್ಯಮ್ ವರೆಗೆ...

ಡಾ. ಜಿ. ಕೃಷ್ಣ

Indian culture Theyyam performer applies make up in front of mirror2 300x199 Theyyam – A Ritual Older Than Time 

ಇದು ತೆಯ್ಯಮ್
ವೆಂಕಟೇಶ್ವರ ಮಹೇಶ್ವರ
ಪಾರ್ವತಿ ಪದ್ಮಾವತಿಯರ
ಲಾಸ್ಯ ಇದಲ್ಲ
ಶಂಕ ಚಕ್ರ ಗದಾ ಪದ್ಮಧಾರಿಗಳು
ಇಕ್ಷುಚಾಪ ಹಿಡಿದವರು
ದೂರ ನಿಂತೇ ದರ್ಶನ ನೀಡಿ
ಆಶೀರ್ವದಿಸಿ ಕಳಿಸುವ
ತಂತ್ರ ಇದಲ್ಲ

ಪೊರೆದೇ ಪೊರೆವೆನೆಂಬ
ಅಭಯದ ದಿಗಿಣ
ಕಣ್ಣರಳಿಸಿ ಗದರುವ
ತಾಯಿಗುಣದ ವಾಗ್ದಾನ

ಇಲ್ಲಿ ಮೇಲು ಕೀಳಿಲ್ಲ
ಕೀಳೇ ಮೇಲು
ಸಪಾದ ಭಕ್ಷ, ಪಂಚಕಜ್ಜಾಯಗಳಲ್ಲ
ಹಸಿ ಮಾಂಸ ಬಿಸಿರಕ್ತದೋಕುಳಿಯೆ
ನೈವೇದ್ಯ

ದಿನದ ಕೀಳು ಜೀವ
ಮೈದುಂಬಿದಾಗ
ಎತ್ತರೆತ್ತರಕ್ಕೆ ಏರಿ
ದೈವವೇ ಆಗಿ
ಜನಿವಾರಿಗಳನ್ನು
ಆಳುವವರನ್ನು, ಕೀಳುವವರನ್ನು
ಕಾಲಡಿಗೆ ಬೀಳಿಸಿಕೊಳ್ಳುತ್ತದೆ

ತೆಯ್ಯಮ್ ಮುಗಿದ ಬೆಳಿಗ್ಗೆ
ಬೇಲಿಯಾಚೆಯ ಮರದಡಿ
ಕುಳಿತಿರುತ್ತಾನೆ
ದೇವತಾ ಮನುಷ್ಯ
ತಾನು ಅಭಯ ಕೊಟ್ಟವರ
ಅಂಗಳಕ್ಕೂ ಕಾಲಿಡುವ ಹಕ್ಕಿಲ್ಲದೆ
ಮಾಮೂಲಿನಂತೆ
ಮುಂದಿನ ತೆಯ್ಯಮ್ ವರೆಗೆ...

***
 

Wednesday, 11 December 2013

ಆಳ್ವ ಮತ್ತು ನುಡಿಸಿರಿ ಸಮರ್ಥಕರ ಲೇಖನ ಪಕ್ಷಪಾತಪೀಡಿತ ಮತ್ತು ಅಸಾಂದರ್ಭಿಕ ಸುಳ್ಳುಗಳ ಕಂತೆ… -ನವೀನ್ ಸೂರಿಂಜೆ




 


October 19, 2012 ರ 'ವರ್ತಮಾನ'ದಲ್ಲಿ ಪ್ರಕಟವಾದ ಲೇಖನ


ಆಳ್ವಾಸ್ ನುಡಿಸಿರಿಗೆ ಅನಂತಮೂರ್ತಿ ಹೋಗುವುದು ಯುಕ್ತವೇ” ಎಂಬ ಲೇಖನಕ್ಕೆ ನನ್ನ ನೆಚ್ಚಿನ ಸಾಹಿತಿ ನಾ.ದ.ಶೆಟ್ಟಿಯವರು ಪ್ರತಿಕ್ರಿಯೆಯೊಂದನ್ನು ನೀಡಿದ್ದಾರೆ. “ನವೀನ್‌ರವರು ಬರೆದ ಒಂದೊಂದು ವಾಕ್ಯವನ್ನು ಒಬ್ಬರೇ ಕುಳಿತು ಪ್ರಾಂಜಲ ಮನಸ್ಸಿನಿಂದ ಮರು ಓದು ನಡೆಸಲಿ” ಎಂಬ ಅವರ ಮಾತಿನಂತೆ ಒಂದೊಂದು ವಾಕ್ಯವನ್ನು ಓದಿದಾಗಲೂ ಹಲವಾರು ವಿಷಯಗಳು ಸ್ಪಷ್ಟವಾಗಿ ಹೇಳಲಾಗಿಲ್ಲ ಅನ್ನಿಸಿತು. ಮೂಡಬಿದ್ರೆಯ “ಆಳ್ವಾಸ್ ಶಿಕ್ಷಣ ಸಂಸ್ಥ”ಯ ಮೋಹನ ಆಳ್ವ ಪ್ರಾಯೋಜಕತ್ವದ “ಆಳ್ವಾಸ್ ನುಡಿಸಿರಿ” ಮತ್ತು “ಆಳ್ವಾಸ್ ವಿರಾಸತ್” ಕಾರ್ಯಕ್ರಮಗಳನ್ನು ಇನ್ನಷ್ಟು ವಿಶಾಲವಾಗಿ ಮತ್ತು ಆಳವಾಗಿ ವಿಮರ್ಶಿಸಿ ಬರವಣಿಗೆಗಿಳಿಸಬೇಕಿತ್ತು. ಅದಕ್ಕಿಂತಲೂ ಮುಖ್ಯವಾಗಿ ಲೇಖನ ಮೋಹನ ಆಳ್ವರ ಬಗೆಗೆ ಬರೆದುದೇ ಅಲ್ಲ ಎಂಬುದನ್ನು ಬಹಳಷ್ಟು ಮಂದಿ ಅರ್ಥ ಮಾಡಿಕೊಂಡಿದ್ದೇ ಇಲ್ಲ. ವಿದ್ಯಾರ್ಥಿಗಳ ಡೋನೇಷನ್ ಹಣದಲ್ಲಿ ನಡೆಸುವ, ವಿದ್ಯಾರ್ಥಿ ಚಳುವಳಿಗಳಿಗೆ ಅವಕಾಶ ಮಾಡಿಕೊಡದ, ಡೆಮಾಕ್ರಟಿಕ್ ಆಗಿ ನಡೆಯದ, ಹಿಂದೂ ಸಮಾಜೋತ್ಸವದ ಸಂಘಟಕನೊಬ್ಬ ನಡೆಸುವ ಸಾಹಿತ್ಯ ಜಾತ್ರೆಯಲ್ಲಿ ಅನಂತಮೂರ್ತಿಯಂತಹ ಪ್ರಗತಿಪರ ಸಾಹಿತಿಗಳು ಭಾಗವಹಿಸುವಿಕೆಯ ಬಗ್ಗೆ ನಮ್ಮ ಆಕ್ಷೇಪವಿದೆಯೇ ಹೊರತು ಆಳ್ವರಾಗಲೀ ಇನ್ನೊಬ್ಬರಾಗಲೀ ನುಡಿಸಿರಿ ನಡೆಸುವುದರ ಬಗೆಗಲ್ಲ ಎಂಬುದನ್ನು ಅರ್ಥವಾಗುವಂತೆ ಸ್ಪಷ್ಟಪಡಿಸಬೇಕಿತ್ತು.

ಕನ್ನಡ ನಾಡು ನುಡಿಯ ರಕ್ಷಣೆಗಾಗಿ ಆಳ್ವಾಸ್ ನುಡಿಸಿರಿಯನ್ನು ಆಯೋಜಿಸುವುದು ಮತ್ತು ಇಲ್ಲಿ ನಡೆಯುವ ಕಾರ್ಯಕ್ರಮದ ಅಚ್ಚುಕಟ್ಟುತನ ಎಲ್ಲವೂ ಪ್ರಶಂಸನೀಯವೇ, ಮತ್ತು ಇಂತಹ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ನಡೆಯಬೇಕಾಗಿರುವಂತದ್ದು ಎಂಬುದರಲ್ಲಿ ಎರಡು ಮಾತಿಲ್ಲ. ನುಡಿಸಿರಿ ಮತ್ತು ವಿರಾಸತ್ ಈ ಎರಡೂ ಕಾರ್ಯಕ್ರಮಗಳು ಯಾವುದೇ ಪ್ರಜಾಪ್ರಭುತ್ವ ಮಾಧರಿಯಲ್ಲಿ ನಡೆಯದೆ ವ್ಯಕ್ತಿಯೊಬ್ಬನ ಸರ್ವಾಧಿಕಾರದಲ್ಲಿ ಸ್ವಯಂ ವೈಭವೀಕರಿಸುತ್ತಾ ನಡೆಯುವುದು ಮಾತ್ರ ಅಸಹನೀಯ. ಹೇಳಿಕೊಳ್ಳಲು ಒಂದಷ್ಟು ಜನರನ್ನು ಸೇರಿಕೊಂಡ ಸಮಿತಿ ಎಂಬುದಿದ್ದರೂ ಅದೊಂದು “ಆಳ್ವಾಸ್ ಭಜನಾ


ನುಡಿಸಿರಿ ಉದ್ದೇಶ ಕನ್ನಡ ನಾಡು ನುಡಿಯ ರಕ್ಷಣೆಯೇ ಆಗಿದ್ದರೆ ಪ್ರಚಾರಕ್ಕಾಗಿ ಇಷ್ಟೆಲ್ಲಾ ಚಡಪಡಿಸೋ ಅಗತ್ಯ ಇಲ್ಲ. ವಿಚಾರ ಸಂಕಿರಣಗಳು, ಗೋಷ್ಠಿಗಳು ಸೇರಿದಂತೆ ಇಡೀ ಕಾರ್ಯಕ್ರಮ ಎಷ್ಟು ಪ್ರಚಾರವಾಗುವುದು ಅವಶ್ಯಕತೆ ಇದೆಯೋ ಅಷ್ಟು ಪ್ರಚಾರವನ್ನು ಅದು ಅದರ ಮೌಲ್ಯದ ಆಧಾರದ ಮೇಲೆ ಪಡೆದುಕೊಳ್ಳುತ್ತದೆ. ಒಂದು “ಒಳ್ಳೆಯ ಕಾರ್ಯಕ್ರಮ”ದ ಪ್ರಚಾರಕ್ಕಾಗಿ ಮಾಧ್ಯಮದ ವ್ಯವಸ್ಥೆಯನ್ನು ಭ್ರಷ್ಠಗೊಳಿಸುವುದು ಎಷ್ಟು ಸರಿ? ಎರಡು ಮೂರು ವರ್ಷಗಳ ಹಿಂದೆ ನುಡಿಸಿರಿಯ ಮರುದಿನ ಮಂಗಳೂರಿನ ಮಹಾರಾಜ ಇಂಟರ್‌ನ್ಯಾಷನಲ್ ಹೊಟೇಲ್‌ನಲ್ಲಿ ಪತ್ರಕರ್ತರಿಗಾಗಿ ರಾತ್ರಿ ಭೋಜನಾ ಕೂಟ ಏರ್ಪಡಿಸುತ್ತಿದ್ದರು. ಪತ್ರಕರ್ತರಿಗೆ ಬೇಕಾದಷ್ಟು ಗುಂಡು ತುಂಡು ಸರಬರಾಜಾಗುತ್ತಿತ್ತು. ಖುದ್ದು ಆಳ್ವರೇ ಈ ಗುಂಡು ತುಂಡು ಪಾರ್ಟಿಯಲ್ಲಿ ಭಾಗವಹಿಸುತ್ತಿದ್ದರು. (ಆಳ್ವರು ಮದ್ಯ ಸೇವಿಸುತ್ತಿರಲಿಲ್ಲ.) ನುಡಿಸಿರಿಯ ಮರುದಿನ ಈ ಪಾರ್ಟಿ ನಡೆಯುತ್ತಿದ್ದರಿಂದ ಇದನ್ನು ನಾವು ಒಂದಷ್ಟು ಪತ್ರಕರ್ತರು ತಮಾಷೆಗಾಗಿ “ಆಳ್ವಾಸ್ ಕುಡಿಸಿರಿ” ಎಂದು ಕರೆಯುತ್ತಿದ್ದೆವು. ಇಂತಹ ಪಾರ್ಟಿಗಳನ್ನು ಆಯೋಜನೆ ಮಾಡಿ ತನ್ನ ಕಾರ್ಯಕ್ರಮಕ್ಕೆ ಪ್ರಚಾರ ಪಡೆದುಕೊಳ್ಳುವುದಕ್ಕೆ ಏನನ್ನಬೇಕು? ವಿದ್ಯಾರ್ಥಿಗಳ ಡೊನೇಷನ್ ಹಣದಲ್ಲಿ ಸಾಹಿತ್ಯ ಜಾತ್ರೆ ನಡೆಸುವುದೇ ಅಲ್ಲದೆ ಆ ಹಣದ ಪಾಲನ್ನು ಪತ್ರಕರ್ತರಿಗೆ ಮತ್ತು ಪತ್ರಿಕೆಗಳಿಗೆ ನೀಡುವುದು ಎಷ್ಟು ಸರಿ ?
 


 


ಆಳ್ವರು ಕೊರಗ ಮತ್ತು ದಲಿತ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡಿದ್ದಾರೆ ಎಂಬುದು ಅಕ್ಷರಶ ನಿಜ. ಹಾಗೆಂದು ಒಂದಿಡೀ ಸಮುದಾಯವನ್ನು ಅವಮಾನಿಸುವ ಮತ್ತು ಅನಿಷ್ಠ ಪದ್ದತಿಗಳನ್ನೇ ಸಂಸ್ಕೃತಿ ಎಂದು ತೋರಿಸುವ ಹಕ್ಕು ಆಳ್ವರಿಗೆ ಇಲ್ಲ. ವರ್ತಮಾನ.ಕಾಮ್‌ನಲ್ಲಿ ನಾನು ಬರೆದ ಲೇಖನಕ್ಕೆ ಪ್ರತಿಯಾಗಿ “ಆಳ್ವಾಸ್, ನುಡಿಸಿರಿ, ಅನಂತಮೂರ್ತಿ ಲೇಖನ : ಋಣಾತ್ಮಕ ಮತ್ತು ಪೂರ್ವಾಗ್ರಹಪೀಡಿತ” ಎಂದು ಬರೆದವರು ಆಳ್ವರು ವೇದಿಕೆಯಲ್ಲಿ ಕೊರಗರ ಡೋಲಿನೊಂದಿಗೆ ಕುಣಿಯುವ ಫೋಟೋ ಪ್ರಸ್ತಾಪಿಸಿ ನಾನು ಹೇಳಿದ್ದು ಸುಳ್ಳು ಎಂದಿದ್ದಾರೆ. ಆದರೆ ಇದು ಅಸಾಂದರ್ಭಿಕ ಪೋಟೋ ಮತ್ತು ಅವರು ಸತ್ಯವನ್ನು ಮರೆಮಾಚಿ ಯಾವುದನ್ನೋ ಎಲ್ಲಿಯೋ ಪ್ರಸ್ತಾಪಿಸಿದ್ದಾರೆ. “ಆಳ್ವಾಸ್ ನುಡಿಸಿರಿ”ಯಲ್ಲಿ ಕೊರಗರನ್ನು ಮೆರವಣಿಗೆಯಲ್ಲಿ ಡೋಲು ಬಡಿಯಲು ಬಳಸಿ ವೇದಿಕೆಗೆ ಹತ್ತಲು ಬಿಡದೆ ಹೊರಗಡೆ ಕೂರಿಸಲಾಗಿತ್ತು. ಇದೊಂದು ರೀತಿಯಲ್ಲಿ ಅಜಲು ಪದ್ದತಿಯ ಪುನರಾವರ್ತನೆಯಷ್ಟೆ. ಆದರೆ ಅದಕ್ಕೆ ಸಮರ್ಥನೆಯಾಗಿ ಬಳಕೆಯಾಗಿರುವ ಫೋಟೋ “ಆಳ್ವಾಸ್ ದೀಪಾವಳಿ” ಕಾರ್ಯಕ್ರಮದ್ದು (ಪಕ್ಕದಲ್ಲಿಯ ಚಿತ್ರವನ್ನು ಮತ್ತೊಮ್ಮೆ ಗಮನಿಸಿ). ಅದು ಆಳ್ವರು ದಲಿತ ನಿಂದನೆ ಮಾಡಿದ್ದಾರೆ ಎಂದು ದಲಿತರು ಜಿಲ್ಲಾಧಿಕಾರಿಯನ್ನು ದೂರಿಕೊಂಡ ನಂತರ ನಡೆದ ದೀಪಾವಳಿ ಉತ್ಸವದ್ದು. ಹಾಗಾಗಿ ಆಳ್ವರ ಪರ ಬರೆದ ಅಥವ ಬರೆಸಲ್ಪಟ್ಟ ಲೇಖನ ಅಸಾಂದರ್ಭಿಕ ಸುಳ್ಳುಗಳ ಕಂತೆ ಮಾತ್ರವಲ್ಲ, ವಸ್ತುನಿಷ್ಟತೆ ಮತ್ತು ವಿಮರ್ಶಾಸ್ವಾತಂತ್ರ್ಯ ಕಳೆದುಕೊಂಡು ಆಳ್ವರ ಪರ ಪಕ್ಷಪಾತದಿಂದ ಕೂಡಿದೆ.
 

ಇನ್ನು, ಆಳ್ವರು ಮಂಗಳೂರಿನ ನೆಹರೂ ಮೈದಾನದಲ್ಲಿ ಹಿಂದೂ ಸಮಾಜೋತ್ಸವವನ್ನು ಸಂಘಟಿಸಿ “ಈ ದೇಶ ಹಿಂದೂಗಳಿಗೆ ಮಾತ್ರ ಸೇರಿದ್ದು. ಇಲ್ಲಿ ಹಿಂದೂಗಳಾಗಿ ಇರುವವರು ಅಥವಾ ಹಿಂದುತ್ವವನ್ನು ಒಪ್ಪಿಕೊಂಡವರು ಮಾತ್ರ ಬದುಕಬಹುದು” ಎಂದು ಯಾರಿಂದಲೋ ಭಾಷಣ ಮಾಡಿಸಿ ಹಿಂದೂ ಮುಸ್ಲಿಮರ ಮಧ್ಯೆ ಸೃಷ್ಟಿ ಮಾಡಿರುವ ಅಳಿಸಲಾಗದ ಕಂದಕ ತನ್ನ ಕಾಲೇಜಿನ ಆವರಣದಲ್ಲಿ ಇಫ್ತಾರ್ ಕೂಟ ಮಾಡಿದರೂ, ಮಸೀದಿ ಕಟ್ಟಿದರೂ ಸರಿ ಹೋಗುವಂತದ್ದಲ್ಲ.

ನಾಲ್ಕು ವರ್ಷದ ಹಿಂದೆ ಇದೇ ಮೂಡಬಿದ್ರೆಯ ಪಕ್ಕದಲ್ಲಿರುವ ಎಡಪದವಿನ ಸರಕಾರಿ ಕಾಲೇಜಿನ ವಿದ್ಯಾರ್ಥಿಗಳು ಮಂಗಳೂರಿನಲ್ಲಿ ನಡೆಯಲಿದ್ದ ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಲು ಖಾಸಗಿ ಬಸ್ಸಿನಲ್ಲಿ ಮಂಗಳೂರಿಗೆ ಆಗಮಿಸುತ್ತಿದ್ದರು. ಈ ವಿದ್ಯಾರ್ಥಿಗಳ ಪೈಕಿ ಇಬ್ಬರು ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಇಬ್ಬರು ಇಬ್ಬರು ಹಿಂದೂ ವಿದ್ಯಾರ್ಥಿನಿಯರಿದ್ದರು. ಇದು ಮಂಗಳೂರಿನ ಮಟ್ಟಿಗೆ ಮಹಾ ಅಪರಾಧ. ಈ ಅಪರಾಧಕ್ಕಾಗಿ ಈ ವಿದ್ಯಾರ್ಥಿಗಳಿದ್ದ ಬಸ್ಸನ್ನು ಮಾರ್ಗ ಮಧ್ಯದಲ್ಲಿ ಭಜರಂಗದಳದವರು ತಡೆದರು. ಬಸ್ಸಿಗೆ ನುಗ್ಗಿ ನಾಲ್ಕೂ ವಿದ್ಯಾರ್ಥಿಗಳ ಮೇಲೆಹಲ್ಲೆ ನಡೆಸಿ ಬಸ್ಸಿನಿಂದ ಇಳಿಸಲಾಯಿತು. ಆ ಸಂದರ್ಭ ಈ ಕಾಲೇಜಿಗೆ ಮೋಹನ ಆಳ್ವರು ಸಂಚಾಲಕರಾಗಿದ್ದರು. ಮೊಹನ ಆಳ್ವರು ವಿದ್ಯಾರ್ಥಿಗಳ ಬೆಂಬಲಕ್ಕೆ ನಿಲ್ಲುವುದನ್ನು ಬಿಟ್ಟು ಜೊತೆಯಾಗಿ ಕ್ರೀಡಾಕೂಟಕ್ಕೆ ತೆರಳಿದ್ದಕ್ಕಾಗಿ ಪೆಟ್ಟು ತಿಂದ ವಿದ್ಯಾರ್ಥಿಗಳನ್ನೇ ತರಾಟೆಗೆ ತೆಗೆದುಕೊಂಡಿದ್ದರು. ಮಾತ್ರವಲ್ಲದೆ “ವಿದ್ಯಾರ್ಥಿಗಳು ಕ್ರೀಡಾಕೂಟಕ್ಕೆ ತೆರಳಿಲ್ಲ. ಮಜಾ ಮಾಡಲು ಹೊರಟಿದ್ದರು” ಎಂಬ ಹೇಳಿಕೆ ನೀಡಿದ್ದರು. ಆಗ ಎಸ್ಎಫ್ಐ ವಿದ್ಯಾರ್ಥಿ ಸಂಘಟನೆ ಮೋಹನ ಆಳ್ವರ ವಿರುದ್ದ ಬೀದಿಗಿಳಿದು ಪ್ರತಿಭಟನೆ ಮಾಡಿತ್ತು. ಆ ಸಂದರ್ಭದಲ್ಲಿ ಸರಕಾರಿ ಕಾಲೇಜಿನ ಪ್ರಾಂಶುಪಾಲರು ತನ್ನ ಕಾಲೇಜಿನ ವಿದ್ಯಾರ್ಥಿಗಳು ತನ್ನ ಅನುಮತಿಯನ್ನು ಪಡೆದು ವಿದ್ಯಾರ್ಥಿಗಳು ಕ್ರೀಡಾಕೂಟಕ್ಕೆ ತೆರಳಿದ್ದರು ಎಂದು ಪತ್ರಿಕಾ ಹೇಳಿಕೆ ನೀಡಿದಾಗ ಮೋಹನ ಆಳ್ವರು ಸರಕಾರಿ ಕಾಲೇಜಿನ ಪ್ರಾಂಶುಪಾಲರ ವಿರುದ್ಧವೇ ಹರಿಹಾಯ್ದಿದ್ದರು. ನಾವು ಅಂದಿನ ಕ್ರೀಡಾ ಉಪನ್ಯಾಸಕರ ಬಳಿ ಕೂಡಾ ಈ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದೆವು. ವಿದ್ಯಾರ್ಥಿಗಳು ಅಲೋಶಿಯಸ್ ಕಾಲೇಜಿನಲ್ಲಿ ನಡೆಯುತ್ತಿದ್ದ ಕ್ರೀಡಾ ಕೂಟಕ್ಕೆ ಪ್ರಾಂಶುಪಾಲರ ಆದೇಶದಂತೆ ಹೊರಟಿದ್ದರು. ಶಿಸ್ತುಕ್ರಮ ಕೈಗೊಳ್ಳುವುದು ಪ್ರಾಂಶುಪಾಲರ ಕೆಲಸವೇ ಹೊರತು ಸಂಚಾಲಕರದ್ದಲ್ಲ.

 

ಡೊನೇಷನ್ ಹಣದಲ್ಲಿ ಅಥವಾ ಹಿಂದೂ ಸಮಾಜೋತ್ಸವದ ಸಂಘಟಕ ಸಾಹಿತ್ಯದ ಕಾರ್ಯಕ್ರಮ ಮಾಡೋದರಲ್ಲಿ ತಪ್ಪೇನು? ತಪ್ಪು ಏನೂ ಇಲ್ಲ. ಎಲ್ಲಾ ಮಕ್ಕಳಿಗೂ ಸಮಾನ ಶಿಕ್ಷಣ ದೊರೆಯಬೇಕು, ಈ ಸಮಾಜ ಜಾತ್ಯಾತೀತ ಮತ್ತು ಧರ್ಮಾತೀತವಾಗಿರಬೇಕು ಮತ್ತು ಈ ಸಮಾಜದ ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ ಮತ್ತು ಈ ನೆಲ ಪ್ರತಿಯೊಬ್ಬರಿಗೂ ಸೇರಿದ್ದು ಎಂದು ಬಲವಾಗಿ ಪ್ರತಿಪಾದಿಸುವ ನನ್ನ ನೆಚ್ಚಿನ ಮೇಷ್ಟು ಅನಂತಮೂರ್ತಿಯವರು ಇಂತಹ ಕಾರ್ಯಕ್ರಮಕ್ಕೆ ಹೋಗುವುದು ಮಾತ್ರ ಆಕ್ಷೇಪಾರ್ಹ. ತೊಗಾಡಿಯಾ, ಕಾರಂತ, ಗುರೂಜಿಯಂತವರನ್ನು ಕರೆಸಿ ಭಾಷಣ ಮಾಡಿಸೋ ವ್ಯಕ್ತಿಯೇ ಅನಂತಮೂರ್ತಿ, ಬರಗೂರುರಂತವರನ್ನೂ ಕರೆಸಿ ಭಾಷಣ ಮಾಡಿಸುತ್ತಾರೆ ಎಂದರೆ ಮಾತ್ರ ನಮ್ಮ ಕನ್ನಡದ ಮನಸ್ಸಿಗೆ ನೋವಾಗುತ್ತದೆ. ಮೋಹನ ಆಳ್ವರು ಒರ್ವ ಉತ್ತಮ ಸಂಘಟಕ. ಆದರೆ ಡೆಮಾಕ್ರಟಿಕ್ ಆಗಿರುವ ಸಂಘಟಕ ಅಲ್ಲ. ಡೊನೇಷನ್ ಹಣದಲ್ಲಿ ತನಗೆ ಬೇಕಾದಂತೆ ಕಾರ್ಯಕ್ರಮ ನಡೆಸಿ ಅದನ್ನೇ ಕನ್ನಡ ಮನಸ್ಸುಗಳ ಕಾರ್ಯಕ್ರಮ ಎಂದರೆ ಒಪ್ಪಲು ಸಾಧ್ಯವಿಲ್ಲ. ಹಿಂದೂ ಸಮಾಜೋತ್ಸವದ ಸಂಘಟಕನೊಬ್ಬ ನಡೆಸುವ ವಿದ್ಯಾರ್ಥಿಗಳ ಡೊನೇಷನ್ ಹಣದಲ್ಲಿ ನಡೆಸುವ ಸಾಹಿತ್ಯ ಜಾತ್ರೆಯಲ್ಲಿ ಅನಂತಮೂರ್ತಿಯಂತಹ ಪ್ರಗತಿಪರ ಸಾಹಿತಿಗಳು ಭಾಗವಹಿಸುವಿಕೆಯ ಬಗ್ಗೆ ನಮ್ಮ ಆಕ್ಷೇಪವಿದೆಯೇ ಹೊರತು ಆಳ್ವರಾಗಲೀ ಇನ್ನೊಬ್ಬರಾಗಲೀ ನುಡಿಸಿರಿ ನಡೆಸುವುದರ ಬಗೆಗಲ್ಲ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸುತ್ತಿದ್ದೇನೆ.


***

Tuesday, 10 December 2013

ಕೆಲವು ಸಲ


ಬಸವರಾಜ ಸೂಳಿಭಾವಿ


Basavaraj Sulibhavi

 

ಬದುಕು ಹಗಲು ತೆರೆದುಕೊಳ್ಳುತ್ತದೆ
ಕೆಲವು ಸಲ ರಾತ್ರಿಯಲ್ಲಿ..

ಒಮ್ಮೊಮ್ಮೆ ನೋವಿನಲ್ಲಿ ಹುಟ್ಟುತ್ತದೆ
ನಗುವಿನಲ್ಲಿ ಕೊನೆಗಾಣುತ್ತದೆ

ಹೆಸರಿಟ್ಟುಕೊಳದೆ 
ವಿರಾಟ ಜ್ವಾಲೆಯಲಿ ತುಟಿಗೆ ಮಾತು ತುಂಬುತ್ತದೆ
ಮಾಗಿಯ ಚಳಿಗೆ ಮೂಳೆ ಮಾತು ಕಲಿಯುತ್ತವೆ

ಜೀವ ಹೀಗೆ ಕಾಣುತ್ತದೆಂದು ಹೇಗೆ ಹೇಳುವುದು ?
ಹೂವು
ನಗು
ಮತ್ತು
ಪ್ರೇಮ
ಇದರಲಿ ಸಾವಿಗೆ ಯಾವುದೂ ಕಾರಣವಲ್ಲವೆಂದು ಹೇಗೆ ಹೇಳುವುದು ?
ಬೆಂಕಿ
ಬೇನೆ
ನೋವು
ವಿನಾಶದ ಪಟ್ಟಹೊತ್ತು ತಿರುಗುವ ಲೋಕದಲಿ
ಬದುಕು ಬರೆದಿಟ್ಟ ಬರಹದ ಹಾಗಲ್ಲ
ಅನ್ನುವುದೇ ಮರೆತು ಹೋಗುತ್ತದೆ

ನನಗೆ ಹೆಚ್ಚೇನೂ ತಿಳಿದಿಲ್ಲ
ಸಾವಿನ ಭಾಷೆಯನ್ನು ಅನುವಾದಿಸುವವ ಇನ್ನೂ ಸಿಕ್ಕಿಲ್ಲ
ನಾವೇನಿದ್ದರೂ ಬದುಕಿನ ಭಾಷೆಯನ್ನಷ್ಟೆ ಅನುವಾದಿಸುವವರು
ಬಾಯಾರಿ ಕಡಲ ಕೂಡಿದ್ದೇನೆ
ನನಗೀಗ
ಹೊರಬರಬೇಕೆಂದರೆ ಆವಿಯಾಗುವುದೊಂದೇ ದಾರಿ

ಬೆಳಕಾಗುವ ಸುಗಂಧವಾಗುವ ಆಸೆ
ಸುಟ್ಟುಕೊಳ್ಳುವುದೆಂದು ಗೊತ್ತಿದ್ದರೂ ಮೊಳೆಯುತ್ತದೆ
ಖರೆ ಮಾತೆಂದರೆ
ನಶೆಯಿಲ್ಲದ ಬದುಕು ನನ್ನದಂತೂ ಅಲ್ಲ
ಬುದ್ಧ ಮತ್ತು ನಾನು....
 
 
ಹೇಮಲತಾ ವಸ್ತ್ರದ್
 
 
 

 
 
ಎದೆಯಾಳದ ಕಳವಳಕ್ಕಂಜಿ ಹೊಕ್ಕೆ 
ಸಿದ್ಧ ಅರ್ಥಗಳ ಜಗಕಿತ್ತ ಬುದ್ಧನ ವಿಹಾರವ
ಮಿರಿಮಿರಿ ಮಿಂಚುತ್ತಿರುವ ಕಂಚಿನ ಧ್ಯಾನಸ್ಥ ಪುತ್ತಳಿ
ಅರೆ ತೆರೆದ ಕರುಣಾ ನೇತ್ರಗಳು
ಜಗ ಮೆಚ್ಚಿದ ಕಿರುನಗು
ಗಾಢಮೌನ ಮೊಗದ ಪ್ರಶಾಂತತೆ
ನನಗೋ ಮಹದಚ್ಚರಿ
ಮಹಾನ್ ಸಾಧಕ ನೀನು
ಸಂಬೋಧಿ ಜ್ಞಾನಕ್ಕೆ ಉರುವಿಲ್ವದ ಅಶ್ವತ್ಥಮರ
ಸುಖಜೀವನ ಶೋಧನೆಗೆ ನ್ಯಗ್ರೋಧ ಮರ
ಸಂಸಾರ ದುಃಖ ಸಾಗರ
ಜೀವನ ನಶ್ವರ
ಆಸೆಯೇ ದುಃಖದ ಮೂಲಾಧಾರ..ಹೀಗೆ.. 
ಲುಂಬಿನಿ ವನದಲಿ ಉದಯಿಸಿದರ್ಕ
ಕುಶಿನಾರದ ಸಾಲವನದಲಿ ಅಸ್ತಂಗತ
ನಿನ್ನ ನೆನೆಯುತ್ತ ನೆನೆಯುತ್ತ
ಕಣ್ಮುಚ್ಚಿ ಕುಳಿತೆ ನಿನ್ನೆದುರು
ಧ್ಯಾನಸ್ಥ ಭಂಗಿಯಲಿ
ಗಾಢ ಮೌನದ ಚಿಪ್ಪೊಡೆಯಿತು
ತುಟಿಮೀರದ ಬಿಕ್ಕಳಿಸುವ ಧ್ವನಿ
ಹಸಿಮೈಯ ಬಿಸಿಯಾಸೆಗಳು
ಒಡಲುದ್ದ ಒಲವಿರುವ ಯಶೋಧರೆಯದೆ?
ಕಾಣದ ಕಂದನ ಕ್ರಂದನ ರಾಹುಲನದೆ?
ಕಣ್ಣು ಒದ್ದೆಯಾದ ಅನುಭವ
ಹಸಿಯಾರಿಸಲು ಕೆನ್ನೆಯ ತಾಕಿತು ಕೈಬೆರಳು
ತೇವವಾದದ್ದು ನನ್ನದಲ್ಲ, ನಿನ್ನ
ಮಿರಿಮಿರಿ ಮಿಂಚುವ ಕಂಚಿನ ಕೆನ್ನೆ..

(ಬುದ್ಧ ಪೂರ್ಣಿಮೆಯಂದು ವಿಜಾಪೂರದ ಮಹಿಳಾ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ ಕವಿಗೋಷ್ಠಿಯಲ್ಲಿ ಓದಿದ ಕವಿತೆ.)

Monday, 9 December 2013

ಕವಿತೆ: ಡಾ.ಜಿ. ಕೃಷ್ಣ

ಪ್ರತಿಮಾ ಪಲಾಯನ

 Krishna Giliyar



 

ಸೀದಾ ಸಾದಾ ಕವಿತೆ
ಸದಾ ಬೇಡವಯ್ಯ, ಇರಲಿ
ಪ್ರತಿಮೆಗಳು
ಎಂದಿದ್ದನ್ನು
ಒಪ್ಪಿ
ಹುಡುಕಾಡಿ
ಮಳೆ, ಹಕ್ಕಿ, ಮರ, ಗಿಡ
ನಕ್ಷತ್ರ, ಸೂರ್ಯ
ಹಗಲು, ರಾತ್ರಿ-
ಗಳನ್ನೆಲ್ಲ
ಎಳೆತಂದು ನಿಲ್ಲಿಸಿ 
ನೀವು ನೀವಲ್ಲವೇ ಅಲ್ಲ, ಮತ್ಯಾರೋ
ಎಂದು
ಅವಕ್ಕೆ ಪರಿಪರಿಯಿಂದ ತಿಳಿಹೇಳಿದೆ

ಮಳೆ ಜಪ್ಪಡಿಸಿ ಹೊಯ್ದೇ ಹೊಯ್ಯಿತು
ಹಕ್ಕಿ
ರೆಕ್ಕೆ ಬಿಚ್ಚಿ ಹಾರಿ
ಮರದ ಮೇಲೆ ಕೂತಿತು
ನಕ್ಷತ್ರಗಳು
ರಾತ್ರಿಯೆಲ್ಲ ಮಿನುಗಿ
ಹಗಲಿಗೆ ಹೆದರಿ ಫೇರಿ ಕಿತ್ತವು

ಪ್ರತಿಮೆಗಳನ್ನು
ಹಿಡಿದಿಡಲಾಗದ 
ನನ್ನ
ದುಗುಡವಷ್ಟೆ ಉಳಿಯಿತು.

ಸಾಮಾಜಿಕ ಮಾಧ್ಯಮವೋ - ಸಮೂಹ ಸನ್ನಿಯೋ?

 

ಬಿ. ರಾಜೇಶ್

 

 Rajesh Basavanna


ಈ ಹಿಂದೆ ಅಂದರೆ ಸುಮಾರು ಹದಿನೈದು ವರುಶಗಳ ಹಿಂದೆ ಸಾಮಾನ್ಯವಾಗಿ 
ಮದುವೆಗೆ ಹೆಣ್ಣು ಅಥವ ಗಂಡು ತೋರಿಸಿದಾಗ ಅವರ ಗುಣಗಳ ಬಗ್ಗೆ ತಿಳಿಯಲು ಅವರಿಗೆ ಸಂಬಂದಿಗಳ ಅಥವ ಅವರ ಸ್ನೇಹಿತರಲ್ಲಿ ವಿಚಾರಿಸಿ ಅಥವ ಅದೇ ಊರಿನ ಇತರರನ್ನು ಕೇಳಿತಿಳಿದು ಕೊಳ್ಳುವುದು ಸಹಜ ಸಾಮಾನ್ಯವಾಗಿತ್ತು. ಸುದ್ದಿಗಳಿಗಾಗಿ ದಿನಪತ್ರಿಕೆಗಳ ಮರೆ ಹೋಗಬೇಕಾಗಿತ್ತು ಅಷ್ಟೆ ಅಲ್ಲ ಎಲ್ಲಾದರು ಖಾಸಗಿ ಕೆಲಸಕ್ಕೆ ಸಿಗಬೇಕಾದರೆ ಯಾರದ್ದಾದ್ರು ಶೀವಾರಸ್ಸು ಅಥವ ಪ್ರಭಾವಿಗಳ ಸಂಪರ್ಕವಿರಬೇಕಿತ್ತು. ಆದರೆ ಇಂದು ಯುವಜನಾಂಗ ಇವೆಲ್ಲವನ್ನು ಯಾವುದೇ ಅಡೆತಡೆಗಳಿಲ್ಲದೇ ತಮಗೆ ತಾವೆ ಪಡೆದುಕೊಳ್ಳಲು ಸಾಧ್ಯಮಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ಕಾರಣ ಈ ಸಮೂಹ ಮಾದ್ಯಮಗಳು. ಇಂದಿನ ಯುವಜನಾಂಗ ತಮ್ಮ ತಮ್ಮ ಸಂಗಾತಿಗಳ ಬಗ್ಗೆ ತಿಳಿದುಕೊಳ್ಳಲು ಫೇಸ್ಬುಕ್(facebook) ಮೋರೆಹೊಗುತಿದ್ದಾರೆ. ಫೇಕ್ ಅಕೌಂಟ್ಗಳ ಮೂಲಕ ತಮ್ಮ ಸಂಗಾತಿಯ ಚಾರಿತ್ರವನ್ನು ಪರೀಕ್ಷಿಸುತ್ತಾರೆ. ಅಷ್ಟೇ ಅಲ್ಲ ಇಂದಿನ ಖಸಾಗಿ ಕಂಪನಿಗಳು ಕೂಡ ತಾಮ್ಮ ಸಿಬ್ಬಂದಿವರ್ಗದವರ ಚಲನವಲನಗಳನ್ನು ಅವರುಗಳ ಫೇಸ್ಬುಕ್ ಅಕೌಟ್ಗಳ ಸಹಾಯದಿಂದ ಗಮನಿಸುತ್ತಾರೆ ಅಷ್ಟೆ ಅಲ್ಲ ಹೊಸದಾಗಿ ಕೆಲಸಕ್ಕೆ ಸೇರಬಯಸುವ ಅಭ್ಯರ್ಥಿಗಳ ವಿವರಗಳನ್ನು ಕೆದಕಿ ಅವರ ಗುಣಗಳನ್ನು ಅಳೆಯುತಿದ್ದಾರೆ. 

ಕೇವಲ ಗೆಳೆಯರೊಂದಿಗಿನ ಫೋಟೋ ಹಾಗೂ ಇತರ ಮಾಹಿತಿಗಳನ್ನು ಹಂಚಿಕೊಳ್ಳಲು ಹುಟ್ಟುಕೊಂಡ ಈ ತಾಣಗಳೇ ಕ್ರಮೇಣ ಸಾಮಾಜಿಕ ತಣಗಳಾಗಿ ಒಂದು ಉದ್ಯಮವಾಗಿ ಇಂದು ಇನ್ನಿತರ ಸಾಂಪ್ರದಾಯಿಕ ಮಾದ್ಯಮಗಳಾದ ಪತ್ರಕೊಂದ್ಯಮ ಹಾಗು ಟೆಲಿವಿಷನ್ ಮಾದ್ಯಮವನ್ನು ಮೀರಿ ನಿಂತಿದೆ. ಒಂದು ಕ್ಷಣದಲ್ಲಿ ನೋರಾರು ಕೋಟಿ ಜನರಿಗೆ ಮುಟ್ಟಲು ಸದ್ಯವಿರುವ ಈ ಮಾದ್ಯಮ ಕೇವಲ ನಗರಗಳಲ್ಲಷ್ಟೇ ಅಲ್ಲ ಇಂದು ಹಳ್ಳಿಗಳಲ್ಲಿಯೂ ತನ್ನ ಬೇರನ್ನು ಭದ್ರಪಡಿಸಿಕೊಳ್ಳುತ್ತಿದೆ. 

 Facebook I Want My Friends Back

ಒಸಮ ಬಿನ್ ಲಾಡೇನ್ ಅನ್ನು ಹಿಡಿದ ಸುದ್ದಿ ಮೋದಲಿಗೆ ಹೊರಬಂದದ್ದು ಟ್ವಿಟರ್(twitter) ಮೂಲಕ, ಅಮೇರಿಕಾದ ಪಡೆಗಳು ಪಾಕಿಸ್ತಾನದಲ್ಲಿ ಓಸಮಾ ಮೇಲೆ ದಾಳಿ ಮಾಡಿದಾಗ ಹತ್ತಿರದಲ್ಲೆ ಇದ್ದ ಒಬ್ಬ ಇದನ್ನು ತನ್ನ ಟ್ವಿಟರ್ ಅಕೌಂಟ್ ಮುಖಾಂತರ ಸಾಮಾಜಿಕ ತಾಣಗಳಿಗೆ ಹರಿದುಬಿಟ್ಟ ಅಷ್ಟೆ ಅಲ್ಲ ಅದರ ನಿರಂತರ ಮಾಹಿತಿಯನ್ನು ಹರಿದುಬಿಡುತ್ತಲೇ ಇದ್ದ. ನಂತರ ಮುಂಜಾನೆ ಅಮೇರಿಕಾದ ಅಧ್ಯಕ್ಷ ಒಬಾಮ ಇಡೀ ಜಗತ್ತಿಗೆ ಒಸಮ ಬನ್ ಲಾಡೆಲ್ ಮೇಲಿ ದಾಳಿಯನ್ನು ತಿಳಿಸಿದ್ದ. ಆದರೆ ಅದಕ್ಕೆ ಮುಂಚೆಯೇ ಈ ಸುದ್ದಿ ಸಾಮಾಜಿಕ ತಾಣಗಳಲ್ಲಿ ಪ್ರಸಾರವಾಗಿತ್ತು. 

ಇನ್ನು ಲಿಂಕ್ಡ್ಇನ್(Linked Inn) ಎಂಬ ಸಮಾಜಿಕ ತಾಣ ವೃತ್ತಿನಿರತರ ಸಾಮಾಜಿಕ ಮಾಧ್ಯಮ ಇಲ್ಲಿ ಅವರ ಕೆಲಸಕ್ಕೆ ಬೇಕಾದ ವಿದ್ಯಾಬ್ಯಾಸ, ಅನುಭವದ ಬಗ್ಗೆಯ ಸಂಪೂರ್ಣ ಮಾಹಿತಿ, ಉನ್ನತ ಹುದ್ದೆಯಲ್ಲಿರುವವರ ಮಾಹಿತಿ ಹಾಗು ಅವರೊಂದಿಗೆ ಸಂಪರ್ಕ ಸಾಧಿಸಲು ಅನುಕೂಲ ಕಲ್ಪಿಸಿಕೊಡುತ್ತದೆ. ಈ ಮಾದ್ಯಮದ ಮೂಲಕ ಪ್ರಭಾವಿಗಳ ಸಂಪರ್ಕ ಸಾಧಿಸಿ ಕೆಲಸ ಗಿಟ್ಟಿಸಿಕೊಳ್ಳಬಹುದಾಗಿದೆ. ಹೀಗೆ ಅಂತರ್ಜಾಲದಲ್ಲಿ ಗೂಗಲ್ ಪ್ಲಸ್, ಯಾಹೂ ಹೀಗೆ ಹಲವಾರು ರೀತಿಯ ಸಮೂಹ ಮಾಧ್ಯಮಗಳು ಅಂತಜರ್ಜಾಲದಲ್ಲಿ ಸಿಗುತ್ತವೆ. ಅಷ್ಟೇ ಅಲ್ಲ ಈ ಎಲ್ಲ ಸಮೂಹ ಮಾದ್ಯಮಗಳ ಆಪ್ ಎಲ್ಲಾ ರೀತಿಯ ಮೋಬೈಲ್ ಗಳಲ್ಲು ಲಭ್ಯವಿದ್ದು, ಅತ್ಯಂತ ವೇಗವಾಗಿ ಯುವಕರನ್ನು ವಶಮಾಡಿಕೊಳ್ಳುತ್ತಿದೆ. ಅಷ್ಟೇ ಏಕೆ ಇಂದು ಕೇವಲ ರೂ.4000 ಕ್ಕೆ ನಿಮಗೆ ಒಂದು ಅಂಡ್ಯ್ರಾಡ್ ಮೊಬೈಲ್ ಸಿಗಲಿದೆ. ಇತ್ತೀಚೆಗೆ ಬಂದ ವರದಿಗಳ ಪ್ರಕಾರ ಯುವಜನತೆ ಸಮೂಹ ಮಾಧ್ಯಮಗಳನ್ನು ಬಳಸಲೆಂದೆ ಅಂಡ್ಯ್ರಾಡ್ ಮೊಬೈಲ್ ಹಾಗೂ ಟ್ಯಬ್ಲಟ್ ಗಳನ್ನು ಖರೀದಿಸುತ್ತಿದ್ದಾರಂತೆ. ಇಂದು ಎಲ್ಲ ಖಾಸಗಿ ಕಂಪನಿಗಳು ಹಾಗು ಸರಕಾರಿ ಸಂಸ್ಥೆಗಳೂ ಕೂಡ ಈ ಎಲ್ಲ ಸಮೂಹ ಮಾಧ್ಯಮಗಳಲ್ಲಿ ತಮ್ಮ ಅಕೌಂಟ್ ಇಟ್ಟುಕೊಂಡು ಆ ಮೂಲಕವೂ ಕೂಡ ಯುವಜನರನ್ನು ತಲುಪಲು ಪ್ರಯತ್ನಿಸುತ್ತಿವೆ. ಒಟ್ಟಿನಲ್ಲಿ ಹೇಳಬೇಕೆಂದರೆ ಇಂದು ಸಮೂಹ ಮಾಧ್ಯಮಗಳಲ್ಲಿ ಚರ್ಚೆಯಾಗದ ವಿಷಯಗಳೇ ಇಲ್ಲ. 
 
ಈ ಮೊದಲು ಕೆಲವೇ ಕೆಲವು ಸಾಫ್ಟ್ ವೇರ್ ಉದ್ಯಮದ ಮಂದಿಗಳು ಮಾತ್ರ ಸಮೂಹ ಮಾಧ್ಯಮಗಳಲ್ಲಿ ತಮ್ಮ ಅಕೌಂಟ್ಗಳನ್ನು ಹೊಂದಿದ್ದರು. ಯಾಕೆಂದರೆ ಎಲ್ಲರಿಗೂ ಅಂತರ್ಜಾಲದ ಸೌಲಭ್ಯವಿರಲಿಲ್ಲ. ಆದರೆ ಇಂದಿನ 3ಜಿ ಮತ್ತು 4ಜಿ ತಂತ್ರಜ್ಞಾನ ಮತ್ತು ಸ್ಮಾರ್ಟ್ ಫೋನ್ ಕ್ರಾಂತಿ ಎಲ್ಲಾ ವಿಭಾಗದ ಜನರನ್ನು ಒಳಗೊಂಡಿದೆ, ಅಷ್ಟೇ ಅಲ್ಲ ಅತ್ಯಂತ ವೇಗವಾಗಿ ವಿದ್ಯಾರ್ಥಿ ಸಮೂಹ ಈ ಸಮಾಹ ಮಾಧ್ಯಮಗಳಲ್ಲಿ ಸೇರುತಿದ್ದಾರೆ. ಇದಕ್ಕೆ ಸಾಮಾಜಿಕ ತಾಣಗಳಿಗೆ ಸೇರಲು ಯಾವುದೇ ಜಾತಿ, ಧರ್ಮಗಳ ಮಾನದಂಡವಿಲ್ಲ. ಓದು ಬರಹ ತಿಳಿಯದವರು ಕೂಡ ಇದನ್ನು ಬಳಸಬಹುದಾಗಿದೆ. ಇದೂ ಕೂಡ ಬಳಕೆದಾರ ಸಂಸ್ಕೃತಿಯ ಮತ್ತೊಂದು ಆಯಾಮ. ಇಲ್ಲಿ ಅದನ್ನ ಎಷ್ಟು ಹೆಚ್ಚು ಜನ ಬಳಸುತ್ತಾರೋ ಅಷ್ಟು ಹಣ ಈ ಸಾಮಾಜಿಕ ತಾಣಗಳ ಮಾಲೀಕರಿಗೆ ಸಲ್ಲುತ್ತದೆ. ಇದನ್ನರಿತೆ ಇಂದು ಜಾಹಿರಾತುದಾರರು ತಮ್ಮ ಕಂಪನಿಯ ಜಾಹೀರಾತುಗಳನ್ನು ಈ ಸಾಮಾಜಿಕ ತಾಣಗಳಲ್ಲಿ ಹರಿದುಬಿಡುತಿದ್ದಾರೆ. ವೃತ್ತ ಪತ್ರಿಕೆಗಳಲ್ಲಿ ಕಾಣಸಿಗದ ಎಷ್ಟೋ ಬಳಕೆಯ ವಸ್ತುಗಳ ಜಾಹಿರಾತುಗಳನ್ನು ಇಂದು ಯುವಜನತೆ ತಮ್ಮ ಮೊಬೈಲ್ ಮೂಲಕ ಖರೀದಿಸುತಿದ್ದಾರೆ. ಅಷ್ಟೇ ಅಲ್ಲ ಕಳೆದ ವರ್ಷದ ಫೇಸ್ಮುಕ್ ಕಂಪನಿ ಜಾಹೀರಾತಿನಿಂದ ಬಂದ ಆದಾಯ ಅಮೇರಿಕಾದ ಎಲ್ಲ ಪ್ರಿಂಟ್ ಮೀಡಿಯಾ ಜಾಹೀರಾತು ಆದಯಕ್ಕಿಂತ ಹೆಚ್ಚಾಗಿತ್ತು. ಇಂದು ಸಮೂಹ ಮಾಧ್ಯಮದ ಮೂಲಕ ಕಂಪನಿಗಳು ಹಾಗೂ ಜಾಹಿರಾತಿನ ಮೂಲಕ ಸಾಮಾಜಿಕ ತಾಣಗಳು ಸಾವಿರಾರು ಕೋಟಿ ಹಣ ಗಳಿಸುತಿದ್ದಾವೆ. ಇಂದು ಪ್ರಚಾರಕ್ಕೂ ಸಮೂಹ ಮಾಧ್ಯಮಗಳಿಗೆ ಮೊದಲ ಪ್ರಶಾಸ್ತ್ಯ ನೀಡಲಾಗುತ್ತಿದೆ. ಇಂದು ಬಹುತೇಕ ಎಲ್ಲ ಭಾಷೆಗಳ ಸಿನೆಮಾದ ಟ್ರೈಲರ್ಗಳನ್ನು ಮೊದಲು ಯು ಟ್ಯೂಬ್(YouTube)  ಮೂಲಕ ಬಿಡುಗಡೆ ಮಾಡಲಾಗುತ್ತಿದೆ. ನಂತರ ಅದು ಟಿವಿ ಚಾನಲ್ಗಳಲ್ಲಿ ಪ್ರಸಾರವಾಗುತ್ತದೆ. 

ಮೇಲುನೋಟಕ್ಕೆ ಸಮೂಹ ಮಾದ್ಯಮ ಯುವಜನರನ್ನು ಅತ್ಯಂತ ಬೇಗ ಹಾಗು ಪರಿಣಮಕಾರಿಯಾಗಿ ಮುಟ್ಟಲು ಸಾಧ್ಯವಿರುವ ಮಾಧ್ಯಮವಾಗಿ ಕಾಣುತ್ತಿದ್ದರೂ, ಅದು ಇಂದು ಸಾಮಾಜಿಕವಾಗಿ, ರಾಜಕೀಯವಾಗಿ, ಮನುಷ್ಯನ ಮೂಲಭೂತ ಮಾನವೀಯ ಮೌಲ್ಯಗಳನ್ನು ಹಾಳುಗೆಡುವುತ್ತಿರುವುದನ್ನು ನೋಡುತಿದ್ದೇವೆ. ಎಲ್ಲಕ್ಕಿಂತ ಮುಖ್ಯವಾಗಿ ಸಾರ್ವಜನಿಕ ಅಭಿಪ್ರಾಯ ಮೂಡಿಸುವಲ್ಲಿ ಈ ಸಮಾಜಿಕ ತಾಣಗಳು ಮಹತ್ವದ ಪಾತ್ರವಹಿಸುತ್ತಿವೆ. ಇದೇ ಇಂದು ಅತಿ ಹೆಚ್ಚು ಅಪಾಯಕಾರಿ ಆಗುತ್ತಿರುವ ಅಂಶ. ಇಂದು ಸಮಾಜಘಾತುಕ ಶಕ್ತಿಗಳು ಹಾಗೂ ದೇಶದ ಅಖಂಡತೆಗೆ ಧಕ್ಕೆ ತರುವ ಜನರು ಕೂಡ ಈ ಸಮೂಹ ಮಾಧ್ಯಮದ ಮುಖಾಂತರ ಯುನಜನತೆಯಲ್ಲಿ ಸುಳ್ಳು ಸುದ್ದಿ ಹಬ್ಬಿಸುತಿದ್ದಾರೆ. ಇಂದು ನರೆಂದ್ರ ಮೋದಿಯಂತ ವ್ಯಕ್ತಿ ಇಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿರುವುದು ಹಾಗೂ ನಮಗೆ ತಿಳಿಯದೆ ನಮ್ಮ ಮನೆಯವರನ್ನು, ಮಕ್ಕಳನ್ನು ತನ್ನ ಅಭಿಮಾನಿಗಳನ್ನಾಗಿ ಮಾಡಿಕೊಳ್ಳುತ್ತಿರುವುದಕ್ಕೆಲ್ಲ ಕಾರಣ ಈ ಸಮೂಹ ಮಾಧ್ಯಮಗಳೇ. ಇಂದಿನ ಯುವಜನರು ಅತಿ ಹೆಚ್ಚು ಸಮಯ ಫೇಸ್ಮುಕ್ ನಲ್ಲಿ ಕಳೆಯುವುದಷ್ಟೇ ಅಲ್ಲ, ಅದು ಅವರ ಮನಸಲ್ಲಿ ಉಂಟು ಮಾಡುವ ಭ್ರಮೆ ಅವರನ್ನು ಮಾನಸಿಕವಾಗಿ ದುರ್ಬಲರನ್ನಾಗಿ ಮಾಡುತ್ತಿದೆ. ಅವರನ್ನು ಬಳಕೆದಾರ ಸಂಸ್ಕೃತಿಯತ್ತ ಒಯ್ಯುತ್ತ ಅವರ ಸರಳತನ ಹಾಗೂ ಮುಗ್ದತೆಯನ್ನು ಕಸಿದುಕೊಂಡು ಅವರನ್ನು ಆಸೆ ಆಕಾಂಕ್ಷೆಗಳ ಗೂಡನ್ನಾಗಿ ಪರಿವರ್ತಿಸುತ್ತಿದೆ. ಇಂದಿನ ಯುವಜನತೆ ಪತ್ರಿಕೆಗಳ ಓದುತ್ತಿಲ್ಲ, ಆಟವಾಡುತ್ತಿಲ್ಲ, ಪಕ್ಕದ ಮನೆಯವರ ಜೊತೆ ಮಾತನಾಡುವುದಿಲ್ಲ, ಅಷ್ಟೇ ಏಕೆ ಆಕಾಶದಲ್ಲಿ ಕಾಣುವ ಸೂರ್ಯ, ಚಂದ್ರ ನಕ್ಷತ್ರಗಳನ್ನು ನೋಡುವುದಿಲ್ಲ. ಸಿಕ್ಕ ಕೆಲ ಸಮಯದಲ್ಲೂ ಮೊಬೈಲ್ನೊಂದಿಗೆ ಕಳೆಯುತ್ತ ತಮಗೆ ತಿಳಿಯದೇ ಸಮೂಹ ಮಾಧ್ಯಮಗಳಲ್ಲಿ ಕಳೆದುಹೋಗುತಿದ್ದಾರೆ. 

Facebook Cartoons #6 

ಫೇಸ್ಬುಕ್ ನಲ್ಲಿ ಕೆಲವರಂತು ತಮ್ಮ ಸ್ಟೇಟಸ್ ಗಳಿಗೆ ಲೈಕ್ ಮಾಡದಿದ್ರೆ ಪೋನ್ ಮಾಡಿ ಯಾಕೆ ಲೈಕ್ ಮಾಡಿಲ್ಲ ಎಂದು ಕೇಳುವವರಿದ್ದಾರೆ. ಅಲ್ಲಿ ತಮ್ಮ ಸುಪ್ತ ಆಲೋಚನೆಗಳನ್ನು ಹರಿಬಿಟ್ಟು ಎಲ್ಲರಿಂದ ಬೆಂಬಲ ಮತ್ತು ಮೆಚ್ಚುಗೆ ಗಿಟ್ಟಿಸಿ ಬೀಗುವವರಿದ್ದಾರೆ. ಕೆಲವರಂತು ದಿನಕ್ಕೆ ನಾಲ್ಕೈದು ಬಾರಿ ಪ್ರೊಫೈಲ್ ಫೋಟೋ ಬದಲಿಸಿ ಮಾಡೆಲ್ಗಳಂತೆ ಪೋಸು ನೀಡುತ್ತ ವಾಸ್ತವವಾಗಿ ಸಾಧ್ಯವಾಗದ ಮನದ ಬಯಕೆಗಳನ್ನು ಈಡೇರಿಸಿಕೊಳ್ಳುತಿದ್ದಾರೆ. ತಮ್ಮ ಬಗ್ಗೆ ಅತಿಯಾಗಿ ಹೇಳಿಕೊಳ್ಳುವ  ಆತ್ಮರತಿ ಮನಸ್ಥಿತಿಯುಳ್ಳ ಜನಗಳಿದ್ದರೆ ಇನ್ನು ಕೆಲವರಿಗೆ ಒಂಟಿತನ ದೂರ ಮಾಡುವ, ತಮ್ಮ ಬಗ್ಗೆ ಇನ್ನೊಬ್ಬರಿಂದ ಸಿಂಪತಿ ಗಿಟ್ಟಿಸಿಕೊಳ್ಳುವ, ತಮ್ಮ ತಮ್ಮ ಅಜೆಂಡಾಗಳನ್ನು ಪ್ರತಿಪಾದಿಸಲು ಹಾಗೆ ಜನರನ್ನು ಮೋಸಗೊಳಿಸಲು ತಮ್ಮ ಅನೇಕಾನೇಕ ವೇಷಭೂಷಣ ಹಾಗು ಮಾತುಗಾರಿಗೆಗಳನ್ನೆಲ್ಲ ಬಳಸುವ ಎಲ್ಲ ತರದ ಜನರಿದ್ದಾರೆ. ಸಮೂಹ ಮಾಧ್ಯಮವನ್ನು ಬಳಸಿಕೊಂಡು ಅಪರಾಧದ ಕೃತ್ಯಗಳನ್ನು ನಡೆಸುತ್ತಿರುವ ಘಟನೆಗಳನ್ನು ನಾವು ಈಗಾಗಲೇ ಟಿ.ವಿ. ಚಾನಲ್ಗಳಲ್ಲಿ ನೋಡುತಿದ್ದೇವೆ. ಕೆಲವರಂತು ಅಷ್ಟೆಲ್ಲ ವಾಚಾಳಿತನ ತೋರಿಸಿ ಸಿಕ್ಕಾಗ ಮಂಕಾಗಿ ಮಾತನಾಡದೆ ದಂಗಾಗಿರುತ್ತಾರೆ. ನನಗೆ ಒಮ್ಮೊಮ್ಮೆ ಅನ್ನಿಸೋದು ಮುಂದೊಂದು ದಿನ ಪ್ರತಿಯೊಬ್ಬನೂ ಫೇಸ್ಮುಕ್  ಬಳಸಲು ವಾರ್ಷಿಕವಾಗಿ ಒಂದು ಡಾಲರ್ ನೀಡಬೇಕೆಂದು ಕಡ್ಡಾಯ ಮಾಡಿದರೆ ಕಣ್ಣು ಮುಚ್ಚಿ ನೀಡಲು ಜನ ತಯಾರಿದ್ದಾರೆ. ಏನಾದರು ಫೇಸ್ಮುಕ್ ತಾಂತ್ರಿಕ ಕಾರಣಗಳಿಂದ ಒಂದೆರಡು ದಿನ ನಿಂತು ಹೋದರೆ ಸಾವಿರಾರು ಮಂದಿ ಆತ್ಮಹತ್ಯ ಮಾಡಿಕೊಂಡಾರು. ಅಷ್ಟು ಕೆಟ್ಟ ಚಟವಾಗಿ ಇಂದು ಈ ಸಮೂಹ ಮಾಧ್ಯಮಗಳೂ ಯುವಜನರನ್ನು ಆವರಿಸಿವೆ. ಇದನ್ನರಿತೆ ಇಂದು ಎಲ್ಲ ಖಾಸಗೀ ಕಂಪನಿಗಳು, ಸರ್ಕಾರಿ ಸಂಸ್ಥೆಗಳು, ವೃತ್ತಪತ್ರಿಕೆಗಳು, ಟಿ.ವಿ.ಚಾನೆಲ್, ರಾಜಕೀಯ ವ್ಯಕ್ತಿಗಳು, ಲೇಖಕರು ಹಾಗು ಸಿನೆಮಾ ತಾರೆಗಳು  ಕೂಡ ಸಮೂಹ ಮಧ್ಯಮಗಳ ಮೂಲಕ ಯುವಜನರನ್ನು ಸೆಳೆಯಲು ಪ್ರಯತ್ನಿಸುತ್ತಿವೆ. 

ಇಂದು ಯುವಜನರನ್ನು ಸೆಳೆಯುವ ಹಾಗು ಉಚಿತವಾಗಿ ಪ್ರಚಾರಕ್ಕೆ ಬಳಸಿಕೊಳ್ಳುವ ಏಕೈಕ ಮಾಧ್ಯಮ ಇದಾಗಿದೆ. ಇಲ್ಲಿ ಇತರ ಖ್ಯಾತ ಪತ್ರಿಕೆಗಳ ಹಾಗು ಟಿ.ವಿ ಚಾನೆಲ್ ಗಳ ಸುದ್ದಿಗಳ ಜೊತೆಗೆ. ಸುಳ್ಳು ಸುದ್ದಿಗಳು ಯಥೇಚ್ಚವಾಗಿ ಹರಿದಾಡುತ್ತವೆ. ಏಕೆಂದರೆ ಇಲ್ಲಿ ಯಾವುದೇ ರೀತಿಯ ಸೆನ್ಸಾರ್ಶಿಪ್ ಇರೋದಿಲ್ಲ. ಪತ್ರಿಕೆಗಳಲ್ಲಿ ಹಾಗು ಟಿ.ವಿ ಚಾನೆಲ್ ಗಳಿಗಾದರು ತಾವು ಸುದ್ದಿ ಎಂದು ಪ್ರಸಾರ ಮಾಢುವವುಗಳ  ಜವಾಬ್ದಾರಿಯನ್ನು ಒಪ್ಪಿಕೊಳ್ಳಲು ಸಂಪಾದಕನಿರುತ್ತಾನೆ. ಆದರೆ ಸಮೂಹ ಮಾಧ್ಯಮದಲ್ಲಿ ಹರಿದಾಡುವ ಎಷ್ಟೋ ಸುದ್ದಿಗಳಿಗೆ ಅಪ್ಪ ಅಮ್ಮ ಇರೋದಿಲ್ಲ. ಅದು ವೈರಸ್ನ ರೀತಿ ಒಬ್ಬರಿಂದ ಒಬ್ಬರಿಗೆ ಹರಿಸಲ್ಪಡುತ್ತದೆ. ಇದರಿಂದ ತಪ್ಪು ಭಾವನೆ ಅಷ್ಟೆ ಅಲ್ಲ ಸಮುದಾಯಗಳ ನಡುವೆ ದ್ವೇಷ ಭಾವನೆಯನ್ನು ಬಹಳ ಬೇಗ ಹರಡಬಹುದಾಗಿದೆ. ಇತ್ತೀಚೆಗೆ ಉತ್ತರಪ್ರದೇಶದಲ್ಲಿ ನಡೆದ ಕೋಮುಗಲಭೆಯೆ ಇದಕ್ಕೆ ಸಾಕ್ಷಿ. ಈ ಹಿಂದೆಯೂ ಕೂಡ ಈರೀತಿಯ ಘಟನೆಗಳು ನಡೆದಿವೆ ಹಾಗು ಇಂದು ಕೂಡ ನಡೆಯುತ್ತಿವೆ. ಈ ಎಲ್ಲಾ ಕಾರಣಗಳಿಂದಲೇ ಇಂದು ಇಲ್ಲಿ ವ್ಯಕ್ತವಾಗುತ್ತಿರುವ ಅಭಿಪ್ರಾಯಗಳಿಗೆ ಮನ್ನಣೆ ನೀಡಬಾರದು. ಈ ಸಾಮಾಜಿಕ ತಾಣಗಳಲ್ಲಿ ಮೂಡಿಸಲೆತ್ನಿಸುವ ಸಾರ್ನಜನಿಕ ಅಭಿಪ್ರಾಯಕ್ಕಂತು ಕವಡೆ ಕಿಮ್ಮತ್ತು ನೀಡಬಾರದು. ಇದೊಂದು ಸರಕು ಸಂಸ್ಕೃತಿಯ ಬೆಂಬಲಿಸುವ ಹಾಗು ಮಾರುಕಟ್ಟೆ ಉದ್ದೇಶವುಳ್ಳ ಮಾಧ್ಯಮ ಇದಕ್ಕೆ ಯಾವುದೇ ತತ್ತ್ವ ಸಿದ್ದಾಂತಗಳಿರುವುದಿಲ್ಲ.

ಇಂದು ಇದೇ ಸಮುದಾಯ ಮಾಧ್ಯಮ ದುಷ್ಪರಿಣಾಮ ಮಕ್ಕಳ ಮೇಲೆ ಕಾಣಬಹುದು. ಅತಿ ಹೆಚ್ಚು ಮೊಬೈಲ್ ಬಳಕೆ, ವಿಡೀಯೋ ಗೇಮ್ ಚಟ, ರಾತ್ರಿಯಿಡೀ ನಿದ್ದೆಗೆಟ್ಟು ಚಾಟ್ ಮಾಡುವುದು ಮತ್ತು ಏಕಾಗ್ರತೆಯ ಕೊರತೆ ಮತ್ತು ಖಿನ್ನತೆ ಇಂದು ಬಹುತೇಕ ಯುವಜನರನ್ನು ಕಾಡುತ್ತಿರುವುದು. ಆದರೆ ತಮ್ಮ ಈ ಸಮಸ್ಸೆಯನ್ನು ಅವರು ಹೊರಗಡೆ ಹುಡುಕುತಿದ್ದಾರೆ. ಕೇವಲ 15 ವರ್ಷಗಳ ಹಿಂದೆ ಇವುಗಳ ಸಹವಾಸವಿಲ್ಲದೇ ಅವರ ತಂದೆ ತಯಿಗಳು ಎಷ್ಟು ಆರೋಗ್ಯಪೂರ್ಣವಾಗಿ ಬದುಕಿದ್ದರು ಎಂಬುವುದನ್ನು ಅರಿಯುತ್ತಿಲ್ಲ. ಇಂದು ಎಲ್ಲರ ಮನೆಯಲ್ಲಿ ಮೊಬೈಲ್ಗಳಿವೆ. ಅದರಲ್ಲಿ ಮಕ್ಕಳು ಮಾತ್ರ ಫೇಸ್ಬುಕ್ ಬಳಸುತಿದ್ದರೆ ಅವರ ಪೋಷಕರು ಬರೆ ದೂರವಾಣಿಗೆಂದು ಬಳಸುತಿರುತ್ತಾರೆ. ಅವರ ಮಕ್ಕಳು ಈ ಸಮೂಹ ಮಾಧ್ಯಮಗಳಲ್ಲಿ ಏನು ಮಾಡುತ್ತಿರುತ್ತಾರೆ ಅಂತ ಅವರಿಗೆ ತಿಳಿಯುವುದಿಲ್ಲ. ಮುಂದೊಂದು ದಿನ ತಿಳಿಯುವ ಹೊತ್ತಿಗೆ ಮಕ್ಕಳು ಅದರ ಚಟ ಹತ್ತಿಸಿಕೊಂಡಿರುತ್ತಾರೆ. ಧೂಮಪಾನ ಹಾಗು ಮದ್ಯಪಾನ ದೇಹವನ್ನು ಹಾಳುಗೆಡವಿದರೆ ಸಮೂಹ ಮಾಧ್ಯಮಗಳು ಮನಸ್ಸನ್ನು ಹಾಳು ಮಾಡುತ್ತವೆ.

ಹಾಗಾದರೆ ಸಮೂಹ ಮಾಧ್ಯಮಗಳಿಂದ ಕೇವಲ ಕೆಡುಕು ಮಾತ್ರ ಆಗುತ್ತಿದಿಯಾ? ಅದರಿಂದ ಒಳ್ಳೆಯದಾಗುತ್ತಿಲ್ಲವಾ? ಅನ್ನುವ ಪ್ರಶ್ಣೆಗೆ ಅತಿಯಾದರೆ ಅಮೃತವೂ ವಿಷವಾಗುತ್ತೆ ಎನ್ನುವ ಹಿರಿಯರ ಮಾತಿನಲ್ಲೇ ಉತ್ತರವಿದೆ. ನಮ್ಮ ಕುತೂಹಲ ಕರಗಿಸುವ ಕನಸನ್ನು ಕಸಿವ ಹಕ್ಕನ್ನ ಈ ಸಮೂಹ ಮಾಧ್ಯಮಗಳಿಗೆ ನೀಡದಿದ್ದರೆ ಸಾಕು. ಇಂದು ಈ ಸಮೂಹ ಮಾಧ್ಯಮಗಳಲ್ಲಿರುವ ನಮ್ಮ ಫೋಟೋ ಮತ್ತು ಖಾಸಗೀ ಮಾಹಿತಿಗಳನ್ನು ಯಾರು ಬೇಕಾದರೂ ನೋಡಬಹುದಾಗಿದೆ ಮತ್ತು ಪಡೆಯಬಹುದಾಗಿದೆ. ಇವುಗಳ ಮೇಲಿನ ನಿರ್ಬಂಧ ಇನ್ನೂ ಕೂಡ ಸಾಧ್ಯವಾಗಿಲ್ಲ ಆದುದರಿಂದ ನಮ್ಮ ಖಾಸಗೀ ಮಾಹಿತಿಯನ್ನು ಹಂಚಿಕೊಳ್ಳದೇ ಕೇವಲ ಮಾಹಿತಿಗೆ ಬಳಸುವುದಾದರೆ ಚಿಂತೆ ಇಲ್ಲ. ಸಾಮಾಜಿಕ ತಾಣಗಳು ನಮ್ಮ ದಾಸರಾಗಬೇಕೆ ಹೊರತು ನಾವು ಅದರ ದಾಸರಾಗಬಾರದು. ಅಲ್ಲಿ ಸಿಗುವುದು ಕೇವಲ ಮಾಹಿತಿಯ ಕಸವೇ ಹೊರು ಜ್ಞಾನವಲ್ಲ. ಇವು ನಮ್ಮ ಅವಶ್ಯಕತೆಯೂ ಅಲ್ಲ ಅನಿವಾರ್ಯತೆಯೂ ಅಲ್ಲ.

ಹದಿನೈದು ವರುಷಗಳ ಹಿಂದೆ ನಾನು ಜಮೀನಿಗೆ ನೀರು ಹಾಯಿಸಲೆಂದು ಹೊಲಕ್ಕೆ ಹೋದಾಗ ರಾತ್ರಿಯಿಡಿ ನೀರು ಹಾಯಿಸಿ ಹಾಗೆ ಏರಿ ಮೇಲೆ ಮಲಗಿ ನಕ್ಷತ್ರಗಳ ಎಣಿಸುತ್ತಾ ನನ್ನದೇ ಕಲ್ಪನಾಲೋಕದಲ್ಲಿ ವಿಹರಿಸುತ್ತಾ ಎಲ್ಲೋ ದೂರದಿಂದ ಕೇಳಿ ಬರುತ್ತಿದ್ದ ಸಿನೆಮಾ ಹಾಡುಗಳನ್ನು ಕೇಳುತ್ತ ಮಲಗಿರುತಿದ್ದೆ. ನನಗೇ ತಿಳಿಯದ ಹಾಗೆ ನಿದ್ದೆ ಬಂದು ಎಚ್ಚರವಾಗುತಿತ್ತು. ಅದೊಂದು ಏಕಾಂತ ಅನುಭವಿಸುವ ಕ್ಷಣ. ಇಂದು ಆ ಏಕಾಂತ ಇಲ್ಲವಾಗಿದೆ. ಯಾಕೆಂದರೆ ಇಂದು ನಮ್ಮನ್ನು ಏಕಾಂತದಲ್ಲಿರಲು ಈ ಸಮೂಹ ಮಾಧ್ಯಮಗಳು ಬಿಡುತ್ತಿಲ್ಲ. ಏಕೆಂದರೆ ಇದು ಸಾವಿರಾರು ಕೋಟಿ ಡಾಲರ್ಗಳ ಉದ್ಯಮ!


-ಸಮಾಜವಾದಿ ಮಾಸಿಕ ಹೊಸಮನುಷ್ಯ,  ಡಿಸೆಂಬರ್ 2013 ಸಂಚಿಕೆಯಲ್ಲಿ ಪ್ರಕಟವಾದ  ಲೇಖನ

-ಬಿ. ರಾಜೇಶ್, ದಿ ಹಿಂದೂ ದಿನಪತ್ರಿಕೆಯ ಹಿರಿಯ ಜಾಹಿರಾತು ಅಧಿಕಾರಿ