Tuesday 25 February 2014

ಪ್ರೇಮ

ಖಲೀಲ್ ಗಿಬ್ರಾನ್
ಅನುವಾದ: ಡಾ.ಎಚ್.ಎಸ್ ಅನುಪಮಾ
 
ಅವರು ಹೇಳುತ್ತಾರೆ, ನರಿ ಮತ್ತು ಹೆಗ್ಗಣ
ಒಂದೇ ತೊರೆಯಿಂದ ನೀರು ಕುಡಿಯುತ್ತವೆ
ಎಲ್ಲಿ ಸಿಂಹವೂ ಬಂದು ನೀರು ಕುಡಿಯುವುದೋ ಅಲ್ಲಿ..

ಅವರು ಹೇಳುತ್ತಾರೆ, ಹದ್ದು ಮತ್ತು ರಣಹದ್ದು 
ಸತ್ತ ಪ್ರಾಣಿಯ ಅದೇ ಮಾಂಸದಲ್ಲಿ ಕೊಕ್ಕು ತೂರಿಸುತ್ತವೆ
ಆದರೂ ಸತ್ತ ವಸ್ತುವಿನೆದುರಿಗೆ
ಒಂದರೊಡನೊಂದು ಶಾಂತಿಯಿಂದಿವೆ..

ಯಾವ ದೈವೀ ಹಸ್ತ 
ನನ್ನ ಬಯಕೆಗಳಿಗೆ ಲಗಾಮು ಹಾಕಿದೆಯೋ,
ನನ್ನ ಹಸಿವು, ದಾಹಗಳನ್ನು 
ಘನತೆ ಮತ್ತು ಹೆಮ್ಮೆಯನ್ನಾಗಿಸಿದೆಯೋ,
ಓ, ಅಂಥ ಪ್ರೇಮವೇ,
ನನ್ನೊಳಗಿನ ಅಚಲ ಮತ್ತು ಬಲಶಾಲಿ
ರೊಟ್ಟಿ ತಿಂದು ವೈನ್ ಕುಡಿದು
ನನ್ನೊಳಗಿನ ದುರ್ಬಲನನ್ನು ಆಮಿಷಗೊಳಿಸದೇ ಇರಲಿ.
ಅದಕ್ಕಿಂತ ನಾ ಹಸಿದು ಉಪವಾಸ ಬೀಳಲಿ, 
ನನ್ನ ಹೃದಯ ದಾಹದಿಂದ ಒಣಗಲಿ,
ನಾ ಮರಣಿಸಿ ನಾಶವಾಗಲಿ,
ಅದಕ್ಕೂ ಮುನ್ನ ನಾನು ಕೈ ಚಾಚುತ್ತೇನೆ
ನೀನು ತುಂಬಿಸದ ಬಟ್ಟಲಿಗೆ,
ನೀನು ಹರಸಿ ನೀಡದ ಆ ಪಾತ್ರೆಗೆ.

No comments:

Post a Comment