Saturday 28 September 2013



ಒ೦ದು ಜರ್ಮನ್ ಯುದ್ಧ ಮೂಲದಿ೦ದ:
ಪ್ರಸಿದ್ಧ ಜರ್ಮನ್ ನಾಟಕಕಾರ ಮತ್ತು ಕವಿ ಬರ್ಟೋಲ್ಟ್ ಬ್ರೆಕ್ಟ್
ಫ್ರ೦ ಎ ಜರ್ಮನ್ ವಾರ್ ಪ್ರೈಮರ್ ಎ೦ಬ ಕಾವ್ಯ ಗುಚ್ಛ


 




೧.
 
ಘನತೆವೆತ್ತ ಜನ 

ಊಟದ ಬಗ್ಗೆ ಮಾತನಾಡುವುದು
ತಮ್ಮ ಘನತೆಗೆ ಕು೦ದೆ೦ದು ತಿಳಿಯುತ್ತಾರೆ
ಕಾರಣ:
ಅವರು ಹೊಟ್ಟೆ ತು೦ಬಾ ಉ೦ಡಿದ್ದಾರೆ.

ಕೀಳು ಜನ ಹಾಗಲ್ಲ,
ಒಳ್ಳೆಯ ಊಟವನ್ನೂ ಮಾಡದೆ
ಈ ಭೂಮಿಯನ್ನು ತ್ಯಜಿಸುತ್ತಾರೆ

ತಾವೆಲ್ಲಿ೦ದ ಬ೦ದದ್ದು,
ಹೋಗುತ್ತಿರುವುದೆಲ್ಲಿಗೆ
ಎ೦ಬ ಚಿ೦ತನೆಗೆ ತೊಡಗುವ ಮೊದಲೇ
ಸು೦ದರ ಸ೦ಜೆಯಲ್ಲವರು
ದಣಿದು ಬಿಟ್ಟಿರುತ್ತಾರೆ.

ಅವರ ಕಾಲ ಮುಗಿದರೂ
ಅವರಿನ್ನೂ ನೋಡಿಲ್ಲ
ಪರ್ವತಗಳನ್ನ, ಬೃಹತ್ ಸಾಗರವನ್ನ

ಕೀಳು ಜನ ಕೀಳೆ೦ದರೇನೆ೦ದು
ಯೋಚಿಸದಿದ್ದರೆ
ಅವರೆ೦ದಿಗೂ ಮೇಲೇಳುವುದಿಲ್ಲ.


ಹಸಿದವರ ರೊಟ್ಟಿ ಕಸಿದು
ತಿ೦ದು ಮುಗಿಸಿಯಾಗಿದೆ.
ಮಾ೦ಸ ಅಪರಿಚಿತವಾಗಿದೆ
ದುಡಿವ ಮ೦ದಿಯ ಸುರಿವ ಬೆವರು
ಅನುಪಯುಕ್ತವಾಗಿದೆ.
ಹೆಮ್ಮೆಯ ತೋಟಗಳು
ನೆಲಕ್ಕುರುಳಿವೆ.
ಫ್ಯಾಕ್ಟರಿಯ ಹೊಗೆ ಕೊಳವೆಗಳಿ೦ದ
ಹೊಗೆ ಮೇಲೇರುತ್ತಿದೆ.


ಮನೆಗೆ ಬಣ್ಣ ಬಳಿಯುವವ
ಬರಲಿರುವ ಮಹಾನ್ ಕಾಲದ ಬಗ್ಗೆ ಮಾತನಾಡುತ್ತಾನೆ.
ಕಾಡುಗಳು ಇ೦ದಿಗೂ ಬೆಳೆಯುತ್ತವೆ
ಹೊಲಗಳು ಇ೦ದಿಗೂ ಪೈರು ತೂಗುತ್ತವೆ
ನಗರಗಳು ಇ೦ದಿಗೂ ಎದ್ದು ನಿಲ್ಲುತ್ತವೆ
ಜನಗಳು ಇ೦ದಿಗೂ ಉಸಿರಾಡುತ್ತಾರೆ.


ಕ್ಯಾಲೆ೦ಡರಿನಲ್ಲಿ ಆ ದಿನ
ಇನ್ನೂ ಕಾಣಿಸಿಲ್ಲ.
ಪ್ರತೀ ತಿ೦ಗಳು, ಪ್ರತೀ ದಿನ
ಖಾಲಿಯಾಗಿಯೇ ಉಳಿದಿದೆ ಇನ್ನೂ.
ಆ ದಿನಗಳಲ್ಲೊ೦ದು ದಿನದ ಮೇಲೆ
ಕ್ರಾಸ್ ಮಾರ್ಕ್ ಬೀಳುತ್ತದೆ.


ಕಾರ್ಮಿಕರು ಬೊಬ್ಬಿಡುತ್ತಾರೆ ರೊಟ್ಟಿಗಾಗಿ
ವ್ಯಾಪಾರಿಗಳುಬೊಬ್ಬಿಡುತ್ತಾರೆ ಮಾರುಕಟ್ಟೆಗಳಿಗಾಗಿ.
ನಿರುದ್ಯೋಗಿಗಳು ಹಸಿದಿದ್ದರು
ಉದ್ಯೋಗಿಗಳೂ ಈಗ ಹಸಿದಿದ್ದಾರೆ.
ಕಟ್ಟಿ ಕುಳಿತ ಕೈಗಳೀಗ ಮತ್ತೆ ಕಾರ್ಯ ನಿರತವಾಗಿವೆ
ಅವುಗಳೀಗ ಚಿಪ್ಪುಗಳನ್ನು ನಿರ್ಮಿಸುತ್ತಿವೆ.


ಊಟದ ಟೇಬಲ್ಲಿನಿ೦ದ ಮಾ೦ಸ ತೆಗೆದುಕೊಳ್ಳುವವರು
ಸ೦ತೃಪ್ತಿಯ ಬಗ್ಗೆ ಬೋಧಿಸುತ್ತಾರೆ.
ತಮ್ಮ ಪಾಲು ಇಷ್ಟೇ ಎ೦ದು ನಿಗದಿ ಪಡಿಸಲ್ಪಟ್ಟವರು
ತ್ಯಾಗವನ್ನು ಕೇಳುತ್ತಾರೆ.
ಹೊಟ್ಟೆ ತು೦ಬಾ ತಿ೦ದವರು ಹಸಿದವರಿಗೆ
ಬರಲಿರುವ ಅದ್ಭುತ ದಿನಗಳ ಬಗ್ಗೆ ಹೇಳುತ್ತಾರೆ.
ದೇಶವನ್ನು ಅಧೋ ಗತಿಗೆ ತಳ್ಳಿದವರು
ಸಾಧಾರಣ ಜನರಿಗೆ
ಆಡಳಿತ ನಡೆಸುವುದೆಷ್ಟು ಕಷ್ಟವೆ೦ದು ಹೇಳುತ್ತಾರೆ.









ನಾಯಕರು ಶಾ೦ತಿಯ ಬಗ್ಗೆ ಮಾತನಾಡಿದಾಗ
ಯುಧ್ಧ ಬರುತ್ತಿದೆಯೆ೦ದು
ಜನರಿಗೆ ಗೊತ್ತು.
ನಾಯಕರು ಯುಧ್ಧವನ್ನು ಶಪಿಸಿದಾಗ
ಅದಾಗಲೇ ಯುದ್ಧಕ್ಕೆ ಚಾಲನೆ ನೀಡುವ
ಆಜ್ನೆ ಹೊರಬಿದ್ದಿರುತ್ತದೆ.


ಅಧಿಕಾರಸ್ಥರು ಹೇಳುತ್ತಾರೆ
ಶಾ೦ತಿ ಮತ್ತು ಯುದ್ಧ
ಬೇರೆ ಬೇರೆಯೆ೦ದು.
ಆದರೆ ಅವರ ಶಾ೦ತಿ ಮತ್ತು ಅವರ ಯುದ್ಧ
ಗಾಳಿ ಮತ್ತು ಬಿರುಗಾಳಿಯ ಹಾಗೆ.

ತಾಯ ಗರ್ಭದಿ೦ದ ಹೊರಬ೦ದು
ಬೆಳೆವ ಮಗನ೦ತೆ
ಯುದ್ಧ ಬೆಳೆಯುತ್ತದೆ
ಅವರ ಶಾ೦ತಿಯಿ೦ದ.

ಅವಳ ಕರಾಳ ರೂಪ
ಅವನದಾಗಿರುತ್ತದೆ.

ಅಳಿದುಳಿದ ಅವರ ಶಾ೦ತಿಯನ್ನೆಲ್ಲ
ಅವರ ಯುದ್ಧ ಕೊಲ್ಲುತ್ತದೆ.





ಗೋಡೆಯ ಮೇಲೆ ಸೀಮೆ ಸುಣ್ಣದಿ೦ದ ಬರೆಯಲಾಗಿದೆ:
"ಅವರಿಗೆ ಯುದ್ಧ ಬೇಕು".
ಇದನ್ನು ಬರೆದವನು
ಅದಾಗಲೇ ಬಿದ್ದು ಹೊಗಿದ್ದಾನೆ!

೧೦

ಅಧಿಕಾರಸ್ಥರು ಹೇಳುತ್ತಾರೆ:
ಇದು ವೈಭವದ ದಾರಿ
ಕೆಳಗಿನವರು ಹೇಳುತ್ತಾರೆ:
ಇದು ಗೋರಿಗೆ ಹಾದಿ.

೧೧ 

ಬರುತ್ತಿರುವ ಈ ಯುದ್ಧ
ಮೊದಲನೆಯದೇನಲ್ಲ.
ಇದಕ್ಕೂ ಮೊದಲು
ಹಲವು ಯುದ್ಧಗಳು ನಡೆದದ್ದು೦ಟು.
ಕಳೆದ ಸಲ ಯುದ್ಧ ಕೊನೆಗೊ೦ಡಾಗ
ಅಲ್ಲಿದ್ದರು ಗೆದ್ದವರು ಮತ್ತು ಸೋತವರು.
ಸೋತವರಲ್ಲಿ ಗರೀಬರು ಹಸಿದು ಕ೦ಗಾಲಾದರು
ಗೆದ್ದವರಲ್ಲೂ ಗರೀಬರು ಹಸಿದು ಕ೦ಗಾಲಾದರು.

೧೨
ಅಧಿಕಾರಸ್ಥರು ಹೇಳುತ್ತಾರೆ:
ಸೈನ್ಯದಲ್ಲಿ ಭಿನ್ನ ಬೇಧಗಳಿರದ ಸ್ನೆಹ ಆಳುತ್ತದೆಯೆ೦ದು.
ಅಡಿಗೆ ಮನೆಯಲ್ಲಿ
ಇದರ ಸತ್ಯ ಕಾಣ ಬಹುದು.
ಅವರೆಲ್ಲರ ಹೃದಯಗಳಲ್ಲಿ ಒ೦ದೇ ರೀತಿಯ
ಆತ್ಮಬಲವಿರಬೇಕು. ಆದರೆ
ಅವರ ತಟ್ಟೆಗಳಲ್ಲಿವೆ
ಎರಡು ವಿಭಿನ್ನ ತಿನಿಸುಗಳು!

೧೩

ಸೈನ್ಯದ ಮುನ್ನಡೆಯ ವಿಚಾರ ಬ೦ದಾಗ
ಹಲವರಿಗೆ ಗೊತ್ತಿಲ್ಲ
ಅವರ ಶತ್ರು ಅವರ ತಲೆಯೆಡೆಗೆ ದಾಪುಗಾಲಿಕ್ಕುತ್ತಿದ್ದಾನೆ೦ದು.
ಅವರಿಗೆ ಆಜ್ನೆ ಕೊಡುವ ಧ್ವನಿ
ಅವರ ಶತೃವಿನದು ಮತ್ತು
ಶತೃವಿನ ಬಗ್ಗೆ ಮಾತಾಡುತ್ತಿರುವವನೇ
ಅವರ ಶತ್ರುವೆ೦ದು.

೧೪

ಇದೀಗ ರಾತ್ರಿ,
ಮದುವೆಯಾದ ಹೊಸ ಜೋಡಿ
ಹಾಸಿಗೆಯಲ್ಲಿ ಮಲಗಿದ್ದಾರೆ.
ಆ ಯುವತಿ ಗರ್ಭದಲ್ಲಿ
ಅನಾಥ ಶಿಶುಗಳನ್ನು ಧರಿಸುತ್ತಾಳೆ.



ಅನುವಾದ: ರಮೇಶ್ ಮೇಗರವಳ್ಳಿ



೧೫


ಜನರಲ್
ಜನರಲ್,
ಜನರಲ್,
ಆಹಾ! ನಿಮ್ಮ ಟ್ಯಾಂಕರ್! ತುಂಬ ಶಕ್ತಿಶಾಲಿ ವಾಹನ.
ಅದು ಕಾಡುಮೇಡುಗಳ ನುಚ್ಚುನೂರು ಮಾಡಬಲ್ಲದು.
ನೂರಾರು ಜನರ ಹಿಂಡಿ ಹಿಸುಕಬಹುದು.
ಆದರೆ ಅದರದ್ದು ಒಂದೇ ಕೊರತೆ:
ಅದಕೊಬ್ಬ ಡ್ರೈವರ್ ಬೇಕು!


ಜನರಲ್,
ಓಹ್! ನಿಮ್ಮ ಬಾಂಬರ್ ಎಷ್ಟು ಶಕ್ತಿಶಾಲಿ!
ಬಿರುಗಾಳಿಗಿಂತ ವೇಗವಾಗಿ ಓಡಬಲ್ಲದು
ಆನೆಗಿಂತ ಹೆಚ್ಚು ಭಾರ ಹೊತ್ತೊಯ್ಯಬಲ್ಲದು,
ಆದರೆ ಅದರದ್ದು ಒಂದೇ ಲೋಪ,
ಅದಕ್ಕೊಬ್ಬ ಮೆಕ್ಯಾನಿಕ್ ಬೇಕು.


ಜನರಲ್,
ಈ ಮನುಷ್ಯ ಇದ್ದಾನಲ್ಲ, ತುಂಬ ಪ್ರಯೋಜನಕಾರಿ.
ಆತ ಹಾರಬಲ್ಲ, ಕೊಲ್ಲ ಬಲ್ಲ.
ಆದರೆ ಅವನದ್ದು ಒಂದೇ ಕೊರತೆ,
ಅವನು ಯೋಚಿಸಲೂ ಬಲ್ಲ.’

ಅನುವಾದ: ಡಾ.ಎಚ್.ಎಸ್ ಅನುಪಮಾ

Friday 27 September 2013

ಮೂರು ಬಸೂ ದ್ವಿಪದಿಗಳು, ಕೆಂಚನೂರಿನ ಹನಿಗಳು...

ಬಸೂ
Basavaraj Sulibhavi

ಬೆಳದಿಂಗಳ ಬಾಯಿ
ಸೂಸುತ್ತಿದೆ ಕತ್ತಲ ವಾಸನೆ.



ಅರ್ಥವಾಗುವುದೆಂದರೆ ಇಷ್ಟೇ
ನೀ ಮಾತನಾಡುವಾಗ ನಾ ಮೌನವಾಗಿರುವುದು ಅಥವಾ..



ಕವಿತೆಗೆ ಸಾವು ಇರುವುದು ಹೌದಾದರೆ
ಕವಿತೆ ಸಾಯುವ ಕಾಲದಲಿ ಮನುಷ್ಯ ಅಳಲು ಎರಡು ಹನಿ ಕಣ್ಣೀರು ಉಳಿಸಿಕೊಂಡಿರುವುದಿಲ್ಲ.

***






ಶಂಕರ ದೇವಾಡಿಗ ಕೆಂಚನೂರು

Shankar Devadiga Kenchanur


ನೆರೆದ ಸಂತೆಯಲ್ಲಿ 
ದಿಕ್ಕು ತಪ್ಪಿದ ಮಗು .



 ಜಾತ್ರೆ ಮುಗಿದ ಮರುದಿನದ ಬಯಲು.





ಹಲವು ಬೆಳಗುವ ಹಣತೆಯ ನಡುವೆ 
ಒಂದು ಆರಿದ ಹಣತೆ.






***




























Wednesday 25 September 2013

ಸಾಲುಗಳು


ಹರಿಯುವ,
ತುಂಬಿಕೊಳ್ಳುವ
ಭರವಸೆ
ಅಂತರ್ಜಲ-
ವಿರುವವರೆಗೆ...


 
.

ಕನ್ನಡಿಗೆ ಕುಕ್ಕಿ ಕುಕ್ಕಿ
ಹಕ್ಕಿಯ ಭ್ರಮೆ ಹರಿಯಲಿಲ್ಲ
ಕಣ್ಣು ಕುರುಡಾಯಿತು.






ಅಜ್ಜಿ
ಸಿಕ್ಕಿತೊ ಬಿಟ್ಟಿತೊ
ಮನೆಯಲ್ಲಿ
ಕಳೆದಿದ್ದು
ಬಯಲಲ್ಲಿ ಹುಡುಕಿದಳಲ್ಲ
ಮೊಮ್ಮಗಳು
ಈಗ
ಸಿಕ್ಕಿತು ಎನ್ನುತ್ತಿದ್ದಾಳೆ.


 




ಕಿಟಕಿ ಸೀಳಿನಲ್ಲಿ
ಕಾಣಿಸುವ ಬಯಲು
ಮಿಥ್ಯೆ
ಎನ್ನಲು
ಮನಸ್ಸು
ಒಪ್ಪುತ್ತಿಲ್ಲ. 


 




ಕವಿ
ದೀಪ, ಬೆಳಕು
ಗಂಧಕ್ಕೆ
ಪದೇ ಪದೇ
ತಿರುಗಿಕೊಳ್ಳುವಂತೆ
ನನಗೆ
ಗದ್ದೆ ಹಸಿರಿನ
ಗೀಳಂತೆ!


 




ದೊರಗು ನಾಲಿಗೆ
ಗಾಯ ನೆಕ್ಕುವ
ನೋವ
ಗುಣವಾಗುವ ಭರವಸೆ
ನುಂಗಿತು.


https://fbcdn-sphotos-h-a.akamaihd.net/hphotos-ak-prn2/954679_448106761974528_1901270689_n.jpg


ಬಯಲಲ್ಲಿ
ಬೆತ್ತಲಾದಾಗ
ಅನುಭಾವದ
ಬಿತ್ತ
ತೇವ ಪಡೆಯುತ್ತೆ.

(ಪ್ರಸಾದ್ ವಿ ಮೂರ್ತಿಯವರ ಸಾಲುಗಳ ನೆನೆಯುತ್ತ...)

 
 


ಅಸಂಖ್ಯ
ಸಲ
ತಪ್ಪುಮಾಡಿದ
ಆಡಂ ಮತ್ತು ಈವರು
ತಪ್ಪಿಸಿಕೊಂಡರು
ಪತ್ತೆ ಪೆರೇಡು
ನಡೆಯಿತು
ತಪ್ಪುಗಳೆಲ್ಲ
ಒಂದೇ ತರ ಕಂಡರು
ಹೊಟ್ಟೆಯಲ್ಲಿ
ಹೊಕ್ಕಳರಳಿರದ
ಇಬ್ಬರನ್ನು ಬಿಟ್ಟು!

 


ಅಡುಗೆಗೆ ನೆನೆಹಾಕಿದರೂ
ಮೊಳೆಯುವ
ಕಾಳಿನ
ಮುಗ್ಧತೆ-
ಗೆ
ಮನುಷ್ಯನ
ಜಾಣತನ-
ಕ್ಕೆ
ಶರಣು.

 



ಪ್ರಾಣವಾಯು ಹೀರಿ
ಧಗಧಗಿಸಿ ಉರಿದು
ಬೂದಿಯಾಗಿ
ತೂರಿಹೋಗುವ
ಉಮೇದಿಗೆ
ಉಸಿರುಗಟ್ಟಿ
ಗುರುತಿನ
ಗೆರೆ ಚುಕ್ಕೆ ಮೂಡಿಸುವ
ಇದ್ದಿಲು ಚೂರಾಯಿತು.


 




ಅಮ್ಮ ಕೊಟ್ಟ ರುಪಾಯಿ
ದಾರಿಯಲ್ಲಿ
ಕಳೆದು ಹೋಯಿತು
ಮುಂದಕ್ಕೊ
ಹಿಂದಕ್ಕೊ
ಅಂತ
ಯೋಚಿಸುವುದರಲ್ಲಿ
ಜಾತ್ರೆ
ಬಂದೇ ಬಿಟ್ಟಿತಲ್ಲ!


 




ಕತ್ತಲಲ್ಲೂ
ಓದಲಾಗುವ ಬ್ರೈಲ್ ಬರುವುದಿಲ್ಲ
ಸನ್ನೆ ಭಾಷೆ ಅರ್ಥವಾಗುವುದಿಲ್ಲ
ಎಷ್ಟೋ ಜನ ಸ್ಪಷ್ಟವಾಗಿ
ಮಾತಾಡಿದರೂ
ಉತ್ತರಿಸಲು ಬರುವುದಿಲ್ಲ
ನಾನೂ
ಅಂಗವಿಕಲ.

-ಆಧಾರ

 


***











































 

Tuesday 24 September 2013

ತಿನ್ನಬಾರದ ಹಣ್ಣು ತಿಂದಿದೇವೆ ನಾವು

ಚೇತನಾ ತೀರ್ಥಳ್ಳಿ 



ಬಾಯಿ ಒರೆಸಿಕೋ
ನೀರು ಕುಡಿದುಬಿಡು
ರುಚಿ ನಾಲಗೆಯಗಲಿ
ತೊಲಗಿಹೋಯ್ತೋ ನೋಡು.
ತಿನ್ನಬಾರದ ಹಣ್ಣು
ತಿಂದಿದೇವೆ ನಾವು.

ಮೊದಲಿಂದಲೂ ಹಾಗೇನೇ
ದೇವರೆಂಬ ಅಪ್ಪ
ತೋಟದಲಿ ಗಿಡ ನೆಟ್ಟು
ಹೂಬಿಟ್ಟು ಹಣ್ಣಿಟ್ಟು
ತಿನ್ನಬೇಡಿರೆಂದ.
ಆಗಿಂದಲು ಹಿಗೇನೇ
ತಿನ್ನಬಾರದ ಹಣ್ಣು
ತಿಂದಿದೇವೆ ನಾವು.




ಪಾಪವೆಂದರೆ ಅಷ್ಟೇನೆ
ಅಪ್ಪನ ಮಾತು ಮುರಿಯೋದು
ಅದಕ್ಕವನು ಉರಿಯೋದು
ಪಾಪವೆಂದರೆ ಅಷ್ಟೇನೆ
ಚಿನ್ನವಾದರು ಪಂಜರ
ಹೊರೆಯೆಂದು ಅರಿಯೋದು.
ತಿನ್ನಬಾರದ ಹಣ್ಣನ್ನೆ
ಪಟ್ಟು ಹಿಡಿದು ತಿನ್ನೋದು.

ಅಪ್ಪನಹಂಕಾರ ಹಣ್ಣು
ತಿಳಿವ ತಿರುಳು ಮರದಲಿಟ್ಟ
ಗುಟ್ಟು ಹೇಳೋ ಹಾವು ಬಿಟ್ಟ
ತನ್ನ ಮಾತು ಮೀರೋದಿಲ್ಲ
ಶಾಪ ಭಯವ ದಾಟೋದಿಲ್ಲ
ಅನ್ನೋ ನೆಚ್ಚಿಕೆಯವನ ಮೀಸೆಗೆ
ಮಣ್ಣು ಮುಟ್ಟಿಸಿ ನೆಲವ ಮೆಟ್ಟಿ
ಗೆದ್ದಿದೇವೆ ನಾವು.
ತಿನ್ನಬಾರದ ತಿಳಿವ ಹಣ್ಣು
ಮರಳಿ ಮತ್ತೆ ಕದ್ದು ಕದ್ದು
ತಿಂದಿದೇವೆ ನಾವು.


***


ನೆನಪು






ರಾತ್ರಿ ಇಡೀ

ಹಗಲು ನೆಲಕ್ಕಿಟ್ಟ

ಬಿತ್ತದ್ದೆ ಕನಸು

ಬೆಳಗಾಗಿದ್ದೆ

ಓಡಿ ಹೋಗಿ ನೋಡಿ

ನಿರಾಶೆ

ದಿನವೂ ಇದೇ ಕತೆ

ತಹತಹಿಕೆಗೆ

ಪಕ್ಕಾಗಿ ಬಿಟ್ಟಿತ್ತು

ಮನಸ್ಸು

ಗೊತ್ತಿರಲಿಲ್ಲವೆ

ಮೊಳೆಯಲು

ನಾಕೈದು ದಿನವಾದರೂ

ಬೇಕೆಂಬ

ನಿಜ?



ಅಂತೂ

ಆ ದಿನ ಬಂದೇ ಬಂತಲ್ಲ

ಬೇರನಿಳಿಸಿ

ಮತ್ತೆ ಬೀಜ ಆಕಾಶಕೆ ಜಿಗಿದ

ಕುಕ್ಕರಗಾಲಲ್ಲಿ ಕೂತು

ಮೈ ಮರೆತ ದಿನ

ಈಗೇಕಿಲ್ಲವೊ

ಎಂದು

ಗೊಣಗುತ್ತಿರುವಾಗ

ಭೂಮಿ ಸೇರದ

ಬೀಜ ನಕ್ಕಿತು.

***

Sunday 22 September 2013

ಜ್ಞಾನೋದಯ


 Photo: ಜ್ಞಾನೋದಯ

ಅವಧಿ
ಮುಗಿವವರೆಗೆ
ಇಡೀ ಹೊತ್ತು
ಧೇನಿಸಿ
ಯಾವ ಪುಸ್ತಕ
ಯಾವ ಪುಟದ ಚಡಿ
ಎಂದೆಲ್ಲ
ಕಂಪಿಸುತ್ತ
ಹುಡುಕಿ
ಹೋ! ಮರಿಹಾಕಿದೆ
ನೋಡು ಬಾ
ಎಂದು ಕರೆದೆ
ಎಲ್ಲಾ ಬಲ್ಲ
ವಿಶ್ವಾಸದ ನಡಿಗೆಯಲ್ಲಿ
ಬಂದವಳು
ಕಣ್ಣರಳಿಸಿ ನೋಡಿ
ಬುದ್ಧನ ನಗೆಯಲ್ಲಿ
ಅಂದಳು-
ನೀನಿಟ್ಟಿದ್ದೇ
ಎರಡು ಗರಿಯಲ್ಲವೇ?
ಜ್ಙಾನೋದಯವಾಯಿತು.

ಅವಧಿ
ಮುಗಿವವರೆಗೆ
ಇಡೀ ಹೊತ್ತು
ಧೇನಿಸಿ
ಯಾವ ಪುಸ್ತಕ
ಯಾವ ಪುಟದ ಚಡಿ
ಎಂದೆಲ್ಲ
ಕಂಪಿಸುತ್ತ
ಹುಡುಕಿ
ಹೋ! ಮರಿಹಾಕಿದೆ
ನೋಡು ಬಾ
ಎಂದು ಕರೆದೆ
ಎಲ್ಲಾ ಬಲ್ಲ
ವಿಶ್ವಾಸದ ನಡಿಗೆಯಲ್ಲಿ
ಬಂದವಳು
ಕಣ್ಣರಳಿಸಿ ನೋಡಿ
ಬುದ್ಧನ ನಗೆಯಲ್ಲಿ
ಅಂದಳು-
ನೀನಿಟ್ಟಿದ್ದೇ
ಎರಡು ಗರಿಯಲ್ಲವೇ?
ಜ್ಙಾನೋದಯವಾಯಿತು.


***

Saturday 21 September 2013


ಬಸೂ


ನಿನ್ನ ಹುಡುಕುವ ಜಾಗ ನಾನಾಗಿಯೇ ಬದಲಿಸಿದೆ
ಬಿದ್ದುಹೋಗುವ ಇಮಾರುತುಗಳಲಿ ದೇವರೇನು ಮನುಷ್ಯರೂ ಸಿಗುವುದಿಲ್ಲ.


 Photo: ನಿನ್ನ ಹುಡುಕುವ ಜಾಗ ನಾನಾಗಿಯೇ ಬದಲಿಸಿದೆ
ಬಿದ್ದುಹೋಗುವ ಇಮಾರುತುಗಳಲಿ ದೇವರೇನು ಮನುಷ್ಯರೂ ಸಿಗುವುದಿಲ್ಲ.

-ಬಸೂ







ಅಂಗಳದ ರಂಗೋಲಿ ಅಳಿಸಿಹೋಗುವುದನು ಯಾರು ಗಮನಿಸುತ್ತಾರೆ
ಎಲ್ಲರ ಮನೆಗಳಲಿ ನಾಳೆ ಹಾಕುವ ಚಂದದ ರಂಗೋಲಿ ಯೋಚನೆ ಅಷ್ಟೇ.


Photo: ಅಂಗಳದ ರಂಗೋಲಿ ಅಳಿಸಿಹೋಗುವುದನು ಯಾರು ಗಮನಿಸುತ್ತಾರೆ
ಎಲ್ಲರ ಮನೆಗಳಲಿ ನಾಳೆ ಹಾಕುವ ಚಂದದ ರಂಗೋಲಿ ಯೋಚನೆ ಅಷ್ಟೇ.

-ಬಸೂ


  

ಚಿದಂಬರ್ ನರೇಂದ್ರ

ಬೇಸಿಗೆಯ ರಾತ್ರಿ,
ನಕ್ಷತ್ರಗಳ ನಡುವೆಯೂ
ಏನೋ ಗುಸುಗುಸು...



 Photo: ಬೇಸಿಗೆಯ ರಾತ್ರಿ,
ನಕ್ಷತ್ರಗಳ ನಡುವೆಯೂ
ಏನೋ ಗುಸುಗುಸು...

-ಅನು: ಚಿದಂಬರ್ ನರೇಂದ್ರ


ವಸಂತದಲ್ಲಿ ಅತಿವೃಷ್ಟಿ
ಹೊಳೆ, ಹಳ್ಳ
ಎಲ್ಲ ಒಂದಾಗಿಬಿಟ್ಟಿವೆ.



 Photo: ವಸಂತದಲ್ಲಿ ಅತಿವೃಷ್ಟಿ
ಹೊಳೆ, ಹಳ್ಳ
ಎಲ್ಲ ಒಂದಾಗಿಬಿಟ್ಟಿವೆ.

-ಅನು: ಚಿದಂಬರ್ ನರೇಂದ್ರ
 ಬೇಸಿಗೆಯ ರಾತ್ರಿ,
ಶಂಕರ ದೇವಾಡಿಗ ಕೆಂಚನೂರ

ನಂಬಿ ಮಲಗದಿರು ಜೋಗಿ
ಊರಾಚೆಯ ಅಗಸೆ ಬಾಗಿಲಲ್ಲಿ
ಅಸಹನೆಯೆಂಬುದು ಧರ್ಮವಾಗಿರುವ ಊರುಗಳಿವೆ ಇಲ್ಲಿ.




 Photo: ನಂಬಿ ಮಲಗದಿರು ಜೋಗಿ 
ಊರಾಚೆಯ ಅಗಸೆ ಬಾಗಿಲಲ್ಲಿ
ಅಸಹನೆಯೆಂಬುದು ಧರ್ಮವಾಗಿರುವ ಊರುಗಳಿವೆ ಇಲ್ಲಿ.

-ಕೆಂಚನೂರಿನವ



 

Friday 20 September 2013

ಅರಬ್ ಜಗತ್ತಿನ' ಹೆಣ್ಣು ಮಕ್ಕಳ ಕವಿತೆಗಳ ಅನುವಾದ ಫ್ರಂಚ್ ಮತ್ತು ಇಂಗ್ಲಿಶ್ ಭಾಷೆಯಿಂದ

-ಎಂ.ಆರ್. ಕಮಲಾ

Metikurke Ramaswamy Kamala

ಡಿ ಎಚ್ ಮೆಲ್ಹೇಮ್ ಳ ಕವಿತೆ


 
ಫ್ರೆಂಚರು ಹೇಳುತ್ತಾರೆ:
ಲೆಬನೀಸ್ ಯಾರಿಗೆ ಗೊತ್ತು?
ಅಥವಾ ಸಿರಿಯನ್? (ಸರ್ಬಿಯನ್? ಸೈಬೀರಿಯನ್?)
ಸಾಮಂತನಿಗೆಂದು
ಸಾಮ್ರಾಜ್ಯಶಾಹಿ ಪ್ರಿಯ

ಇರಬಹುದು
ಫಿನಿಶಿಯನ್ನರಿಂದ ಬಂದ
ನಿನ್ನದೆ ಗುರು ಪರಂಪರೆ,
ಸಂಸ್ಕೃತಿ, ವೈದ್ಯರು ಇತ್ಯಾದಿ

ಆದರೆ,
ಇಮಿಗ್ರೇಶನ್ ಅಧಿಕಾರಿಗಳು
ನೆರೆ ಹೊರೆಯವರು
ಒಡೆಯರು
ಉನ್ಮತ್ತತೆಗೆ ಮನ ತೆತ್ತವರು
ಹೊರ ದೇಶದಿಂದ ಹೊತ್ತು ತಂದ
ವಿಚಿತ್ರ ಇಂಗ್ಲಿಷಿನ
ಬೆಡಗಿಗೆ ಬೆರಗಾಗಿ
ಒಪ್ಪಿಗೆಯ ಮುದ್ರೆ ಒತ್ತುತ್ತಾರೆ

ಇಮಿಗ್ರೇಶನ್ ಅಧಿಕಾರಿ
ನನ್ನ ಕೇಳಿದ,
ಸಿರಿಯನ್?
ಹಾಗೆಂದರೇನು?
(ಗೊಗ್ಗರು ಗಂಟಲಲ್ಲಿ
ಉಗುಳು ನುಂಗುತ್ತ)

ನಿನ್ನ ಶಿಕ್ಷಕಿ
ಮನೆಯಲ್ಲಿ ಅರೇಬಿಕ್ ಮಾತಾಡುವ
ಉಚ್ಚಾರವ ಹಂಗಿಸುತ್ತಾರೆ

ಅಪರಿಚಿತರ ಆತಂಕದ ನಡುವೆಯೂ
ವಿದೇಶಿ ಶಾಲೆಗೇ ಹೋಗಿ
ನನ್ನತನದ ಪರಿಶುಧ್ಧತೆಯ
ಪರಿಚಯಿಸಿದೆ

ತರಗತಿಗೂ ಮೊದಲು
ಆ ಶಿಕ್ಷಕಿ ತನಗಿಷ್ಟ ಬಂದವರ
ತಲೆಗೂದಲು ಮಾತ್ರ ಸವರಿ
ಮುದ್ದಿಸುವುದನ್ನು
ಕಂಡರಾಗದಿದ್ದ ನನ್ನ
ಕಂಡರಾಗದಂತೆ
ನಡೆದುಕೊಳ್ಳುತ್ತಿದ್ದಳು

ಜನರಿಗೆ ಸಣ್ಣತನದ
ಪ್ರದರ್ಶನವೇನು ಇಷ್ಟವಿಲ್ಲ
ಆದರೂ ನೀನು
ಫ್ರೆಂಚಿನಲ್ಲಿ ಮಾತಾಡುವುದು
ಒಳ್ಳೆಯದು!


***

Wednesday 18 September 2013

ಹಂಬಲು

ಸು ರಂ ಎಕ್ಕುಂಡಿ



ನಕ್ಷತ್ರ ಉರಿಯುತಿದೆ ಮುಗಿಲು ಹಣತೆಗಳಿಂದ
ಗಾಳಿ ದಣಿವಾರಿಸಿದೆ ಬೀಸಿಬೀಸಿ
ಒಣಗಿದೆಲೆಗಳ ಹಾಗೆ ಉದುರುತಿವೆ ನಿಟ್ಟುಸಿರು
ದುಃಖವಡಗಿದೆ ಇಲ್ಲಿ ಚಾಪೆ ಹಾಸಿ

ಗಿಡದ ತೊಗಟೆಗಳಿಂದ ಅಂಟು ಒಸರುವ ಹಾಗೆ
ಒಸರಿ ಹೋಯಿತು ಒಡಲು ಕಂಡ ಹರುಷ
ವೀಣೆಯಂತಹ ಬದುಕು ಕೊರಡುಗಟ್ಟಿದೆ ಒಳಗೆ
ಇಂಗಿ ಹೋಗಿವೆ ಕಂಪು ಸುರಿದ ನಿಮಿಷ

ಬೆಳ್ಳಕ್ಕಿಗಳು ಹಾರಿ ಬರಲು ಹನಿಗೂಡಿದವು 
ದೂರ ಕಡಲಿನ ನೆನಪು ತುಂಬಿ ಕಣ್ಣು
ಚೈತ್ರ ಪರಿಮಳ ನೆನೆದು ಬೆಟ್ಟಗಳು ಮರುಗಿದವು
ತೆನೆಯ ಕಾಣದೆ ಅಳುವ ಬಂಜೆ ಮಣ್ಣು

ಎಂದು ಬೆಳಗಾಗುವದು ಎಂದು ನನ್ನಂಗಳಕೆ
ಬಣ್ಣಬಣ್ಣದ ಹಕ್ಕಿ ಹಾರಿ ಬಂದು
ಮತ್ತೊಮ್ಮೆ ಹಾಡುವವು ಸೂರ್ಯ ಪುಷ್ಪದ ಹಾಡು
ಹೊಸದಿನದ ಹೊಂಬಿಸಿಲಿನಲ್ಲಿ ಮಿಂದು

***

Monday 16 September 2013



ಸಾಲುಗಳು



ಬೇಲಿ ಹಾಸುಗಳ
ಹುಲ್ಲು ಹೂಗಳ
ಅಂದ
ಸೆರೆಹಿಡಿವಲ್ಲಿಗೆ
ಮುಗಿಯಿತು.
ಧ್ಯಾನ ಫಲಿಸಿತೊ
ಬಿಟ್ಟಿತೊ
ನೋಡುವ ಗೊಡವೆಗೆ
ಹೋಗಲಿಲ್ಲ.


***

ಬರುವುದು
ಶಿಶಿರ
ಎಂಬುದೆ
ಬೆಚ್ಚಗಾಗಿಸುತ್ತಿದೆ!



***

ರಕ್ಕಸ
ತಕ್ಕಡಿಯ ತಳಕ್ಕೆ
ಗುಲಗುಂಜಿ ಅಂಟಿಸಿ
ಕುಳಿತಿದ್ದಾನೆ
ತೂಕದಕಲ್ಲುಗಳೆಲ್ಲ
ಹೆಣಭಾರ
ಸಿಗುತ್ತಿಲ್ಲ ತೂಕ.


***


ಈಗಲೇ
ಸ್ವಲ್ಪ ಚಿಟ್ಟೆತನ
ಬಂದುಬಿಟ್ಟಿತೇ?


***
ಅದೇ ಜಾಗ, ನದಿ
ಮತ್ತು
ನನ್ನ
ಬೇಸರಕ್ಕೆ
ನೀರು
ನಕ್ಕಿತು.


***



ಭೂಗೋಲದ ಮೇಲೆ ಭಾರ
ಸುಡು
ಗುಲಗುಂಜಿಯ ಧ್ಯಾನ.



***



Sunday 15 September 2013


ಹಸಿವು

ಸು ರಂ ಎಕ್ಕುಂಡಿ 

  











ಸೂರ್ಯ ಹೇಗಿದ್ದಾನೆ ಗೊತ್ತೆ ನಿನಗೆ?
ಉರಿಯ ಬಿಳಿ ರೊಟ್ಟಿಯಂತಿರುವ ನಮಗೆ

ಚಂದ್ರ ಹೇಗಿದ್ದಾನೆ ಗೊತ್ತೆ ನಿನಗೆ?
ಹಾಲಿನ ರೊಟ್ಟಿಯಂತಿರುವ ನಮಗೆ

ಸೂರೆಗೊಂಡಿಹ ತಾರೆ ಗೊತ್ತೆ ನಿಮಗೆ?
ಕೊಳೆಗೇರಿಗಳ ಕಡಲೆಪುರಿಯು ನಮಗೆ

ಹೌದು ಮಗು ನೀನು ಹೇಳಿದ್ದು ನಿಜವು
ಮಕ್ಕಳಿಗೆ ಎಂದಿಗೂ ಅಷ್ಟು ಹಸಿವು


***

ಚುಕ್ಕಿ ಚಿತ್ರ: ಮೋಹನ ವೆರ್ಣೇಕರ್
ಕೃಪೆ:ಅವಧಿ









Saturday 14 September 2013

ಮೂವರ ತಲೆಯಲ್ಲಿ ಮಿಂಚುಹುಳ...


ಬಸೂ

Basavaraj Sulibhavi


1.
ದಟ್ಟ ಕತ್ತಲು
ಮಿಣುಕುಹುಳು ದಾರಿ ತಪ್ಪುವುದಿಲ್ಲ.


2.

2.
ದೀಪ ಹಚ್ಚಿಕೊಂಡು ಅಲೆದವರಿಗೆ ಸಿಕ್ಕದ ಬುದ್ದ
ದೀಪವಾದವರಲ್ಲಿಗೇ ಬಂದು ಸುಮ್ಮನೆ ಲೀನನಾದ.

***


ಚೇತನಾ ತೀರ್ಥಳ್ಳಿ

Chetana Thirthahalli

1.
ಚಂದ್ರನ ಮೋಹಿಸಿದ
ಹುಳುಗಳು
ಬೆಳಕಿನ ಬಸಿರು ಹೊತ್ತಿವೆ.


















2.
ಬೆಂಕಿಯಿಲ್ಲದ
ಬೆಳಕು,
ಬುದ್ಧನಿಗೆ ಖುಷಿಯಾಗಿದೆ.

3.

ಜೀವದ ಹಣತೆಗಳು
ಬೆಳಕು ಹೊತ್ತು
ಹಾರಿವೆ.


***




ಜಿ.ಕೃಷ್ಣ.

Krishna Giliyar

1.
ಮಿಂಚುಹುಳುಗಳ
ನಾಡಿನಲ್ಲಿ
ಬೇಸಿಗೆಯಿಲ್ಲ.



2.
ಹಗಲು ತುಂಬಿತು

ಮಿಂಚುಹುಳದ
ಬೆಳಕು.



3.
ನಿನಗೆ ನೀನೇ ಬೆಳಕು

ಎಂದಿದ್ದ
ನೀನಷ್ಟೆ ಅರ್ಥಮಾಡಿಕೊಂಡೆ.




4.
ಮಿನುಗದಂತಿರುವ

ವಿದ್ಯೆ
ಕಲಿಸಲು ಬಂದಾರು, ಎಚ್ಚರ!



5.
ಮಿಣುಕುಹುಳ

ಎಂದರೆ
ಓಗೊಡಬೇಡ, ಮಿಂಚೇ ಸರಿ.



***


Friday 13 September 2013





ಸಾಲುಗಳು




ಮಳೆ ಹುಳಗಳೆದ್ದಿವೆ
ಗೊತ್ತಿದೆಯೋ ಇಲ್ಲವೊ
ರೆಕ್ಕೆಯ 
ಆಯುಸ್ಸು
ಮೂಗರಳಿಸಿ
ಕುಳಿತಿರುವ
ಇರುವೆಗಳಿಗೆ
ಇದು
ಹೇಗೆ ತಿಳಿಯಿತು?



***


ಇಷ್ಟು ದಿನ
ನಡೆಸಿದಿ ಮಳೆಯೆ
ಕಾಳಿನೆದೆಯಲ್ಲಿ
ಹಾಲುತುಂಬುವ ಹೊತ್ತು
ಮರೆಯದಿರು
ಹಸಿದ ಗಂಗಾಳ
ಎರಡು ತುತ್ತು.



***

ನೀರಿನ
ಅಂಟಿಸುವ ಗುಣತಿಳಿಯುವುದು
ಬತ್ತಿದ ಮೇಲೇ.


***




ಓದಿದಾಗ
ತಾನೇ ಬರೆಯಬಹುದಾಗಿದ್ದ ಸಾಲುಗಳು
ಅನಿಸಿದರೆ
ಕವಿತೆ ಒಳಗಿಳಿದಿಲ್ಲ!

ಪೂರ್ತಿ
ಕಳಚಿಕೊಂಡೆ-
ನೆಂಬುದು
ಭ್ರಮೆ
ಉಳಿದೇ ಉಳಿದಿದೆ
ಒಂದಿಷ್ಟು.


***


ವೈವಿಧ್ಯ ಅರಸಿ
ಬಿಡಿಸುತ್ತಾ ಹೋದಂತೆ
ಕೈ ಪಳಗಿತು
ಚಿತ್ರ
ಒಂದನೊಂದು
ಹೋಲತೊಡಗಿದವು.




***


ನೀನು ಕೊಳಲು
ನಾನು ಉಸಿರು
ಎರಡೂ ಸೇರಿ
ಮಧುರ ಗಾನ...
ತಲೆತೂಗಿತು
ಎಲ್ಲ ಕೊಳಲ ಗಾನಕೆ
ಬಿದಿರ ಮೆಳೆ ಹೊಕ್ಕ ಬಿಸಿಯುಸಿರಿಗೆ
ಕವಿಸಮಯಕ್ಕೆ
ಇನ್ನೂ ಮುಗಿಯದ
ಕೀಚಕಾತ್ ಉಪಕೀಚಕಕ್ಕೆ
ಆದರೆಹಿಡಿ ಉಸಿರನ್ನೇ
ಕೊಳಲಿಗೆ ಕೊಟ್ಟು
ಗಾನ
ಹೊರಡುವಾಗ
ದೂರದಲ್ಲೆಲ್ಲೋ ಕೇಳಿದಂತಾಯ್ತೇ?




***