Wednesday 31 July 2013

ಹೂವಿನ ಹೃದಯ ಚೂರಾಗಿದೆ             
                                                                                              ನೋಶಿ ಗಿಲಾನಿ
                                                          ಅನುವಾದ:ರಮೇಶ್ ಮೇಗರವಳ್ಳಿ    
 
ಹೂವಿನ ಹೃದಯ ಚೂರಾಗಿದೆ
ಅದರ ಸುಗ೦ಧ ತ೦ಗಾಳಿಯೊಡನೆ ಸ್ನೇಹ ಬೆಸೆದಿದೆ.

ಯಾರು ಹೇಳಬಲ್ಲರು ಹಾಳುಗೆಡವಿದವರಾರೆ೦ದು?                           
ದ೦ಡನೆಯ ತೀರ್ಪಿನಡಿಯಲ್ಲಿ ಕಳೆಯುತ್ತಿದ್ದೇವೆ ಈ ಸ೦ಜೆಯನ್ನು!


ಯಾರೂ ಈಗ ಪಯಣ ಕೈಗೊಳ್ಳುವ೦ತಿಲ್ಲ
ಆದರೂ ನೀ ಇಚ್ಛಿಸಿದರೆ ಬರಬಲ್ಲೆ.
 
ಈ ನಗರದ ಎಲ್ಲ ಬೀದಿಗಳೂ ಮಲಗಿವೆ
ಎಚ್ಚರವಾಗಿರುವುದೀಗ ನನ್ನ ಪಾಳಿ.


ಈ ಸ೦ಜೆಯ ಅನಿಶ್ಚಿತತೆಯಲ್ಲಿ
ಎಲ್ಲವೂ ಕ೦ಪಿಸುತ್ತಿವೆ.
 
ಮಿಲನವನ್ನು ನಾವು ಹೇಗೆ ತಾನೇ ಸ೦ಭ್ರಮಿಸ ಬಲ್ಲೆವು
ಹೃದಯ ಅಗಲಿಕೆಯ ಹೆದರಿಕೆಯಲ್ಲಿ ತೊಳಲುತ್ತಲಿರುವಾಗ?


ಎಲ್ಲವನ್ನೂ ಮೀರಿ ಆಶಿಸುತ್ತಿದೆ ನನ್ನೆದೆ
ಈ ಸಂಜೆಯನ್ನು ನಮ್ಮದಾಗಿಸಿಕೊಳ್ಳೋಣ!
***

 
ಪಾಕೀಸ್ತಾನದ ಪ್ರಸಿದ್ಧ ಉರ್ದು ಕವಿಗಳಲ್ಲಿ ಒಬ್ಬರಾದ ನೋಷಿ ಗಿಲ್ಲಾನಿ ಹುಟ್ಟಿದ್ದು ೧೯೬೪ ರಲ್ಲಿ ಪಾಕೀಸ್ತಾನದ ಬಹವಾಲ್ಪುರ್ ನಲ್ಲಿ. ಬಹವಾಲ್ಪುರ್ ವಿಶ್ವವಿದ್ಯಾನಿಲಯದಲ್ಲಿ ಓದಿದ ಗಿಲ್ಲಾನಿಯವರ ಕವನಗಳು ೨೦೦೮ರಲ್ಲಿ ಇ೦ಗ್ಲಿಷ್ ಭಾಷೆಗೆ ಅನುವಾದಗೊ೦ಡವು. ಭಾಷಾ೦ತರದಿ೦ದಾಗಿ ಗಿಲ್ಲಾನಿ ಅ೦ತರ್ರಾಷ್ಟ್ರೀಯ ಮನ್ನಣೆಯನ್ನು ಪಡೆದ ಪಾಕೀಸ್ತಾನದ ಕವಯತ್ರಿಯಾದರು.ಅವರ ಕವನಗಳಲ್ಲಿನ ನಿರ್ಭಿಡತೆ ಉರ್ದುಭಾಷೆಯಲ್ಲಿ ಬರೆಯುವ ಮಹಿಳಾ ಸಾಹಿತಿಗಳಿಗೆ ಅಸ್ವಾಭಾವಿಕವಾದುದು.

೧೯೯೫ ರಲ್ಲಿ ಅಮೆರಿಕದ ಸ್ಯಾನ್ಫ್ರಾನ್ಸಿಸ್ಸ್ಕೋದಲ್ಲಿ ನೆಲೆಸಿದ ಗಿಲ್ಲಾನಿ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಪ್ರಸಿದ್ಧ ಉರ್ದು ಕವಿ ಸಯೀದ್ ಖಾನ್ ಅವರನ್ನು ಮದುವೆಯಾದ ಮೇಲೆ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನೆಲೆಸಿದ್ದಾರೆ. ಅವರ ವಿದೇಶೀ ವಾಸ ಅವರ ಅನೇಕ ಕವನಗಳ ಮೇಲೆ ಸಾಕಷ್ಟು ಪರಿಣಾಮ ಬೀರಿರುವುದನ್ನು ಗುರುತಿಸ ಬಹುದು.
ಹಲವು ದೇಶಗಳಲ್ಲಿ ಚದುರಿ ಹೋದ ಅವರ ಬದುಕು ಅವರ ಕವಿತೆಗಳ ಸ೦ಕೀರ್ಣತೆಯನ್ನು ಹೆಚ್ಚಿಸಿದೆ ಮತ್ತು ಮಹಿಳಾ ಅಸ್ಮಿತೆಯ ಭಾವವನ್ನು ಅದರಲ್ಲಿ ತು೦ಬಿ ಪಾಕೀಸ್ತಾನದ ಸ೦ಪ್ರದಾಯ ಬದ್ಧ ಲೇಖಕರ ವಿರುದ್ಧ ಒ೦ದು ಹೊಸ ಕ್ರಾ೦ತಿಯನ್ನು ಹುಟ್ಟು ಹಾಕಿದೆ.
 
ಎಷ್ಟು ಕಷ್ಟ ಬದುಕನ್ನು ಸ೦ಭಾಳಿಸುವುದು!

ಎಷ್ಟು ಕಷ್ಟ ಬದುಕನ್ನು ಸ೦ಭಾಳಿಸುವುದು
ನಿನ್ನೊಡನೆ ಸ್ನೇಹ ಕುದುರಿಸುವಷ್ಟೇ!

ಸ೦ಪೂರ್ಣ ಹೊಸ ಕಥೆಯೆ ಇರಬಹುದು
ದಯವಿಟ್ಟು ವಿಷಯಕ್ಕೆ ಬಾ.

ಈ ನೆರಳುಗಳಲ್ಲಿ ನಾ ಮುಳುಗಬಹುದು
ದಯವಿಟ್ಟು ಬೆಳಗು ಕಣ್ಣ ದೀವಿಗೆಯ!

ದುಃಖವನ್ನರಿಯದೇ ಇದ್ದರೂ
ನೀ ದುಃಖಿಯಾದರೆ ಹೇಗನಿಸಬಹುದೆ೦ಬ ಕುತೂಹಲ.

ಹೃದಯ ಹಿ೦ಡಿ ಕೊಡ ಬೇಕು ರಕ್ತ!
ನೋಡು, ಬರೆಯ ಬೇಡ ಪದ್ಯ!

ಈ ಎಲ್ಲ ಅರ್ಥಗಳನ್ನು ನಿರಾಕರಿಸುವುದು
ಎಷ್ಟು ಕಷ್ಟ ಗೊತ್ತ, ಈ ಆತ್ಮಕ್ಕೆ!
 
***
 
ಉಪವಾಸ ಒಂದೆ ಅಲ್ಲವೆ...?


ಎರಡಾಳೆತ್ತರದ ಗೇಟುಗಳ
ಹಿಂದಿರುವ ಮಹಲುಗಳಲ್ಲಿ
ಪವಿತ್ರ ಉಪವಾಸ,
ಪುಣ್ಯಾರ್ಜನೆ.

ಹೊರಗೆ
ಕಂಡಿಯಿಂದ ಇಣುಕುವ
ಕಣ್ಣುಗಳಲ್ಲಿ
ಆಸೆ
ಒಳಗಿನವರಿಗೆ
ಪುಣ್ಯ ಕೊಡಿಸುವ
ಭರವಸೆ.


ಎಲ್ಲಾ
ಅವನ ಹೆಸರಿನಲ್ಲೆ.

Tuesday 30 July 2013

ಹಸಿವು ಒಂದೇ ಅಲ್ಲವ?                 ಎಮ್.ಎಸ್ ಕೃಷ್ಣಮೂರ್ತಿ ಗೀತಾ 


 M.s. Krishna Murthy Geetha      


ಅಮ್ಮ ಮಕ್ಕಳಿಗೆ ಗಂಜಿ ಊಟ ಕೊಡುವಾಗ
ಬೇಸರದಿಂದಿದ್ದಳು. ಮುಖ ಬಾಡಿತ್ತು, ಕಣ್ಣಲ್ಲಿ ನೀರಿದ್ದ ಹಾಗಿತ್ತು.
ಮಕ್ಕಳು ಉಣ್ಣದೆ ಕೇಳಿದರು, ಯಾಕಮ್ಮ ಏನಾಯಿತು?
ಅಮ್ಮನ ಕಣ್ಣೀರು ಉಕ್ಕಿತು.
ಮಕ್ಕಳೇ, ಯಜಮಾನ್ತಿ ಮಗುವಿಗೆ
ಅದೇನೋ ತೊಂದರೆಯಂತೆ, ಅದರಮ್ಮನ ಎದೆ ಹಾಲು ಕುಡಿಯಬಾರದಂತೆ,
ಬೇರೆ ಏನೋ ಹಾಲು ಕುಡಿಸಲು ಹೇಳಿದ್ದಾರೆ ಡಾಕ್ಟ್ರು
ಮಗು ಬಾಟಲ್ ಹಾಲು ಕುಡಿಯುತ್ತಿಲ್ಲ ಇಡೀ ದಿನ ಹಸಿವಿನಿಂದ ಅಳುತ್ತಿತ್ತು.
ನೆನಸಿಕೊಂಡು ಸಂಕಟವಾಗಿ ಅಳು ಬಂತು ಮಕ್ಕಳೇ.

'ನಾವೂ ಬಹಳ ದಿನ ಹಸಿವಿನಲ್ಲೇ ಇರ್ತೀವಲ್ಲಮ್ಮ'


ಇರಬಹುದು ಮಕ್ಕಳೇ,
ಹಸಿವು
ಇದ್ದವರಿಗೂ
ಇಲ್ಲದವರಿಗೂ ಒಂದೇ ಅಲ್ಲವ?


ಅಲ್ಲ ಎನ್ನಲು ಅವರಿಗೆ ತಿಳಿಯಲಿಲ್ಲ.

ಹಸಿವಿದ್ದರೂ ಗಂಜಿ ಉಣಲಿಲ್ಲ ಅವತ್ತು ಅವರು.... !!





***

Monday 29 July 2013


'ಕಾವ್ಯ ಬೋಧಿ'ಯ  ಕವಿತೆಗಳು                                                                                                                                     ಡಾ.ಜಿ.ಕೃಷ್ಣ



1. ನೇಣಿಗೇರುವ ಮುನ್ನ



ಎಲ್ಲಿ ವರಾತ ತೆಗೆದುಬಿಡುತ್ತಾನೋ
ಎಂಬ ಭಯದಲ್ಲಿ
ಈವರೆಗೆ ನನ್ನ ಪೊರೆದ
ಖಾಕಿಯುಟ್ಟವರು
ಪಿಸುಗುಟ್ಟಿ, ಪೂಸಿಮಾಡಿ 
ಮೈಯಲುಗಿಸಿ
ಎಚ್ಚರಿದ್ದವನ ಎಬ್ಬಿಸಿದರು.
ಜಾತ್ರೆಯಲಿ ಜೊತೆಗೆ ನಡೆದ
ಗೆಳೆಯರಂತೆ 
ಟೀ ಕುಡಿಸಿ
ಹೊರಟೇ ಬಿಟ್ಟರು!

ಯಾವ ಆಸೆಯೂ
ಈಡೇರದವನ ಬಳಿ
ಕೊನೆಯಾಸೆಯ ಬಗ್ಗೆ ಕೇಳಿದಾಗ 
ಈ ನಸುಕಿನಲ್ಲಿ
ಇನ್ನೊಮ್ಮೆ ಮಗುವಾಗಿಬಿಟ್ಟೆನೆ?

ಮನ ನೇವರಿಸುವ ಮಾತು
ಮೈ ನೇವರಿಸುವ ಮೌನ
ಎರಡೂ ಬೆರೆತಾಗ ಅಮರತ್ವ, 
ಸೋತಾಗ ಮೃತ್ಯು.

ಒಮ್ಮೆ ಕೈ ನೀಡಿ ಗೆಳೆಯರೇ,
ಎಂದೋ ಆರಿದ
ಬಿಸುಪ ಹಿಡಿಯುತ್ತೇನೆ
ಮರೆತೇ ಹೋದ ಎಳೆಬಿಸಿಲ
ಮತ್ತೆ ತುಂಬಿಕೊಳ್ಳುತ್ತೇನೆ

ಎರಡೇ ಎರಡು ಕ್ಷಣ 
ಕಾಯಿರಿ
ಅಮ್ಮನಿಗೆ ಒಂದು ಮಾತು ಹೇಳಿ ಬರುತ್ತೇನೆ..


2. ಬಸಿರು

ಕೆಲವೊಮ್ಮೆ
ಒಂಭತ್ತು ತುಂಬದೆಯೂ ಹೆರಬಹುದು
ಬೇನೆ ಬರದೆಯೂ ಹೆರಬೇಕಾಗಬಹುದು
ಇಲ್ಲದಿದ್ದರೆ 
ತಾಯಿಗೋ ಶಿಶುವಿಗೋ ಅಪಾಯ

ಆದರೆ ಬಸುರಿಯಾಗದೆ
ಹೆರಲು ಹೋಗಬಾರದು

Saturday 27 July 2013

 ಅರಬ್ ಜಗತ್ತಿನ ಹೆಣ್ಣುಮಕ್ಕಳ ಕವಿತೆಗಳು...  

ಅನುವಾದ: ಎಮ್.ಆರ್  ಕಮಲಾ
Metikurke Ramaswamy Kamala 
 ರವಿಯಾ ಮೊರ್ರಾಳ ಕವಿತೆ 



ಚರ್ಚಿನಂಗಳದ
ಕರಕು ಕೊಂಬೆಗಳಲ್ಲಿ
ಮರೆವನ್ನೇ ಮರೆತ
ಬಾಯಾರಿದ ತುಟಿಗಳಲ್ಲಿ
ಕವಿತೆ
ಮೊಂಡು ಹಿಡಿದು
ಉಳಿದುಕೊಂಡಿದೆ!

ರಾತ್ರಿ..
ಕವಿತೆಯೆದ್ದು ಕೆನೆಯುತ್ತದೆ

ಅಡ್ಡ ರಸ್ತೆಗಳ
ಕಸದ ರಾಶಿಯಲ್ಲಿ
ಕವಿತೆ!
ಸಾಯದೇ ಕವಿಗೆ
ನಿರ್ವಾಹವಿಲ್ಲ

ನನ್ನ ಅಜ್ಜನ ಬಳಿ
ಒಂದು ಕಪ್ ಕಾಫಿ,
ಆಶ್ ಟ್ರೇ, ಹತ್ತಾರು ಮಕ್ಕಳು
ಮತ್ತು
ಒಂದು ರುಮಾಲು..
`ಖುರಾನ್' ಓದುವಾಗ
ಪದಗಳು ಗಂಟಲಲ್ಲಿ ಸಿಕ್ಕಿ
ಮೇಲೆ ನೋಡುತ್ತಾನೆ

ಸುತ್ತೆಲ್ಲ ಎಲೆಗಳು
ನೇತಾಡಲು ಮರಗಳೇ ಇಲ್ಲ!

Friday 26 July 2013


ಕೆಲವು ಲತಸಾಗಳು*                           ಡಾ.ಜಿ.ಕೃಷ್ಣ



1.
 Photo: ತೂಕ ಇಷ್ಟಾದರೂ ಹೆಚ್ಚಿರಲಿ
ಎಂಬ ಬಯಕೆ
ನಿಗಿ ನಿಗಿ ಹೊಳೆಯುವ
ಬೆಚ್ಚಗಿನ
ಕಪ್ಪುಚುಕ್ಕಿಯ ಗುಲಗುಂಜಿ
ಆಳೆತ್ತರದ 
ಕಿವುಡು ತಕ್ಕಡಿ.

ತೂಕ ಇಷ್ಟಾದರೂ ಹೆಚ್ಚಿರಲಿ
ಎಂಬ ಬಯಕೆ
ನಿಗಿ ನಿಗಿ ಹೊಳೆಯುವ
ಬೆಚ್ಚಗಿನ
ಕಪ್ಪುಚುಕ್ಕಿಯ ಗುಲಗುಂಜಿ
ಆಳೆತ್ತರದ
ಕಿವುಡು ತಕ್ಕಡಿ.




  2.

 Photo: ನಾನು
ಚೂರು ಚೂರಾಗಿ
ಜೋಡಿಸಲಾಗದೆ
ಬಿಂಬಕ್ಕೆ ದ್ರೋಹ ಬಗೆಯುವ
ಹರಳಿನ ಕನ್ನಡಿಯಂತಲ್ಲ;
ಕಲಕಿದರೆ
ತಾಳ್ಮೆಯಿಂದ
ತಿಳಿಯಾಗಿ
ನ್ಯಾಯ ಒದಗಿಸುವ
ಜೀವಜಲದ
ವಿಸ್ತಾರ.
















ನಾನು
ಚೂರು ಚೂರಾಗಿ
ಜೋಡಿಸಲಾಗದೆ
ಬಿಂಬಕ್ಕೆ ದ್ರೋಹ ಬಗೆಯುವ
ಹರಳಿನ ಕನ್ನಡಿಯಂತಲ್ಲ;
ಕಲಕಿದರೆ
ತಾಳ್ಮೆಯಿಂದ
ತಿಳಿಯಾಗಿ
ನ್ಯಾಯ ಒದಗಿಸುವ
ಜೀವಜಲದ
ವಿಸ್ತಾರ.


 3.


ಒಂದಷ್ಟು ಹೆಣ್ಣುಮಕ್ಕಳದ್ದಾದರೂ
ಇದ್ದೇ ಇದೆ ಈ ಬಯಕೆ, ಪ್ರಶ್ನೆ
ಇರಬಾರದೇ ಈ
ಗಂಡಸರು
ರಾತ್ರಿಯಲ್ಲೂ
ಹಗಲಿನಂತೆ...




4.

Photo: ತಲೆಯೊಳಗೆ ಮೂಡಿದ್ದು
ಎದೆ
ಅಲ್ಲಿ ಮೂಡಿದ್ದು
ತಲೆ
ಕೆಲವರಿಗೆ ತಾಬಡ ತೋಬ್
ಹಲವರಿಗೆ
ನಿಧಾನ
ಮುಟ್ಟಿಯೆ ಮುಟ್ಟುವುದು
ಆದರೆ
ಲಿಟ್ಮಸ್ ಕಾಗದದಂತೆ
ಬಣ್ಣ
ಬದಲಾವಣೆಯಾಗುವುದು
ಮುಟ್ಟಿದ್ದರ ತಪ್ಪಲ್ಲ. 















ತಲೆಯೊಳಗೆ ಮೂಡಿದ್ದು
ಎದೆ
ಅಲ್ಲಿ ಮೂಡಿದ್ದು
ತಲೆ
ಕೆಲವರಿಗೆ ತಾಬಡ ತೋಬ್
ಹಲವರಿಗೆ
ನಿಧಾನ
ಮುಟ್ಟಿಯೆ ಮುಟ್ಟುವುದು
ಆದರೆ
ಲಿಟ್ಮಸ್ ಕಾಗದದಂತೆ
ಬಣ್ಣ
ಬದಲಾವಣೆಯಾಗುವುದು
ಮುಟ್ಟಿದ್ದರ ತಪ್ಪಲ್ಲ.
*************************************************************************
* ಲಯ ತಪ್ಪಿದ ಸಾಲುಗಳು

ಫೈಬ್ರಾಯ್ಡ್(Fibroid) ಎಂಬ ಗಡ್ಡೆ...



ಮಾದೇವಿಗೆ ೪೨ ವರ್ಷ. ಇಬ್ಬರು ಮಕ್ಕಳ ತಾಯಿಯಾದ ಈ ಮಹಿಳೆಗೆ ಕಳೆದ ಒಂದು ವರ್ಷದಿಂದ ತಿಂಗಳ ಸ್ರಾವ ತುಂಬ ಜಾಸ್ತಿ. ಜೊತೆಗೆ ಹೊಟ್ಟೆನೋವು ಬೇರೆ. ಇದರಿಂದಾಗಿ ಅವಳ ದೈನಂದಿನ ಕೆಲಸಗಳಿಗೂ ತೊಂದರೆ. ವೈದ್ಯರಲ್ಲಿಗೆ ಹೋದಾಗ ಇದು ಮುಟ್ಟು ನಿಲ್ಲುವ ಸಮಯದ ತೊಂದರೆ, ಧೈರ್ಯದಿಂದಿರಿ,  ಒಳ್ಳೆ ಆಹಾರ ತೆಗೆದುಕೊಳ್ಳಿ, ರಕ್ತಹೀನತೆಯಾಗದಂತೆ ಕಬ್ಬಿಣಾಂಶದ ಮಾತ್ರೆ ತಗೊಳ್ಳಿ ಅಂತ ಸಲಹೆ ಮಾಡಿದರು. ಪ್ರತಿ ತಿಂಗಳು ತೆಗೆದುಕೊಳ್ಳಲು ನೋವು ನಿವಾರಕ ಮಾತ್ರೆ ಕೊಟ್ಟರು. ಒಂದಾರು ತಿಂಗಳು ಎಲ್ಲವೂ ಸ್ವಲ್ಪ ತಹಬಂದಿಗೆ ಬಂದಂತೆ ಕಂಡಿತು.

ಒಂದು ದಿನ ರಾತ್ರಿ ಅವಳಿಗೆ ಮೂತ್ರ ಕಟ್ಟಿತು. ಎಷ್ಟೇ ಪ್ರಯತ್ನಪಟ್ಟರೂ ಮೂತ್ರವಿಸರ್ಜನೆ ಸಾಧ್ಯವಾಗಲಿಲ್ಲ. ಹೊಟ್ಟೆನೋವು ಬೇರೆ. ಬೆಳಗಾಗುವಾಗ ಅವಳನ್ನು ಪಟ್ಟಣದ ಸ್ತ್ರೀರೋಗ ತಜ್ಙರಲ್ಲಿಗೆ ಕರೆತಂದರು. ಅವರು ತಕ್ಷಣ ಮೂತ್ರವನ್ನು ಪೈಪ್ ಮುಖಾಂತರ ತೆಗೆದರು. ಏಕೆ ಹೀಗಾಯ್ತು ಎಂದು ತಿಳಿದುಕೊಳ್ಳಲು ಅವಳ ಪರೀಕ್ಷೆಯನ್ನೂ ನಡೆಸಿದರು. ಅವಳ ಗರ್ಭಕೋಶ ಮೂರು ನಾಕು ಪಟ್ಟು ಗಾತ್ರದಲ್ಲಿ ದೊಡ್ಡದಾಗಿತ್ತು. ಅದರ ಮೈಮೇಲೆ ಲಿಂಬೆಹಣ್ಣಿನ ಗಾತ್ರದ ಗಡ್ಡೆಗಳಿದ್ದವು. ಹಿಗ್ಗಿದ ಗರ್ಭಕೋಶ ಮೂತ್ರಕೋಶದ ಕೊರಳನ್ನು ಒತ್ತಿದ್ದರಿಂದ ಮೂತ್ರ ವಿಸರ್ಜನೆಗೆ ತೊಂದರೆಯಾಗಿತ್ತು. ಸ್ಕ್ಯಾನಿಂಗ್ ಕೂಡ ಗರ್ಭಕೋಶದಲ್ಲಿ ಫೈಬ್ರಾಯ್ಡ್ ಗಡ್ಡೆಗಳು ಇರುವುದನ್ನು ದೃಢಪಡಿಸಿತು. ವೈದ್ಯರು ಶಸ್ತ್ರಚಿಕಿತ್ಸೆಗೆ ಸಲಹೆಮಾಡಿದರು.

ಏನಿದು ಫೈಬ್ರಾಯ್ಡ್?
ಫೈಬ್ರಾಯ್ಡ್ ಎನ್ನುವುದು ಪ್ರಾಪ್ತವಯಸ್ಸಿನ ಮಹಿಳೆಯರ ಗರ್ಭಕೋಶದಲ್ಲಿ ಕಾಣಿಸಿಕೊಳ್ಳುವ  ಅಪಾಯಕಾರಿಯಲ್ಲದ ಒಂದು ವಿಧದ ಗಡ್ಡೆ. ಅಪಾಯಕಾರಿಯಲ್ಲದ ಎಂದರೆ ಕ್ಯಾನ್ಸರ್ ಅಲ್ಲದ ಮತ್ತು ಕ್ಯಾನ್ಸರಿಗೆ ಪರಿವರ್ತನೆಯಾಗುವ ಸಾಧ್ಯತೆ ಅತೀ ಕಡಿಮೆ ಇರುವ ಎಂದರ್ಥ.  ಇದು ಅತಿ ಸಾಮಾನ್ಯವಾಗಿ ಕಂಡುಬರುವ ಗಡ್ಡೆ. ಈ ಗಡ್ಡೆಯ ಮೂಲ ಗರ್ಭಕೋಶದ ಗೋಡೆಯಲ್ಲಿನ ಸ್ನಾಯು ಜೀವಕೋಶಗಳು. ಹಾಗಾಗಿಯೆ ಇದನ್ನು ಮೈಯೋಮಾ(Myoma) ಎಂತಲೂ ಕರೆಯುತ್ತಾರೆ. ಗಾತ್ರದಲ್ಲಿ ಇದು ಸಣ್ಣ ಕಡಲೆಕಾಳಿನಿಂದ ಹಿಡಿದು ಫುಟ್ ಬಾಲಷ್ಟು ದೊಡ್ಡದೂ ಇರಬಹುದು. ಸಂಖ್ಯೆಯಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚಿರಬಹುದು. ಮೊದಲು ಚಿಕ್ಕದಿದ್ದ ಫೈಬ್ರಾಯ್ಡ್ ಬೆಳೆಯುತ್ತ ಹೋಗುವ ಸಾಧ್ಯತೆಯೂ ಇರುತ್ತದೆ. ಕೆಲವು ಗಡ್ಡೆಗಳು ಗರ್ಭಕೋಶದ ಹೊರಮೈಗಷ್ಟೆ ಸೀಮಿತವಾಗಿರುತ್ತವೆ. ಕೆಲವೊಮ್ಮೆ ಗರ್ಭಕೋಶದೊಳಕ್ಕೂ ಚಾಚಿಕೊಂಡು ಅದರ ಅವಕಾಶವನ್ನೇ ಕಡಿಮೆ ಮಾಡುತ್ತವೆ.
ಈ ಗಡ್ಡೆಗಳು ವಯಸ್ಸಿಗೆ ಬರದ ಹೆಣ್ಣುಮಕ್ಕಳಲ್ಲಿ ಮತ್ತು ಮುಟ್ಟು ನಿಂತ ಮೇಲೆ ಕಾಣಿಸಿಕೊಳ್ಳುವುದಿಲ್ಲ
ಎಂದೇ ಹೇಳಬಹುದು. ೯೦% ಗಡ್ಡೆಗಳು ಮಹಿಳೆಗೆ ಯಾವುದೇ ತೊಂದರೆಯನ್ನೂ ಉಂಟುಮಾಡುವುದಿಲ್ಲವಾದದ್ದರಿಂದ ಅವುಗಳ ಪತ್ತೆಯೇ ಆಗುವುದಿಲ್ಲ. ಹಾಗಾಗಿ ಅವುಗಳಿಗೆ ಚಿಕಿತ್ಸೆ ನೀಡುವ ಪ್ರಮೇಯವೆ ಬರುವುದಿಲ್ಲ.



ಫೈಬ್ರಾಯ್ಡಿನಿಂದಾಗುವ ತೊಂದರೆಗಳು:
ಫೈಬ್ರಾಯ್ಡಿನಿಂದ ಉಂಟಾಗುವ ತೊಂದರೆಗಳು ಮಹಿಳೆಯ ವಯಸ್ಸು, ಅದು ಗರ್ಭಕೋಶವನ್ನು
ಆಕ್ರಮಿಸಿಕೊಂಡಿರುವ ಜಾಗ, ಅದರ ಗಾತ್ರ, ಸಂಖ್ಯೆ ಮುಂತಾದವುಗಳನ್ನು ಅವಲಂಬಿಸಿರುತ್ತವೆ.

*ಗರ್ಭಕೋಶದ ಮುಂಭಾಗ ಮತ್ತು ಅದರ ಕೊರಳಿನ ಭಾಗದಲ್ಲಿರುವ ಗಡ್ಡೆಗಳು ಮೂತ್ರ ವಿಸರ್ಜನೆಗೆ ತೊಂದರೆ ಕೊಡಬಹುದು. ಮೂತ್ರಕೋಶದ ಮೇಲೆ ಒತ್ತಡ ಬಿದ್ದಾಗ ಪದೇ ಪದೇ ಮೂತ್ರಕ್ಕೆ ಹೋಗಬೇಕೆನಿಸಬಹುದು. ಕೆಲವೊಮ್ಮೆ ಮೂತ್ರ ಕಟ್ಟಿಹೋಗಬಹುದು.

*ಗರ್ಭಕೋಶದ ಅವಕಾಶದೊಳಗೆ ಚಾಚಿಕೊಳ್ಳುವ ಗಡ್ಡೆಗಳು ಮಹಿಳೆಯ ತಿಂಗಳ ರಕ್ತಸ್ರಾವವನ್ನು ಹೆಚ್ಚಿಸಬಹುದು. ಮುಟ್ಟಿನ ದಿನಗಳಲ್ಲಿ ನೋವಿಗೂ ಕಾರಣವಾಗಬಹುದು. ಕೆಲವೊಮ್ಮೆ ಅವಳಲ್ಲಿ ಸಂತಾನ ಹೀನತೆ(Infertility)ಯನ್ನೂ ಉಂಟುಮಾಡಬಹುದು. ಗರ್ಭಿಣಿಯರಲ್ಲಿ ಗರ್ಭಪಾತವಾಗುವ ಮತ್ತು ಅವಧಿ ಪೂರ್ವ ಹೆರಿಗೆಯಾಗುವ ಸಾಧ್ಯತೆಯೂ ಇರುತ್ತದೆ. ಸಹಜ ಹೆರಿಗೆಗೂ ಅವು ಅಡ್ಡಿಪಡಿಸುವ ಸಾಧ್ಯತೆ ಇರುತ್ತದೆ.

*ಗರ್ಭಕೋಶದ ಹಿಂಭಾಗದಲ್ಲಿರುವ ಗಡ್ಡೆಗಳು ಮಲವಿಸರ್ಜನೆಗೂ ತೊಂದರೆ ಕೊಡಬಹುದು.

*೦.೧ರಿಂದ ೦.೫% ಫೈಬ್ರಾಯ್ಡುಗಳು ಕ್ಯಾನ್ಸರ್ ಗೆ ಬದಲಾವಣೆಯಾಗುವ ಸಾಧ್ಯತೆಯೂ ಇದೆ.



ಚಿಕಿತ್ಸೆ:
ಫೈಬ್ರಾಯ್ಡಿನ ಚಿಕಿತ್ಸೆ ಅದು ಕೊಡುತ್ತಿರುವ ತೊಂದರೆಗಳನ್ನು ಅವಲಂಬಿಸಿದೆ. ಸಣ್ಣ ಗಡ್ಡೆಗಳು ಯಾವುದೇ ತೊಡಕನ್ನೂ ಉಂಟುಮಾಡುವುದಿಲ್ಲ. ಕೆಲವೊಮ್ಮೆ ಸ್ಕ್ಯಾನಿಂಗಿನಲ್ಲಿ ಸಣ್ಣ ಪುಟ್ಟ ಫೈಬ್ರಾಯ್ಡುಗಳಿರುವುದು ಕಂಡುಬರಬಹುದು. ಅವುಗಳಿಗೆ ಯಾವುದೇ ಚಿಕಿತ್ಸೆಯ ಅಗತ್ಯ ಇರುವುದಿಲ್ಲ. ಇದನ್ನು ಆ ಮಹಿಳೆಗೆ ಮನವರಿಕೆ ಮಾಡಿಕೊಡಬೇಕು. ಕೆಲವೊಮ್ಮೆ ತನ್ನ ಗರ್ಭಕೋಶದಲ್ಲಿ ಸಣ್ಣ ಗಡ್ಡೆ ಇದೆ ಎನ್ನುವುದು ಭಯ ಹುಟ್ಟಿಸಿ ಖಿನ್ನತೆಗೆ ಕಾರಣವಾಗಬಹುದು. ಮುಟ್ಟಿನ ತೊಂದರೆಗಳಿಗೆ ಇವು ಕಾರಣವಿರಬಹುದು ಎಂಬ ಸಂಶಯವಿದ್ದಾಗಲೂ ಅವನ್ನು ನೋವು ನಿವಾರಕ ಔಷಧಿಗಳಿಂದ, ಹಾರ್ಮೋನುಗಳಿಂದ ಗುಣಪಡಿಸಲು ಪ್ರಯತ್ನಿಸಬೇಕು. ರಕ್ತಹೀನತೆ ಇದ್ದಲ್ಲಿ ಅದನ್ನು ಸರಿಪಡಿಸಬೇಕು.

ಗಡ್ಡೆಯ ಗಾತ್ರದಿಂದ ತೊಂದರೆಯಾಗುತ್ತಿರುವುದು ಖಚಿತಪಟ್ಟಾಗ ಶಸ್ತ್ರಚಿಕಿತ್ಸೆ(Myomectomy)ಯಿಂದ ಅದನ್ನು ತೆಗೆದುಹಾಕಬಹುದು. ಮಹಿಳೆ ಮಕ್ಕಳನ್ನು ಪಡೆದವಳಾಗಿದ್ದು ಮತ್ತೆ ಮಕ್ಕಳು ಬೇಡ ಎಂದು ನಿರ್ಧರಿಸಿದ್ದಲ್ಲಿ ಮತ್ತು ಅನೇಕ ಗಡ್ಡೆಗಳು ಇದ್ದು ಅವನ್ನು ತೆಗೆದುಹಾಕುವುದು ಸಾಧ್ಯವಿಲ್ಲದಿದ್ದಲ್ಲಿ ಗರ್ಭಕೋಶವನ್ನೆ ತೆಗೆದುಹಾಕುವ(Hysterectomy) ನಿರ್ಧಾರಕ್ಕೆ ಬರಬಹುದು. ಆದರೆ ಸಂತಾನಹೀನತೆಗೆ ಫೈಬ್ರಾಯ್ಡ್ ಕಾರಣವಾಗಿದ್ದಾಗ ಗಡ್ಡೆಗಳನ್ನಷ್ಟೆ ತೆಗೆದುಹಾಕಿ ಗರ್ಭಕೋಶವನ್ನು ಉಳಿಸಿಕೊಳ್ಳುವತ್ತ ಹೆಚ್ಚು ಗಮನ ಕೊಡಬೇಕಾಗುತ್ತದೆ. ಗರ್ಭಕೋಶದಿಂದ ಗಡ್ಡೆಗಳನ್ನಷ್ಟೆ ತೆಗೆಯುವ ಶಸ್ತ್ರಚಿಕಿತ್ಸೆ ಕಷ್ಟಕರವಾದುದು. ಹಾಗಾಗಿ ಉಳಿದ ಸಂದರ್ಭಗಳಲ್ಲಿ ಗರ್ಭಕೋಶವನ್ನೆ ತೆಗೆದುಹಾಕುವುದು ಮಹಿಳೆಯ ಹಿತದೃಷ್ಟಿಯಿಂದಲೂ ಸರಿಯಾದ ಚಿಕಿತ್ಸೆಯಾಗುತ್ತದೆ.

ಇತ್ತೀಚೆಗೆ ಈ ಗಡ್ಡೆಗಳ ಗಾತ್ರ ಕುಗ್ಗಿಸುವ ಹೊಸ ವಿಧಾನಗಳೂ ಬಂದಿವೆ. ಹಾರ್ಮೋನ್ ಸಂವಾದಿ ಔಷಧಿಗಳು ಬಂದಿವೆ. ಗರ್ಭಕೋಶಕ್ಕೆ ರಕ್ತ ಪೂರೈಸುವ ರಕ್ತನಾಳಗಳಿಗೆ ಕಟ್ಟುಗಳನ್ನು ಹಾಕುವುದರಿಂದಲೂ ಫೈಬ್ರಾಯ್ಡಿನ ಗಾತ್ರವನ್ನು ಕುಗ್ಗಿಸಬಹುದು. ಈ ವಿಧಾನಗಳನ್ನು ಶಸ್ತ್ರಚಿಕಿತ್ಸೆಯನ್ನು ಸುಲಭಗೊಳಿಸುವ ಪೂರ್ವಭಾವಿ ಸಿದ್ಧತೆಯಾಗಿಯೂ ಬಳಸುತ್ತಾರೆ.

ಶಸ್ತ್ರಚಿಕಿತ್ಸೆಯಿಂದ ತೆಗೆಯಲಾದ ಗಡ್ಡೆಯನ್ನು ಪರೀಕ್ಷೆಗಾಗಿ ಕಳಿಸಿ ಅದರ ನಿಜಸ್ವರೂಪವನ್ನು ಖಚಿತಪಡಿಸಿಕೊಳ್ಳಬೇಕು.

ನಮ್ಮ ಆಸ್ಪತ್ರೆಯಲ್ಲಿ ಇತ್ತೀಚೆಗೆ ಅನೇಕ ಫೈಬ್ರಾಯ್ಡುಗಳಿದ್ದ ಗರ್ಭಕೋಶವನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕಲಾಯಿತು. ಅದರ ಚಿತ್ರಗಳನ್ನು ಇಲ್ಲಿ ನೋಡಬಹುದು.


***
ಬರಹ ಮತ್ತು ಚಿತ್ರ: ಡಾ.ಜಿ.ಕೃಷ್ಣ