Friday 10 January 2014

ನಮ್ಮೆದೆಯ ಹಾಡು ಸಾವಿತ್ರಿ


ಕೆ.ನೀಲಾ 
 
 Neela K Gulbarga




ಯಾಕೆ ಹೀಗೆ ಕಣ್ಣಾಲಿ ನೀರಾಡುವುದು? ನನ್ನ ನಾನು ಪ್ರಶ್ನಿಸಿಕೊಳ್ಳುವ ಮುನ್ನವೇ ಒಂದು ಸಣ್ಣ ಬಿಕ್ಕು ತಂತಾನೇ ಕಣ್ಣ ಹನಿಗೆ ಕೈಹಿಡಿದು ನಡೆಸಿತು. ಮತ್ತೂ ಓದಿದೆ.

"ಓ ದೇವರೇ, ಇದೆಂತಹ ಅನ್ಯಾಯ? ಮಾಂಗ್ ಮಹಾರ್ ಮಕ್ಕಳಿಗೆ ಬ್ರಾಹ್ಮಣರು ಕಲ್ಲಿನಿಂದ ಹೊಡೆದರೂ ದೂರು ಹೇಳುವಂತಿಲ್ಲ. ಎಲ್ಲಿಯವರೆಗೆ ಅನ್ಯಾವನ್ನು ಸಹಿಸುವುದು? ಇನ್ನಷ್ಟು ಬರೆದರೆ ಕಣ್ಣೀರಿನ ಕಟ್ಟೆ ಒಡೆದು ಹೋಗುತ್ತದೆ..... ಓ ದೇವರೇ, ನಮ್ಮ ಧರ್ಮ ಯಾವುದು ತಿಳಿಸು. ನಿನ್ನ ನಿಜ ಧರ್ಮವನ್ನು ನಮಗೆ ಕಲಿಸು. ನಿಜದ ಧರ್ಮದಿಂದ ನಾವೆಲ್ಲರೂ ಆ ಪ್ರಕಾರ ನಮ್ಮ ಜೀವನ ನಡೆಸಬಹುದು. ಒಬ್ಬನಿಗೆ ಮಾತ್ರ ಸಕಲ ಸೌಲಭ್ಯಗಳಿದ್ದು, ಇತರರಿಗೆ ದೊರೆಯದಂತೆ ಮಾಡುವ ಧರ್ಮವು ಈ ಭೂಮಿಯಿಂದಲೇ ಕಣ್ಮರೆಯಾಗಲಿ ಹಾಗೂ ಅಂಥ ಪಕ್ಷಪಾತಿ ಧರ್ಮದ ಕುರಿತು ಬಡಾಯಿ ಕೊಚ್ಚಿಕೊಳ್ಳುವಂಥ ಮನಸು ಮತ್ತೆಂದೂ ನಮ್ಮ ಮನಸಿನೊಳಗೆ ಬಾರದಿರಲಿ.."

ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಶಾಲೆಯಲ್ಲಿ ಓದಿದ ಹನ್ನೊಂದು ವರ್ಷ ವಯಸ್ಸಿನ ಮುಕ್ತಾಬಾಯಿ ಎಂಬ ದಲಿತ ಹುಡುಗಿ ಬರೆದ ಪುಟ್ಟ ಪ್ರಬಂಧದ ಸಾಲುಗಳಿವು. ತತ್ವ-ಸತ್ವದ ದೃಷ್ಟಿಯಿಂದ ಇದು ಮಹಾಪ್ರಬಂಧವೇ ಸರಿ. ಇಡೀ ಪ್ರಬಂಧದಲ್ಲಿ ಚಾತುರ್ವರ್ಣ ವ್ಯವಸ್ಥೆಯನ್ನು ಪ್ರಶ್ನಿಸುತ್ತ, ಸನಾತನ ನಂಬಿಕೆಗಳನ್ನು ಧಿಕ್ಕರಿಸುತ್ತ ಅಕ್ಷರದ ಹಿಲಾಲು ಹಿಡಿದು ಹೊರಡುವ ಮುಕ್ತಾಬಾಯಿಯ ಈ ಲೇಖನವು 1855ರಲ್ಲಿಯೇ ಅಹ್ಮದನಗರದ 'ಧ್ಯಾನೋದಯ' ಪತ್ರಿಕೆಯಲ್ಲಿ ಪ್ರಕಟವಾಗಿದೆ. ಎಳೆ ಮನಸಿನ ನಿಲುವು ಇಷ್ಟೊಂದು ಸ್ಪಷ್ಟವಾಗಿರುವ ಹಿಂದಿನ ಕಾರಣಗಳು ಕಣ್ಣ ಮುಂದೆ ಬಿಚ್ಚಿಕೊಳ್ಳತೊಡಗಿದವು. 


ಮುಕ್ತಾಬಾಯಿ ಮಾತ್ರವಲ್ಲ ಅನೇಕ ಮಾನವೀಯ ಮನಸುಗಳನ್ನು ಸೃಷ್ಟಿ ಮಾಡಿದ್ದು ಸಾವಿತ್ರಿಬಾಯಿ ಮತ್ತು ಜ್ಯೋತಿಬಾ ಫುಲೆ. ಮಹಾರಾಷ್ಟ್ರವು ಮಹಾನ್ ಕ್ರಾಂತಿಕಾರಿಗಳನ್ನು ನಾಡಿಗೆ ಕೊಟ್ಟಿದೆ. ಅನೇಕ ಮಹಿಳೆಯರು, ಅತ್ಯಂತ ಸಾಮಾನ್ಯ ಸ್ಥರದಿಂದ ಬಂದವರು ಜನತೆಯ ಮೆದುಳನ್ನಾಳುತ್ತಿದ್ದ ಅಸಮಾನತೆಯ ಮತ್ತು ಕ್ರೌರ್ಯದ ತತ್ವವನ್ನು ಕಿತ್ತೊಗೆಯಲು ತಮ್ಮನ್ನು ತಾವು ಸಮರ್ಪಿಸಿಕೊಂಡು ದುಡಿದ ಗಾಥೆಯಿದು. ಮೇಲ್ವರ್ಗದ ಮೇಲ್ಜಾತಿಯ ದಬ್ಬಾಳಿಕೆ-ದೌರ್ಜನ್ಯದಲ್ಲಿ ನರಳುತ್ತಿದ್ದ ದಮನಿತ ಲೋಕಕ್ಕೆ ಸಮತೆಯ ಕಿರಣಗಳು ಬೇಕಿದ್ದವು. ಅಂಥ ಹೊತ್ತಿನಲ್ಲಿ ಜ್ಯೋತಿಬಾ ಮತ್ತು ಸಾವಿತ್ರಿಬಾಯಿ ಫುಲೆ ದಂಪತಿಗಳು ಅಕ್ಷರವೆಂಬ ಅರಿವಿನ ಬೆಳಕು ಹಿಡಿದು ಬಂದರು. ಮುಂದೆ ಈ ಬೆಳಕೇ ಅಂಬೇಡಕರಾದಿಯಾಗಿ ಅನೇಕರಿಗೆ ಪ್ರೇರಣೆಯಾಯಿತು. 


 

ಅದು 1848ರ ಸಂದರ್ಭ. ಹೆಣ್ಣುಮಕ್ಕಳ ಮೊದಲ ಶಾಲೆಯಲ್ಲಿ ಸಾವಿತ್ರಿ ಅಕ್ಷರ ಕಲಿಸುತ್ತಿದ್ದಳು. ಸಾವಿತ್ರಿಗಾಗ ಕೇವಲ ಹದಿನೇಳು ವಯಸು. ಒಂಬತ್ತನೆಯ ವಯಸ್ಸಿನಲ್ಲಿದ್ದಾಗ ಈ ಚುರುಕಾದ ಹುಡುಗಿಯನ್ನು ನೋಡಿಯೇ ಜ್ಯೋತಿಬಾಗೆ ಬಾಳಸಂಗಾತಿಯಾಗಿಸಿದ್ದು ಸುಗುಣಾಬಾಯಿ. ಕ್ರಿಶ್ಚನ್ ಮಿಷನರಿಯ ಅನಾಥ ಮಕ್ಕಳ ನಡುವೆ ಕೆಲಸ ಮಾಡುತ್ತಿದ್ದ ಸುಗುಣಾಬಾಯಿ ಜ್ಯೋತಿಬಾ ತಂದೆಗೆ ಸೋದರ ಸಂಬಂಧಿ. ವಿಧವೆ ಸುಗುಣಾಬಾಯಿಗೆ ಭಾರತೀಯ ಸಂಸ್ಕೃತಿಯ ಹೆಸರಿನಲ್ಲಿ ಮಹಿಳೆಯರನ್ನು ಅಗೌರವಿಸುವ, ದಲಿತ-ಶೂದ್ರರನ್ನು ಅಮಾನವೀಯವಾಗಿ ನಡೆಸಿಕೊಳ್ಳುವ ವ್ಯವಸ್ಥೆಯ ವಿರುದ್ಧ ರೋಷವಿತ್ತು. ಹೀಗಾಗಿಯೇ ಜ್ಯೋತಿಬಾನನ್ನು ಕ್ರಿಶ್ಚನ್ ಮಷಿನರಿ ಶಾಲೆಗೆ ಸೇರಿಸಿದಳು. ಅಕ್ಷರ ಕಲಿತು ಜ್ಞಾನವಂತನನ್ನಾಗಿಸಲು ಶ್ರಮಿಸಿದಳು. ಜ್ಯೋತಿಬಾ ತಂದೆಯ ವಿರೋಧವನ್ನೂ ಎದುರಿಸಿದಳು. ಜ್ಯೋತಿಬಾಗೆ ಹೆಗಲೆಣಿಯಾಗುವ ಸಂಗಾತಿಯನ್ನು ಹುಡುಕಿದ್ದು ಇವಳೇ. ಸಾವಿತ್ರಿಯೇನು ಕಡಿಮೆಯೇ. ವಯಸ್ಸು ಸಣ್ಣದಿರಬಹುದು. ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಖಂಡಾಲಾ ತಾಲ್ಲೂಕಿನ ನಯಿಗಾಂವ್ ಎಂಬ ಗ್ರಾಮದಲ್ಲಿ ಜನಿಸಿದ ಸಾವಿತ್ರಿಗೆ ಜ್ಯೋತಿಬಾರ ಸಮಾಜಮುಖಿ ಚಿಂತನೆಗಳು ತೀವ್ರವಾಗಿ ಆಕರ್ಶಿಸಿದವು. ಆದ್ದರಿಂದಲೇ ಮನೆಯ ಬಾವಿಯ ನೀರು ದಲಿತರಿಗೆ ಕೊಡುವಾಗ ಮಾವ ವಿರೋಧಿಸಿದರೂ ಗಂಡನಿಗೆ ಸಾಥ್ ನೀಡಿದಳು. ಗಂಡ ಸತ್ತ ಮೇಲೆ ಬ್ರಾಹ್ಮಣ ಮಹಿಳೆಯರಿಗೆ ಕೂದಲು ಬೋಳಿಸುವಾಗ ಖಂಡಿಸಿದಳು. ಬ್ರಾಹ್ಮಣ ಸಮುದಾಯ ಕೇಳದೇ ಇದ್ದಾಗ, ಖುದ್ದು ಕ್ಷೌರಿಕರಲ್ಲಿ ಹೋಗಿ ವಿನಂತಿಸಿದರು. ಕ್ಷೌರಿಕರೆಲ್ಲ ಸಂಘಟಿತರಾಗಿ ಬ್ರಾಹ್ಮಣ ವಿಧವೆಯರಿಗೆ ಕೂದಲು ತೆಗೆಯುವಂಥ ಪಾಪದ ಕೆಲಸ ಮಾಡುವುದಿಲ್ಲವೆಂದು ಸಾರಿದರು. ಪ್ರತಿಫಲವಾಗಿ ಕೆಲಸ ದೊರೆಯದೆ ಇವರು ಉಪವಾಸದ ದಿನಗಳನ್ನು ಇದಿರುಗೊಳ್ಳಬೇಕಾಯಿತು. ದಲಿತರಿಗೆ, ಶೂದ್ರರಿಗೆ, ಮಹಿಳೆಯರಿಗೆ ಅಕ್ಷರ ಕಲಿಯದಂತೆ ಪುರೋಹಿತಶಾಹಿ ಹೂಡಿದ ಷಡ್ಯಂತ್ರ ಮುರಿಯಲು ಸಾವಿತ್ರಿ ಗಂಡನಿಗೆ ಶಕ್ತಿಯಾಗಿ ನಿಂತಳು. ಶಾಲೆ ಮತ್ತು ಅಕ್ಷರವೇ ಅರಿಯದ ಸಾವಿತ್ರಿ ಗಂಡನಿಂದ ಅಕ್ಷರ ಕಲಿತು ಪಾಟಿ ಬಳಪ-ಹಿಡಿದು ದಲಿತರ ಗಲ್ಲಿಗೆ ನಡೆದಳು. ಒಲ್ಲೆನೆಂದವರ ಮನ ಒಲಿಸಿ ಅಕ್ಷರ ತೀಡಿಸಿದಳು. ಅಕ್ಷರವೆಂದರೆ ಅರಿವಿನ ಗೂಡವಲ್ಲವೇ? ಹೀಗಾಗಿ ಪುರೋಹಿತಶಾಹಿಯು ನೇರ ಧಾಳಿಗಿಳಿಯಿತು. ಸಾವಿತ್ರಿಯ ಮೇಲೆ ಹೆಂಡಿ ಎಸೆದರು. ಹೊಡೆದ ಚೂಪುಗಲ್ಲು ಹಣೆಗೆ ಗಾಯಗೊಳಿಸಿತು. ನೆಲಕ್ಕೆ ಹನಿದ ರಕ್ತವು ಸಾವಿತ್ರಿಯನ್ನು ಹಿಮ್ಮೆಟ್ಟಿಸಲಿಲ್ಲ. ಪ್ರತಿ ಹನಿಗೊಂದರಂತೆ ಶಾಲೆ ತೆರೆವ ಪ್ರತಿಜ್ಞೆಗೆ ಪ್ರೇರಣೆಯಾಯಿತು. ಪಾಳೇಗಾರಿ ಪ್ರತಿನಿಧಿಗಳು ಹೆಂಡಿ ಹೊಡೆದು ಹೊಲಸು ಮಾಡಿದ ಸೀರೆಯನ್ನು ಜ್ಯೋತಿಬಾ ಸ್ವತಃ ತೊಳೆದರು. ಕೊಳೆತ ಸಮಾಜವನ್ನು ಹಸನುಗೊಳಿಸುವಂತೆ. ಸುಮ್ಮನಿರುವರೇ ಸನಾತನಿಗಳು? ಜನತೆಯ ಹಕ್ಕಿನ ದನಿಗಳು ಬಲಗೊಳ್ಳುತ್ತಿದ್ದಂತೆಯೇ, ದಿಕ್ತಪ್ಪಿಸಲು ಧರ್ಮದ ಪೋಷಾಕು ತೊಟ್ಟರು. ಹೆಂಗಸರು ಅಕ್ಷರ ಕಲಿತರೆ ಗಂಡ ಸತ್ತು ವಿಧವೆಯಾಗುವರೆಂದು ಸುಳ್ಳು ಸಾರಿದರು. ಆಗ ಮೌಢ್ಯದ ವಿರುದ್ಧವೂ ದನಿಯೆತ್ತಬೇಕಾಯಿತು. ಅದಕ್ಕೂ ಅಕ್ಷರವೇ ಆರಂಭವಲ್ಲವೇ? ಹೀಗಾಗಿ ಶಿಕ್ಷಣದಲ್ಲಿ ತರಬೇತುಗೊಳ್ಳಲು 1847ರಲ್ಲಿ ಸಾವಿತ್ರಿ ಗೆಳತಿ ಫಾತಿಮಾಶೇಖ್ಳೊಂದಿಗೆ ಅಹ್ಮದನಗರಕ್ಕೆ ಬರುವಳು. ಎಂಥ ಚಾರಿತ್ರಿಕ ಸಂದರ್ಭವಿದು ನೋಡಿ. ಮಹಿಳೆಯರೆಂದರೆ ನಾಲ್ಕು ಗೋಡೆಯ ನಡುವಲ್ಲಿ, ಪುರುಷನ ಆಸರೆಯಲ್ಲಿ ಇರಬೇಕೆಂದು 'ಮನುಸ್ಮೃತಿ' ಹೇರಿದ ನಿಯಮ ಮುರಿದ ಸಾವಿತ್ರಿಯೊಂದಿಗೆ ಕೈಜೋಡಿಸಿದ್ದು ಫಾತಿಮಾಶೇಖ್. ಫಾತಿಮಾಶೇಖ್ ಸಾವಿತ್ರಿಯೊಂದಿಗೆ ಅಕ್ಷರದ ಬತ್ತಿಗೆ ತೈಲವಾಗಿ ದುಡಿದಳು. 

 

 
1846ರಲ್ಲಿ ಮಹಾರ್ವಾಡೆಯಲ್ಲಿ ದಲಿತರಿಗಾಗಿ ಸುಗುಣಾಬಾಯಿ ಶಾಲೆಯೊಂದನ್ನು ಪ್ರಾರಂಭಿಸಿದಳು. ಬ್ರಾಹ್ಮಣರ ಗುಂಪೊಂದು ಮತಾಂತರ ಮಾಡಿಸಲು ಶಾಲೆ ತೆರೆದಿರುವರೆಂದು ಅಪಪ್ರಚಾರ ಮಾಡಿ ಮುಚ್ಚಿಸಿದರು. ಜ್ಯೋತಿಬಾ ಸುಮ್ಮನಿರಲಿಲ್ಲ. ಪುಣೆಯಲ್ಲಿ 25-12-1846ರಲ್ಲಿಯೇ ಬಹಿರಂಗ ಸಭೆ ನಡೆಸಿ, ಪುರೋಹಿತಶಾಹಿಯು ದಲಿತ-ಶೂದ್ರರಿಗೆ ಅಕ್ಷರ ಕಲಿಯಗೊಡದಂತೆ ಮಾಡಿದ ಕುತಂತ್ರವಿದೆಂದು ಸಾರಿ ಹೇಳಿದರು. ಸಭೆಯಲ್ಲಿದ್ದ ಭಿಡೆ ಎಂಬ ಬ್ರಾಹ್ಮಣರೊಬ್ಬರು ಹೆಣ್ಣುಮಕ್ಕಳ ಶಾಲೆಗಾಗಿ ತಮ್ಮ ಮನೆ ಕೊಡಲು ಮುಂದೆ ಬಂದರು. ಹೀಗೆ ಹೆಣ್ಣುಮಕ್ಕಳಿಗಾಗಿ ಮೊದಲ ಶಾಲೆ ಆರಂಭ ಮಾಡಿದ ಕೀರ್ತಿ ಸಾವಿತ್ರಿ ದಂಪತಿಗಳದ್ದು. ಸಾವಿತ್ರಿ, ಫಾತಿಮಾಶೇಖ್ ಶಿಕ್ಷಕಿಯರಾಗಿ ಶಾಲೆ ಮುನ್ನಡೆಸಿದರು. ಮುಂದಕ್ಕೆ ಕಾರ್ಮಿಕ-ರೈತರಿಗಾಗಿ ರಾತ್ರಿ ಶಾಲೆ ಆರಂಭಿಸಿದರು. ಇದು ಭಾರತದಲ್ಲಿಯೇ ಪ್ರಥಮ ಶಾಲೆ. ವಿಧವೆಯರ ಕಂದಗಳನ್ನು ಉಳಿಸಲು 'ಬಾಲ್ಯಹತ್ಯಾ ಪ್ರತಿಬಂಧಕ ಗೃಹ' ರಚಿಸಿ, ಸಾವಿತ್ರಿ ಅನೇಕ ಕೂಸುಗಳಿಗೆ ಜೋಗುಳ ಕಟ್ಟಿ ಲಾಲಿ ಹಾಡಿದಳು. ಅಂಥದೊಂದು ಮಗುವನ್ನು ತಾನೇ ದತ್ತು ತಗೊಂಡಳು. ಅವನೇ ಯಶವಂತ. ಮುಂದಕ್ಕೆ ಬೆಳೆ-ಬೆಳೆದು ವೈದ್ಯನಾದ. ಪಡೆದವರಂತೆ ಜನತೆಯೊಂದಿಗೆ ದಿನಚರಿ ಹೆಣೆದುಕೊಂಡ. 1896-97ರಲ್ಲಿ ಎರಗಿದ ಬರ ಮತ್ತು ಪ್ಲೇಗ್ ಹಿಮ್ಮೆಟ್ಟಿಸಲು ತನ್ನವ್ವ ಸಾವಿತ್ರಿಯೊಂದಿಗೆ ಅವಿರತವಾಗಿ ದುಡಿದನು. ಬರದಲ್ಲಿ ತತ್ತರಿಸಿದ ಹಸಿದ ಹೊಟ್ಟೆಗಾಗಿ ಅನ್ನ ದಾಸೋಹ, ಅನಾಥ ಮಕ್ಕಳ ಕಲ್ಯಾಣಕ್ಕಾಗಿ 53 ವಸತಿಶಾಲೆಗಳು ಜನತೆಗೆ ಭರವಸೆಯ ಕೇಂದ್ರಗಳಾಗಿದ್ದವು. ವಿಧವಾ ವಿವಾಹದೊಂದಿಗೆ, ಅಂತರ್ಜಾತೀಯ ವಿವಾಹಗಳನ್ನು ನೆರವೇರಿಸಿದ್ದ ಸಾವಿತ್ರಿ-ಜ್ಯೋತಿಬಾ ಬ್ರಾಹ್ಮಣ ಪುರೋಹಿತರಿಲ್ಲದ ಮದುವೆಗಳನ್ನೂ ಮಾಡಿಸಿದ್ದರು. ಜ್ಯೋತಿಬಾ ತೀರಿಕೊಂಡಾಗ ಸಾವಿತ್ರಿ ಸ್ವತಃ ತಾನೇ ಚಿತೆಗೆ ಅಗ್ನಿ ಕೊಡುವಳು. ದುಃಖದ ಹೊತ್ತಿನಲ್ಲಿಯೂ ಸಿದ್ಧಾಂತದ ಮೆರುಗು ಹೊಳಪಿಸಿದ ಸಾವಿತ್ರಿ ಮೊದಲ ಶಿಕ್ಷಕಿ ಅಷ್ಟೇ ಅಲ್ಲ, ಈ ನೆಲಕ್ಕೆ ಬರೆದ ನಮ್ಮೆಲ್ಲರ ಎದೆಯ ಹಾಡು. ಸಾವಿತ್ರಿಯ ಜನ್ಮದಿನ ಜನೆವರಿ 3 ಶಿಕ್ಷಕಿಯರ ದಿನವಾಗಬಾರದೇಕೆ?


 


ಹೌದು. ಸಾವಿತ್ರಿ ಕವಿಯೂ ಆಗಿದ್ದಳು. ಕಾವ್ಯ ಕ್ರಾಂತಿಯ ತಾಯಿಯಲ್ಲವೇ? 1854ರಲ್ಲಿಯೇ 'ಕಬ್ಯ' ಅರಳಿದ ಕವನಗಳು' ಸಂಕಲನ ಪ್ರಕಟವಾಗುವುದು. ಭಾಷಣ ಹಾಡುಗಳ ಸಂಗ್ರಹದೊಂದಿಗೆ 1891ರಲ್ಲಿ 'ಪರಿಶುದ್ಧ ರತ್ನಗಳ ಸಾಗರ' ಪುಸ್ತಕ ಅನಾವರಣವಾಗುವುದು. ಜಾತಿಯ ಬಹಿಷ್ಕಾರಕ್ಕೆ ಬಗ್ಗದ, ಅಪಪ್ರಚಾರಕ್ಕೆ ಕುಗ್ಗದ ಸಾವಿತ್ರಿ-ಜ್ಯೋತಿಬಾರದ್ದು ಅಪರೂಪದ ಜೋಡಿ. ಸಾವಿತ್ರಿಯು ಜ್ಯೋತಿಬಾಗೆ ಬರೆದ ಪ್ರೇಮದ ಪತ್ರಗಳ ತುಂಬ ನೊಂದ ಜನತೆಯ ಕಣ್ಣೀರು ತೊಡೆಯುವ ಚರ್ಚೆಗಳೇ ತುಂಬಿಕೊಂಡಿವೆ. ಪರಸ್ಪರ ಪ್ರೀತಿಸುವುದೆಂದರೆ ಹೀಗೆ ಅನಿಸುವಂತೆ ಬಾಳಿದರು. ಸಮಾಜಕ್ಕೂ ಕುಟುಂಬಕ್ಕೂ ವ್ಯಕ್ತಿಗೂ ಮಾನವೀಯತೆಯ ಸಂಬಂಧ ಹೆಣೆಯುವ ಹೊಣೆಗಾರಿಕೆ ನಿರ್ವಹಿಸಿದ ಇವರು 1873ರಲ್ಲಿ ಸತ್ಯಶೋಧನ ಸಮಿತಿಯೊಂದನ್ನು ರಚಿಸಿದರು. ಎಲ್ಲೆಡೆ ಸಂಚರಿಸಿ ಪೌರೋಹಿತ್ಯದ ಬೇರುಗಳನ್ನು ಅಲುಗಾಡಿಸಿದರು. ಸಮಾಜದಲ್ಲಿ ಅಮೂಲಾಗ್ರವಾಗಿ ಪರಿವರ್ತನೆ ಬಯಸಿ ಸಾವಿತ್ರಿ ಮಾಡಿದ ಕೆಲಸಗಳ ಪಟ್ಟಿ ಕೊಡುವುದೆಂದರೆ ಮುಗಿಲ ಚುಕ್ಕಿ ಎಣಿಸಿದಂತೆ. 


1997ರಲ್ಲಿ ಭಾರತದ ಸರಕಾರವೇನೋ ಸಾವಿತ್ರಿಯ ಭಾವಚಿತ್ರದೊಂದಿಗೆ ಅಂಚೆಚೀಟಿ ಬಿಡುಗಡೆ ಮಾಡಿತು. ಇದು ಸಾಕೇ? ಸಾವಿತ್ರಿಯು ನಮಗೆ ನೊಂದವರ, ದಲಿತರ, ರೈತ-ಕಾರ್ಮಿಕರ, ಎರಡನೆಯ ದರ್ಜೆಗೆ ತಳ್ಳಲ್ಪಟ್ಟ ಮಹಿಳೆಯರ, ಅನಕ್ಷರತೆಯಿಂದ ಬಡತನದಿಂದ ನರಳುತ್ತಿರುವ ಭಾರತದ ದರ್ಶನ ಮಾಡಿಸಿರುವಳು. ಈ ಚಿತ್ರಣ ಇಂದಿಗೂ ಪೂರ್ತಿ ಬದಲಾಗಿಲ್ಲ. ಈಗಲೂ ಮಹಿಳಾ ಸಾಕ್ಷರತೆ ಶೇಕಡಾ ಅರವತ್ತು ದಾಟಿಲ್ಲ. ಪೌರೋಹಿತ್ಯದ ಧಾಳಿ ನಿಂತಿಲ್ಲ. ದಲಿತರಿಗೆ ಬಹಿಷ್ಕಾರ, ಅಪಮಾನ ತಪ್ಪಿಲ್ಲ. ಹಸಿವಿನ ಸಾಮ್ರಾಜ್ಯ ಸೃಷ್ಟಿಸಿ ಜಗತ್ತಿನ ಕೋಟ್ಯಾಧಿಪತಿಗಳಾಗುತ್ತಿರುವರು. ಈ ಕೋಟ್ಯಾಧಿಪತಿಗಳ ಪ್ರತಿನಿಧಿಗಳು ದೇಶವಾಳಲು ಹೊರಟಿರುವರು. ಈಗಲೂ ಹಕ್ಕಿನ ದನಿಯಡಗಿಸಲು ಧರ್ಮದ ಪೋಷಾಕು ತೊಡುವರು. ಆದ್ದರಿಂದಲೇ ಸಾವಿತ್ರಿ ನಮಗೀಗಲೂ ಪ್ರೇರಣೆ ಮತ್ತು ಪ್ರಸ್ತುತ.


***

No comments:

Post a Comment