Friday 15 November 2013

ವಚನಾನುಸಂಧಾನ: ಕೆ ನೀಲಾ

 Neela K Gulbarga


ಬೀದಿಯ ತುಂಬ ಬೆಳದಿಂಗಳು ಹರಡಿಕೊಂಡಿದೆ. ಕಂಬದ ಲೈಟು ಕಿರಿಕಿರಿಯುಂಟು ಮಾಡುತ್ತಿದೆ. ಹಾಲ್ದಿಂಗಳ ಹೊತ್ತಲ್ಲಿ ಚಂದ್ರನ ಬೆಳಕು ಹೊರತು ಮತ್ತ್ಯಾವ ಬೆಳಕು ಇರಬಾರದೆನಿಸುತ್ತದೆ. ನಿತಾಂತವಾಗಿ ಹರಡಿಕೊಂಡ ಹೊಂಬೆಳಕನ್ನು ಮನದುಂಬಿಕೊಳ್ಳುವುದರಲ್ಲಿ ಅನಿರ್ವಚನೀಯವಾದ ಆನಂದವಿದೆ. ಈ ಬಾರಿ ಬೀದರದ ಶರಣ ಉದ್ಯಾನವನದಲ್ಲಿ ಆಯೋಜಿಸಿದ ಶರಣಸಂಗಮದ ವಚನಾನುಸಂಧಾನಕ್ಕೆ ಕಿವಿಗೊಟ್ಟಿದ್ದೆ. ಹೊರಗೆ ಬೆಳದಿಂಗಳು. ಒಳಗೆ ವಚನಗಳ ಬೆಳಕು. ಅಕ್ಕ ಅನ್ನಪೂರ್ಣ ಆಡಿದ ಮಾತುಗಳು ಅರ್ಥಪೂರ್ಣವೆನಿಸಿದವು.

'ಇನ್ನೂ ಎಷ್ಟು ದಿನ ಈ ಜಾತಿಗಳ ಬಂಧನದಲ್ಲಿ ನರಳುವುದು? ಹನ್ನೆರಡನೆ ಶತಮಾನಕ್ಕೇ ಬಸವಾದಿಪ್ರಮಥರು ಮಧುವರಸರ ಮಗಳು ಮತ್ತು ಹರಳಯ್ಯನ ಮಗನಿಗೆ ಮದುವೆ ಮಾಡಿಸಿ ತಾರತಮ್ಯದ ಜಾತಿವ್ಯವಸ್ಥೆಯನ್ನು ತಿರಸ್ಕರಿಸಿದರು. ಇಬ್ಬರದೂ ಬೇರೆ-ಬೇರೆ ಜಾತಿ. ಶ್ರೇಣೀಕೃತ ಚಾತುರ್ವರ್ಣ ವ್ಯವಸ್ಥೆಯನ್ನು ಧಿಕ್ಕರಿಸಿ ಸಮಾನತೆಯ ಬದುಕು ಕಟ್ಟಲು ಶರಣರು ತಮ್ಮ ಬದುಕನ್ನೇ ಬಲಿದಾನಗೈದರು. ಪುರೋಹಿತಶಾಹಿಯು ಅಂತರ್ಜಾತಿ ವಿವಾಹ ಮಾಡಿದ ಶರಣರ ಕಣ್ಣು ಕಿತ್ತರು. ಆನೆ ಕಾಲಿಗೆ ಕಟ್ಟಿ ಕಲ್ಯಾಣದ ಪಟ್ಟಣದ ತುಂಬ ಎಳೆದರು. ಆದರೆ ಇಂಥ ಕಠೋರತಮ ಶಿಕ್ಷೆಗೆ ಕಿಂಚಿತ್ತೂ ಹೆದರಲಿಲ್ಲ. ಮತ್ತು ವೈದಿಕ ಸಿದ್ದಾಂತ ಒಪ್ಪಲಿಲ್ಲ. ಶರಣರ ಈ ತ್ಯಾಗದ ಹಿಂದೆ ನಮ್ಮ ಬದುಕಿನ ಭವಿಷ್ಯವು ಹಸನುಗಳಿಸುವ ಕನಸುಗಳಿವೆ. ನಾವೀಗ ನಮ್ಮ ಮಕ್ಕಳ ಮದುವೆಯನ್ನು ಜಾತಿ ಮೀರಿ ಮಾಡುವ ಜರೂರಿ ಇದೆ. ಇನ್ನು ಎಷ್ಟು ದಿನ ಜಾತಿ ಪ್ರೇಮಿಗಳಾಗುವಿರಿ?' 


ಅಕ್ಕ ಅನ್ನಪೂರ್ಣ ಅವರ ಮಾತುಗಳು ಕಿವಿಯಲ್ಲಿ ಅನುರಣಿಸುತ್ತಿದ್ದವು.
 


ಹೌದು. ಎಷ್ಟು ದಿನ ಹೀಗೆ ಅವೈಜ್ಞಾನಿಕವಾಗಿ ಬಾಳುವುದು? ನಮಗೊಂದು ಬಹು ದೊಡ್ಡ ಮಾನವೀಯ ಪರಂಪರೆಯಿದೆ. ಜೇವರ್ಗಿಯ ಬಸವಕೇಂದ್ರದ ಕಾರ್ಯಕ್ರಮ ವಚನ-ಚಿಂತನಕ್ಕೆ ಹೋದಾಗ ಈ ವಿಷಯ ಪ್ರಸ್ತಾಪಸಿಬೇಕಾಯಿತು. ವೈದಿಕರಂತೆಯೇ ಲಿಂಗಾಯತರು ನಡೆದುಕೊಂಡರೆ ವ್ಯತ್ಯಾಸವೇನು? ಲಿಂಗಾಯತರಲ್ಲಿಯೇ ಸಕಲೆಂಟು ಪಂಗಡಗಳಿವೆ. ಉಪಜಾತಿಗಳಿವೆ. ಬಗಿಗಳಿವೆ. ಅವುಗಳ ನಡುವೆ ಮದುವೆಗಳು ಏರ್ಪಡುವುದಿಲ್ಲ. ಲಿಂಗಾಯತ ತತ್ವವೆನ್ನುವುದು ಜಾತಿಯಾಗಿ ಮಾರ್ಪಟ್ಟಿದೆ. ಲಿಂಗಾಯತರು ಕೆಳಜಾತಿಯವರೊಂದಿಗೆ ಮದುವೆ ಮಾಡಿಕೊಳ್ಳುವುದು ದೂರ ಉಳಿಯಿತು. ತಮಗಿಂತಲೂ ಕೆಳಜಾತಿಯವರಿಗೆ ಬಾಡಿಗೆಗೆ ಮನೆಗಳು ಸಹ ಕೊಡಲಾರದ ಪ್ರಕರಣಗಳಿವೆ. ಲಿಂಗಾಯತ್ ಸಿದ್ಧಾಂತವನ್ನು ಪ್ರಖರವಾಗಿ ಮಂಡಿಸುವವರು ಸಹ ತಮ್ಮ ಮಕ್ಕಳ ಮದುವೆಯ ಪ್ರಶ್ನೆ ಬಂದಾಗ ಜಾತಿಪ್ರೇಮದತ್ತ ಜಾರುವುದು ನೋಡುತ್ತಿದ್ದೇವೆ. (ಅಪವಾದವೆನ್ನುವಂಥ ಪ್ರಕರಣಗಳಿವೆ). ಲಿಂಗಾಯತಧರ್ಮವು ಹಿಂದೂಧರ್ಮಕ್ಕೆ ಸಂಬಂಧವಿಲ್ಲವೆಂದು ಪ್ರತಿಪಾದಿಸಲಾಗುತ್ತಿದೆ. ಹೌದು. ನೈಜಾರ್ಥ-ಮೂಲಾರ್ಥದಲ್ಲಿ ಲಿಂಗಾಯತ ತತ್ವವು ವೈದಿಕತ್ವವನ್ನು ಧಿಕ್ಕರಿಸಿ ಹುಟ್ಟಿದ್ದೇ. ವೈದಿಕತೆ-ಕರ್ಮಠತೆ ಪ್ರತಿಪಾದಿಸುವ ಯಾವುದೇ ಧರ್ಮದೊಂದಿಗೆ ಲಿಂಗಾಯತ ತತ್ವವನ್ನು ಸಮೀಕರಿಸಲು ಸಾಧ್ಯವೇ ಇಲ್ಲ. ಲಿಂಗಾಯತ ಎನ್ನುವುದು ಜಾತಿ-ಧರ್ಮವಾಗಿ ನೋಡಲಾಗದು. ಅದನ್ನೊಂದು ಸಿದ್ಧಾಂತವಾಗಿಯೇ ನೋಡಬೇಕಾಗುತ್ತದೆ. ಹಾಗೆ ನೋಡಿದರೆ ಹನ್ನೆರಡನಯ ಶತಮಾನಕ್ಕೆ ವಿಜ್ಞಾನ-ತಂತ್ರಜ್ಞಾನವು ಈ ಪರಿ ಬೆಳೆದಿರಲಿಲ್ಲ. ಆದರೆ ಅಮಾನವೀಯ ಜಾತಿ ವ್ಯವಸ್ಥೆಯನ್ನು ಕಿತ್ತು ಹಾಕುವುದೇ ಶರಣರ ಗುರಿಯಾಗಿತ್ತು. ಅವರ ನಿಲುವು ವೈಜ್ಞಾನಿಕವಾದದ್ದೇ ಆಗಿತ್ತು. ಆದ್ದರಿಂದಲೇ ಸಕಲ ಜೀವಾತ್ಮರಿಗೆ ಲೇಸು ಬಯಸುವ ಸಿದ್ದಾಂತವನ್ನೊಳಗೊಂಡ ತತ್ವವನ್ನು ಕಟ್ಟಿಕೊಟ್ಟರು. ಆದ್ದರಿಂದ ಲಿಂಗಾಯತರು ಯಾವ ಕಾರಣಕ್ಕೂ ಜಾತಿವಾದಿಗಳಾಗಬಾರದಾಗುತ್ತದೆ. ಲಿಂಗವನ್ನು ಆಯತ ಮಾಡಿಕೊಂಡವರು ಲಿಂಗಾಯತರು ಅಂತಾದರೆ, ಲಿಂಗವನ್ನು ಅಖಂಡ ಭೂಮಂಡಲದ ಸಂಕೇತವೆಂದು ಒಪ್ಪುವುದಾದರೆ ಲಿಂಗದ ತತ್ವವನ್ನು ಒಂದು ಜಾತಿಗೆ ಧರ್ಮಕ್ಕೆ ಸೀಮಿತಗೊಳಿಸಬಾರದಾಗುತ್ತದೆ. ವರ್ಗ-ವರ್ಣ-ಜಾತಿ-ಲಿಂಗ ತಾರತಮ್ಯವನ್ನು ತೊಡೆಯಲೆಂದೇ ಹುಟ್ಟಿಕೊಂಡ ಚಳುವಳಿಯ ಬಹು ಪ್ರಮುಖ ಘಟ್ಟವೇ ಅಂರ್ಜಾತಿ ವಿವಾಹದ್ದಾಗಿತ್ತು. ಪ್ರಜ್ಞಾಪೂರ್ವಕವಾಗಿ ಚಿಂತನೆ-ಚಳುವಳಿಯನ್ನು ಕಟ್ಟಿದ ವಚನಕಾರರಿಗೆ ವಿವಾಹ ಮತ್ತು ಜಾತಿ ಕುರಿತು ಸ್ಪಷ್ಟ ತಿಳುವಳಿಕೆಯಿತ್ತು. ಜಾತಿವ್ಯವಸ್ಥೆಯನ್ನು ಗಟ್ಟಿಗೊಳಿಸಿ ಆರ್ಥಿಕ ಹಿಡಿತ ಹೊಂದಲು ವಿವಾಹ ಪದ್ಧತಿಯನ್ನು ಬಳಸಿಕೊಳ್ಳಲಾಗುತ್ತಿದೆಯೆಂಬುದು ಚಾರಿತ್ರಿಕ ಸತ್ಯ. ಜಾತಿ ಪದ್ದತಿ ಕಾಪಾಡಬೇಕೆಂಬುದು ಕರ್ಮಸಿದ್ಧಾಂತ. ಹೀಗಾಗಿಯೇ ಅಂತರ್ಜಾತಿ ವಿವಾಹ ಮಾಡಿದ್ದಕ್ಕಾಗಿ ಶರಣರಿಗೆ ಹಿಂಸಾತ್ಮಕವಾಗಿ ಶಿಕ್ಷಿಸಿದ್ದು ಪುರೋಹಿತಶಾಹಿ. ಕರ್ಮಸಿದ್ಧಾಂತದ ಜಾತಿವ್ಯವಸ್ಥೆಯ ಬೇರು ಅಲ್ಲಾಡಿಸುವುದಕ್ಕಾಗಿಯೇ ವಿವಾಹವನ್ನು ಜಾತಿಯ ಹೊರಗೆ ಏರ್ಪಡಿಸಿದ್ದು ವಚನಸಿದ್ಧಾಂತ. ಇವೆರಡು ಸಿದ್ಧಾಂತಗಳ ನಡುವಿನ ಸಂಘರ್ಷವು ನಿತ್ಯ ನಿರಂತರವಾದದ್ದು. ಈ ಸಂಘರ್ಷವನ್ನು ಈಗಲೂ ಗಮನಿಸಬಹುದು. ಯಾವ ಕಾರಣಕ್ಕೂ ಜಾತಿ-ಧರ್ಮ ಮೀರಿ ಮದುವೆಯಾಗಲಾರದಂಥ ಚಟುವಟಿಕೆಗಳು ಭಯೋತ್ಪಾದಕ ರೂಪದಲ್ಲಿ ನಡೆಯುತ್ತಿರುತ್ತವೆ. ಕರುಳ ಕುಡಿಗಳಿಗಿಂತಲೂ ಜಾತಿ-ಧರ್ಮವೇ ಶ್ರೇಷ್ಠ-ಪವಿತ್ರವೆಂಬಂಥ ನಂಬಿಕೆಯನ್ನು ಹೆತ್ತರವರಲ್ಲಿ ಬಿತ್ತಲಾಗುತ್ತಿದೆ. ಪೌರೋಹಿತ್ಯದ ಈ ಕ್ರೂರ ಹಿಡಿತವು ಕೆಲವೊಮ್ಮೆ ವಿಕಾರವಾಗಿ ವ್ಯಕ್ತವಾಗುತ್ತಿರುತ್ತದೆ. ಯುವಜನತೆ ತಮ್ಮ ಬಾಳಸಂಗಾತಿಯನ್ನು ಆಯ್ಕೆ ಮಾಡಿಕೊಂಡಾಗ ನೈತಿಕ ಪೋಲೀಸಗಿರಿಯ ಹೆಸರಿನಲ್ಲಿ ಬಹಿರಂಗವಾಗಿಯೇ ಧಾಳಿ ನಡೆಸಲಾಗುತ್ತಿದೆ. ಇಂಥ ಕೃತ್ಯವನ್ನು ಬೆಂಬಲಿಸುವುದಕ್ಕಾಗಿ ಸಮೂಹವಿರುತ್ತದೆ. ಸರಿಯೆನ್ನುವಂಥ ಅಭಿಪ್ರಾಯ ರೂಪಿಸಲು ಅನೇಕ ಮಾದ್ಯಮಗಳು ಟೊಂಕಕಟ್ಟಿ ನಿಂತಿರುತ್ತವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಾತಿ ರಕ್ಷಿಸಿಕೊಳ್ಳುವ ಇಂಥ ಕ್ರಮಗಳು ಸಮಾಜವನ್ನು ಹಿಮ್ಮುಖವಾಗಿ ಚಲಿಸುವಂತೆ ಮಾಡುತ್ತವೆ. 


 

ಹಾಗೆ ನೋಡಿದರೆ, ಮಾನವರ ನಾಗರೀಕತೆಯು ಅನೇಕ ಹೊರಳು ಹಾದಿಗಳಲ್ಲಿ ಕ್ರಮಿಸುತ್ತ ಬಂದಂತೆ ಸ್ತ್ರೀ-ಪುರುಷರ ಸಂಬಂಧಗಳು ಬದಲಾಗತೊಡಗಿದವು. ಸಂತಾನೋತ್ಪತ್ತಿ ಮತ್ತು ಕಾಮ ಪೂರೈಕೆಯು ವೈವಾಹಿಕ ಚೌಕಟ್ಟಿಗೆ ಪಲ್ಲಟಗೊಳ್ಳತೊಡಗಿತು. ಕಾಲಕಾಲಕ್ಕೆ ನಾನಾ ನಮೂನೆಯ ವೈವಾಹಿಕ ಸ್ವರೂಪಗಳು ಹುಟ್ಟಿಕೊಂಡವು. ಅವೆಲ್ಲವೂ ಖಾಸಗಿ ಆಸ್ತಿಯ ಮೇಲೆ ನಿರ್ಭರವಾಗಿದ್ದವು. ಕ್ರಮೇಣ ಮದುವೆಯು ಪುರುಷ ಮತ್ತು ಮಹಿಳೆಯ ನಡುವಿನ ಸಂಬಂಧವಾಗಿ ಉಳಿಯದೆ, ಅದು ಜಾತಿಯನ್ನು ಗಟ್ಟಿಗೊಳಿಸುವ ಮತ್ತು ಮಹಿಳೆಯ ಅಸ್ತಿತ್ವದ ಮೇಲೆ ಹತೋಟಿ ಸಾಧಿಸುವ ಸಂಸ್ಥೆಯಾಗಿ ಮುಂದುವರೆಯತೊಡಗಿತು. ಅನೇಕ ಬುಡಕಟ್ಟು, ಆದಿವಾಸಿ, ಮತ್ತಿತರ ಸಮುದಾಯಗಳ ನಡುವಲ್ಲಿ ವಿಭಿನ್ನ ರೀತಿಯ ಮದುವೆ ಪದ್ಧತಿಗಳಿವೆ. (ಈ ಚರ್ಚೆ ಒತ್ತಟ್ಟಿಗಿರಲಿ.) ಆದರೆ ಈ ಹೊತ್ತಿನಲ್ಲಿ ಮದುವೆಯೆನ್ನುವುದು ಜಾತಿ ರಕ್ಷಿಸುವ ಸಾಧನವಾಗಿರುವುದರಿಂದ ಖ್ವಾಫ್ ಪಂಚಾಯತ್ನಂಥ ವ್ಯವಸ್ಥೆಗಳು ಅಂತರ್ಜಾತಿ ವಿವಾಹ ತಡೆಗೋಡೆಗಳಾಗಿ ನಿಂತಿವೆ. ಲವ್ ಜೆಹಾದ್ ಎಂಬ ಹೆಸರಿಟ್ಟು, ಮತಾಂತರ ಮಾಡಿಸುವರೆಂಬ ವಾದ ಮುಂದಿಟ್ಟು ಧಾಳಿ ನಡೆಸಲಾಗುತ್ತಿದೆ. ಧಾರ್ಮಿಕ ಗುರುಗಳು ಜಾತಿವ್ಯವಸ್ಥೆ ಇರಬೇಕೆಂದು ಬಹಿರಂಗವಾಗಿ ಪ್ರತಿಪಾದಿಸುವುದರ ಅರ್ಥವೇನೆಂದರೆ ಅಂತರ್ಜಾತಿ ಅಥವ ಅಂತರಧರ್ಮೀಯ ವಿವಾಹ ನಡೆಯಬಾರದೆಂದೇ ಅರ್ಥ. ಸುತ್ತಿಬಳಸಿ ವಿವಾಹ ಸಂಸ್ಥೆಯನ್ನು ತನ್ನ ಕಪಿಮುಷ್ಠಿಯಲ್ಲಿಟ್ಟುಕೊಳ್ಳಲು ಜಾತಿ ಸಂಸ್ಥೆಯು ಹೆಣಗುತ್ತಿರುತ್ತದೆ. ಅಂತರ್ಜಾತಿ-ಅಂತರ್ಧಮೀಯ ಮದುವೆಗಳು ನಡೆದಾಗ ಜಾತಿ ವ್ಯವಸ್ಥೆಯು ಇನ್ನಿಲ್ಲದಂತೆ ನರಳುತ್ತದೆ. ಕೆರಳುತ್ತದೆ. ಯುವಜನತೆಯನ್ನು ಹೆಚ್ಚೆಚ್ಚು ಜಾತಿವಾದಿಗಳು ಮತ್ತು ಮತೀಯವಾದಿಗಳನ್ನಾಗಿ ಪರಿವರ್ತಿಸಲು ಶ್ರಮಿಸುತ್ತದೆ. ಅಂದರೆ ಅಷ್ಟರ ಮಟ್ಟಿಗೆ ಅವೈಜ್ಞಾನಿಕತೆಯನ್ನು ಬಿತ್ತುತ್ತದೆ. ಈ ಸಂಘರ್ಷದ ಕಾರಣವಾಗಿಯೇ (ಅವ)ಮರ್ಯಾದಾ ಹತ್ಯೆಗಳು ಘಟಿಸುತ್ತಿವೆ.

ಚರ್ಚೆಯೊಂದರಲ್ಲಿ ದ್ವಾರಕಾನಾಥರು ಕೇಳಿದ ಪ್ರಶ್ನೆ ಹೀಗಿದೆ: ಲಿಂಗಾಯತರು ವೈದಿಕರಂತೆ ಶ್ರೇಣೀಕೃತ ವ್ಯವಸ್ಥೆಯ ನಂಬಿಕೆ ಹೊಂದಿದ್ದರೆ ಹಿಂದುಳಿದವರು ದಲಿತರು ಮಹಿಳೆಯರು ಹೇಗೆ ಅವರನ್ನು ನಂಬಬೇಕು? ಲಿಂಗಾಯಧರ್ಮದ ಪ್ರತಿಪಾದಕರು ದಲಿತ ಹಿಂದುಳಿದವರೊಂದಿಗೆ 'ರೋಟಿ ಬೇಟಿ' ಸಂಬಂಧ ಏರ್ಪಡಿಸಲು ಸಿದ್ಧರಿದ್ದಾರೆಯೇ? ಅಂದರೆ ಪ್ರಜ್ಞಾಪೂರ್ವಕವಾಗಿ ದಲಿತ-ಹಿಂದುಳಿದವರೊಂದಿಗೆ ವೈವಾಹಿಕ ಸಂಬಂಧ ಏರ್ಪಡಿಸುವರೇ? ಇಷ್ಟಕ್ಕೂ ರಕ್ತಸಂಬಂಧದಲ್ಲಿ ವಿವಾಹ ನಡೆದರೆ ಶೇಕಡ 25ರಷ್ಟು ಸಂತಾನವು ಅಂಗವೈಕಲ್ಯದಿಂದ ನರಳುವುದು. ಆರೋಗ್ಯವಂತ ಸಮಾಜಕ್ಕೆ ಆರೋಗ್ಯವಂತ ಮಕ್ಕಳು ಬೇಕು. ಆರೋಗ್ಯವಂತ ಸಮಾಜ ಬೇಕೆಂದರೆ ಜಾತಿಯ ತಾರತಮ್ಯವೆಂಬ ರೋಗ ಹೋಗಲಾಡಿಸಬೇಕು. ವಿವಾಹಸಂಸ್ಥೆಯನ್ನು ಬಳಸಿಕೊಂಡು ಜಾತಿವ್ಯವಸ್ಥೆ ಗಟ್ಟಿಗೊಳ್ಳುವುದು ಅಂತಾದರೆ, ಜಾತಿ ಮೀರಿ ನಡೆವ ಪ್ರಬುದ್ಧ ಚಿಂತನೆಯ ವಿವಾಹಗಳು ಪ್ರಜಾಪ್ರಭುತ್ವೀಯ ಮೌಲ್ಯದ ಕುಟುಂಬ ಮತ್ತು ಸಮಾಜ ನಿರ್ಮಾಣಕ್ಕೆ ಮುಂದಾಗಬೇಕಾದ ಜರೂರಿ ಇದೆ. ಇದು ನಮ್ಮ ಸಂವಿಧಾನದ ಆಶಯವೂ ಹೌದು.

No comments:

Post a Comment