Saturday 30 November 2013

ಸಾಲುಗಳು: ಡಾ.ಜಿ.ಕೃಷ್ಣ

 
1.
ಬುದ್ಧ ಎಲ್ಲಾದರೂ ಕಾಣಿಸಿದರೆ
ಕೊಂದುಬಿಡು
ಎನ್ನುವುದು
ದೊಡ್ಡ ಅನುಭಾವದ ಮಾತು
ಅಂದುಕೊಂಡಿದ್ದೆ ಗಾಲಿಬ್,
ಈಗೀಗ ತಿಳಿಯುತ್ತಿದೆ
ಅದವನಿಗೆ
ದಯಾಮರಣ!
 
 
 
 
2.
ಸೆರೆಹಿಡಿದ ಚಿತ್ರದ ಮೇಲೆ ಹಕ್ಕಿನ ಗುರುತು ಹಾಕೋದು ಕಲಿತುಕೊಂಡೆ ಗಾಲಿಬ್,
ಆ ಕ್ಷಣವಾದರೂ ನನ್ನದಾಗಿತ್ತೇ ಎಂಬ ಜಿಜ್ಞಾಸೆಯಲ್ಲಿ ಅಳಿಸಿಹೋಯಿತಲ್ಲ!
 
 
 
 
 
 
 
3.
ದಿನಾಲೂ ಸ್ಕ್ಯಾನಿಂಗ್ ಮಾಡುತ್ತೇನೆ
ಮೊದಲನೇದು, ಎರಡನೇದು, ಮೂರನೇದು
ಮದುವೆಯಾದ ಮೇಲೆ ಮುಟ್ಟೇ ಆಗದವರದು
ಮದುವೆಯೇ ಆಗದವರದು
ಒಳಗೆ
ಮಿಸುಕುವ ಜೀವ
ಹೊರಗೆ ಬಿಡುಗಣ್ಣ ಜೀವ
ಹಿಂದೆ ನಿಂತು
ನೋಡುತ್ತಿರುತ್ತದೆ
ಇನ್ನೊಂದು ಜೀವ
ಮದುವೆಯಾಗಿ
ವರ್ಷಗಳೇ ಕಳೆದರೂ
ಒಳಗೆ ಚಿಗುರದೆ ಸೋತ
ಜೀವ
ನನ್ನ ಬೆನ್ನು
ನಿಟ್ಟುಸಿರಿನ ಬಿಸಿಗೆ 
ಕರಗುತ್ತದೆ.
 
 
4.
ಋಣವನ್ನ ಬೆಚ್ಚಗೆ ಅಪ್ಪಿಕೋಬೇಕಲ್ಲವಾ ಗಾಲಿಬ್,
ತೀರಿಸ್ತೇನೆ ಎನ್ನುವುದು ಯಾವ ನ್ಯಾಯ?
 
 
5
ಎಲ್ಲದಕ್ಕೂ ನಿಖರತೆ
ಸ್ಪಷ್ಟತೆ
ಅಂತಾರಲ್ಲ ಗಾಲಿಬ್,
ಅವು
ಬಂದೇ ಬಿಟ್ಟರೆ 
ಏನು ಮಾಡೋದು?
 
 
 
6.
ಸಾಲುಗಳಿಗೆಲ್ಲ
ಅರ್ಥ ಅಂಟಿಸುತ್ತಾ
ಎದುರು ಬಂದವರ
ಮುಖ ನೋಡಿ
ಗಿಂಜುತ್ತೇನೆ ಗಾಲಿಬ್,
ಜನರ ಮುಗ್ಧತೆಗೆ
ಖಾಲಿ ಒಳಗು
ನಾಚಬೇಕಿತ್ತಲ್ಲ?
 
 
 
7.
ಎ ಸಿ ರೂಮಿಂದ ಹೊರಟ
ಮುಸ್ಸಂಜೆಯ ನಡಿಗೆ
ದನಗಳ ಸುತ್ತ ಕುಪ್ಪಳಿಸುವ
ಬಿಳಿ ಹಕ್ಕಿ
ಗೊತ್ತು ಕೂತ ಕರಿ ಬೆಕ್ಕು
ಬೇಲಿ ಮೇಲೆರಚಿದ
ನಂಜುಬಟ್ಟಲು
ಅಂಚುಕಟ್ಟಿನ ಮೇಲೆ
ಹೆಜ್ಜೆ ತಪ್ಪುವ ಭಯ
ಸೆಗಣಿ ಸಾರಿಸಿದ ಕಣ
ಹೊಡೆ ಮಂಚ
ಹುಲ್ಲು ಕುತ್ತರಿ
ಮೂಗಿಗಡರಿದ
ಮಿಶ್ರ ಗಂಧ
ಓ ಅಡಗಿ ಕುಳಿತ ಆತ್ಮವೇ,
ಇದು ಯಾವ ಜನುಮ?
 
 
 
 







No comments:

Post a Comment