Saturday 5 October 2013

ಮೂರು ಮುಳ್ಳಿಗೆ ಗಾಯಗೊಂಡಿದೆ ನಾಡು
ನೀಲಾ. ಕೆ 
 Neela K Gulbarga

ನಸಿಲ್ಲದ ಮನಸಿನಿಂದ ಯೋಜನೆಗಳು ರೂಪಿಸಿದರೆ ಮತ್ತು ಅವುಗಳನ್ನು ಜಾರಿಗೊಳಿಸಲು ಬೇಕಾದ ವ್ಯವಸ್ಥೆ ಮಾಡದೇ ಹೋದರೆ ಆಗುವ ಅನಾಹುತಗಳಿಗೆಲ್ಲ ಬಲಿಯಾಗುವುದು ಸರಕಾರವಲ್ಲ. ಬದಲಿಗೆ ಪ್ರಜೆಗಳು. ಅದರಲ್ಲಿಯೂ ಬಡಜನತೆ. ಎಲ್ಲಕ್ಕೂ ಮಿಗಿಲಾಗಿ ನಾಡಿನ ಅಭಿವೃದ್ಧಿ ಧಕ್ಕೆಯಾಗುವುದು. ಕೆಲವು ಸಂಗತಿಗಳನ್ನು ಗಮನಿಸಿದರೂ ಸಾಕು ಮನದಟ್ಟಾಗುವುದು. 

ಇತ್ತೀಚೆಗೆ ಶಾಲೆಯೊಂದರಲ್ಲಿ ಮಗುವೊಂದು ಸಾಂಬಾರಿನ ಪಾತ್ರೆಯಲ್ಲಿ ಬಿದ್ದು ಸಾವಿಗೀಡಾದ ದಾರುಣ ಘಟನೆ ನಡೆದಿದೆ. ಬಿಹಾರದಲ್ಲಿ ವಿಷಾಹಾರ ಸೇವಿಸಿ ಮಕ್ಕಳು ಸಾವಿಗೀಡಾದವು. ಇದಕ್ಕೆಲ್ಲ ಸಿಬ್ಬಂದಿಯ ಬೇಜವಾಬ್ದಾರಿಯೆಂದು ಹೇಳಲಾಗುತ್ತಿದೆ. ಆದ್ದರಿಂದಲೇ ಇತ್ತೀಚೆಗೆ ಸರಕಾರವು ಬಿಸಿಯೂಟದ ನಿರ್ವಹಣೆಯನ್ನು ಸಂಪೂರ್ಣ ಶಿಕ್ಷಕರ ಹೆಗಲ ಮೇಲೆ ಹೊರಿಸಿದೆ. ಶಿಕ್ಷಕರು ಈಗ ತಲೆಯ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಅನೇಕ ಶಾಲೆಗಳ ಮಕ್ಕಳಿಗೆ ಖಾಸಗಿಯವರು (ಅದಮ್ಯ ಚೇತನ, ಇಸ್ಕಾನ್) ಬಿಸಿಯೂಟ ವಿತರಿಸುತ್ತಿರುವರು. ನಡು ರಾತ್ರಿ ಮಾಡಿಟ್ಟ ಅನ್ನದ ಮೇಲೆ ಅರಿಶಿಣದ ನೀರು ಚಿಮುಕಿಸಿ ಕೊಡುತ್ತಿರುವರು. ಇದರಿಂದ ಮಕ್ಕಳಿಗೆ ಎಂಥ ಪೌಷ್ಠಿಕ ಆಹಾರ ಸಿಗಬಲ್ಲದು? ಹಾಗಾದರೆ ಇದಕ್ಕೆ ಯಾರು ಕಾರಣ? ಏನು ಮಾಡಬೇಕು.? ಈಗ ಅನ್ನಭಾಗ್ಯದೊಂದಿಗೆ ಕ್ಷೀರ ಭಾಗ್ಯವೂ ಸೇರಿಕೊಂಡಿದೆ. ಮಕ್ಕಳಿಗೆ ಖಂಡಿತ ಈ ಎಲ್ಲ ಪೌಷ್ಠಿಕಾಹಾರ ಬೇಕು. ಆದರೆ ಪೂರೈಕೆಯ ಕ್ರಮದಲ್ಲಿ ಸರಿಯಾದ ವ್ಯವಸ್ಥೇ ಇಲ್ಲದೆ ಹೋದರೆ ಉದ್ದೇಶ ಈಡೇರಲು ಹೇಗೆ ಸಾಧ್ಯ? 


 


ಓಟುಬ್ಯಾಂಕನ್ನು ಕಣ್ಣಲ್ಲಿಟ್ಟುಕೊಂಡು ಯೋಜನೆ ಮಾಡಿದರೆ ಯೋಜನೆಗಳು ಕೇವಲ ಜನಪ್ರಿಯತೆಯ ಮಟ್ಟದಲ್ಲಿ ಮಾತ್ರ ಉಳಿಯುತ್ತವೆ. ನೈಜಾರ್ಥದಲ್ಲಿ ಜನತೆಗೆ ತಲುಪಿಸುವ ನಿಸ್ವಾರ್ಥ-ಪ್ರಾಮಾಣಿಕ ಮತ್ತು ಮಾನವೀಯ ಅಂತಃಕರಣದಿಂದ ಕಾರ್ಯಕೈಗೊಂಡರೆ ಆಗ ನಿರ್ಧಿಷ್ಟ ಕ್ರಮಗಳಿಗೆ ಮುಂದಾಗಬೇಕಾಗುತ್ತದೆ. 

ಅಂತೆಯೇ ಉದ್ಯೋಗ ಖಾತ್ರಿಯ ಗತಿಯೂ ಇದೇ ಆಗಿದೆ. ಯಾವ ಹಳ್ಳಿ ಸುತ್ತಾಡಿದರೂ ಅಲ್ಲಿ ಉದ್ಯೋಗ ಖಾತ್ರಿ ಕೆಲಸ ಖಂಡಿತ ನಡೆಯುತ್ತಿಲ್ಲವೆಂಬ ಸತ್ಯ ಸಂಗತಿ ಬೆಳಕಿಗೆ ಬರುತ್ತಿದೆ. ಅನೇಕ ಕಡೆ ನೂರಕ್ಕೆ ನೂರರಷ್ಟು ಬೋಗಸ್. ಹಾಗೆ ನೋಡಿದರೆ ಪ್ರತಿ ಹಳ್ಳಿಗಳಿಗೆ ಒಂದಿಲ್ಲ ಒಂದು ಕೆರೆಗಳಿವೆ. ನೆಲ-ಜಲ ಅಭಿವೃದ್ಧಿಗೆ ಸಂಬಂಧಪಟ್ಟ ಕಾಯ್ದೆಯಿದು. ಕಡೆಪಕ್ಷ ಕೆರೆಗಳ ಹೂಳೆತ್ತಿಸಿ ನೀರಿನ ಕೊರತೆ ನೀಗಿಸಬಹುದಿತ್ತು. ಬಡರೈತರು ಮತ್ತು ಕೃಷಿ ಕೂಲಿಕಾರ್ಮಿಕರು ದುಡಿದುಣ್ಣುವ ಸಂಸ್ಕೃತಿಯವರೇ. ದುಡಿದವರಿಗೆ ಕಾಯ್ದೆ ಪ್ರಕಾರ ವಾರಕ್ಕೊಮ್ಮೆ ಕಡ್ಡಾಯವಾಗಿ ಕೂಲಿ ಕೊಟ್ಟಿದ್ದರೆ ಕಾಯ್ದೆಯು ಯಶಸ್ವಿಯಾಗುತ್ತಿತ್ತು. ಆದರೆ ಯಾವ ಹಳ್ಳಿಯಲ್ಲಿಯೂ ವಾರಕ್ಕೊಮ್ಮೆ ಕೂಲಿ ಪಾವತಿಸಿದ ಉದಾಹರಣೆಗಳಿಲ್ಲ. ಕೆಲಸ ಕೊಟ್ಟು, ಕೂಲಿ ಪಾವತಿಸುವ ಮುನ್ನ ಕೆಲಸದ ಅಳತೆ ಮಾಡಬೇಕು. ಕಾಯ್ದೆಯಂತೆ ಅವರಿಗಿರುವ ಸೌಕರ್ಯಗಳೆಲ್ಲ ಒದಗಿಸಬೇಕು. ವಾರದ ಕೊನೆಯ ದಿನದಲ್ಲಿ ಅವರ ಅಕೌಂಟಿಗೆ ಕೂಲಿ ಜಮಾ ಮಾಡಬೇಕು. ಇಷ್ಟು ಕೆಲಸಗಳನ್ನು ಮಾಡಲು ಕನಿಷ್ಠ ಪ್ರತಿ ಗ್ರಾಮ ಪಂಚಾಯತಿಗೆ ಹತ್ತರಿಂದ ಹದಿನೈದು ಸಿಬ್ಬಂದಿಯಾದರೂ ಬೇಕು. ಸಿಬ್ಬಂದಿಗಳು ಖಾಯಂ ನೌಕರಸ್ಥರಾಗಿರಬೇಕು. ಹೊರಗುತ್ತಿಗೆಯಾಧಾರದ ಸಿಬ್ಬಂದಿಯೋ ಅಥವ ದಿನಗೂಲಿಯೋ ನೇಮಿಸಿದ್ದರೆ ಗುರಿ ತಲುಪಲು ಸಾಧ್ಯವಿಲ್ಲ. ಏಕೆಂದರೆ ಸಿಬ್ಬಂದಿಯಿಲ್ಲ ಎನ್ನುವ ಕಾರಣವನ್ನು ಮುಂದೆ ಮಾಡಿ ಎಲ್ಲಿಯೂ ಸಮಯಕ್ಕನುಸರಿಸಿ ಕೂಲಿ ಪಾವತಿಸಿಲ್ಲ. ತಾಂತ್ರಿಕ ಸಿಬ್ಬಂದಿಯು ಇಲ್ಲದ್ದರಿಂದ ಸಮಯಕ್ಕೆ ಮಾಪನ ಮಾಡಲಾರದ್ದಕ್ಕೆ, ಸಾವಿರಾರು ಕೂಲಿಕಾರರು ಕೂಲಿಯಿಂದಲೇ ವಂಚಿತರಾಗಿರುವರು. ಕ್ರಮೇಣ ಹಳ್ಳಿಯಲ್ಲಿರುವ ಅನೇಕ ರೈತರು ಈ ಕಾಯ್ದೆಯ ವಿರೋಧಿಗಳಾದರು. ಹಾಗೆ ನೋಡಿದರೆ ಈ ಕಾಯ್ದೆಯು ರೈತರಿಗೆ ದುಪ್ಪಟ್ಟು ಲಾಭದಾಯಕವಾದದ್ದು. ಇದನ್ನು ತಿಳಿಸಿಕೊಡಲು ಗ್ರಾಮ ಪಂಚಾಯತಿಯ ಹತ್ತಿರ ಯಾವ ವ್ಯವಸ್ಥೆಯು ಇಲ್ಲವಾಗಿದೆ. ಗ್ರಾಮೀಣಾಭಿವೃದ್ಧಿಯ ಗುರಿ ಹೊಂದಿ ರಚನೆಗೊಂಡ ಇಂಥ ಪ್ರಮುಖ ಕಾಯ್ದೆಯ ಜಾರಿ ಮಾಡಿಸಬೇಕಾದ ಹೊಣೆಯೂ ಸರಕಾರದ್ದೇ ಅಲ್ಲವೆ? ಸರಕಾರಕ್ಕೆ ಜನತೆಯ ಪರವಾದ ಬದ್ಧತೆಯುಳ್ಳ ರಾಜಕೀಯ ಇಚ್ಛೆ ಇದ್ದಿದ್ದರೆ ಈ ಮೇಲಿನಂತೆ ಕ್ರಮಗಳನ್ನು ಕೈಗೊಳ್ಳುತ್ತಿತ್ತು. 


ಈ ಕಾಯ್ದೆಯ ಯಶಸ್ಸಿಗೆ ಏನು ಮಾಡಬೇಕು ಎಂದು ಹೈದರಾಬಾದಿನಲ್ಲೊಮ್ಮೆ ಕಾರ್ಯಾಗಾರ ನಡೆಯಿತು. ಕೇಂದ್ರ ಸರಕಾರಕ್ಕೆ ಕಳಿಸಲಾದ ಶಿಫಾರಸ್ಸುಗಳಲ್ಲಿ ಕೊಟ್ಟ ಪ್ರಮುಖ ಸಲಹೆಯೆಂದರೆ, ಇದರ ಜಾರಿಗಾಗಿ ಪ್ರತ್ಯೇಕ ಸಿಬ್ಬಂದಿಯನ್ನು ನೇಮಿಸಬೇಕು ಎಂದು. ಅತ್ಯಂತ ಪ್ರಮುಖ ಅಂಶಗಳಾದ ಕೆಲಸ ಕೊಡುವುದು, ಅಳತೆ ಮಾಡುವುದು, ಕೂಲಿ ಪಾವತಿಸುವುದು. ಇರುವ ಸೌಲಭ್ಯಗಳೊಂದಿಗೆ ಸಾಕ್ಷರತೆ, ಆರೋಗ್ಯ, ವೈಜ್ಞಾನಿಕ ತಿಳುವಳಿಕೆಗಳನ್ನೆಲ್ಲ ಕೊಡಲು ಸಾಧ್ಯವಿರುವ ಸಲಹೆಗಳನ್ನು ಕೊಡಲಾಗಿತ್ತು. ಜೊತೆಗೆ ಕೆಲಸಕ್ಕೆ ಬಳಸುವ ಸಾಧನ-ಸಲಕರಣೆಗಳು ಪುರುಷರು ಉಪಯೋಗಿಸುವಂಥವು. ಮಹಿಳಾಸ್ನೇಹಿ ಸಲಕರಣೆಗಳು ಒದಗಿಸಬೇಕು ಎಂದಿದ್ದೆವು. ಆಶ್ಚರ್ಯವೆಂದರೆ ಇವ್ಯಾವುದನ್ನೂ ಜಾರಿ ಮಾಡಲಿಲ್ಲ. ಬದಲಿಗೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ತಮ್ಮ ಏಜೆಂಟರ ಕಿಸೆ ತುಂಬಲು ಈ ಕಾಯ್ದೆಯ ಹಣವನ್ನು ಕೊಳ್ಳೆ ಹೊಡೆದರು. ಈಗ ಮತ್ತೆ ರೇಗಾ ಜಾರಿ ಮಾಡುವುದು ಹೇಗೆ ಎಂದು ಚರ್ಚಿಸಲು ಸಮಿತಿಗಳನ್ನು ರಚಿಸಲಾಗುತ್ತಿದೆ. ಇದೊಂದು ಅದ್ಭುತವಾದ ವ್ಯಂಗ್ಯವಲ್ಲದೆ ಇನ್ನೇನು? ಎಷ್ಟು ವರ್ಷ ಹೀಗೆ ಬಹಿರಂಗ ಮೋಸ ಮಾಡುವುದು?

 
  
ಇನ್ನೊಂದು ಕಡೆ ಎಲ್ಲರಿಗೂ ಆರೋಗ್ಯ ಕೊಡುವ ವಾಯ್ದೆ ಮಾಡಿ, ಇದನ್ನು ಜಾರಿಗೊಳಿಸಲು ಬೇಕಾದ ಸಂಪನ್ಮೂಲ ಒದಗಿಸದೆ ಕಣ್ಣೊರೆಸುವ ತಂತ್ರ ಮಾಡುತ್ತಿದೆ. ಗ್ರಾಮಗಳ ಮಟ್ಟದಲ್ಲಿ ಅವಶ್ಯಕತೆಗನುಸರಿಸಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಲ್ಲ. ಇದ್ದಲ್ಲಿ ಅಗತ್ಯ ಸೌಕರ್ಯಗಳಿಲ್ಲ. ಸಾವಿರಕ್ಕೊಬ್ಬ ಆಶಾ ಕಾರ್ಯಕರ್ತೆಯನ್ನು ಪೀಸ್ ವರ್ಕ್ ಲೇಬರ್ನಂತೆ ದುಡಿಸಿಕೊಳ್ಳಲಾಗುತ್ತಿದೆ. 

ಶಿಕ್ಷಣ, ಆರೋಗ್ಯ, ಉದ್ಯೋಗದಂಥ ಮೂಲಭೂತ ಅವಶ್ಯಕ ಸೌಕರ್ಯಗಳ ಕುರಿತೇ ಸರಕಾರಕ್ಕೆ ಯಾಕಿಷ್ಟೊಂದು ಬೇಜವಾಬ್ದಾರಿ? ಏಕೆಂದರೆ ಜನತೆಗೆ ಕೊಟ್ಟ ವಚನ ಪಾಲಿಸುವ ಬದಲಿಗೆ ಸಾರ್ವಜನಿಕ ನಿರ್ವಹಣಾ ವೆಚ್ಚ ಕಡಿತ ಮಾಡಬೇಕೆಂಬ ವಿಶ್ವ ಬ್ಯಾಂಕಿನ ಆದೇಶ ಪಾಲಿಸುತ್ತಿದೆ ಸರಕಾರ. ಉದ್ಯೋಗ ಖಾತ್ರಿ ಕಾಯ್ದೆ ಜಾರಿಗಾಗಿ ಪ್ರತ್ಯೇಕ ಖಾಯಂ ಸಿಬ್ಬಂದಿ ನೇಮಿಸಿದ್ದರೆ ಎಷ್ಟೆಲ್ಲ ಭ್ರಷ್ಟಾಚಾರ ನಡೆದರೂ ಅರ್ಧದಷ್ಟಾದರೂ ಜಾರಿಯಾಗುತ್ತಿತ್ತು. ಕಡೆಪಕ್ಷ ಹಳ್ಳಿಗೊಂದು ಕೆರೆ ಹೂಳೆತ್ತಿದ್ದರೆ ಸುರಿವ ಮಳೆನೀರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುತ್ತಿತ್ತು. ಮತ್ತು ಅದೇ ಹೊತ್ತಿನಲ್ಲಿ ಸಾವಿರಾರು ಜನರ ದಿನದ ತಲಾ ಆದಾಯ ಹೆಚ್ಚಳವಾಗುತ್ತಿತ್ತು. ತನ್ಮೂಲಕ ಸ್ಥಳೀಯ ಮಾರುಕಟ್ಟೆಯೂ ಚೇತರಿಸಿಕೊಳ್ಳುತ್ತಿತ್ತು. ಹಾಗೆಯೇ ಬಿಸಿಯೂಟಕ್ಕಾಗಿ ಬೇಕಾದ ಸೌಲಭ್ಯದೊಂದಿಗೆ ಖಾಯಂ ಸಿಬ್ಬಂದಿ ನೇಮಿಸಿದ್ದರೆ ಅನಾಹುತಗಳನ್ನು ತಪ್ಪಿಸಲು ಸಾಧ್ಯವಾಗುತ್ತಿತ್ತು. ಶಿಕ್ಷಕರು ವಿದ್ಯಾರ್ಥಿಗಳ ಆಟ-ಪಾಠದಲ್ಲಿ ಧ್ಯಾನಸ್ಥರಾಗಲು ಸಾಧ್ಯವಾಗುತ್ತದೆ. ಇದೇ ಹೊತ್ತಿನಲ್ಲಿ ಉದ್ಯೋಗಗಳನ್ನು ಸೃಷ್ಟಿಸಿ, ನಿರುದ್ಯೋಗ ಸಮಸ್ಯೆಗೆ ಕೊಂಚವಾದರೂ ಪರಿಹಾರ ಕಾಣಿಸಬಹುದು. ಡಾಲರಿನ ಎದುರು ಕುಸಿಯುತ್ತಿರುವ ರೂಪಾಯಿಯನ್ನು ಚೇತರಿಸುವ ಬಗೆ ಇದೇ ಆಗಿದೆಯಲ್ಲವೆ. ಈಗಾಗಲೆ 1.80 ಲಕ್ಷ ಹುದ್ದೆಗಳು ಖಾಲಿಯಿವೆ. 1.25 ಲಕ್ಷ ಒಪ್ಪಲ್ಪಟ್ಟ ಖಾಲಿ ಹುದ್ದೆಗಳಿವೆ. ಆದರೆ ಸರಕಾರವು ಬಡಜನರಿಂದ ಬಿಟ್ಟಿ ಶ್ರಮ ಪಡೆದು ಜನಪ್ರಿಯ ಯೋಜನೆಗಳನ್ನು ಜಾರಿಯಾಗಿಸಬೇಕೆನ್ನುತ್ತದೆ. ವಾಸ್ತವದಲ್ಲಿ ಇದು ಜನರನ್ನು ಮೋಸಗೊಳಿಸುವ ಹುನ್ನಾರವಾಗಿದೆ. ಖಾಸಗೀಕರಣ-ಉದಾರೀಕರಣ-ಜಾಗತೀಕರಣವೆಂಬ (ಖಾಉಜಾ) ಮೂರು ಮುಳ್ಳುಗಳ ಕ್ರೌರ್ಯವನ್ನು ಮುಚ್ಚಿಟ್ಟು ಜನರನ್ನು ದಿಕ್ತಪ್ಪಿಸುವ ಕುತಂತ್ರವಾಗಿದೆ. ಆದ್ದರಿಂದಲೇ ಗೌರವಧನದ ಹೆಸರಿನಲ್ಲಿ ಕಡಿಮೆ ಕೂಲಿಗೆ ದುಡಿಸಿಕೊಳ್ಳುವುದು, ಹೊರಗುತ್ತಿಗೆಯ ಹೆಸರಿನಲ್ಲಿ ಅಭದ್ರ ಹುದ್ದೆಗಳನ್ನು ಸೃಷ್ಟಿಸುವುದು, ಅಭಿವೃದ್ಧಿ ಯೋಜನೆಗಳನ್ನು ಎನ್ಜಿಓಗಳ ಹೆಗಲಿಗೇರಿಸಿ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದು ನಡೆಯುತ್ತಿದೆ. ಇದರ ಫಲಿತಾಂಶವೆಂದರೆ ಬಡತನ, ನಿರುದ್ಯೋಗದ ಸೃಷ್ಟಿ. ಹಾಗಾದರೆ ಜನಪ್ರಿಯ ಯೋಜನೆಗಳು? ಯೋಜನೆ ಮಾಡುವುದು ಜನರನ್ನು ನಂಬಿಸಲು. ಯೋಜನೆಯನ್ನು ವಿಫಲಗೊಳಿಸುವ ಅಸ್ತ್ರವೂ ಅದರಲ್ಲಿಟ್ಟು ವಿಶ್ವದ ದೊಡ್ಡಣ್ಣನನ್ನು ಮೆಚ್ಚಿಸುವುದು. ಅಂತರಂಗದಲ್ಲಿ ಹೊಸ ಆರ್ಥಿಕ ನೀತಿಯ ಜಾರಿಗೆ ಬದ್ದ. ಬಹಿರಂಗದಲ್ಲಿ ಜನಪರತೆಯ ಮುಖವಾಡ. ಇದೆಂಥ ಮುಖೇಡಿತನ?


***

No comments:

Post a Comment