Monday 28 October 2013

ಕೊರಗರ ಬಗ್ಗೆ ಒಂದಿಷ್ಟು... : ಹೃದಯ ಮಂಗಳೂರ್


Koragerna Alipu Oripu

ಸಮಾಜದ 'ವಿಭಾಜಕ ದೃಷ್ಠಿ'ಯಿಂದಾಗಿ ಪ್ರತ್ಯೇಕಿಸಲ್ಪಟ್ಟ ಕೊರಗರು...

ಕೊರಗರು ಮೂಲತಃ ಅರಣ್ಯವಾಸಿಗಳು.  ಪೂರ್ವಕಾಲದಲ್ಲಿ ದಟ್ಟಾರಣ್ಯದಲ್ಲಿ ವಾಸಿಸುತ್ತಿದ್ದರು. ಕಾಡಿನಲ್ಲಿ ದೊರೆಯುವ ಬಿದಿರು, ಬಿಳಲುಗಳಿಂದ ತಮ್ಮ ನೈಪುಣ್ಯತೆಯನ್ನು ಬಳಸಿ, ವಿವಿಧ ರೀತಿಯ ಪರಿಕರಗಳನ್ನು ಮಾಡಿ ಜೀವನ ಸಾಗಿಸುತ್ತಿದ್ದರು. ಬುಟ್ಟಿ ಹೆಣೆಯುವುದು, ಬೇಟೆಯಾಡುವುದು ಮತ್ತು ಅರಣ್ಯೊತ್ಪನ್ನಗಳನ್ನು ಸಂಗ್ರಹಿಸುವುದು ಕುಲ ಕಸುಬಾಗಿತ್ತು. ಸುಶ್ರಾವ್ಯವಾಗಿ ಡೋಲು ಬಾರಿಸುವುದು, ಕೊಳಲು ಊದುವುದು ಸಾಂಸ್ಕೃತಿಕ ಮತ್ತು ಮನೋರಂಜನಾತ್ಮಕ ಕಲೆಯಾಗಿತ್ತು. ತನ್ನದೇ ಆದ ಶ್ರೇಷ್ಠ ಸಂಪ್ರದಾಯ ಮತ್ತು ಜೀವನ ಕ್ರಮಗಳನ್ನು ಮೈಗೂಡಿಸಿಕೊಂಡಿದ್ದರು. ವಿಶಿಷ್ಟ ’ಕೊರ್ರು’ (ಕೊರಗ) ಭಾಷೆ ಮತ್ತು ಕಾಡಿನ ಸಂಸ್ಕ್ರತಿಯಿಂದಾಗಿ ಪ್ರತ್ಯೇಕವಾಗಿ ಗುರುತಿಸಲ್ಪಡುತ್ತಿದ್ದರು. ಮೈಯನ್ನು ಪ್ರಾಣಿಗಳ ಚರ್ಮ ಮತ್ತು ಸೊಪ್ಪಿನಿಂದ ಮುಚ್ಚಿಕೊಳ್ಳುತ್ತಿದ್ದರು (ಆ ಕಾಲದಲ್ಲಿ ಕಾಡಿನಲ್ಲಿ ಕೊರಗರಿಗೆ ಮಾನ ಮುಚ್ಚಿಕೊಳ್ಳಲು ಅದೊಂದೇ ಆಧಾರವಾಗಿತ್ತು) ಕುಳ್ಳಗಿನ ಧೃಡಕಾಯ ದೇಹ, ಹೊಳೆಯುವ ಕಪ್ಪು ಮೈಬಣ್ಣ,  ವಿಶಿಷ್ಟವಾದ ಮೂಗು, ತುಟಿ , ಕಣ್ಣಿನ ವಿಭಿನ್ನ ಆಕೃತಿ ಮತ್ತು ಇತರ ಜನವರ್ಗದವರು ಅರ್ಥೈಸಿಕೊಳ್ಳಲಾಗದ ಕ್ಲಿಷ್ಟ ಭಾಷಾ ಭಿನ್ನತೆಯಿಂದಾಗಿ ಕೊರಗರನ್ನು ದೂರವೇ ಇರಿಸಲಾಗಿತ್ತು. ದೂರವೇ ಇದ್ದ ಕೊರಗರು ನಿಧಾನವಾಗಿ ತಮ್ಮ ವೇಷಭೂಷಣಗಳಿಂದಾಗಿ ಅಸ್ಪ್ರಶ್ಯರೇ ಆಗಿಬಿಟ್ಟರು. ವೇದಗಳ ಕಾಲದಿಂದಲೂ ಅಸ್ಪ್ರಶ್ಯರಾಗಿದ್ದವರ ಸಾಲಿಗೆ ಕೊರಗರನ್ನೂ ಸೇರಿಸಲಾಯಿತು ಹೀಗೆ ಸ್ಪರ್ಶ ವರ್ಣಗಳ ಅರಿವೇ ಇಲ್ಲದ ಪ್ರತ್ಯೇಕ ಬುಡಕಟ್ಟು ಪಂಗಡವೊಂದು ಸಮಾಜದ ವಿಭಾಜಕ ದೃಷ್ಟಿ’ಯಿಂದಾಗಿ ಅಸ್ಪ್ರಶ್ಯರಾಗಿಬಿಟ್ಟರು ಮತ್ತು ಸಮಾಜದ ಮೇಲಿನ ಭಯದಿಂದಾಗಿ ಮುಗ್ಧ ಕೊರಗರು ತಮ್ಮನ್ನು ತಾವು ಅಸ್ಪ್ರಶ್ಯರೆಂದು ಒಪ್ಪಿಕೊಂಡುಬಿಟ್ಟರು!




ಡೋಲಿನ ಸುಶ್ರಾವ್ಯಕ್ಕೆ ಮನ ಸೋತವರ ವ್ಯಭಿಚಾರ...

ಕೊರಗರು ಬೇಟೆಯಾಡಿ ಬಂದ ನಂತರ, ದಣಿವಾರಿಸಲು ಡೋಲು ಬಾರಿಸಿ, ಕೊಳಲು ಊದಿ ಮನಃ ಶಾಂತಿಯನ್ನು ಪಡೆಯುತ್ತಿದ್ದರು. ಕಾಡಿನಲ್ಲಿ ಕೊರಗರ ಅಬ್ಬರದ ಡೋಲಿನ ಧ್ವನಿಗೆ ಊರ ಅರಸರೂ (ತುಂಡರಸರು ಮತ್ತು ಪಟೇಲರು) ಮನಸೋತರು. ನಿಧಾನವಾಗಿ ಕೊರಗರ ಡೋಲಿನ ಧ್ವನಿ ಕಾಡಿನ ಬದಲು ಪಟೇಲರ ಕಟ್ಟಅಪ್ಪಣೆಯ ಮೇರೆಗೆ ಗುತ್ತಿನ ಮನೆಯ ಹಿತ್ತಲ ಬದಿಯಲ್ಲಿ ಕೇಳಿ ಬರತೊಡಗಿತು. ಊರ ಹಬ್ಬ ಹರಿದಿನಗಳಲ್ಲಿ, ಊರಿನಲ್ಲಿ ಸಾವು ಸಂಭವಿಸಿದರೆ ಅಂತ್ಯಕ್ರಿಯೆ ಸಂದರ್ಭದಲ್ಲಿ ಕೊರಗರಿಗೆ ಡೋಲು ಬಾರಿಸಲು ಅನುವು ಮಾಡಿಕೊಡಲಾಯಿತು. ಗುತ್ತುಬರ್ಕೆಯವರ ಕಂಬಳವೂ ಕೊರಗರ ಡೋಲು ಬಡಿತದಿಂದಲೇ ಆರಂಭವಾಗತೊಡಗಿತು. ತಲೆತಲಾಂತರಗಳಿಂದ ಕೃಷಿಕರು ಬೀಜ ಬಿತ್ತುವುದಕ್ಕೂ ಕೊರಗರ ಡೋಲಿನ ಶಬ್ಧದಿಂದಲೇ ಚಾಲನೆ ನೀಡಲು ಆರಂಭಿಸಿದರು. ಅದರಿಂದ ದೊರೆತ ಬಿಟ್ಟಿ ಸಂಬಳವೂ ಕೊರಗರಿಗೆ ವ್ಯವಹಾರದ ಅರಿವಿಲ್ಲದ್ದರಿಂದ ಅಪ್ಯಾಯಮಾನವಾಗತೊಡಗಿತು. ಸಂಖ್ಯಾಬಲದ ಕೊರತೆಯಿಂದ ಕೊರಗರು ಪ್ರತಿರೋಧ ತೋರುವುದನ್ನು ಯಾವತ್ತು ಬಿಟ್ಟರೋ, ಅದಾಗಲೇ ಬಲಿಷ್ಠರ ಅಡಿಯಾಳಾಗಬೇಕಾಯಿತು ಮತ್ತು ಕೊರಗರ ಮುಗ್ಧತೆಯನ್ನು ದೌರ್ಬಲ್ಯವೆಂಬಂತೆ ಬಳಸಿಕೊಳ್ಳಲಾಯಿತು. ಅವರನ್ನು ಜೀತಕ್ಕೆ ನೇಮಿಸಿಕೊಳ್ಳಲಾಯಿತು. ಅದನ್ನು ಪ್ರಾದೇಶಿಕವಾಗಿ 'ಅಜಲು ಚಾಕರಿ' ಎನ್ನುತ್ತಾರೆ ವಿಶಾಲಾರ್ಥದಲ್ಲಿ ಹೇಳುವುದಾದರೆ, 'ಜೀತ ಪದ್ಧತಿ' ಎನ್ನಬಹುದು.

 


ಅಂಡೆ, ಕುಂಟು, ಸೊಪ್ಪು ಎಂಬ ವಿಂಗಡನೆ...

ಅಸ್ಪ್ರಶ್ಯತೆ ತಾರತಮ್ಯದ ಪಿಡುಗಿಗೆ ಅಂಟಿಕೊಂಡ ಕೊರಗ ಸಮುದಾಯವು ಅಕ್ಷರ ಕಲಿಯುವಂತಿರಲಿಲ್ಲ. ದೇವಸ್ಥಾನಗಳಿಗೆ ಪ್ರವೇಶಿಸುವುದನ್ನು, ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡುವುದನ್ನು ಮತ್ತು ಕಾಡಿನಿಂದ ಊರಿಗೆ ಬಂದಾಗ ಉಗುಳುವುದನ್ನೂ ನಿಷೇಧಿಸಲಾಗಿತ್ತು!! ಹೀಗಾಗಿ, ಕೊರಗರು ಕಾಡಿನಿಂದ ಊರಿಗೆ ಬಂದಾಗ ಎಂಜಲು ಉಗುಳಲು ತಮ್ಮ ಕೊರಳಿಗೆ ಬಿದಿರಿನ ತುಂಡನ್ನು (ತುಳುವಿನಲ್ಲಿ ಅಂಡೆ ಎನ್ನುತ್ತಾರೆ) ಕಟ್ಟಕೊಳ್ಳುತ್ತಿದ್ದರು. ಇದಕ್ಕೆ ಇವರನ್ನು ಊರಿನ ಇತರ ಜನವರ್ಗದವರು 'ಅಂಡೆ ಕೊರಗರು' ಎಂದು ಕರೆದರು.

ಕಾಡಿನಿಂದ ಊರಿಗೆ ಬಂದು ಅಜಲು ಸೇವೆ ಮಾಡುತ್ತಿದ್ದ ಕೊರಗರಿಗೆ ಸೊಪ್ಪಿನ ಬದಲು ಮಾನ ಮುಚ್ಚಿಕೊಳ್ಳಲು ಊರಿನವರು ಬಟ್ಟೆಯನ್ನು ಕೊಡುತ್ತಿದ್ದರು. ಹೀಗೆ ಬಟ್ಟೆ ತೊಟ್ಟುಕೊಂಡ ಕೊರಗರನ್ನು ಊರಿನ ಇತರ ಜನವರ್ಗದವರು ಕುಂಟು ಕೊರಗರು’ ಎಂದು ಕರೆದರು (ಕುಂಟು ತುಳು ಪದ; ಬಟ್ಟೆ ಎಂದರ್ಥ). ಕಾಡಿನಲ್ಲಿಯೇ ಇದ್ದು ತನ್ನ ಕೆಲಸವನ್ನು ನಿರ್ವಹಿಸಿಕೊಂಡು, ಬರೇ ಸೊಪ್ಪು ಅಥವಾ ಪ್ರಾಣಿಗಳ ಚರ್ಮವನ್ನು ಸುತ್ತಿ ಬದುಕುತ್ತಿದ್ದವರು ಸೊಪ್ಪು ಕೊರಗರು’ ಎಂದು ಕರೆಯಲ್ಪಟ್ಟರು.  ಕೊರಗರನ್ನು 'ಅಂಡೆ, ಕುಂಟು, ಸೊಪ್ಪು ಎಂದು ಗುರುತಿಸಿ ಕರೆದದ್ದು ಇತರ ಜನ ವರ್ಗದವರೇ ಹೊರತು, ಸ್ವತಃ ಕೊರಗರಲ್ಲ! ಸಮಾನತೆ ಬಯಸುತ್ತಿದ್ದ ಕೊರಗರು ತಮ್ಮನ್ನು ತಾವು ಈ ರೀತಿ ಎಂದೂ ಗುರುತಿಸಿದ್ದಿಲ್ಲ ಮತ್ತು ಪ್ರತ್ಯೇಕ ಪಂಗಡಗಳನ್ನ ಕಟ್ಟಿಕೊಂಡವರೇ ಅಲ್ಲ. ಇದು ಕೂಡಾ ಸಮಾಜದ ವಿಭಾಜಕ ದೃಷ್ಠಿಯಿಂದಾಗಿ ಉಂಟಾದ ಗೊಂದಲ! ದುರಾದೃಷ್ಟವಶಾತ್, ಎಲ್ಲಾ ಇತಿಹಾಸಕಾರರು, ಸಂಶೋಧಕರು, ಚಿಂತಕರು ಮತ್ತು ಬರಹಗಾರರೂ - ನೈಜತೆಯನ್ನು ವಿಮರ್ಶಿಸದೆ ಕೊರಗರಲ್ಲಿ ಮೂರು ಒಳಪಂಗಡಗಳು ಇದ್ದವೆಂದು, ಹಾಗೆಯೇ ಬರೆದುಬಿಟ್ಟಿದ್ದಾರೆ!


***

No comments:

Post a Comment