Thursday 24 October 2013

ಸಾಲುಗಳು: ಡಾ. ಜಿ. ಕೃಷ್ಣ


ಕುಡಿ
ಚಿವುಟಿದಾಗ
ಎರಡಾಗಿ ಒಡೆಯುವ
ಗುಣ
ಗಿಡಗಳಲ್ಲಿದೆ
ಮಾನವರಲ್ಲಿ...?





ಗಾಯ
ನೋವು
ಹಸಿವು
ಸಾವು
ಹನಿಗಣ್ಣು
ಮೌನ
ಇತ್ಯಾದಿ-
ಗಳಿರುವ
ಕವಿತೆಗಳು
ಮುಟ್ಟದೆ
ತಟ್ಟದೆ
ಇರುವುದಿಲ್ಲ
ಅಂದರೆ,
ನೀವೇ
ಲೆಕ್ಕ ಹಾಕಿ...


***





ಉಜ್ಜಿ ಉಜ್ಜಿ ಕಿತ್ತುಕೊಂಡ ಮುಖಚರ್ಯೆ ಹೊತ್ತ 
ಕನ್ನಡಿ ಇಲ್ಲದೂರಿನ ಜನ .

 


ಉಕ್ಕುವ ನದಿ ದಂಡೆಯಲಿ
ಸೋತಿದ್ದು
ಬೊಗಸೆ 
ಮರೆತು
ಬಾಯಾರಿದ ಗಳಿಗೆ.


***


ಹೇಗೆ ಪ್ರಾರಂಭಿಸಲಿ....?

ಹತ್ತಾರು ಬಗೆಯ ಚಿಮ್ಮಟ
ಕತ್ತರಿ
ಎಳೆದು ಹಿಡಿಯುವ
ಒತ್ತಿ ಸರಿಸುವ
ಹತ್ಯಾರುಗಳು
ಸೂಜಿ 
ದಾರ
ಕುಯ್ಯುವ ಭಾಗವನಷ್ಟೆ ತೋರಿಸುವ
ಒಸರಿದ್ದನ್ನು ಒರೆಸುವ
ಬಟ್ಟೆ
ಅರಿವಳಿಸುವವರು
ಅಳಿಸಿಕೊಳ್ಳುವವರು
ಶುಶ್ರೂಷಕರು
ಎಲ್ಲ ತಯಾರು
ಮರೆತ ಚಾಕು
ಡಬ್ಬಿಯಲ್ಲೆ
ತಣ್ಣಗೆ ನಕ್ಕಿತು
ಶುಚಿರ್ಭೂತ
ಸರ್ಜನನ 
ಕೈ ಕಟ್ಟಿಸಿ
ಒಂದು ಗಳಿಗೆಯಾದರೂ
ನಿಲ್ಲಿಸಿತು.


***

ಅರಳುವುದೆಂದರೆ
ಒಂದೆ
ಚಿಕ್ಕದಾದರೂ
ದೊಡ್ಡದಾದರೂ...







ತುಟಿ ಕೆನ್ನೆ
ಬಿರುಕು ಬಿಡುವ
ಒಣ ಹವೆಯಲ್ಲಿ
ಒಮ್ಮೊಮ್ಮೆ
ಅನಿಸುತ್ತೆ-
ಎಲ್ಲವೂ
ಅನುಕರಣೆಯೇ?
ಸ್ವಂತದ್ದು
ಏನೂ ಇಲ್ಲವೇ?


 


ನಾವು
ಸರ್ವಧರ್ಮ ಸಹಿಷ್ಣುಗಳು
ಗುರುವಾರ
ರಾಯರ ಮಠ
ಭಾನುವಾರ
ಚರ್ಚು
ಶುಕ್ರವಾರ
ಮಸೀದಿ-

ಮುಂದೆ
ಕೈ ಚಾಚಿ
ಭಿಕ್ಷೆ ಬೇಡುವವರು.

(ನೀಲು ಪ್ರೇರಿತ)


***

No comments:

Post a Comment