Tuesday 29 October 2013

ಸಾಲುಗಳು: ಡಾ. ಜಿ.ಕೃಷ್ಣ

ಬದಲಾವಣೆ ಮರುಹುಟ್ಟು
ಒಮ್ಮೊಮ್ಮೆ
ಸಾವು
ಇನ್ನೂ ಕೆಲವೊಮ್ಮೆ
ಎರಡೂ...




ಕವಿತೆ ಓದಿದ ಮೇಲೆ
ಖಾಲಿ ಹಾಳೆಯಷ್ಟೆ ಉಳಿಯಿತು.






ಉಸಿರು ತುಂಬಿ-


ನಗು ಬಣ್ಣ ಕಣ್ಣು ಕಿವಿಗಳ
ಹೊತ್ತು ತಿರುಗು-
ತ್ತಾ ಹೋದಂತೆ
ಮಕ್ಕಳೆಂಬ ಮಕ್ಕಳ
ಅಪ್ಪಂದಿರು
ಬೆಲೆ ಕಟ್ಟಿ
ಭಾರ ಇಳಿಸುತ್ತಾ
ಹೋಗುತ್ತಾರೆ
ಉಸಿರಷ್ಟೆ ಉಳಿಯುತ್ತದೆ.




ಅಳುವಿದ್ದಾಗ
ಮಳೆಯೂ ಇರಲಿ...





ನಾನು
ಎಳ್ಳುಕಾಳು ಮುಳ್ಳುಮೊನೆಯಷ್ಟೂ
ಆಗಿಲ್ಲ
ಲೋಕ ಬದಲಾಯಿತು
ಎಂಬ 
ನಿಟ್ಟುಸಿರಿಗೆ
ತಕ್ಕಡಿ ತೂಗಾಡಿತು
ಹಿಂದೆಂದೂ ಹೀಗೆನ್ನದ
ನನ್ನ ನೋಡಿ
ನಕ್ಕಿತು.




ಕುಂಬಳದ ಹೂ
ನಿರಮ್ಮಳ ಬೆಳಗಲ್ಲಿ
ಅಮ್ಮನ ನೆನಪು
ಕೆರಳಿಸಿತು:
ಅವಳು
ಈ ಹೂವಲ್ಲಿ
ರುಚಿಯಾದ ರೊಟ್ಟಿ
ಮಾಡುತ್ತಾಳೆ.




ಬುದ್ಧ ಎಂದಾಗ
ಅವನು
ಒಂದಾನೊಂದು ಕಾಲದಲ್ಲಿ
ಕಪಿಲವಸ್ತುವಿನಲ್ಲಿ
ಶುದ್ಧೋದನ ಮತ್ತು
ಮಾಯಾದೇವಿಯ ಮಗನಾಗಿ
ಜನಿಸಿದನು
ಎನ್ನುವುದ ಬಿಟ್ಟು
ಬೇರೇನೂ
ನೆನಪಾಗುತ್ತಿಲ್ಲ.




ಒಂದೇ...

ತಡವಿ
ಅಂತರಂಗಕ್ಕಿಳಿಯದೆ
ಓಡಿದ
ಶಪಿಸಿ ಕಲ್ಲಾಗಿಸಿದ
ಮುಟ್ಟಿ ಎಬ್ಬಿಸಿ
ಧನ್ಯಳಾಗಿಸಿದ
ಸುಟ್ಟು ಪರೀಕ್ಷಿಸಿ
ಕಾಡುಪಾಲು ಮಾಡಿದ
ಪುರುಷೋತ್ತಮ-
ರು
ಬೇರೆ ಬೇರೆ ಅಲ್ಲ

ಸ್ತ್ರೀಯರೂ
ಅಲ್ಲ.





ತಡೆಯಲಾಗಲಿಲ್ಲ
ನಗು,
ಕತೆ
ಅಹಲ್ಯೋದ್ಧಾರಕ್ಕೆ ಬಂದಾಗ
ಸೀತೆಗೆ.










No comments:

Post a Comment