Friday 20 December 2013


ದೀಕ್ಷೆ ಮಾರಾಟಕ್ಕಿದೆ


ನಾಗರಾಜ ಹರಪನಹಳ್ಳಿ

Nagaraj Harapanahalli 


















ಸೂರ್‍ಯ ಇಲ್ಲವಾದ ದಿನ
ಕುಕ್ಕೆಯಲಿ ಮಡೆಸ್ನಾನ
ಸಂಪ್ರದಾಯದ ಉರುಳ ಕಂಡು
ಅ ಆ ಇ ಈ ಕಾಣದ ಜೀವಗಳು
ಬದುಕಿಗಾಗಿ ಕೈ ಜೋಡಿಸಿ ನಿಂತಿರಲು
ಕಲ್ಲುನಾಗರಕ್ಕೆ ಕಣ್ಣಿಲ್ಲ ಹೃದಯವಿಲ್ಲ
ಕೂದಲೆಳೆಯಲಿ ನೇಣು ಹಾಕುವ
ಸಾಲು ಸಾಲು ಮಠಗಳು

ಒಬ್ಬ ವೈಷ್ಣವ ದೀಕ್ಷೆ ದೀಕ್ಷೆ ಕೊಡ್ತೇನೆ ಅಂತ
ಇನ್ನೊಬ್ಬ ಗೀತಾ ಗೀತಾ ಪಾರಾಯಣ ಅಂತ
ಮತ್ತೊಬ್ಬ ರಾಮ ಕಥಾ ಕಥಾ ಅಂತ
ಸ್ಪರ್ಧೆಗೆ ನಿಂತಿದ್ದಾರೆ ಧರ್ಮೋದ್ಧಾರಕರು

ಸಾಸಿವೆ ಕೈಯಲ್ಲಿ ಹಿಡಿದ ಸೂರ್‍ಯ
ನಗುತ್ತಿದ್ದಾನೆ

ಹುಸೇನಣ್ಣನ ಗೂಡಂಗಡಿಗೆ
ಬೆನ್ನು ಕೊಟ್ಟು ಮೋಟು ಬೀಡಿ ಬೆಂಕಿಯಲ್ಲಿ
ಕನಸು ಕಂಡಿದ್ದಾನೆ ಆತ
ಸಿನಿಮಾ ಟಾಕೀಜಿನ ಗಲ್ಲಿಗಳಲ್ಲಿ
ಕೇರಿಯ ಮಗಳು
ಹೂ ಮುಡಿದು ನಕ್ಕಿದ್ದಾಳೆ
ಕೇರಿಯ ಮಕ್ಕಳು ಪಾಟೀಚೀಲ ಹಿಡಿದು
ಶಾಲೆಗೆ ಹೆಜ್ಜೆಯಿಟ್ಟು ಅಕ್ಷರ ಅಕ್ಷರ
ಅಂದ್ರೆ
ಖಾವಿಯೊಂದು ದೀಕ್ಷೆ ದೀಕ್ಷೆಯ ಜಪದಿ ಮುಳುಗಿರಲು

ಕನಕನ ಕಿಂಡಿಯಲ್ಲಿರುವ
ಸಾಸಿವೆಯ ಕಾಳು ಯಾಕೋ
ಯಾರಿಗೂ ಕಾಣಿಸುವುದಿಲ್ಲ ........


***

(ಜನನುಡಿಯಲ್ಲಿ ಓದಿದ ಕವಿತೆ)

No comments:

Post a Comment