Saturday 28 December 2013

ಸಾಲುಗಳು

ಡಾ. ಜಿ. ಕೃಷ್ಣ



1
ನಿಶ್ಚೇಷ್ಟಿತ ಆನಂದಕ್ಕಿಂತ
ಮಿಸುಕುವ ನೋವು
ಸಹ್ಯ
ಎಂದರೆ
ನಿರಾಕರಣೆ ಇರಲಾರದು



2
ನರಭಕ್ಷಕ ಹುಲಿಯನ್ನು
ಗುಂಡಿಕ್ಕಿ ಕೊಲ್ಲುವುದು
ಹಿಂಸೆಯ ಅಹಿಂಸೆ



3
ಎಂತಹ ಗಹನ ಅನುಭಾವದ ಮಾತೂ
ಎರಡನೆಯ ಅರ್ಥಕ್ಕೆ
ಹೊರಳಿ
ನಗು ಬರಿಸುತ್ತವಲ್ಲ ಗಾಲಿಬ್!



4
ಚಳಿಗಾಲದ ಕೊಳಲಿನ ಗದ್ಗದ ಕೇಳಲಾರದೆ
ಬೇಸಿಗೆವರೆಗೆ ಕಾಯಲು ಹೇಳಿದಳಲ್ಲ



5
ದಿನವೂ
ಬಿಂಬ ಅದೇ
ಪ್ರತಿಬಿಂಬ ಅಲ್ಲ
ಅದೇ ನದಿ
ನೀರಲ್ಲ


 




6
ನಿಶ್ಚಲ
ಬಿಂಬ ಪ್ರತಿಬಿಂಬ-
ಗಳು ಅರ್ಥವಾಗುತ್ತವೆ ಗಾಲಿಬ್
ಬಿಂಬದ ಜೊತೆ
ಪ್ರತಿಬಿಂಬವೂ
ಯಾಕೆ ಚಲಿಸುತ್ತೆ
ಅರ್ಥವಾಗೋದಿಲ್ಲ ನೋಡು

 



7
ತೂಕಡಿಸಲಾಗದ ಲೋಕದಲ್ಲಿ
ಕಾಣಲಾಗುವುದು
ಕನಸಿನ ಕನಸಷ್ಟೇ!



8
ಮೊಳೆಯುವ ಭಯಕ್ಕೆ
ಯಾತನೆಯ ಬೀಜಗಳನ್ನು ಹುರಿದಿಟ್ಟೆ
ಈಗ
ವಸಂತ



9
ಇದರ ಅರ್ಥ ಏನು ಗಾಲಿಬ್
ನೋವಿನ ಸಾಲುಗಳಿಗೆ ಬರುವ ಮೆಚ್ಚುಗೆಯೇ ಹೆಚ್ಚಲ್ಲ



10
ಅವರು ಕಲ್ಲೆಸೆದ ಮೇಲೆ ಕಾದಿದ್ದು ಒಳ್ಳೆಯದೇ ಆಯಿತು
ನನ್ನ ಅಂತರಾಳದ ಕೊಳೆ ಕಂಡುಕೊಳ್ಳಲು ದಾರಿಯಾಯಿತು
  


11
ಮಾಗಿಯ ಮಬ್ಬು ಬೆಳಗಲ್ಲಿ
ಟೀ ಮಾಡುವಾಗ ಚೆಲ್ಲಿದ
ಅರೆಚಮಚೆ ಹಾಲುಪುಡಿ
ಮೂಸುತ್ತ ಬಂದ ಒಂದಿರುವೆ
ಈಗಷ್ಟೆ ಹುಟ್ಟಿದ
ಎರಡು ಹೆಣ್ಣಿನ ಮೇಲಿನ
ಗಂಡು
ಎರಡೂ ಇಲ್ಲ ನೋಡಿ
ಈ ಹೊತ್ತಿಗೆ
ಖಾಲಿ ಖಾಲಿ
ಬೆಸೆಯಲಾಗುತ್ತಿಲ್ಲ ಎರಡನ್ನೂ
ಕಷ್ಟಪಟ್ಟು ಹತ್ತಿರ ಸೇರಿಸುತ್ತಿದ್ದೇನೆ
ಖಾಲಿಯ
ಬೆರಗುಗಣ್ಣಿಂದ ದಿಟ್ಟಿಸುತ್ತಿದ್ದೇನೆ




12
ಎಲೆ ಹದ್ದೇ,
ತೊರೆದ ಒಂದು ಗರಿಯಿಂದ
ನಿನ್ನ
ಹದ್ದುತನ
ರವಷ್ಟು ಕಡಿಮೆಯಾಯಿತೇ
ಅಥವಾ
ಹೆಚ್ಚಿತೇ?

 




13
ನೀರಿನ ಗುಣ ನೋಡು ಗಾಲಿಬ್,
ಏಟು ಬಿದ್ದ ಜಾಗಕ್ಕೂ
ಶೃಂಗಾರ!







14
ಹೂವರಳಿದಾಗ
ಸದ್ದೇ ಆಗಲಿಲ್ಲ ಗಾಲಿಬ್,
ಚಿಕಿತನಾದೆ
ತೊಟ್ಟು ಕಳಚಿದಾಗ
ಮತ್ತಷ್ಟು!



15
ವರು ಯಾರನರಸಿ ಹೊರಟಿದ್ದರೋ
ಅವನೇ ನಾನಾಗಿಬಿಟ್ಟೆ
ಇಬ್ಬರದೂ
ನೀಗಿತು!



16
ನಿಶ್ಶಬ್ಧದಲ್ಲಿ ಕವಿತೆ ಹುಟ್ಟುವ ತನಕ
ಶಬ್ಧಗಳ ಹಂಗಿತ್ತು
ಈಗ
ನಿಶ್ಶಬ್ಧದ ಮುಲಾಜು



17
ದಾಟಬೇಕಿರುವ ಹೊಳೆ ಬಂತು
ಸೇತುವೆ ಕಟ್ಟಿದ್ದಾರೆ
ಚಕ್ರಗಳುರುಳುತ್ತಿವೆ
ಮುಗಿಯುತ್ತಿಲ್ಲ
ಆಚೆ ದಡ ಕಾಣುತ್ತಿಲ್ಲ...



18
ಬಾಗಿದವನ ಆತ್ಮ
ಮಾಗಿದರೆ
ಸದ್ದಿಲ್ಲದೆ
ನೆಟ್ಟಗಾಗುವನು


 

19
ತಾಪದಲ್ಲಿ
ಬೊಗಸೆ ಅದ್ದಿದಾಗ
ಯಕ್ಷನ ಕೊಳದಲ್ಲಿ ಕರಗಿದ
ಚಂದ್ರ ಬಿಂಬ
ಬೊಗಸೆ ನೀರಲ್ಲಿ
ಪ್ರತ್ಯಕ್ಷ
ಕುಡಿದು ಬಿಟ್ಟೆ
ಈಗ
ಮೈಯೆಲ್ಲ ತಂಪು



20
ಮುಗ್ಧತೆ ಇಲ್ಲದೆ ಒಳ್ಳೇ ಕವನ ಹುಟ್ಟೋದಿಲ್ಲ ಅನ್ನೋದು
ಅದನ್ನ ಕಳಕೊಂಡ ಮೇಲೆ ಅಲ್ವಾ ಗಾಲಿಬ್, ಹೊಳೆಯೋದು?


***


 

No comments:

Post a Comment