Saturday 28 December 2013

ನಾಳೆ ಕುವೆಂಪು ಜನ್ಮ ದಿನ. 
 

ಕುವೆಂಪು ಹೇಳುತ್ತಾರೆ:
ನಾನು ಮೂವತ್ತು ಮೂವತ್ತೈದು ವರ್ಷಗಳ ಹಿಂದೆಯೇ ಮನುಧರ್ಮಶಾಸ್ತ್ರದ ವಿಚಾರವನ್ನು ಒಂದು ಪದ್ಯದಲ್ಲಿ ಹೇಳಿದೆ. ಪದ್ಯದಲ್ಲಿ ಬರೆದೆ. ಅದು ಚಿನ್ನದ ಖಡ್ಗ ಇದ್ದಹಾಗೆ ಎಂದು ತೋರುತ್ತದೆ. ಏನೂ ಕೆಲ್ಸಾನೆ ಮಾಡೊಲ್ಲ ಅಂತ ಕಾಣ್ಸುತ್ತೆ. ಗದ್ಯದಲ್ಲಿ ಬರೆದು ಒರಟಾಗಿ ಹೇಳಿದರೆ ಏನಾದರೂ ಕೇಳ್ತಾರೊ ಏನೋ. ಪದ್ಯದಲ್ಲಿ ಆದಕೂಡಲೆ ಒಳ್ಳೆ ಸೊಗಸಾಗಿ ಹಾಡಿಬಿಟ್ಟು ಅದನ್ನು ಅನುಸರಿಸೋದೆ ಇಲ್ಲ! ಮೂವತ್ತೈದು ವರ್ಷಗಳ ಹಿಂದೆ:

"ಯಾವ ಕಾಲದ ಶಾಸ್ತ್ರ ಏನು ಹೇಳಿದರೇನು?
ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?
ಎಂದೊ ಮನು ಬರೆದಿಟ್ಟುದಿಂದೆಮಗೆ ಕಟ್ಟೇನು?"


ಅವನ ಕಾಲಕ್ಕೆ ಏನಿತ್ತೋ ಅದನ್ನು ಅವನು ಬರೆದಿಟ್ಟ. ಅದನ್ನು ಈ ಹೊತ್ತು "Law" ಅಂತ ತೆಗೆದುಕೊಂಡರೆ ನಾವು ಶುದ್ಧ ಅವಿವೇಕಿಗಳಷ್ಟೆ.

ನಿನ್ನೆದೆಯ ದನಿಯೆ ಋಷಿ! ಮನು ನಿನಗೆ ನೀನು!

ನೀರಡಿಸಿ ಬಂದ ಸೋದರಗೆ ನೀರನು ಕೊಡಲು
ಮನುಧರ್ಮಶಾಸ್ತ್ರವೆನಗೊರೆಯಬೇಕೇನು?
ನೊಂದವರ ಕಂಬನಿಯನೊರಸಿ ಸಂತೈಸುವೊಡೆ
ಶಾಸ್ತ್ರ ಪ್ರಮಾಣವದಕಿರಲೆಬೇಕೇನು?

ಪಂಚಮರ ಶಿಶುವೊಂದು ಕೆರೆಯಲಿ ಮುಳುಗುತಿರೆ
ದಡದಲ್ಲಿ ಮೀಯುತ್ತ ನಿಂತಿರುವ ನಾನು
ಮುಟ್ಟಿದರೆ ಬ್ರಹ್ಮತ್ವ ಕೆಟ್ಟುಹೋಗುವುದೆಂದು
ಸುಮ್ಮನಿದ್ದರೆ ಶಾಸ್ತ್ರಸಮ್ಮತವದೇನು?

ಅಂತು ಮನು ತಾನು ಹೇಳಿರಲಾರನಯ್ಯಯ್ಯೊ!

ಅಂತ ಆವೊತ್ತು ಬರೆದಿದ್ದೆ ನಾನು. ಆಗ ಮನುಧರ್ಮಶಾಸ್ತ್ರ ಓದಿರಲಿಲ್ಲ. ಮನು ಹೇಳಿದ್ದಾನೆ ಹಾಗೆ. ಅದಕ್ಕಿಂತಲೂ ಭಯಂಕರ ಹೇಳಿದ್ದಾನೆ! ಆಗ ನಾನು ಬರೆದಾಗ ಮನುಧರ್ಮಶಾಸ್ತ್ರವನ್ನು ಓದಿರಲಿಲ್ಲ. ಮನು ದೊಡ್ಡವನೆಂದು ಹೇಳುತ್ತಾರೆ. ಹೀಗೆ ಬರೆದಿರಲಾರ ಅಂತ ಊಹಿಸಿದ್ದೆ. ಆದರೆ ಮನು ಅದಕ್ಕಿಂತ ಭಯಂಕರವಾಗಿ ಏನನ್ನೆಲ್ಲಾ ಬರೆದಿದ್ದಾನೆ.

ಅಂತು ಮನು ತಾನು ಹೇಳಿರಲಾರನಯ್ಯಯ್ಯೊ!
ಹೇಳಿದ್ದರವನನೂ ಶಾಸ್ತ್ರದೊಳೆ ಸುತ್ತಿ
ಸ್ವರ್ಗ ಹೋಗಲಿ ಮತ್ತೆ ನರಕ ಬಂದರು ಬರಲಿ
ಎದೆಯ ಧೈರ್ಯವ ಮಾಡಿ ಬಿಸಾಡಾಚೆಗೆತ್ತಿ!


ಮನುಧರ್ಮಶಾಸ್ತ್ರ ಅವನ್ನೆಲ್ಲಾ ಅತ್ತ ಕಟ್ಟಿಡಿ. ಯಾರೋ ಒಬ್ಬರು ಪಟಗಳನ್ನೆಲ್ಲಾ ಎಸೆಯಿರಿ ಅಂದಿದ್ದಕ್ಕೆ ದೊಡ್ಡ ಗಲಾಟೆ ಎಬ್ಬಿಸಿದರು. ಅದಕ್ಕಿಂತ ಇದು ಬಲವಾದದ್ದೆ ಅಂತ ಇಟ್ಟುಕೊಳ್ಳಿ.

ಸ್ವರ್ಗ ಹೋಗುವುದಿಲ್ಲ; ನರಕ ಬರುವುದು ಇಲ್ಲ;
ಸ್ವರ್ಗನರಕಗಳೇನು ಶಾಸ್ತ್ರಸ್ಥವಲ್ಲ.
ಎದೆಯ ದನಿ ಧರ್ಮನಿಧಿ! ಕರ್ತವ್ಯವದುವೆ ವಿಧಿ!
ನಂಬದನು: ಅದನುಳಿದು ಋಷಿಯು ಬೇರಿಲ್ಲ!

ಹಿಂದಿನಾ ಋಷಿಗಳೂ ಮಾನವರೆ ನಮ್ಮಂತೆ,
ಅವರ ಶಾಸ್ತ್ರವು ಅವರ ಕಾಲಕ್ಕೆ ಮಾತ್ರ,
ಕಾಲಕ್ಕೆ ತಕ್ಕಂತೆ ದೇಶಕ್ಕೆ ತಕ್ಕಂತೆ
ನಮ್ಮ ಹೃದಯವೆ ನಮಗೆ ಶ್ರೀಧರ್ಮಸೂತ್ರ.


ಈ ವಿಚಾರಪೂರ್ವಕವಾದ ಭಾವಗಳನ್ನು ನಮ್ಮ ತರುಣರ ಎದೆಯಲ್ಲಿ ನೀವು ಬಿತ್ತಬೇಕು. ಪದ್ಯಗಳಲ್ಲಿಯೆ ಬಿತ್ತಿ; ಆದರೆ ನವ್ಯ ಬರಿತೀವಿ ಅಂತ ಹೇಳಿಬಿಟ್ಟು ಒಬ್ಬರಿಗೂ ಅರ್ಥವಾಗದ್ದನ್ನೆಲ್ಲಾ ತಂದುಹಾಕಿ, ಒಬ್ಬರೂ ಓದಬಾರದು, ಆ ತರಾ ಮಾಡಬೇಡಿ. ಎಲ್ಲರಿಗೂ ಅರ್ಥವಾಗುವಂತೆ, ನವ್ಯವೋ ಪದ್ಯವೋ ಎಲ್ಲರಿಗೂ ಅರ್ಥವಾಗಿ ಅದರಿಂದ ಪರಿಣಾಮಕಾರಿಯಾಗುವಂತೆ ಬರೆಯಿರಿ. ಏನೊ Symbolism ಅಂತ ಹೇಳಿಬಿಟ್ಟು ಒಂದೂ ಅರ್ಥವಾಗಬಾರದು, ಹಾಗೆ ಮಾಡಬೇಡಿ.


 KS Harshakumar Kugwe

-ಹರ್ಷಕುಮಾರ್ ಕುಗ್ವೆಯವರ ಗೋಡೆಯಿಂದ

No comments:

Post a Comment