Wednesday 11 September 2013


ನೆನಪು




ನೆನಪಾಗುತ್ತಾನೆ:

ಮಸೀದಿಯಲಿ ಸರಾಯಿ ಕುಡಿದವನು
ಗುಡಿ ತಲುಪಿಯೂ ಗಂಟೆ ಬಾರಿಸದೇ ಹಿಂದಿರುಗಿದವನು

ವಿಷದ ಬಟ್ಟಲ ಮರಳಿಕೊಡದವನು
ಜಡಿವ ಮಳೆಗೆ ಮೈಕುಗ್ಗಿಸದವನು
ತಟ್ಟೆಗಿಕ್ಕಿದ್ದನು ಉಣದೇ ಏಳದವನು

ಪ್ರಾರ್ಥನೆಯನು ಮಾತು ಮಾಡದವನು
ಪ್ರೇಮವನು ದೇಹದ ಕಾವಿನಲಿ ಹುಡುಕದವನು

ಅವರೆಲ್ಲ ನೆನಪಾದರೆಂದೇ
ನನ್ನೊಳಗಿನ ಕಂಬಳಿಹುಳ ಚಿಟ್ಟೆಯಾಗತೊಡಗಿತು
ಸದ್ದಿನೆಳೆಯಿಂದಲೇ ಮೌನದ ಗೂಡು ಹುಟ್ಟಿತು.



-ಬಸೂ

Basavaraj Sulibhavi

No comments:

Post a Comment