Sunday 8 September 2013

ಕಪ್ಪು ಸುಂದರಿ ಜೋಯಿಡಾ : 

ಜನ ನತದೃಷ್ಟರಾಗೇ ಉಳಿಯಬೇಕೆ?


ಯಮುನಾ ಗಾವ್ಕರ್ 


Yamuna Gaonkar


ಸರ್ವ ಸಂಪನ್ನ ಜೋಯಿಡಾ ತಾಲೂಕು ಇದೀಗ ತನ್ನ ಒಡಲಿನಿಂದ ಕೆಲವು ಭಾಗದ ಮನುಷ್ಯರನ್ನು ಹೊರಹಾಕಲಿದೆಯಂತೆ; ಹಾಕಿಸುತ್ತಿದ್ದಾರಂತೆ! ಮುಕ್ಕಾಲು ಭಾಗ ಜೋಯಿಡಾ ವನ್ಯಧಾಮಕ್ಕೆ, ಅದರಲ್ಲೂ ವಿಶೇಷವಾಗಿ ಹುಲಿ ಯೋಜನೆ, ಆನೆ ಯೋಜನೆ, ಪಕ್ಷಿ ಯೋಜನೆಗಳಿಗೆ. ಅರಣ್ಯೀಕರಣದ ಹೆಸರಲ್ಲಿ ಮನುಷ್ಯ ಮಾತ್ರ ದಿಕ್ಕಾಪಾಲು! ಇಷ್ಟು ದಿನ ಮನುಷ್ಯ ಮತ್ತು ಪ್ರಾಣಿಗಳ ಸಂಬಂಧ ಚೆನ್ನಾಗಿಯೇ ಇದ್ದವಲ್ಲ. ಅರಣ್ಯವೂ ಚೆನ್ನಾಗಿಯೇ ಇತ್ತು. ಜೊಯಿಡಾದ ಮೂಲ ನಿವಾಸಿಗಳಿಂದ ಕಾಡಿಗೆ-ಕಾಡು ಪ್ರಾಣಿಗಳಿಗೆ ಧಕ್ಕೆ ಬಂದಿರಲಿಲ್ಲ. ಆದರೆ, ಅರಣ್ಯ ರಕ್ಷಿಸುವ ಹೊಣೆ ಹೊತ್ತೂ ಅದರ ಭಕ್ಷಣೆ ಕಾಯಕದಲ್ಲೇ ಇದ್ದ ಕೆಲವು ಅಧಿಕಾರಶಾಹಿಗೆ, ಶ್ರೀಮಂತರ, ರಾಜಕಾರಣದ ತೆವಲಿಗೆ, ಗುತ್ತಿಗೆದಾರರ ಹಪಾಹಪಿತನಕ್ಕೆ ಜೋಯಿಡಾ ಬಲಿಯಾಯಿತು. ಇಂದು ಅದಕ್ಕೆ ನಿಜವಾದ ಧ್ವನಿ ನೀಡುವವರು ಕುಸಿದು ಹೋಗುತ್ತಿದ್ದಾರೆ.
 
ರಾಜಸ್ತಾನದ ಸಾರಿಸ್ಕಾ ಅರಣ್ಯ ಪ್ರದೇಶವನ್ನು ಅರಣ್ಯ ಇಲಾಖೆಯ ತಾಬಾ ತೆಗೆದುಕೊಂಡರೂ ಅಲ್ಲಿ ಒಂದೇ ಒಂದು ಪ್ರಾಣಿಯೂ(ಹುಲಿ) ಇಲ್ಲದಂತಾಯಿತು. ಈ ಬಗ್ಗೆ ಪರ್ತಕರ್ತ ಮುಜುಂದಾರ್ ಸುದ್ದಿ ಮಾಡಿದ್ದರು. ಆದರೆ ಜೋಯಿಡಾ ಹಾಗೆ ಮಾಡಿಲ್ಲ. ಇನ್ನು ಸ್ಥಳೀಯರ ವಾಸವಿಲ್ಲದೆ ಅಂದರೆ ಮನುಷ್ಯಪ್ರಾಣಿಯ ಇರುವಿಕೆ ನಿಷೇಧಿಸಿದರೆ ಜೋಯಿಡಾದ ವನ್ಯ ಸಂಪತ್ತು ಹಾಗೂ ಪ್ರಾಣಿ ಸಂಕುಲ ಖಂಡಿತ ಹೆಚ್ಚು ದಿನ ಉಳಿಯಲಾರದು. ಅವೈಜ್ಞಾನಿಕ ಪ್ರವಾಸೋದ್ಯಮದ ಸೋಗಲಾಡಿತನಕ್ಕೆ, ಮನುಷ್ಯ ಕೇಂದ್ರಿತವಲ್ಲದ ಅಭಿವೃದ್ಧಿ ಪ್ರಣಾಳಿಕೆಗೆ ಇದೀಗ ಜೋಯಿಡಾದ ಜನ ಬಲಿಯಾಗುತ್ತಿದ್ದಾರೆ. ದೇಶದಲ್ಲಿಯೇ 4000ಕ್ಕೂ ಅಧಿಕ ಕುಟುಂಬಗಳು ವನ್ಯಧಾಮ ಮತ್ತು ವಿಶೇಷವಾಗಿ ಹುಲಿ ಯೋಜನೆಗೆ ಮನೆ-ಭೂಮಿ ಕಳಕೊಳ್ಳಲಿರುವವರಲ್ಲಿ ಜೋಯಿಡಾ ಮೊದಲ ಸಾಲಿನಲ್ಲಿದೆ. 



 


ಹಿಂದೆ ಪೇಪರ್ ಮಿಲ್ಗೆ, ಸಾಮಿಲ್ಗೆ, ನಂತರ ಗಣಿಗಾರಿಕೆಯ ನೆಪದಲ್ಲಿ ಬಂದವರು ಸೂರ್ಯ ಕಿರಣ ಹೊಕ್ಕದ ಕಾಡನ್ನು ಹೊಕ್ಕೇ ಬಿಟ್ಟರು; ಲೂಟಿ ಮಾಡೇ ಬಿಟ್ಟರು. ಆದರೆ ಆದಿವಾಸಿಗಳು, ರೈತರು ದೈನಂದಿನ ಜೀವನಕ್ಕೆ ಕಾಡನ್ನು ಕಡಿಯದೇ ಕಾಡನ್ನೇ ದೇವರೆಂದು ಆಶ್ರಯಿಸಿದ್ದವರು, ಬಿದ್ದ ಒಣ ಉರುವಲು ಕಟ್ಟಿಗೆ ತಂದರೂ ಶಿಕ್ಷೆಗೊಳಗಾಗುವ ಪ್ರಸಂಗ ಬಂತು. ಹಾಗೆ ಕಾಳಿ ಜಲ ವಿದ್ಯುತ್ ಯೋಜನೆಗೆ ಭೂಮಿ ಕಳಕೊಂಡವರು ಇಂದು ಭೂಹೀನರಾಗಿದ್ದಾರೆ. ಇದೂವರೆಗೂ ಪರಿಹಾರ-ಪುನರ್ವಸತಿ ಕೆಲಸ ನಿಜವಾಗಿ ಪೂರ್ತಿಗೊಂಡಿಲ್ಲ. 
ನಿಜವಾಗಿಯೂ ಆದಿವಾಸಿಗಳಾದ ಇಲ್ಲಿಯ ಕುಣಬಿ ಜನರನ್ನು ಪರಿಶಿಷ್ಟ ಪಂಗಡಕ್ಕೆ ಇನ್ನೂತನಕ ಸೇರಿಸದೇ ಸ್ವತಂತ್ರ ಭಾರತದಲ್ಲಿ ಅನ್ಯಾಯವೆಸಗಲಾಗಿದೆ. (ಸ್ವಲ್ಪ ಗೌಳಿ, ಸಿದ್ದಿ ಜನರೂ ಇದ್ದಾರೆ.) ಇವರಿಗೆ ಅತ್ತ ಅರಣ್ಯ ನಂಬಿ ಬದುಕಲಾರದ ಸ್ಥಿತಿ, ಇತ್ತ ಸಾಗುವಳಿ ಭೂಮಿಗೆ ಸೂಕ್ತ ದಾಖಲೆಗಳಿಲ್ಲದ ಪರದಾಟ. ಯಾರು ಇವರ ಗೋಳು ಕೇಳುವವರು? 

 
ಜೋಯಿಡಾ ವಿಸ್ತೀರ್ಣದಲ್ಲಿ 1910.44 ಚ.ಕಿ.ಮಿ ಇದೆ. 3 ಹೋಬಳಿಗಳನ್ನು ಒಳಗೊಂಡಿದೆ. 15 ಗ್ರಾಮ ಪಂಚಾಯ್ತಿಗಳನ್ನು, 101 ಉಪ ಗ್ರಾಮಗಳನ್ನು, 114 ಜನ ವಸತಿ ಪ್ರದೇಶವನ್ನೂ 6 ಜನ ವಸತಿ ಇಲ್ಲದ ಪ್ರದೇಶಗಳನ್ನೂ ಹೊಂದಿದೆ. ಕೆಲವರನ್ನಂತೂ ಎಲ್ಲಾ ದಾಖಲೆಗಳಿಂದಲೂ ವಂಚಿಸಲಾಗಿದೆ. ಇಲ್ಲಿ ಒಟ್ಟಾರೆ 48914 ಜನ ವಾಸಿಸುತ್ತಿದ್ದಾರೆ. ಜೋಯಿಡಾದ ಅರಣ್ಯದಿಂದ ರಾಜ್ಯದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂಪಾಯಿ ಆದಾಯ ಸಂದಾಯವಾಗುತ್ತಿದೆ. ಅದರಲ್ಲಿ ಕಿಂಚಿತ್ ಪಾಲು ಜೋಯಿಡಾದ ಮೂಲಸೌಕರ್ಯ ಅಭಿವೃದ್ಧಿಗೆ ಮೀಸಲಾಗಿಲ್ಲ. ರಾಜ್ಯದ ಮುಂದುವರಿದ ಜಿಲ್ಲೆಗಳಲ್ಲೊಂದಾದ ಉತ್ತರ ಕನ್ನಡದ ಜೋಯಿಡಾದ್ದು ಮಾತ್ರ -10 ರ ಋಣಾತ್ಮಕ ಅಭಿವೃದ್ಧಿ! 
160 ಕಿ.ಮಿ ಹರಿಯುವ ಕಾಳಿಯ ಮೂಲ ಜೋಯಿಡಾ. ಪರವೂರುಗಳಿಗೆಲ್ಲ ಬೆಳಕು ಕೊಡುವ ಜೋಯಿಡಾ ತಾನು ಮಾತ್ರ ಎಲ್ಲಾ ವಿಷಯಗಳಲ್ಲಿ ಕಪ್ಪು ಸುಂದರಿ! ಯಾಕೆ ಈ ಮಾತು? 

 
ಅರಣ್ಯ ಇಲಾಖೆಯದು ಖಂಡಿತ ಮನುಷ್ಯ ಕೇಂದ್ರಿತ ಕೆಲಸವಲ್ಲ ಎಂಬುದು ಸಾಬೀತು. ಅಂಥ ಯೋಜನೆಗಳೇ ಇಲ್ಲದ್ದರಿಂದ ಶ್ರೀಮಂತರ ಹಾಗೂ ಶ್ರೀಮಂತ ದೇಶಗಳ ಮರ್ಜಿ ಕಾಯುವ ನೀತಿಗಳು ಇಲ್ಲಿ ಬೇಕಾದಷ್ಟಿವೆ. ಇದರ ಹಿಂದೆ ಅಂತಾರಾಷ್ಟ್ರೀಯ ಹುನ್ನಾರವೂ ಇಲ್ಲದಿಲ್ಲ. ಮುಂದುವರಿದ ದೇಶಗಳು ಅಭಿವೃದ್ಧಿಗೆ ತೊಡಕಾಗುವ ಅನೇಕ ಯೋಜನೆಗಳನ್ನು ಮೂರನೇ ಜಗತ್ತಿನ ರಾಷ್ಟ್ರಗಳಿಗೆ ವರ್ಗಾಯಿಸುವ ಕ್ರಿಯೆ ಇಂದು ನಿನ್ನೆಯದಲ್ಲ. ಅಣುಸ್ಥಾವರ, ಹಸಿರು ಮನೆ ಯೋಜನೆ, ಪ್ರವಾಸೋದ್ಯಮ (ಲೈಂಗಿಕ ಪ್ರವಾಸೋದ್ಯಮದ ಉತ್ತೇಜನಕ್ಕೆ ಪೂರಕ) ಹಾಗೆಯೇ ರಾಷ್ಟ್ರೀಯ ಉದ್ಯಾನವನ, ಅಭಯಾರಣ್ಯ, ಹುಲಿಧಾಮ,ಆನೆ,ಸಿಂಹಧಾಮ,ಪಕ್ಷಿಧಾಮ ಇತ್ಯಾದಿ ಯೋಜನೆಗಳ ಹೆಸರಲ್ಲಿ ಜನತಾ ಯೋಜನೆ ನಾಪತ್ತೆ! ಜನರ ಕಥೆ ಏನು? ಇದರ ಅರ್ಥ ವನ್ಯಜೀವಿಗಳು ಹಾಗೂ ಕಾಡು ಉಳಿಯಬಾರದೆಂದೇನೂ ನಾನು ಹೇಳುತ್ತಿಲ್ಲ. ಆದರೆ ಇವುಗಳ ನಾಶದ ಹಿಂದಿನ ಕಾರಣ-ಕೈವಾಡಗಳನ್ನು ಶೋಧಿಸಬೇಕಾಗಿದೆ. 




 ಕರ್ನಾಟಕದ ಶೇ.20 ಅರಣ್ಯ ಭೂಮಿಯಲ್ಲಿ ಶೇ. 3 ಸಂರಕ್ಷಿತ ಅರಣ್ಯ ಪ್ರದೇಶ. ಇದರಲ್ಲಿ ಶೇ. ಒಂದಕ್ಕಿಂತ ಸ್ವಲ್ಪ ಕಡಿಮೆ ಭಾಗ ಹುಲಿ ಸಂರಕ್ಷಣೆಗೆ ನೀಡಲಾಗಿದೆ. ಅದರಲ್ಲಿ ನಮ್ಮ ಜೊಯಿಡಾದ ಕೆಲವು ಭಾಗವೂ ಸೇರಿದೆ. 28-12-2007 ರಂದು ನೋಟಿಫಿಕೇಶನ್ ಕೂಡ ಆಗಿದೆ. 
ಇಲ್ಲಿ ಮೂಲಭೂತವಾದ ಸಮಸ್ಯೆ ಏನೆಂದರೆ, ಇಂಥ ಯೋಜನೆ ಬರುವ ಪೂರ್ವ ಅದರ ಸಾಧ್ಯಾಸಾಧ್ಯತೆಗಳ ಕುರಿತು ಅನಕ್ಷರಸ್ಥರೇ ಹೆಚ್ಚಿನ ಸಂಖ್ಯೆಯಲ್ಲಿರುವ ಈ ಜನರೊಂದಿಗೆ ಆಳವಾಗಿ ಚರ್ಚಿಸಿಲ್ಲ. ಹೆಚ್ಚು ಪ್ರಚಾರವನ್ನೂ ಕೊಟ್ಟಿಲ್ಲ. ಯೋಜನೆ ಘೋಷಣೆಯಾದ ನಂತರ ತುರುಸಿನಿಂದ ಪ್ರಚಾರ ನಡೆಯುತ್ತಿದೆ. ಅರಣ್ಯೋತ್ಪನ್ನಗಳನ್ನು ಅವಲಂಬಿಸಿದ ವನವಾಸಿ, ಆದಿವಾಸಿ, ಇತರೇ ಅರಣ್ಯವಾಸಿಗಳ ಹಕ್ಕು ಚ್ಯುತಿಯಾಗಿದೆ. ಅರಣ್ಯೋತ್ಪನ್ನಗಳನ್ನು ಸಂಗ್ರಹಿಸಿದರೆ ಅರಣ್ಯ ಕಾಯ್ದೆ ಪ್ರಕಾರ ಕೇಸು ದಾಖಲೆ ಖಂಡಿತ. ಕಾಡಿನಿಂದ ಒಣ ಕಟ್ಟಿಗೆಯನ್ನೂ ತರುವಂತಿಲ್ಲ. ಜನ-ಜಾನುವಾರು ನಿರ್ಭೀತಿಯಿಂದ ಓಡಾಡುವಂತಿಲ್ಲ. ಹಗಲು ರಾತ್ರಿ ಯಾವುದೇ ಇರಲಿ, ಮುಖ್ಯ ರಸ್ತೆಯಿಂದಾಚೆ ಅರಣ್ಯದೊಳಗಿನ ತಮ್ಮ ಮನೆಗಳಿಗೆ ಹೋಗುವುದಿದ್ದಲ್ಲಿ ಅರಣ್ಯ ಪ್ರದೇಶವನ್ನು ಪ್ರವೇಶಿಸುವ ಗೇಟ್ ಬಂದ್. 

 
26-6-2011ರಂದು ಕರಡು ಕಾಯ್ದೆ ಮಾಡಲಿಕ್ಕೆ ಸರ್ಕಾರ ತರಾತುರಿಯಲ್ಲಿ ತಯಾರಿಯನ್ನೂ ನಡೆಸಿದೆ. ಹುಲಿ ಯೋಜನೆಯಿಂದ ಜನರನ್ನು ಹೇಗೆ ಎತ್ತಂಗಡಿ ಮಾಡುವುದು ಅಥವಾ ನಿರಂತರ ಕಿರುಕುಳದಿಂದ ಜನರೇ ಬೇರೆ ಕಡೆಗೆ ಹೋಗುವಂತೆ ಹೇಗೆ ಮಾಡುವುದು ಎಂಬ ಹುನ್ನಾರವೇ ಈ ಕಾಯ್ದೆ. ಯಾಕೆಂದರೆ ಪ್ರಾಣಿಗಳಿಂದ ಸ್ವಯಂರಕ್ಷಣೆಗೆ ಮನುಷ್ಯನಿಗೆ ಅವಕಾಶಗಳಿಲ್ಲ. ಆನೆ, ಹುಲಿ, ಕರಡಿ ಏನೇ ಧಾಳಿ ಇಟ್ಟರೂ, ಮನುಷ್ಯ ಸತ್ತರೂ, ಕೃಷಿ ನಾಶವಾದರೂ ಸಕರ್ಾರಕ್ಕೆ ಚಿಂತೆಯಿಲ್ಲ. ಮೂಲಸೌಕರ್ಯದಿಂದ ವಂಚಿಸಿದರೆ ಜನರೇ ಬೇಸತ್ತು ತಮ್ಮ ಜಾನುವಾರು ಸಮೇತ ಓಡಿಹೋಗುತ್ತಾರೆ. ಆಗ ಪರಿಹಾರನೂ ಕೊಡಬೇಕೆಂದಿಲ್ಲ ಅಲ್ಲವೇ? ಒಳ್ಳೇ ಉಪಾಯ. ಆದರೆ ಈ ಉಪಾಯ ಮಾಡಿದ ಸರ್ಕಾರ 'ಉಪಾಯಂ ಚಿಂತಯೇತ್ ಪ್ರಾಜ್ಞಃ ತಥಾಪಾಯಂಚ ಚಿಂತಯೇತ್' ಎನ್ನುವ ಹಾಗೆ ಭವಿಷ್ಯದ ಪ್ರಾಣಿ-ಪಕ್ಷಿ ಕುರಿತು ಯೋಚಿಸುವಾಗಲೇ ಮನುಷ್ಯ ಸಂತತಿ ಕುರಿತೂ ಯೋಚಿಸಲಿ. 

 
ಕರ್ನಾಟಕದ ನಾಗರ ಹೊಳೆ, ಭದ್ರಾ, ಕುದುರೆಮುಖ, ಬಿಳಿಗಿರಿ ರಂಗನಬೆಟ್ಟ, ಬಂಡೀಪುರ, ಅಲ್ಲದೇ ಹೊರ ರಾಜ್ಯಗಳಾದ ಗೋವಾ, ಆಂದ್ರ, ತಮಿಳುನಾಡು, ಓರಿಸ್ಸಾ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ತಾನ, ಸಿಕ್ಕಿಂ, ಉತ್ತರಾಖಂಡ, ಬಂಗಾಳ, ಗುಜರಾತ್, ಹಯರ್ಾಣಾ, ಕೇರಳಗಳಲ್ಲಿ ಸೆಂಚುರಿಗಳಾದಾಗ, ವನ್ಯಪ್ರಾಣಿ ಪ್ರೊಜೆಕ್ಟಗಳಾದಾಗ (ಗೋವಾದ ಮಹಾವೀರ ಸೆಂಚುರಿ, ಆಂದ್ರದ ಶ್ರೀಶೈಲಂ, ಮಂಜಿರಾ, ನಾಗಾರ್ಜುನ ಸಾಗರ ಸೆಂಚುರಿ, ರಾಜಸ್ತಾನದ ಸಾರಿಸ್ಕಾ, ಭರತ್ ಪುರ, ಕುರುಂಬಿನ್, ಮಹಾರಾಷ್ಟ್ರದ ಸಂಜಯಗಾಂಧಿ ವನ್ಯ ಜೀವಿಧಾಮ, ದಾಜಿಪುರ, ತಮಿಳುನಾಡಿನ ಹಸ್ತಿನಾಪುರ, ಮಧುಮಲೈ, ಸಿಕ್ಕಿಂನ ಕ್ಯಾಂಗ್ನೋಸ್ಲಾ, ಸಿಂಗ್ಬಾ, ಬರ್ಸೈ, ಓರಿಸ್ಸಾದ ಚಿಲ್ಕಾ, ಬಿಟರ್ಕಾನಿಕಾ, ಉತ್ತರ ಪ್ರದೇಶದ ಕಿಶನಪುರ, ಹಸ್ತಿನಾಪುರ ಹೀಗೆಲ್ಲ ಕಡೆಗಳಲ್ಲಿ) ಏನಾಗಿದೆ ಎಂಬುದು ಕೆಲವರಿಗಾದರೂ ಗೊತ್ತಿದೆ. ಪುನರ್ವಸತಿ-ಪರಿಹಾರ ನೀಡುವಲ್ಲಿ ಸರ್ಕಾರದ ಈವರೆಗಿನ ಕಾಳಜಿ ಏನೂ ಸಾಲದ್ದರಿಂದಲೇ ಹೋರಾಟದ ಹಲವು ಮಾರ್ಗ ಕಂಡುಕೊಂಡಿದ್ದಾರೆ. ಬೋಳು ಗುಡ್ಡದಲ್ಲಿ ಭೂ ಆಧಾರಿತ ಸೌಲಭ್ಯ ಅಥವಾ 10 ಲಕ್ಷ ಪರಿಹಾರ. 


 

ಹಾಗಾದರೆ ಒಳಗೇನಿದೆ? ಗ್ರಾಮ ಪಂಚಾಯಿತಿ ವ್ಯಾಪ್ತಿಗಳಾದ ಅಣಶಿ, ಉಳವಿ, ನಂದಿಗದ್ದೆ (ಗುಂದ), ಕಾಟೇಲಿ (ಕುಂಬಾರವಾಡಾ) ಪ್ರಧಾನಿಯ ಫಣಸೋಲಿ-ವಿನರೋಲಿಯ ಭಾಗ ಕೋರ್ ಏರಿಯಾವನ್ನಾಗಿ, ಡಿಗ್ಗಿ ಹಾಗೂ ಕಾರವಾರದ ಕದ್ರಾದ ಸುತ್ತ-ಮುತ್ತ ಕೆಲವು ಭಾಗಗಳನ್ನು ಪೆರಿಪೇರಿಯಲ್ ಏರಿಯಾವನ್ನಾಗಿಯೂ ಗುರುತಿಸಿಕೊಳ್ಳಲಾಗಿದೆ. ಪಾಪ! ಬಹುತೇಕ ಜನಕ್ಕೆ ಇದಿನ್ನೂ ಗೊತ್ತೇ ಇಲ್ಲ. ಹಾಗೆಯೇ ಹಾರ್ನ ಬಿಲ್ ಪ್ರೊಜೆಕ್ಟ ಕೂಡ ಬಹುತೇಕ ಜಾರಿಯಾದಂತೆಯೇ.
 
ಒಂದು ಕುಟುಂಬಕ್ಕೆ 10 ಲಕ್ಷ ರೂ ಆಮಿಷ ತೋರಿಸಿ ಕೆಲವರನ್ನು ಒಪ್ಪಿಸಲಾಗಿದೆಯಂತೆ. ಇತ್ತೀಚಿನ ವರದಿ ಪ್ರಕಾರ ಪರಿಹಾರದ ಪ್ಯಾಕೇಜ್ನಲ್ಲಿ ಕುಟುಂಬದ ಪರಿಕಲ್ಪನೆ ಅವೈಜ್ಞಾನಿಕವಾಗಿದೆ. 18 ವರ್ಷ ಮೇಲ್ಪಟ್ಟ ಹುಡುಗನನ್ನು ಒಂದು ಕುಟುಂಬವೆನ್ನುವುದಾದರೆ ಹುಡುಗಿಯರೇಕೆ ಸೇರಿಲ್ಲ? ಹೋರಾಟದ ಕಾವು ಕಡಿಮೆ ಮಾಡಲಿಕ್ಕೇ? 

 
1972 ರ ವನ್ಯ ಜೀವಿ ಸಂರಕ್ಷಣಾ ಕಾಯಿದೆ ಸೆಕ್ಷನ್ 38 ರ ಉಪ ಕಲಂ ಪ್ರಕಾರ ಹುಲಿ ಯೋಜನೆ ಘೋಷಿಸಿದೊಡನೆ ಅರಣ್ಯವಾಸಿಗಳನ್ನು ಸ್ಥಳಾಂತರಿಸಬಾರದೆಂದಿದೆ. ಜೀವಿಸುವ ಹಕ್ಕು ಇದೆ ಎನ್ನುತ್ತದೆ. ಆದರೆ ಜೀವನೋಪಾಯದ ಕೆಲವು ಮಾರ್ಗಗಳನ್ನು ಕಸಿದುಕೊಂಡಿದೆ. ಹಾಗೆಯೇ, 2006 ರ ಅರಣ್ಯ ಹಕ್ಕು ಕಾಯ್ದೆಯ ಕಾಲಂ 4 ಪ್ರಕಾರ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಜನಕ್ಕೆ ಅರಣ್ಯ ಹಕ್ಕಿಲ್ಲ. ಹಾಗಾಗಿ ಪರಿಹಾರ ಕೊಡಲಿಕ್ಕೆ ಹತ್ತು ಲಕ್ಷ ಸಾಕೇ? ಬೇರೆ ಯಾವ ಉದ್ಯೋಗದ ತರಬೇತಿಯಿಲ್ಲದ ಈ ಜನ ಸಕರ್ಾರ ನೀಡುವ ಕವಡೆ ಕಿಮ್ಮತ್ತನ್ನು ಪಡೆದು, ದೇಶಕ್ಕಾಗಿ ತ್ಯಾಗಮಾಡಿದ್ದಾರೆಂಬ ಹೊಗಳಿಕೆ ಮಾತು ಹೇಳಿಸಿಕೊಂಡೊಂಡಿರಲಿಕ್ಕೆ ಮಾತ್ರ ಸಾಕು. ಜೋಯಿಡಾದ ಈ ಪ್ರದೇಶದಲ್ಲಿ ವಾಸಿಸುವ ಕೆಲವರಿಗೆ ಭೂಮಿ ಪಟ್ಟಾ ಇನ್ನೂ ಸಿಕ್ಕಿಲ್ಲ, ವನವಾಸಿ, ಆದಿವಾಸಿ ಕುಣುಬಿಗಳನ್ನು ಪರಿಶಿಷ್ಟ ಪಂಗಡ(ಬುಡಕಟ್ಟು) ಎಂದು ಇನ್ನೂ ಘೋಷಿಸಿಲ್ಲ, ಕಾರಣ ಬೇರೆಡೆಗೆ ಬದುಕಲಿಕ್ಕಾಗದ ವಾತಾವರಣ ಇಂದು ಸೃಷ್ಟಿಯಾಗಿದೆ. 


ಕಾಡಿನೊಂದಿಗಿನ ಭಾವನಾತ್ಮಕ, ಸಾಂಸ್ಕೃತಿಕ ಸಂಬಂಧ ಅತ್ಯಂತ ಪುರಾತನವಾದುದು. ಎಲ್ಲರನ್ನೂ ಸಂತೃಸ್ತರನ್ನಾಗಿ ಮಾಡಿ, ಅವರಿಗೆ ಯಃಕ್ಕಶ್ಚಿತ್ ಹಣ-ಬರಡು ಭೂಮಿ ಎದುರಿಗಿಟ್ಟರೆ ನಾಗರಿಕತೆ ಮುಂದೋಡುತ್ತದೆಯೇ? ಸಾಮಾಜಿಕ, ಆರ್ಥಿಕ ಭದ್ರತೆಯಿಲ್ಲದೇ ಒತ್ತಡದ ಬದುಕಿನ ಮಧ್ಯೆ ಬೀದಿಪಾಲಾಗುತ್ತಾರೆ ಅಷ್ಟೇ. ಇದೆಲ್ಲ ನಮ್ಮ ಎಂಪಿ, ಶಾಸಕರುಗಳಿಗೆ ಗೊತ್ತಿಲ್ಲವೆಂದಲ್ಲ. ಪ್ರಧಾನಮಂತ್ರಿಗಳ ಸಮ್ಮುಖದಲ್ಲಿ ನಮ್ಮ ಅಳಲನ್ನು ತೋಡಿಕೊಳ್ಳುವುದಕ್ಕೆ ಸೇತುವೆಯಾಗಿರುವ ಎಂಪಿಗಳು ಕೇಂದ್ರದಲ್ಲಿ ಈ ನೀತಿಗೆ ಪೂರಕವಾಗಿ ಕೆಲಸ ಮಾಡಿದರು,ಆದರೆ ಇಲ್ಲಿ ಬಂದು ವಿರೋಧಿಸುವ ನಾಟಕ ಆಡಿದರೇ? ಇಲ್ಲದಿದ್ದರೆ ಈ ಸ್ಥಿತಿ ಬರುತ್ತಿತ್ತೇ? 


ಜೋಯಿಡಾದ ಜನ ಪ್ರ್ರಾರಂಭದಿಂದಲೂ ಒಂದಲ್ಲ ಒಂದು ಆಘಾತಕ್ಕೆ ಒಳಗಾಗುತ್ತಲೇ ಬಂದಿದ್ದಾರೆ. ಕಾಳಿಯ ಪಕ್ಕದಲ್ಲೇ ಇದ್ದರೂ ಅವರು ಕಾಳಿಯ ಆವೇಶವನ್ನು ತಾಳಿಲ್ಲ ಅಷ್ಟೆ. ಜೋಯಿಡಾದ ಸಂರಕ್ಷಿತ ಪ್ರದೇಶದಲ್ಲಿ ಮನುಷ್ಯ ಮತ್ತು ಕಾಡು ಪ್ರಾಣಿಗಳು ಏಕಕಾಲದಲ್ಲಿ ವಾಸಿಸುವಷ್ಟು ಜಾಗ ಖಂಡಿತ ಇದೆ ಮತ್ತು ಈವರೆಗೆ ಸಹಜೀವನ ನಡೆಸಿದ್ದಾರೆ. ಆದರೆ ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಜನಪರ ಇಚ್ಛಾಶಕ್ತಿ ಇರಬೇಕು. ಇಲ್ಲದಿದ್ದರೆ ಜನ ಅದನ್ನು ಅವರಿಗೆ ಕಲಿಸಿಕೊಡಲು ಮುಂದಾಗುವುದು ಅನಿವಾರ್ಯವಾಗುತ್ತದೆ.

***

No comments:

Post a Comment