Saturday 17 August 2013




ರಂಜಾನ ಸುರಕುಂಬಾ ಮತ್ತು ಸಂಭ್ರಮದ ಜೋಕಾಲಿ
ಕೆ.ನೀಲಾ
 Neela K Gulbarga
     ಚಾಂದ್ ಕಾಣಲು ಕಣ್ಣುಗಳು ಮುಗಿಲಂಗಳದತ್ತ ನೆಟ್ಟಿದ್ದವು. ರಂಜಾನ ಹಬ್ಬದ ಸೊಬಗಿಗೆ ಮನ ಕಾತರಿಸುತ್ತಿತ್ತು. ಕಂಜೂಸ್(ಜಿಪುಣ) ತಮ್ಮನಾದ ಮೆಹರಾಜ್ನ ಹೆಂಡತಿ ಆಲಿಯಾಳ ಹೃದಯ ತುಂಬ ದೊಡ್ಡದು. ಅದಕ್ಕೆಂದೇ ಪ್ರತಿ ವರ್ಷ ರಂಜಾನ್ ಹಬ್ಬಕ್ಕೆ ಹೊಸ ಬಟ್ಟೆಗಳು ಅವಳಿಂದ ಉಡುಗೊರೆಯಾಗಿ ಬರುತ್ತವೆ. ಕಡೆಗೂ ಚಾಂದ್(ಚಂದ್ರ) ಮುಖದೋರಿದ ಮೇಲೆ ಹಬ್ಬದ ಸಡಗರಗಳು ಸುರುವಾದವು. ಹಿಂದಿನ ದಿನ ರಾತ್ರಿ ನಗರದ ಬಾಜಾರೆಲ್ಲ ಬೆಳಕಿನ ಜಗಮಗದಿಂದ ಹೊಳೆಯುತ್ತಿತ್ತು. ಉಪವಾಸ ಆರಂಭವಾದ ಮೇಲೆ ಹೆಚ್ಚು ಕಡಿಮೆ ರಾತ್ರಿಗಳು ಹಗಲಾಗಿರುತ್ತವೆ. ದೀಪಾವಳಿಯ ಸಾಲುದೀಪಗಳು ಹೊಳೆದಂತೆ. ದಸ್ತರ್ಖಾನಾದ ಮೇಲೆ ರಂಜಾನ್ ಹಬ್ಬದ ಖಾದ್ಯಗಳು. ರುಚಿಯಾದ ಗುಲ್ಗುಲೆ ಮತ್ತು ರಹಮ್. ಹಾಲಿನಿಂದ ತಯಾರಿಸಿದ ಸುರಕುಂಬಾ. ಪ್ರೀತಿಯಿಂದ ಬಡಿಸುವ ಪರವಿನ್ ಶೇಕಳ ಕೈತುಂಬ ಅರಳಿದ ಮೆಹೆಂದಿ. ಬೆರಳ ತುದಿಗೆ ಗಾಢ ಹೊಳಪಿನ ಬಣ್ಣ. ಘಲ್ಲೆನ್ನುವ ಬಳೆಗಳು. ಮಾತುಮಾತಿಗೆ ಪ್ರತಿಕ್ರಿಯಿಸುತ್ತ ಅಲ್ಲಾಡುವ ಝುಮಕಿ. ಅತ್ತರಿನ ಘಮ. 'ಈದ್ ಮುಬಾರಕ್'. ನೆರೆದವರ ಹೃದಯದಲ್ಲಿ ಖುಷಿಯ ಹಕ್ಕಿ ಗಿಲಕಿಯಾಡಿಸುತ್ತಿತ್ತು. ಮನೆಗೆ ಬಂದ ಮೇಲೆ ಅಮೀನಾಬೇಗಂ ಫೋನಿತ್ತು. ಮನೆಗೆ ಸುರಕುಂಬಾ ಕುಡಿಯಲು ಬರಲಿಲ್ಲವೆಂಬ ಮುನಿಸಿತ್ತು. ಇನ್ನೊಂದು ದಿನ ಸಹೆಲಿ(ಗೆಳತಿ)ಯರೆಲ್ಲ ಸೇರಿ ಹಾಲಿನ ಖೀರು(ಸುರಕುಂಬಾ) ಕುಡಿಯುವುದಾಗಿ ಭರವಸೆಯಿತ್ತೆ. 

      ಪತ್ರಿಕೆ ತಿರುವಿದರೆ ಅಫ್ಜಲಪುರ ತಾಲ್ಲೂಕಿನ ದೇವಣಗಾಂವ ಗ್ರಾಮದ ಮುಸ್ಲಿಮೇತರ ಯುವಕರಿಬ್ಬರು ತಿಂಗಳುಪೂರ್ತಿ ಉಪವಾಸವಿದ್ದ ವರದಿಯಿತ್ತು. ಮುಸ್ಲಿಂ ಬಾಂಧವರು ಮತ್ತು ಈ ಯುವಕರು ಸೇರಿಕೊಂಡೇ ಸಾಯಂಕಾಲ ಉಪವಾಸ ಬಿಡುತ್ತಿದ್ದರಂತೆ. ಬೀದರ ಜಿಲ್ಲೆಯ ಹುಮನಾಬಾದನಲ್ಲಿ ಪ್ರತಿ ವರ್ಷ ಮುಸ್ಲಿಮೇತರ ಗೆಳತಿಯರೆಲ್ಲ ಸೇರಿ ಮುಸ್ಲಿಂ ಸೋದರಿಯರಿಗೆ ಇಫ್ತಿಯಾರ್ ಕೂಟ ಏರ್ಪಡಿಸುವ ಪ್ರತೀತಿ ಇದೆ. ರಾಜಕೀಯ ಪಕ್ಷಗಳ ತೋರಿಕೆಯ ಕೂಟದಂತಲ್ಲ. ಹೆಣ್ಣುಮಕ್ಕಳು ಉಲ್ಲಾಸದಿಂದ ಹಾಡಿ-ನಲಿದು ಹೃದಯಾಂತರಾಳದಿಂದ ಪರಸ್ಪರ ಸ್ನೇಹ ಹಂಚಿಕೊಳ್ಳುವ ಹೊತ್ತದು. ಸಂತಸದ ಕ್ಷಣಗಳಲ್ಲಿ ಎಲ್ಲರನ್ನೂ ಒಳಗೊಳ್ಳುವ ಪ್ರಜ್ಞೆಯ ಮೂಲ ಸೆಲೆ ಈ ನಾಡಿನಲ್ಲಿ ಬತ್ತುವುದಿಲ್ಲ ಎನ್ನುವುದಕ್ಕೆ ಇವೆಲ್ಲ ಘಟನೆಗಳು ಸಾಕ್ಷಿಯಾಗಿವೆ.
 
     ಕ್ಯಾಲೆಂಡರ್ನತ್ತ ಕಣ್ಣು ಹಾಯಿಸಿದರೆ ಎರಡನೆ ದಿನ ನಾಗರಪಂಚಮಿ ಹಬ್ಬ. ಅಂಗಳದಲ್ಲಿ ನೆರೆದ ಹೆಂಗೆಳತಿಯರು ತಮ್ಮತಮ್ಮಲ್ಲೆ ಚರ್ಚಿಸುತ್ತಿದ್ದರು. ಗೊರಲಿ ಕಟ್ಟಿದ ಹುತ್ತದಲ್ಲಿ ಹಾವಿರುವುದೆಂದು ಭ್ರಮಿಸಿ ಹಾಲು ಹಾಕಿ, ಜೋಳದ ಅಳ್ಳು-ಅಳ್ಹಿಟ್ಟು ಚೆಲ್ಲಾಡಿ, ನೈವೇದ್ಯ ಕೊಡುವುದು ಅಂತೆಲ್ಲ ನೆನಪಿಸಿಕೊಳ್ಳುತ್ತಿದ್ದರು. ಅದರಲ್ಲೊಬ್ಬಳು ಥಟ್ಟನೆ ಬಸವಣ್ಣನ ವಚನ ನೆನಪಿಸಿದಳು. 'ಕಲ್ಲ ನಾಗರ ಕಂಡರೆ ಹಾಲೆರೆಯೆಂಬುವರಯ್ಯ, ದಿಟದ ನಾಗರ ಕಂಡರೆ ಕೊಲ್ಲೆಂಬುವರಯ್ಯ....'. ಬಸವಕೇಂದ್ರದವರು ನಾಗರಪಂಚಮಿಯ ದಿನ ಹುತ್ತದ ಹತ್ತಿರ ದೊಡ್ಡ ಬಗೋಣಿಯಿಟ್ಟುಕೊಂಡು, ಹುತ್ತಕ್ಕೆ ಸುರಿದ ಹಾಲನ್ನು ಹಾವು ಕುಡಿಯುವುದಿಲ್ಲ ಎಂದು ಮೈಕಿನಲ್ಲಿ ಹೇಳುತ್ತ ಜಾಗೃತಿ ಕಾರ್ಯಕ್ರಮ ನಡೆಸಿದ್ದು ಮತ್ತು ಹಾಲು ಬಗೋಣಿಯಲ್ಲಿ ಶೇಖರಿಸಿಕೊಂಡು ಅನಾಥಾಶ್ರಮದ ಮಕ್ಕಳಿಗೆ ಕೊಟ್ಟು ಬಂದಿದ್ದು ನೆನಪಾಯಿತು.
ಈಗ ನಾವೇನು ಮಾಡುವುದು? ಈ ಹೆಣ್ಣುಮಕ್ಕಳಿಗಂತೂ ಹಬ್ಬ ಅಚರಿಸಲಿಕ್ಕಿದೆ. ತನ್ಮೂಲಕ ಸಂತೋಷ ಹಂಚಿಕೊಳ್ಳಲಿಕ್ಕಿದೆ. ಎಲ್ಲ ಭೇದ-ಭಾವದ ಗೆರೆಯಳಿಸಿ ಖುಷಿಯಾಗಿರುವುದೆಂದರೆ ಯಾರಿಗೆ ಬೇಡ? ಸರಿ. ಕಾಲೋನಿಯ ಗಾರ್ಡನ್ನು ದೊಡ್ಡದು. ದೊಡ್ಡ ಮರಕ್ಕೆ ಜೋಕಾಲಿ ಕಟ್ಟಿದೆವು. ಅನೇಕರು ಹುತ್ತ-ಹಾವು-ಹಾಲು ಕೈಬಿಟ್ಟರು. ಹಬ್ಬದಡಿಗೆ ಉಂಡು ಸಾಯಂಕಾಲದ ಹೊತ್ತಿಗೆ ಬಣ್ಣ-ಬಣ್ಣದ ಸೀರೆ ಉಟ್ಟ ಹೆಣ್ಣುಮಕ್ಕಳು ಗಾರ್ಡನ್ನಿನತ್ತ ಹೆಜ್ಜೆ ಹಾಕಿದರು. ಪಂಚಮಿಯ ಹಿಂದಿನ ದಿನ ಉಪವಾಸ. ರಾತ್ರಿ ಕೈಗೆ ಹಚ್ಚಿಕೊಂಡ ಮೆಹೆಂದಿಯ ಪರಿಮಳ ಆರಿರಲಿಲ್ಲ. ತಲೆಗೆ ಮುಡಿದ ಮಲ್ಲಿಗೆಯ ಸುವಾಸನೆ ಬೆರೆತು ವಾತಾವರಣಕ್ಕೆ ಖರೆನೆ ಅದ್ಭುತ ಖಳೆ ಬಂತು. ಮಕ್ಕಳಿಗಂತೂ ಇನ್ನಿಲ್ಲದ ಸಂಭ್ರಮ. ದೊಡ್ಡದಾದ ಜೋಕಾಲಿ ಅವರ ಆಕರ್ಷಣೆಯ ಕೇಂದ್ರವಾಗಿತ್ತು. ಮಿರುಗುವ ಫ್ರಾಕು-ಲಂಗ-ಸಲ್ವಾರ ಕಮಿಜುಗಳು. ಜೋಕಾಲಿಯಾಡುವುದೆಂದರೆ ಅದಕ್ಕೊಂದು ಹಿಮ್ಮತ್ತು ಬೇಕು. ನೆಲ-ಮುಗಿಲನು ಏಕಗೊಳಿಸಿ ಜೀಕುವ ಪರಿಗೆ ಹಕ್ಕಿ-ಪಕ್ಕಿಗಳೂ ಪುರ್ರೆಂದು ಹಾರಬೇಕು. ಕಣ್ಣ ನೋಟದ ಒಂದೇ ಝಲಕಿನಲ್ಲಿಯೇ ಬಲುಬೇಗ ಭೂಮಿಯ ಸಕಲವನ್ನೂ ಗಿರ್ರೆನ್ನಿಸಬೇಕು. ಅವೆಲ್ಲ ಜೋಕಾಲಿ ಹಬ್ಬದ ಸಂಭ್ರಮ ಸವಾಲುಗಳು. ಅವು ಸೃಷ್ಟಿಸುವ ಕುತೂಹಲ-ಖುಷಿಗೊಂದು ಮಿತಿಯೇ ಇರುವುದಿಲ್ಲ. ನನಗೆ ಜೋಕಾಲಿಯಾಟದ ಸ್ಪರ್ಧೆಗಳು ನೆನಪಾದವು. ಜೋಕಾಲಿಯಾಡುವವರು ಜೀಕಿ-ಜೀಕಿ ಮೇಲಕೇರಿ ಅತ್ಯಂತ ಎತ್ತರಕ್ಕೆ ಕಟ್ಟಿದ ಕೊಬ್ಬರಿ ಅಥವ ಜಿಲೇಬಿ ಕಚ್ಚಿ ತರಬೇಕು. ಅದೊಂದು ಸಾಹಸ. ಕೃಷಿಮೂಲ ಹಬ್ಬಗಳ ನಾನಾ ನಮೂನೆಯ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಜೋಕಾಲಿಯಾಟವೂ ಒಂದು. ಈ ಸ್ಪರ್ಧೆಯಲ್ಲಿ ಹೆಂಗಸರ ಸಂಭ್ರಮವು ರೆಕ್ಕೆ ಕಟ್ಟಿಕೊಂಡು ಹಾರಾಡುತ್ತಿರುತ್ತದೆ. ಹೆಂಗಸರೆಂದರೆ ಜೋರಾಗಿ ಮಾತಾಡಬಾರದು, ಧಾಪುಗಾಲಿಡಬಾರದು. ಮಿತಭಾಷಿ, ನಯನಾಜೂಕಿನ ಚಿತ್ತಾರದ ಚಲುವೆಯಂತೆ, ನಾಚಿ ಬಳುಕಿಕೊಂಡಿರಬೇಕೆಂಬಂತ ಅನರ್ಥಕಾರಿ ಸಾರ್ವತ್ರಿಕ ಮೌಲ್ಯಗಳಲ್ಲಿ ನಲುಗುತ್ತಿರುವ ಅಸಂಖ್ಯಾತ ಹೆಣ್ಣುಮಕ್ಕಳಿರುವರು. ಆದರೆ ಜೋಕಾಲಿಯಾಟದ ಹೊತ್ತಿಗೆ ಮೈಚಳಿ ಬಿಟ್ಟು ಸ್ವಚ್ಛಂಧವಾಗಿ ಜೋಕಾಲಿ ಜೀಕುತ್ತ-ಜೀಕುತ್ತ ಸ್ವತಂತ್ರ ಹಕ್ಕಿಗಳಂತಾಗುತ್ತಾರೆ. ಒಬ್ಬೊಬ್ಬರು ಬಂದು ಜೋಕಾಲಿಯಾಡಿದರು. ಯಾಕೋ ಇನ್ನೂ ಜೋಕಾಲಿಯಾಟದ ಗತ್ತು ಬರುತ್ತಿಲ್ಲ, ಏರುಗತಿಗೆ ಸಂಭ್ರಮ ಚಲಿಸುತ್ತಿಲ್ಲ ಅನಿಸುತ್ತಿರುವಾಗಲೇ ಮನೆಗೆಲಸದ ಗುಂಡಮ್ಮ ಮತ್ತು ಶಾರದಮ್ಮ ಬಂದರು. ಹೊಸ ಸೀರೆಯಲ್ಲಿ ನಸುನಾಚಿದಂತಿದ್ದರು. 'ಬರ್ರಿ. ಜೋಕಾಲಿ ಹ್ಯಾಂಗ ಜೀಕ್ತೀರಿ ನೋಡಾಣ' ಅಂದೆ. ಅವರು ಜೋಕಾಲಿಯಾಟಕ್ಕೆ ಸಿದ್ದವಾದರು. ಸೀರೆಯ ಮುಂದಿನ ನಿರಿಗೆಯ ಒಂದು ಚುಂಗನ್ನು ಹಿಂದಿನ ಸೊಂಟದ ನಡುವಿಗೆ ಸಿಕ್ಕಿಸಿದರು. ಅಂದರೆ ಉದ್ದಕಚ್ಚೆ ಹಾಕಿದರು. ಗುಂಡಮ್ಮ ಜೋಕಾಲಿಯ ಮೇಲೆ ಕೂತಳು. ಶಾರದಮ್ಮ ಅವಳಿಗೆ ಎದುರಾಗಿ ಎರಡೂ ತುದಿಗೂ ಕಾಲಿಟ್ಟು ನಿಂತಳು. ಜೋಕಾಲಿಯನ್ನು ಒಂದು ಬಾರಿ ಮಾತ್ರ ತೂಗಿ ಬಿಡಲಾಯಿತು. ಇನ್ನು ಮುಂದಿನ ಜೀಕುಗಳೆಲ್ಲವೂ ಅವರಿಬ್ಬರ ಜುಗಲ್ಬಂದಿ ರಭಸದಲ್ಲಿ ಬಿರುಗಾಳಿಯಂತೆ ವೇಗಗೊಂಡವು. ಅಲ್ಲಿವರೆಗೂ ಸೀರೆ ಹಾರಿಯಾತೆಂದು ಮೆಲ್ಲಗೆ ಆಡಿದವರು, ಜೋಕಾಲಿ ಮೇಲಕೇರಿ ಇಳಿಯುವಾಗ ತಲೆ ತಿರುಗಿಯಾತೆಂದು ಹೆದರಿದವರು ಇವರಿಬ್ಬರ ಆಟದ ವೈಖರಿಗೆ ಬೆರಗಾದರು. ಕಂಪ್ಯೂಟರ್-ಮೊಮೈಲ್ ಕೀಲಿಮಣೆಗೆ ಮಾತ್ರ ಬೆರಳಾಡಿಸಿ ನಿಪುಣರೆನೆಸಿಕೊಂಡ ಪೋರಿಯರು ಅಚ್ಚರಿಯಿಂದ ಕಣ್ಣರಳಿಸುತ್ತ ಹನಿಯಾಗುತ್ತಿದ್ದರು. 'ಹೇ ಮ್ಯಾಲಿನ ಫಂಟಿ ಮುಟ್ಟಿ ಬಾ.. ನಿಂಗೊಂದು ಶೇಂಗಾ-ಬೆಲ್ಲದುಂಡಿಯ ಬಹುಮಾನ..' ಘೋಷಿಸುವವರ ದನಿಗೆ ಹೋ ಎಂಬ ಆವಾಜು. 
 
 
       ಎಷ್ಟು ವರ್ಷಗಳಾದವು ಭುಲಾಯಿ ಮರೆತು. ದೊಡ್ಡೂರು, ಮನೆ, ಟೀವಿಗಳಲ್ಲಿ, ಮಕ್ಕಳ ಪರೀಕ್ಷೆ-ಪರ್ಸೆಂಟೇಜಿನ ತಹತಹದಲ್ಲಿ, ಬೇಕಿದ್ದು ಬೇಡದ್ದು ಎಲ್ಲವೂ ಮರೆತಿದ್ದೇವಲ್ಲ ಅಂತ ಗೆಳತಿಯೊಬ್ಬಳು ನೆನಪಿಸಿದಳು.
ಹೈದರಾಬಾದ ಕರ್ನಾಟಕದ ಹೆಣ್ಣುಮಕ್ಕಳು ಗಂಡನ ಮನೆಯ ನಾಲಕ್ಕು ಗೋಡೆಯ ನಡುವೆ, ಎಷ್ಟೆಲ್ಲ ನಿರ್ಬಂಧಗಳಲ್ಲಿ ಬದುಕು ಸವೆಸುತ್ತ ಜಿಂದಗಾಣಿಯನ್ನು ಮುನ್ನಡೆಸುತ್ತಿದ್ದರು. ಅವರ ಸಂಕಟ-ನೋವುಗಳು, ಸುಖ-ಸಂತೋಷಗಳು ಭುಲಾಯಿಗಳಲ್ಲಿ ಹಾಡುಗಳಾಗಿ ಬರುತ್ತಿದ್ದವು.

      ಎಲ್ಲರೂ ಕೈಕೈ ಹಿಡಿದುಕೊಂಡು ಗೋಲಾಗಿ ನಿಂತರು. ಹಾಡು ಮೊದಲುಗೊಂಡಿತು:

ನಾಗರ ಪಂಚಮಿ ನಾಡಿನ್ಯಾಗ
ನಾರ್ಯಾರ ಹಬ್ಬ ಏನ್ ಹುಬ್ಬ| ಸುವ್ವನಾರಿ||
ಹಂಚಿಕೇನು ಮಾಡಲಿ ತಂಗಿ
ಎಚ್ಚ ತರಲಾಕ | ಈಗ
ಮುಂಚಿನಂಗ ದಿನಮಾನಿಲ್ಲ
ಎಲ್ಲ ಮಾಡೊದಕ | ಸುವ್ವನಾರಿ||

      ಏರುತ್ತಿರುವ ಬೆಲೆಗಳು, ಹಬ್ಬದಡಿಗೆಯೂ ಮಾಡಲಿಕ್ಕಾಗದ ಪರಿಸ್ಥಿತಿ, ತವರಿಗೆ ಬಂದ ಮಗಳು ಗಂಡನ ಮನೆವಾರ್ತೆ ಹೇಳುವುದು, ಹೀಗೆ ಮಹಿಳೆಯೊಬ್ಬಳು ಪಡುವ ಪಾಡೆಲ್ಲವನ್ನೂ ಪಂಚಮಿ ಹಬ್ಬದ ಭುಲಾಯಿ ಸಂದರ್ಭದಲ್ಲಿ ಹಾಡಾಗಿಸುವಳು. ಭುಲಾಯಿಗೆ ನೆರೆದ ಹೆಣ್ಣುಮಕ್ಕಳೆಲ್ಲ ಖಂಡಿತ ತವರು ನೆನೆದು ಭಾವುಕರಾಗಿದ್ದು ಹೌದು. ಇವರೆಲ್ಲರ ಜೀವನ ಜೋಕಾಲಿ ಹೀಗೆ ನಗುತ ಸ್ನೇಹ-ಸೌಹಾರ್ದತೆಯಲ್ಲಿ ಜೀಕುತಲಿರಲಿ.. ಮನಸ ಹಕ್ಕಿ ಹಾರೈಸುತ ಉಲಿಯುತ್ತಿತ್ತು. 
***

No comments:

Post a Comment