Friday 9 August 2013


ಕೆಲವು ಸಾಲುಗಳು                 ಡಾ. ಜಿ.ಕೃಷ್ಣ


1

ಹೊಗಬಾರದ ಅಪಸವ್ಯ
ಹೊಕ್ಕಬೇಕಾದ
ದಿವ್ಯ
ಮಧ್ಯದ
ಕಂದರ
ನೂಲಿನೆಳೆಯಷ್ಟು.





2.

ಬೆಂಕಿ, ದೀಪದ
ವ್ಯತ್ಯಾಸದ ಜಿಜ್ಞಾಸೆಯಲ್ಲಿ
ಉಳಿಸಿಕೊಳ್ಳಬೇಕಾದವುಗಳ
ತೋರಿಸಿದ್ದು
ಬೆಂಕಿಯೇ ಆಗಿತ್ತು.



3.

ಮದುವೆಯಾಗಿ ಮೂರು ತಿಂಗಳಲ್ಲೆ
ನಿಚ್ಚಣಿಕೆ ಇಳಿದು ನಡೆದ
ಹುಡುಗಿಯ
ಶವಪರೀಕ್ಷೆ
ಮಕ್ಕಳ
ಪ್ರೀತಿಗೆ
ಹೆಗಲು ಕೊಟ್ಟು
ಎದೆ ಹಿಡಿದುಕೊಂಡು
ಬಂದ ತಂದೆಯ
ಹೆಣ
ಅವರ ಕಣ್ಣೀರಲ್ಲಿ
ತೊಯ್ದಿದ್ದ ನೋಡಿದ್ದು
ಬೈಕ್ ಸ್ಕಿಡ್ಡಾಗಿ
ಬಿದ್ದು ಬಂದ
ಹುಡುಗರಿಗೆ
ಬೈಯುತ್ತಾ
ಚಿಕಿತ್ಸೆ ಗೀಚಿದ್ದು
ಉಳಿದಂತೆ
ಚಳಿ, ಜ್ವರ,ಥಂಡಿ
ವಾಂತಿ ಬೇಧಿ
ಮುದುಕ, ಮುದುಕಿಯರ
ಮೈ ನೋವು
ಕೈ ನೋವು
ಇವು
ಇಂದಿನ ನನ್ನ
ಘನ
ಸಾಧನೆಗಳು
ಎಂದು
ನೀವು ಬೇಕಾದರೆ ಕರೆಯಿರಿ

ತಲೆ ತಗ್ಗಿಸಿ
ಒಪ್ಪುತ್ತೇನೆ.







4

ಗಾಳಿಯ ರಭಸಕ್ಕೊಡ್ಡಿದ ಬೆವರು ಮುಖ
ಎಲ್ಲವನ್ನೂ ಬಾಚುವ ಉಮೇದಿಯ
ಆರ್ತ ಕೊಡುಗೈ, ಉರಿಮೈ
ನೀರಿನ ಸದ್ದಿಗೇ
ಗಂಟಲು ಬಿಗಿಯುವ ಜಲಭಯ
ತುರಿಯ ಯಾವುದು, ಉಸಿರುಸಿಕ್ಕಿದ್ದು ಯಾವುದು?
ಬಿಡುಗಡೆಯ ಬೆಳ್ಳಿರೇಖೆ ಯಾವುದು
ಆಜೀವ
ಏಕಾಂತ
ಸೆರೆವಾಸ ಯಾವುದು?

No comments:

Post a Comment