Saturday 17 August 2013


ಸಂಪರ್ಕ                         ಗಂಗಾಧರ ಚಿತ್ತಾಲ 

    

 

ಕಳೆದ ವಾರ, ಕುಣಿಯುತ್ತಲೆ ಬಂದಳು ನಮ್ಮ ಸರಿತೆ
ಸಾಲೆಯಲ್ಲಿ ಹೇಳಿದರಂತೆ
ಒಂದಿಷ್ಟು ಗೋಧಿ, ಒಂದಿಷ್ಟು ಜೋಳ, ಭತ್ತ,
ಹೀಗೆಯೇ ಮತ್ತೇನೇನೊ
ಮನೆಯಲ್ಲೆ ನೆಟ್ಟು ಸಸಿ ಬೆಳೆಸಿ ತರಬೇಕು.

ಸರಿ, ಶುರುವಾಯ್ತು ಮಕ್ಕಳೋಡಾಟ, ಲಗುಬಗೆ, ಗಲಭೆ
ನಾವಿರುವ ಐದನೇ ಮಜಲಿನೆತ್ತರದಲ್ಲೆ ಭರದ ಬಿತ್ತನೆ ಕೆಲಸ!

ಮೋಜೆನಿಸಿ ನೋಡುತ್ತ ಕುಳಿತೆ-
ಹೊಲಗದ್ದೆ ಕಾಣದೀ ಮರಿ ಕೃಷೀವಲರೆಲ್ಲ
ಖಾಲಿ ಟಿನ್ನುಗಳಲ್ಲಿ ಬೀದಿಧೂಳನು ತಂದು ಪಾತಿ ಕಟ್ಟಿ
ಸುಕ್ಕಿದೊಣಕಲು ಬೀಜವಿಷ್ಟು ಹೂಳಿ,
ಬಾಟ್ಲಿ ನೀರಿನಲೆ ಪರ್ಜನ್ಯ ಸುರಿಸಿ,
ಕೃತಕೃತ್ಯರಂತೆ ಸುಗ್ಗಿ ಕನಸ ಕಾಣುತ ನಿಂತ ಮುಗ್ಧಜೀವಿ!
ಐದಾರು ದಿನ, ಬೆಳಿಗ್ಗೆ ಎದ್ದು ಕೂತರು
ಯಾವ ಸುದ್ದಿ ಸುಳಿವೂ ಇಲ್ಲ ಮೊದ್ದು ಮಣ್ಣಲ್ಲಿ.




ಮೊನ್ನೆ ಮಾತ್ರ,
ಒಂದೆರೆಡು ಕಣ ಅಲ್ಲಿ ಇಲ್ಲಿ ಅಲುಗಿದ ಕುರುಹು.
ನಿನ್ನೆಯೋ
ಒಳಗಿನೊಳಗೇ ಏನೋ
ಮೈಮುರಿದು ನಿದ್ದೆತಿದೇಳ್ವ ಥರ.

ಇಂದೋ-
ಕಣ್ಣಮುಂದೇ ತೆರೆದ ಅದ್ಭುತೋದ್ಭವ ಪ್ರಹಾರ!
ಚಿಣ್ಣರೊಲು ದೂಡಿ ಕೊಂಬೂದಿ ಹಣಕಿಕ್ಕಿ
ಇಣುಕಿವೆ ಸುತ್ತ ನೂರಾರು ಅಂಕುರ!

ನೀರ್ಮಣ್ಣ ಆರೈಕೆಗೆದ್ದ ಆಗಂತುಕರ
ಈ ಸೋಜಿಗದ ಸುತ್ತ ನೆರೆದ ಮಕ್ಕಳ ಮಧ್ಯೆ
ಸೇರಿ ನಾನೂ ಕುಳಿತೆ, ಮೈಮರೆತೆ ಮಗುವಾಗಿ.

ನಿಯಾಳಿಸುತ ಕುಳಿತೆ
ಮುದ್ದಾದ ಮೊಳಕೆಗಳ ಹಸುಳೆ ಮಿದು ನಯ ನುಣುಪ.
ತೊರೆಯೆ ಅಕ್ಕರೆಯೊರತೆ
ಹತ್ತಿರಕೆ ಬಾಗಿದೆ. ತಟ್ಟಿ ಬೆರಳಾಡಿಸಿದೆ. ಖುಶಿಪಟ್ಟೆ.

ಕುತೂಹಲದಿಂದ
ಬದಿಯ ಮಣ್ಣನ್ನಿಷ್ಟು ಸರಿಸಿ ನೋಡಿದೆ-
ಹಿಗ್ಗಿ ದುಂಡಗೆ ಗಬ್ಬವಾಗಿ ಬಿರಿದಿವೆ ಬೀಜ:

ಕೆಳಕ್ಕೆ ಬಾಯೂರಿದಲ್ಲಿ ಇಳಿಸಿವೆ ಬೇರು-ಸೂಜಿಮೊನೆ ಐದಾರು.
ಒಡಲು ಬಿರಿದಲ್ಲಿ ಮೇಲಕ್ಕೆ ಕಳಿಸಿವೆ ದೇಟು-
ಸಸಿಯ ಮೂಲಸ್ತಂಭ!
ಖಾಲಿಟಿನ್ನುಗಳ ಬೀದಿಧೂಳಲ್ಲು ಮೈತಳೆದ
ಸೃಜನದೀ ಕೌತುಕವ
ನಿಯಾಳಿಸುತ ಕುಳಿತೆ, ಸೋಕಿ-ಸೋಕಿ-ಬೆರಳಾಡಿಸಿದೆ.
ಉರದಲುಮ್ಮಳ, ಮತ್ತೆ ಮತ್ತೆ ಜೀಕಳಿ ಪುಳಕ
ಇಷ್ಟು ಹತ್ತಿರದ ಜೀವ ಸೃಷ್ಟಿಸಂಪರ್ಕಕ್ಕೆ!

***

No comments:

Post a Comment