Thursday 8 August 2013

ಕವನ


                                                                                                                           


ಗಂಗಾಧರ ಚಿತ್ತಾಲ


                         
೧                                                            

ಹತ್ತು ದಿನದಿಂದ ಹುಡುಕಾಟ ಮಿಲಿಮಿಲಿ ಮಿಡುಕಿ ತಡಕಾಟ
ಬಾಯಿಗೆ ಬಾರದು
ಎಲ್ಲೋ ಒಳಗೇ ನಟ್ಟು
ಮುಳ್ಳೂರಿ ಕಾಡಿಸುವ ಬೆತ್ತದಂತಹದೇನೋ
ಮೊಳಕೆ ತೋರದು

ಕಾವು ಕೂತದ್ದಾಯ್ತು ಸಿಡುಕಿ ಶತಪಥ ತುಳಿದು
ಕಾಲು ಸೋತದ್ದಾಯ್ತು ಏನೋ ಲವಲವಿಸಿ
ಕೊರಳವರೆಗೆ ಬಂದಂತಾಗಿ ಕರುಳು ತಳಮಳವಾಯ್ತು

ಕದಲಲಾರದು
ಮಿದುಳ ಮೊದ್ದು ಮನಸಿಗೆ ಹೊದ್ದು
ಬಿಗಿದ ಗುಮ್ಮನ ಗುಸುಕ ಮುಸುಕು
ನಾಲಗೆಯು ಬಿದ್ದಿದೆ ಜೊಳ್ಳು

ಈ ಮಸಕುಮಸಕಲ್ಲೂ ಏನೋ ಚಳುವಳಿ ಸುಳಿವು
ದೂಡಿ ಬರಲಿದೆ ಮೂಡಿ ಕೂಡಿ ಬರಲಿದೆ ಎಂಬ
ಹೊಂಚು ಒಳಸಂಚು ಕೇಳಿಸುವ ಮುಂಚಿನ ಸೊಲ್ಲು

ಎಂದು ಮುಗಿವುದೋ ಹೊಸ್ತಿಲಂಚಿಗೂ ಬಂದು ಮುಖ
ಮರೆಸಿ ತಡವರಿಸುವೀ ಇದಕೆ ಕತ್ತಲ ವಾಸ


ಅಲೆ ಉಲಿ ಮೆಲ್ಲನ್ನ ಉಲುಹು ಅಲ್ಲಲ್ಲಿ
ಮಿನುಗು ಮಾತಿನ ಮಿಸುನಿ ಹೊಳಪು
ಒಮ್ಮೆಲೇ
ತಾನಾಗಿ ನಾಲ್ಕಾರು ನುಡಿ ಸಾಲು
ಹೊಯ್ದಾಟ

ಕಲುಕುಮಲಕಲ್ಲಿ
ಕೂಡಿ ಮೂಡಿ ಕದಡಿ ಮತ್ತೆ ಕೂಡಿ ಮೂಡಿ
ತೇಲುವ ಬಿಂಬ
ಚುಂಬಕ ಸೆಳೆತ ಹಿಡಿವ ಪಡೆಯುವ ತುಡಿತ
ನೆತ್ತರಲ್ಲೆಲ್ಲ ಒತ್ತು ಒತ್ತಡದ ಎದೆ ಬಡಿತ

ಕೊಕ್ಕೆಗೆ ಸಿಕ್ಕಿದ್ದೇ ತಡ ಎಷ್ಟು ತಡಪಡಿಸಿದರೂ
ಬಿಡಿಸಿಕೊಳ್ಳದ ಬಿಗಿತ
ಹಿಡಿತ ಸಾಕಾದೀತೇ ಮಿಡಿತ ಸಾಕಾದೀತೇ - ಅಳುಕು
ಆಮೇಲೆ ಒಂದೇ ಒಂದು - ಮಾತು ಮಿದ್ದುವ ಮಸಕ
ಕಂಡದ್ದು ಉಂಡದ್ದು ಅನಿಸಿದ್ದು ಕನಸಿದ್ದು
ಮೂಡಿ ಮೈಗೂಡಿದ್ದು ಮೊಳಗಿ ತೊಳಗುವ ತನಕ
ಕೈ ಬಾಯ್ಗೆ ಬರುವನಕ

ಸ್ಪಂದಿಸುವ ಹೊಸತೊಂದು!



ಬಂದಾದ ಮೇಲೆ ಬರಿ ಬಂದುದಷ್ಟೆ ಬಂತು
ಯಾಕೆ ಬಂತು ಹ್ಯಾಗೆ ಬಂತು ಅದರ ಗತ್ತು ಅದರ ಗಮ್ಮತ್ತು
ಎಲ್ಲಾ ಊಹಾಪೋಹ
ಇಷ್ಟು ನಿಜ ಬರಲು ಹಿಡಿದಷ್ಟೂ ಹೊತ್ತು 
ಮತ್ತು ತಲೆಗೇರಿತ್ತು

ತಡೆಯಲಾರದೆ ಬಾಯಿಬಾಯಿ ಬೇಡುತ್ತಿತ್ತು
ಗರಡಿಯಲ್ಲಿಳಿದು ಹಿಡಿತಕ್ಕೆ ಸಿಕ್ಕಿಯೂ ಸಿಗದೆ
ನುಸುಳಿ ಜಾರುವ ಯಾತರೊಡನೆಯೋ
ಪಟ್ಟು ಹಿಡಿದಂತಿತ್ತು

ಇದು ಬರಿಯ ಹಿಡಿದಾಟ? ಬರಿಯ ಪಟ್ಟಾಟ?
ಒಂದರೊಳಗಿನ್ನೊಂದು ಹೊಕ್ಕು ಕೂಡುವ ಪರಿಯೋ?
ಕತ್ತಲೊತ್ತಡದಲ್ಲೆ ಪಿಂಡ ಬಲಿಯುತಲಿತ್ತು
ಗರ್ಭ ಭಾರಕೆ ಬಸಿರು ಬೀಗಿ ನಲಿಯುತಲಿತ್ತು
ಕೊನೆಗೊಮ್ಮೆ ಬಾಯೊಡೆದು 
ಒಂದು ಜೀವಕ್ಕೆ ಎರಡು ಜೀವವಾಗಿ
ಬಿಡುಗಡೆಯಾಯ್ತು.


ಈ ಮುಖೋದ್ಗತ ನಿನ್ನ ಹೃದ್ಗತವೇ ಆದ ದಿನ 
ಸುದಿನ
ಆವರೆಗೂ ಇದು
ತಕ್ಕ ಮಣ್ಣಿನ ತೇವಕಾಗಿ ಕಾದೇ ಇರುವ 
ಬೀಜ

***

No comments:

Post a Comment