Saturday 13 July 2013



ಝಗಮಗಿಸುವ ಮಾಲ್ ಮತ್ತು ಸಂಕಟದ ಕಡಲು

ಕೆ. ನೀಲಾ                                                                     Neela K Gulbarga

     ನಿಮಗೆ ಗೊತ್ತೇನು? ನಮ್ಮೂರಿಗೂ ಒಂದು ಝಗಮಗಿಸುವ ಮಾಲ್ ಬಂದಿದೆ. ತರಹೇವಾರಿ ಹೆಸರುಗಳನ್ನಿಟ್ಟುಕೊಂಡು. ಗ್ರಾಹಕರನ್ನು ಆಕರ್ಶಿಸಲು ರಂಗು-ರಂಗಿನ ಧಿರಿಸು-ಧರಿಸಿ, ಥಳಕು-ಬಳಕಿನಲಿ ಹೊಳೆಯುತ, ಕೊರೆವ ಬೆಳಕಲಿ ಕಣ್ಣು ಮಿಟುಕಿಸುತ ಕೈ ಮಾಡಿ ಕರೆಯುತ್ತಿದ್ದಂತೆ ನಾ ಮುಂದೆ ತಾ ಮುಂದೆಂದು ಜನಸಾಗರ ಲಗ್ಗೆ ಹಾಕತೊಡಗಿತು. ಮೇಲ್ಮಹಡಿಗೆ ಹೋಗಲು ಲಿಫ್ಟ್, ಮಕ್ಕಳನ್ನು ರಮಿಸಲು-ಕುಣಿಸಲು ಕುದುರೆ ಮತ್ತಿತರ ಆಟೋಪಕರಣಗಳು. ವಿಶಾಲ ನಡುಅಂಗಳದಲ್ಲಿಟ್ಟ ಬಾಯಾರಿಕೆ ತಣಿಸುವ ಕೋಲ್ಡ್ ಡ್ರಿಂಕ್ಸ್ ಮತ್ತು ಚಾಕೋಲೆಟ್. ಒಳಹೋಗಿ ಬಂದವರ ಕೈಗಳು ಅನೇಕ ಪ್ಯಾಕೆಟಗಳಿಂದ ಥಕಾಯಿಸುತ್ತಿದ್ದವು. ಪರ್ಸ್  ಪೂರ್ತಿ ಖಾಲಿಯಾಗಿದ್ದೇನೋ ಹೌದು. ಆದರೆ ಒಂದೇ ಕಡೆ ಬೇಕಾಗಿದ್ದೆಲ್ಲವ ಸಿಕ್ಕಿರುವ ಸಂಭ್ರಮದಿಂದ ಹೆಣ್ಣುಮಕ್ಕಳು ಹುಸಿ ನಲಿವಿಕೆಯಲ್ಲಿ ವಿಸ್ಮೃತಿಗೆ ಸಂದಿದ್ದರು. ನನಗೋ ವಿಚಿತ್ರ ಸಿಟ್ಟು. ಎಷ್ಟೊಂದು ಸಣ್ಣಪುಟ್ಟ ಅಂಗಡಿಗಳನ್ನು ನುಂಗಿ ನೀರು ಕುಡಿದು ಹೀಗೆ ಕಂಗೊಳಿಸುತ್ತಿದೆಯಲ್ಲ ಎಂದು. ಮುಚ್ಚಿ ಹೋದ ಅಂಗಡಿಗಳ ಮಾಲಿಕರು ಈಗ ಇಂಥದ್ದರಲ್ಲಿ ಕೂಲಿಕಾರ್ಮಿಕರು. ಥೇಟ್ ಆಯಿ-ಅವ್ವನಂತೆ ನಾನೂ ಕೇಂದ್ರ ಸರಕಾರಕ್ಕೆ ಶಪಿಸುತ  'ಇದರ ದೀಪಾ ಅಡಗಲಿ, ಚಿಲ್ಲರೆ ವ್ಯಾಪಾರದಲ್ಲಿನೂ ಹೊರಗಿನ ಹೆಗ್ಗಣಗಳಿಗಿ ತಂದ್ಹಾಕಿ ನಮ್ಮ ಯುವಕರ ಭವಿಷ್ಯದಾಗ ವಿಷ ಇಟ್ಟದ' ಎಂದು ಎಕ್ಕಿ ಮುರಿದೆ.

http://www.your-travelsite.com/wp-content/uploads/2013/05/467245145_87582cf82d.jpg

     ಅಷ್ಟರಲ್ಲಿ ನನ್ನ ಗೆಳತಿಯ ಸಂಬಂಧಿಯೊಬ್ಬಳು ಮಾಲ್ನಿಂದ ಹೊರಬಂದಳು. ಅವಳು ಮಾಲ್ನಲ್ಲಿ ಕಳೆದೆರಡು ವರ್ಷದಿಂದ ಕೆಲಸ ಮಾಡುತ್ತಿರುವಳು. ಮಧ್ಯವಯಸ್ಸಿನ ಹೆಂಗಸು. ಮಗ ಕುಡಿದು ಬರಬಾದಾಗಿ ತಾಯಿಯ ಜೀವವನ್ನು ಜೀರಿಗೆಯಂತೆ ಅರೆದು ಕಡೆಗೊಮ್ಮೆ ಸತ್ತೇ ಹೋದನು. ಕುಡುಕ ಮಗನ ಅರೆಕಾಸೂ ನಿಂತ ಮೇಲೆ ತಾಯಿ ಈ ಮಾಲ್ನಲ್ಲಿ ಧವಸ-ಧಾನ್ಯಗಳ ಪೊಟ್ಟಣ ಕಟ್ಟುವ ಕೆಲಸಕ್ಕೆ ಸೇರಿಕೊಂಡಳು. ಈಗವಳು ಅಂಗಡಿ ಮಾಲಿಕನ ಧೋರಣೆಯಿಂದ ತತ್ತರಿಸಿರುವಳು. ಅವಳು ನನ್ನನ್ನು ಕಂಡಿದ್ದೇ ತಡ, 'ತಂಗಿ, ನನ ಗಂಡ ಹಿಂದಕ್ಕ ಬಟ್ಟಿ ಅಂಗಡ್ಯಾಗ ಕೆಲಸ ಮಾಡ್ತಿದ್ದ. ಒಂದೇ ಅಂಗಡ್ಯಾಗ ಭಾಳ ವರ್ಷ ಕೆಲಸ ಮಾಡಿದ್ದಕ್ಕ ದೊರಿಗೋಳು ಹೆಚ್ಚ ಪಗಾರ ಕುಡ್ತಿದ್ದರು. ಆದ್ರ ಈ ಅಂಗಡಿಗೋಳು ಉಲ್ಟಾ ನೋಡು. ಸುರುವಿಗಿ ಮೂರು ಸಾವಿರ ಪಗಾರ ಕೊಟ್ಟು ಹಗಲು ಹನ್ನೆರಡು ಗಂಟಾ ದುಡ್ಸಿಕೊಂಡ್ರು. ಈಗ ಕೆಲಸಾನೂ ಹೆಚ್ಚು ಮತ್ತ ಪಗಾರದಾಗ 500 ಕಡಿಮಿ ಮಾಡ್ಯಾರ. ಬೇಕಾದರ ಮಾಡ್ರಿ ಇಲ್ಲಾಂದ್ರ ಬಿಡ್ರಿ ಅಂತಾರ' ಅವಳ ಕಣ್ಣಲ್ಲಿ ನೀರಿತ್ತು. ಈ ಕಣ್ಣೀರ ಹನಿಗಳೇ ನನ್ನನ್ನು ಗುರುವಿನಂತೆ ಕೈ ಹಿಡಿದು ಎಲ್ಲೆಲ್ಲೋ ಸುತ್ತಾಡಿಸುತ್ತವೆ. ನಾನು ಅವಳ ಮುಂಗೈ ಹಿಡಿದು,  'ಅಕ್ಕಾ, ಅಳಬ್ಯಾಡ. ಪುಡಿ ಕಟ್ಟಲಾಕ ನಿಮ್ಮಂಥ ವಯಸಾದವರು ಬೇಕಿತ್ತು. ಚಿತ್ತಿಟ್ಟು ಕೆಲಸ ಮಾಡಿದ್ರಿ. ಮಾರಲಾಕ ಹರ್ಯಾದವರು ಬೇಕು. ಮತ್ತ ನಿನ್ನಂಥವರು ಕೆಲಸಕ್ಕ ಪಾಳಿ ಹಚ್ಚ್ಯಾರ. ನಿನಗ ಹೊರಗ ಹಾಕಾ ತಂತ್ರ ಇದು.....'   ಮತ್ತೆ ಹೇಗೆ ಸಂತೈಸಲಿ? ಬೇರೆ ಕೆಲಸ ಎಲ್ಲಿದೆ ಎಂದು ಯಾವ ಗುರುತು ಹೇಳಲಿ? ಇದಕ್ಕಿಂತಲೂ ಹಿಂಸೆ ಇನ್ನೊಂದಿಲ್ಲ. ನಿನ್ನೆ ನಮ್ಮ ಕಾಲೋನಿಯಲ್ಲಿ ಸಮಿಪದ ಹಳ್ಳಿಗಳ ನಾಲ್ಕೈದು ಎಕರೆ ಹೊಲವುಳ್ಳ ಹೆಂಗಸರು ತಮ್ಮ ಮಕ್ಕಳಿಗೆ ಕಾಲೇಜಿಗೆ ಸೇರಿಸಿ, ಒಂದು ಖೋಲಿ ಬಾಡಿಗೆಗೆ ಮತ್ತು ಮನೆಗೆಲಸಕ್ಕಾಗಿ ಹುಡುಕಾಡುತ್ತಿದ್ದರು. 'ಅಕ್ಕಾರೇ, ಒಂದೆರಡು ರೊಟ್ಟಿ ಮಾಡಿಸ್ಕೊಳ್ಳಾ ಮನಿ ಇದ್ರ ಹೇಳ್ರಿ'.  ಜೋಳ ಬೆಳೆದು ಚರಾಚರ ಜೀವಿಗಳ ಹೊಟ್ಟೆಗೆ ಅನ್ನವಿಕ್ಕುವ ನೇಗಿಲಯೋಗಿಣಿಯರು ಈಗ ನಗರದ ಡಾಂಬರು ರಸ್ತೆ ಮೇಲೆ ನಿಂತು ರೊಟ್ಟಿ ಕಾಯಕವರಿಸಿ ಬಂದಿರುವರು. ಬಹುಶ: ಅವರು ಈ ಮಾಲ್ ಹತ್ತಿರವೂ ಬರಬಹುದು. ಕಣ್ಣ ಮುಂದೆಯೇ ರೈತ ಹೆಂಗೆಳತಿರು ಕಾರ್ಮಿಕರಾಗಿ ಬಿಡುವರು!  ಅವರಿಗೂ ವಯಸ್ಸಾಗಿದ್ದರೆ ಖಂಡಿತ ಇಲ್ಲಿ ಕೆಲಸ ಇಲ್ಲ.

      ಈ ಮಾಲ್  ಯುವತಿಯರ ದಿನಚರಿ ನೋಡಬೇಕೆ? ಬೇಕಾದ ಸಾಮಾನು ಖರೀದಿಸುವಾಗಲೇ ಒಮ್ಮೆ ಆ ಯುವತಿಯರ ಕಣ್ಣುಗಳನ್ನು ನೋಡಿ. ಎಲ್ಲ ಹುಡುಗಿಯರೂ ಕರಕಷ್ಟದ ನಾನಾ ನಮೂನೆಯ ಕತೆಗಳನ್ನು ಉಡಿಯಲ್ಲಿಟ್ಟುಕೊಂಡು, ಚೆಂದದ ಸೀರೆಗೆ ಪಿನ್ನು ಸಿಕ್ಕಿಸಿ, ಅನಿವಾರ್ಯವಾಗಿ ತಲೆಬಾಚಿ ಮುಖಕ್ಕೆ ಪೌಡರಿಟ್ಟು ನಿಮಗೆ ಬೇಕಾದ ಸಾಮಾನು ಕೊಡಲು ದಿನವೆಲ್ಲ ನಿಂತಿರುವರು. ಮುಟ್ಟಾದರೂ, ಬಸುರಿದ್ದರೂ, ಅರೆಹೊಟ್ಟೆಯಲ್ಲಿ ಹೀಗೆ ನಿಲ್ಲಲೇಬೇಕು. ಎಲ್ಲ ಕಡೆಯೂ ಕೆಕ್ಕರಿಸುವ ಸಿಸಿಕ್ಯಾಮೆರಾಗಳು. ಒಬ್ಬರು ಇನ್ನೊಬ್ಬರೊಂದಿಗೆ ಮಾತಾಡುವಂತಿಲ್ಲ. ಗ್ರಾಹಕರಿಗೆ ಗೋಡಂಬಿ, ಒಣದ್ರಾಕ್ಷಿ, ಕೇಕು, ಪಿಜ್ಜಾ, ಬ್ರೆಡ್ಡು, ಐಸ್ಕ್ರೀಮ್, ಮತ್ತೆ ಏನೆಲ್ಲ ಕೊಡುವರು. ಹಸಿವು ನೀಗಲು ಒಂದು ಕಾಳು ಬಾಯಿಗೆ ಹಾಕಿಕೊಳ್ಳುವಂತಿಲ್ಲ. ಮಕ್ಕಳಂತೆ ಆಸೆಯಿಂದ ನೋಡಬೇಕಷ್ಟೆ. ಮಧ್ಯಾಹ್ನ ಡಬ್ಬಿಯಲ್ಲಿ ತಂದ ರೊಟ್ಟಿಯೂ ಅವಸರಿಸಿ ತಿಂದು ಮುಗಿಸಬೇಕು. ಮನೆಯಲ್ಲಿಯೂ ದುಡಿದು, ಏನೆಲ್ಲ ಅನುಭವಿಸಿ ಥಕಾಯಿಸಿದರೆ ಒಂದೈದು ನಿಮಿಷ ದಣಿವಾರಿಸಿಕೊಳ್ಳಲು ಜಾಗ ಇದೆಯೇ? ಊಹುಂ. ಮಹಾನಗರಗಳಲ್ಲಿ ಶೌಚಾಲಯವಾದರೂ ಇರಬಹುದು. ನಮ್ಮೂರ ಮಾಲ್ನಲ್ಲಿ ಅದೂ ಇಲ್ಲ. ಕೆಳ ಅಂತಸ್ತಿಗೆ ಹುಡುಕಿ ಹೋಗಬೇಕು. ತಾಪತ್ರಯ ಬೇಡವೆಂದು ಹುಡುಗಿಯರು ನೀರು ಕುಡಿಯುವುದಿಲ್ಲ. ಮನೆಯಿಂದ ಬಂದು ಮತ್ತೆ ಮನೆಗೆ ಹೋಗಿಯೇ ಶೌಚ ಬಳಕೆ. ಮೂತ್ರ ಸಂಬಂಧಿ ರೋಗಗಳು ಬಾರದಿರುವುವೇ? ಇನ್ನು ಸುತ್ತಲಿನ ಕಣ್ಣುಗಳು ಇವರನ್ನು ಗೌರವದಿಂದ ನೋಡುವವೇ? ಬಳಸಿ ಬೀಸಾಡಲು ಹೊಂಚು ಹಾಕಿದ ಮನಸುಗಳು ಊಸರವಳ್ಳಿಯೋಪಾದಿಯಾಗಿ ಸಂಚು ಹೆಣೆಯುತ್ತಿರುತ್ತವೆ. ಸ್ವಾಭಿಮಾನ ಅಸ್ತಿತ್ವದ ಅರಿವಿನಲ್ಲಿ ಬಿಗಿಯಾಗಿದ್ದರೆ ಬಲು ಬೇಗ ಕೆಲಸಕ್ಕೆ ಸಂಚಕಾರ ಬರಬಹುದು. ಅಥವ ಕೆಲಸದುದ್ದಕ್ಕೂ ಕಿರಿಕಿರಿ. ಬಹಳಷ್ಟು ಮಹಿಳೆಯರು ರಕ್ತಹೀನತೆಯಿಂದ ಬಳಲುವರು. ಮಾನಸಿಕ ಒತ್ತಡವು ಸರ್ವೇಸಾಮಾನ್ಯ. ಬಲು ಬೇಗ ಥಕಾವಟ್ಟು ಆವರಿಸಿ ಬದುಕುವ ಆಸೆಯ ತಂತು ಸವೆಯತೊಡಗುವುದು.

 http://varietymallreviews.com/wp-content/uploads/2013/04/dubai-mall.jpg

     ಖ್ಯಾತ ಹಿಂದಿ ಕಾದಂಬರಿಕಾರ ಪ್ರೇಮಚಂದ್ರ ನೆನಪಾಗುವರು. ಜೀವನದಲ್ಲಿ ಆಸೆಯೇ ಓಜಸ್ಸು, ತೇಜಸ್ಸು. ಅದಿಲ್ಲದಿದ್ದರೆ ಬದುಕು ಬರಿ ಶೂನ್ಯ. ಇಷ್ಟಕ್ಕೂ ಇದು ಬದುಕುಳಿಯುವ ಆಸೆ ಮಾತ್ರ. ಆದರೆ ಪ್ರತಿ ದಿನವೂ ಹೀಗೆ ಬರೀ ಬಡಿದಾಟದಲ್ಲಿ ಕಳೆಯುವುದು ಅಂತಾದರೆ ಹೇಗೆ? ತನಗೂ ತನ್ನ ಕುಟುಂಬಕ್ಕೂ ಆರೋಗ್ಯ, ಶಿಕ್ಷಣ, ವಾಸಕ್ಕೊಂದು ಪುಟ್ಟ ಮನೆ, ಒಂದಿಷ್ಟು ನೆಮ್ಮದಿಯಿಂದ ಕೂಡಿ ಕಾಲ ಕಳೆಯುವ ಗಳಿಗೆಗಳು ಇವರಿಗೂ ಬೇಕು ಅನಿಸುವುದಿಲ್ಲವೇ?

      ಕಾನೂನು ಏನು ಹೇಳುತ್ತದೆ? ಶಾಪ್ ಅನ್ಡ್ ಕಮರ್ಷಿಯಲ್ ಎಸ್ಟಾಬ್ಲಿಷ್ಮೆಂಟ್ ಅಕ್ಟ್ ಅಂತ ಒಂದಿದೆ. ಅದರಲ್ಲಿ ಕನಿಷ್ಠ ವೇತನ, ಎಂಟು ತಾಸಿನ ದುಡಿಮೆ, ಬೋನಸ್, ಗ್ರ್ಯಾಚ್ಯೂಟಿ, ಕುರಿತು ಉಲ್ಲೇಖವಿದೆ. ಕೆಲಸದಿಂದ ತೆಗೆದರೆ ಕ್ರಮ ಕೈಗೊಳ್ಳುವರಂತೆ. ಆದರೆ ನೀವು ಈ ಮಾತು ನಂಬಲೇಬೇಕು. ಎಲ್ಲಿಯೂ ಇದು ಜಾರಿಯಾಗುತ್ತಿಲ್ಲ. ಕನಿಷ್ಠ ವೇತನವೆಂದಾದರೂ ಸೇಲ್ಸ್ ಗರ್ಲ್ಸ್/ಬಾಯ್ಸ್ ಗಳಿಗೆ ದಿನಕ್ಕೆ ರೂ.226. ತಿಂಗಳಿಗೆ ರೂ.6780 ಎಲ್ಲಿ ಕೊಡುತ್ತಿರುವರು? ಕಾರ್ಮಿಕ ಇಲಾಖೆಯು ತಾನಾಗಿಯೇ ಇಂಥೆಲ್ಲ ಕಡೆ ಭೇಟಿ ಕೊಟ್ಟು ವಾಸ್ತವ ಪರಿಶೀಲಿಸುವುದಿಲ್ಲ. ಹತ್ತರಿಂದ ಹನ್ನೆರಡು ಗಂಟೆ ದುಡಿಮೆ ಸಾಮಾನ್ಯವಾಗಿದೆ. ಕನಿಷ್ಠ 50 ಜನರಿದ್ದಲ್ಲಿ ಮೆಡಿಕಲ್ ಸೌಲಭ್ಯ ಕೊಡುವರಂತೆ. ಒಬ್ಬಿಬ್ಬರು ಮನುಷ್ಯರಲ್ಲವೇ? ಇಷ್ಟಕ್ಕೂ ಹೆಣ್ಣುಮಕ್ಕಳಿಗೆ ಯಾವ ರಕ್ಷಣೆಯೂ ಇಲ್ಲ. ಲೈಂಗಿಕ ಕಿರುಕುಳಗಳು ನಡೆದಲ್ಲಿ ಎಲ್ಲಿ ದೂರು ಕೊಡುವುದು? ಲೈಂಗಿಕ ದೌರ್ಜನ್ಯ ತಡೆ ಸಮಿತಿಗಳು ಎಲ್ಲಿಯೂ ರಚನೆಯಾಗಿಲ್ಲ. ಸಂಘಟಿತರಾಗಲು ಅವಕಾಶವೇ ಇಲ್ಲದ ಒತ್ತಡದಲ್ಲಿ ಕೆಲಸ ಮಾಡುವ ಸಾವಿರಾರು ಮಹಿಳೆಯರು ಅಸಂಘಟಿತ ವಲಯದ ಸಂಕಟದ ಕಡಲುಗಳೇ ಹೌದು.  ಈ ಕತ್ತಲ ಜಗತ್ತಿನಲ್ಲಿ ಸಂಘಟಿತರಾಗುವ ದಾರಿಯೊಂದೇ ಬೆಳಕು ಮೂಡಿಸಬಹುದು.

***

No comments:

Post a Comment